Advertisement

SSLC  ಘಟಕ ಪರೀಕ್ಷೆಗೂ ಕೆಮರಾ ಕಣ್ಣು; ರಾಜ್ಯ ಸರಕಾರದ ಹೊಸ ಪ್ರಯತ್ನ

01:08 AM Sep 02, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪಬ್ಲಿಕ್‌ ಪರೀಕ್ಷೆಯಲ್ಲಿ ನಿರೀಕ್ಷಿತ ಫ‌ಲಿತಾಂಶ ದಾಖಲಾಗದಿರಲು ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ ಕಾಸ್ಟಿಂಗ್‌ ನಡೆಸಿದ್ದು ಕೂಡ ಕಾರಣವೆಂಬ ಅಭಿಪ್ರಾಯ ಕೇಳಿಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ವೆಬ್‌ ಕಾಸ್ಟಿಂಗ್‌ ಬಗೆಗಿನ ಆತಂಕವನ್ನು ದೂರ ಮಾಡಲು ಸರಕಾರ ಈ ವರ್ಷದ ಘಟಕ ಪರೀಕ್ಷೆಗಳಿಗೂ ವೆಬ್‌ಕಾಸ್ಟಿಂಗ್‌ ಪರಿಚಯಿಸಲು ತೀರ್ಮಾನ ಕೈಗೊಂಡಿದೆ. ಇದರ ಜತೆಗೆ ಫ‌ಲಿತಾಂಶ ಸುಧಾರಣೆಗೆ 20 ಅಂಶಗಳ ಕ್ರಮವನ್ನು ಪ್ರಕಟಿಸಿದೆ.

Advertisement

ಹಿಂದಿನ ಶೈಕ್ಷಣಿಕ ವರ್ಷ ದಲ್ಲಿ ವೆಬ್‌ ಕಾಸ್ಟಿಂಗ್‌ ಮಾಡಿದ್ದರಿಂದ ಪರೀಕ್ಷಾ ಅಕ್ರಮಕ್ಕೆ ಅಂಕುಶ ಬಿದ್ದಿತ್ತು. ಆದರೆ ಉತ್ತಮ ಫ‌ಲಿತಾಂಶ ಬಂದಿರಲಿಲ್ಲ. ಎಸೆಸೆಲ್ಸಿ ಪರೀಕ್ಷೆ -1ರಲ್ಲಿ ನೈಜ ಫ‌ಲಿತಾಂಶ ಶೇ. 54ಕ್ಕೆ ಕುಸಿದಿತ್ತು.

ಆ ಬಳಿಕ ಶೇ. 20 ಕೃಪಾಂಕ ನೀಡಿದ್ದರಿಂದ ಫ‌ಲಿತಾಂಶವು ಶೇ. 74ರ ಗಡಿ ಮುಟ್ಟಿತ್ತು. ಇದರ ಜತೆಗೆ ಪರೀಕ್ಷೆ – 2 ಮತ್ತು ಪರೀಕ್ಷೆ-3 ಬರೆಯುವ ಅವಕಾಶ ಇದ್ದದ್ದರಿಂದ ಒಟ್ಟಾರೆ ಫ‌ಲಿತಾಂಶ ಶೇ. 85 ತಲುಪಿತ್ತು.

ಈ ಬಾರಿ ಪಿಯು ಮತ್ತು ಎಸೆಸೆಲ್ಸಿಸ್‌ ಮಕ್ಕಳ ಫ‌ಲಿತಾಂಶ ಸುಧಾರಣೆಗೆ ಪಣ ತೊಟ್ಟಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ನಿಟ್ಟಿನಲ್ಲಿ ಹಲವು ವಿನೂತನ ಕ್ರಮಗಳನ್ನು ಪ್ರಕಟಿಸಿದೆ.

ಇದರ ಭಾಗವಾಗಿ ವೆಬ್‌ ಕಾಸ್ಟಿಂಗ್‌ ಸೌಲಭ್ಯ ಇರುವ ಎಲ್ಲ ಶಾಲೆ ಮತ್ತು ಕಾಲೇಜುಗಳಲ್ಲಿ ಎಲ್ಲ ಘಟಕ ಪರೀಕ್ಷೆಗಳನ್ನು ಕೂಡ ವೆಬ್‌ ಕಾಸ್ಟಿಂಗ್‌ನಡಿ ನಡೆಸುವಂತೆ ಸೂಚಿಸಲಾಗಿದೆ. ಹಾಗೆಯೇ ಘಟಕ ಪರೀಕ್ಷೆಗಳನ್ನು ನಡೆಸಿ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳ ಪ್ರಗತಿಯನ್ನು ವಿಶ್ಲೇಷಿಸುವಂತೆ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಸೂಚನೆ ನೀಡಲಾಗಿದೆ.

Advertisement

ಪ್ರತೀ ದಿನ ಶಾಲೆ/ಕಾಲೇಜು ಅವಧಿಯ ಮೊದಲು ಅಥವಾ ಅನಂತರ ಒಂದು ವಿಷಯಕ್ಕೆ ವಿಶೇಷ ತರಗತಿ ಆಯೋಜಿಸಬೇಕು. ಎಸೆಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯ ಪಠ್ಯವಸ್ತುವನ್ನು ಡಿಸೆಂಬರ್‌ 2024ರೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.

ವಿದ್ಯಾರ್ಥಿಗಳ ಬರವಣಿಗೆಯ ಗುಣಮಟ್ಟವನ್ನು ಹೆಚ್ಚಿಸಲು ಪ್ರತೀ ದಿನ 2 ಪುಟಗಳನ್ನು ಬರೆಯಿಸುವುದು ಮತ್ತು ಗಟ್ಟಿಯಾಗಿ ಓದುವ ಅಭ್ಯಾಸವನ್ನು ಮಾಡಿಸಬೇಕು. ಪ್ರತೀ ಘಟಕದ ಪ್ರಶ್ನೆಪತ್ರಿಕೆ ಬ್ಯಾಂಕ್‌ ಸಿದ್ಧಪಡಿಸಬೇಕು ಎಂದು ಸಲಹೆ ನೀಡಲಾಗಿದೆ.

ಸಹ ಕಲಿಕೆ
ನಿಧಾನಗತಿ ಕಲಿಕಾ ಲಕ್ಷಣಗಳಿರುವ ವಿದ್ಯಾರ್ಥಿಗಳ ಕಲಿಕೆಯನ್ನು ಬಲವರ್ಧನೆಗೊಳಿಸಲು ಅವರನ್ನು ಕಲಿಕಾ ಪ್ರಗತಿ ಸಾಧಿಸಿರುವ ವಿದ್ಯಾರ್ಥಿ ಗಳೊಂದಿಗೆ ಸಂಯೋಜಿಸುವ ಮೂಲಕ ಸಹ ಕಲಿಕೆಯ ವಿನೂತನ ಕ್ರಮಕ್ಕೂ ಸರಕಾರ ಮುಂದಾಗಿದೆ. ಪ್ರತೀ 15 ದಿನಕ್ಕೊಮ್ಮೆ ಪಾಲಕರ ಸಭೆಯನ್ನು ನಡೆಸಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ವರದಿಯನ್ನು ಪಾಲಕರಿಗೆ ನೀಡಬೇಕು. ಯಾವುದೇ ವಿದ್ಯಾರ್ಥಿಯು 3-4 ದಿನ ಗೈರಾದರೆ ಎಸ್‌ಡಿಎಂಸಿ ಮತ್ತು ಇನ್ನಿತರ ಭಾಗೀದಾರರೊಂದಿಗೆ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಯನ್ನು ಶಾಲೆಗೆ ಕರೆತರಲು ಕ್ರಮ ಕೈಗೊಳ್ಳಬೇಕು. ಪ್ರತೀ ದಿನ ಮುಂಜಾನೆ ಅಥವಾ ಸಂಜೆ ವೇಳೆಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಅಭ್ಯಾಸ ಮಾಡುವುದನ್ನು ಪರಿಶೀಲಿಸಲು ದೂರವಾಣಿ ಕರೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಹಾಗೆಯೇ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪಿಯು ಮತ್ತು ಎಸೆಸೆಲ್ಸಿಯ ಪ್ರತೀ ವಿಷಯದ 5 ಮಾದರಿ ಪ್ರಶ್ನೆಪತ್ರಿಕೆಗಳನ್ನು ರಚಿಸಿ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಿದ್ದು, ಅದನ್ನು ಕಲಿಕೆಗೆ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.

ಏನೇನು ಹೊಸ ಕ್ರಮ?
-15 ದಿನಕ್ಕೊಮ್ಮೆ ಪಾಲಕರ ಸಭೆ, ಪ್ರತಿದಿನ ವಿಶೇಷ ತರಗತಿ
-ಡಿಸೆಂಬರ್‌ ಒಳಗೆ ವಾರ್ಷಿಕ ಪರೀಕ್ಷೆಯ ಪಠ್ಯ ಪೂರ್ಣ
-ಪ್ರತೀ ದಿನ 2 ಪುಟ ಬರವಣಿಗೆ, ಗಟ್ಟಿ ಯಾಗಿ ಓದಿ ಅಭ್ಯಾಸ ಕಡ್ಡಾಯ
-ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಲವರ್ಧನೆಗೆ ಕ್ರಮ
-ಕಲಿಕಾ ಪ್ರಗತಿ ಸಾಧಿಸಿರುವ ವಿದ್ಯಾರ್ಥಿಗಳ ಜತೆ ಸಂಯೋಜನೆ
-ವಿದ್ಯಾರ್ಥಿ 3-4 ದಿನ ಶಾಲೆಗೆ ಗೈರಾದರೆ ಮನೆಗೆ ಭೇಟಿ ನೀಡಲು ಸೂಚ ನೆ

ಶಿಕ್ಷಕರಿಗೆ ವಿದ್ಯಾರ್ಥಿಗಳ ದತ್ತು,
ಅಧಿಕಾರಿಗಳಿಗೆ ಶಾಲೆಗಳ ದತ್ತು
ಸಾಧಾರಣ, ಸಾಧಾರಣಕ್ಕಿಂತ ಕೆಳಗೆ ಮತ್ತು ಸಾಧಾರಣಕ್ಕಿಂತ ಮೇಲಿನ ವಿದ್ಯಾರ್ಥಿಗಳ ಗುಂಪನ್ನು ರಚಿಸಿ ಪ್ರತೀ ಶಿಕ್ಷಕರಿಗೆ ಸಮನಾಗಿ ವಿದ್ಯಾರ್ಥಿ ಗಳನ್ನು ದತ್ತು ನೀಡಬೇಕು. ಹಾಗೆಯೇ ಶಾಲೆಗಳನ್ನು ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಹಂತದ ವಿವಿಧ ಸ್ತರದ ಅಧಿಕಾರಿಗಳಿಗೆ ದತ್ತು ನೀಡಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಶಿಕ್ಷಕರು, ಉಪನ್ಯಾಸಕರಿಗೆ ಫ‌ಲಿತಾಂಶ ಸುಧಾರಣೆಗೆ ಪುನಶ್ಚೇತನ ತರಬೇತಿ ಆಯೋಜಿಸಬೇಕು, ಫ‌ಲಿತಾಂಶ ಸುಧಾರಣೆಗೆ ಕೈಗೊಳ್ಳುವ ಕ್ರಮಗಳ ಮೇಲುಸ್ತುವಾರಿಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ವಹಿಸಬೇಕು, ಪಿಯು ಫ‌ಲಿತಾಂಶ ಸುಧಾರಣೆಗೆ ಕೈಗೊಂಡ ಅಂಶಗಳನ್ನು ಪರಿಶೀಲಿಸಿ ಮೇಲುಸ್ತುವಾರಿ ನಿರ್ವಹಿಸಲು ಪ್ರಾಂಶುಪಾಲರು ಮತ್ತು ಇಬ್ಬರು ಉಪನ್ಯಾಸಕರನ್ನು ಒಳಗೊಂಡ ತಂಡವನ್ನು ಜಿಲ್ಲಾ ಉಪನಿರ್ದೇಶಕರು ರಚಿಸಬೇಕು. ಕಳೆದ ಶೈಕ್ಷಣಿಕ ವರ್ಷದಲ್ಲಿ ಫ‌ಲಿತಾಂಶ ಕುಸಿತಕಂಡ ಶಾಲೆ ಮತ್ತು ಕಾಲೇಜುಗಳ ಫ‌ಲಿತಾಂಶ ಸುಧಾರಣೆಗೆ ಧೀರ್ಘಾವಧಿ, ಮಧ್ಯಮಾವಧಿ ಮತ್ತು ಅಲ್ಪಾವಧಿ ಕ್ರಿಯಾ ಯೋಜನೆ ರಚಿಸಬೇಕು ಎಂದು ಸೂಚಿಸಲಾಗಿದೆ.

ಈ ಬಾರಿಯ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷಾ ಫ‌ಲಿತಾಂಶ ಸುಧಾರಣೆಯ ದೃಷ್ಟಿ ಯಿಂದ 20 ಅಂಶಗಳ ಕಾರ್ಯಕ್ರಮವನ್ನು ಪ್ರಕಟಿಸಿದ್ದೇವೆ. ಜಿಲ್ಲಾ ಮತ್ತು ತಾಲೂಕು ಹಂತದ ಅಧಿಕಾರಿಗಳು ಅನುಷ್ಠಾನಗೊಳಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು.
– ರಿತೇಶ್‌ ಕುಮಾರ್‌ ಸಿಂಗ್‌, ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

-ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next