Advertisement

ಒಳ್ಳೆಯದು-ಕೆಟ್ಟದರ ಸಮ್ಮಿಲನ

12:30 AM Jan 18, 2019 | |

“ಗರ’ ಚಿತ್ರದ ಆಡಿಯೋ ಮತ್ತು ಟ್ರೇಲರ್‌ ಇತ್ತೀಚೆಗೆ ಅದ್ಧೂರಿಯಾಗಿ ಹೊರಬಂದಿದೆ. ನಟಿ ತಾರಾ ಅನುರಾಧ ಮತ್ತು ಗಾಯಕಿ ಮಂಜುಳಾ ಗುರುರಾಜ್‌ ಕವಡೆ  ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಟ ಶಿವರಾಜಕುಮಾರ್‌ ಚಿತ್ರದ ಟ್ರೇಲರ್‌ನ್ನು ಬಿಡುಗಡೆಗೊಳಿಸಿದರು. 

Advertisement

ಬಳಿಕ ಮಾತನಾಡಿದ ಶಿವರಾಜಕುಮಾರ್‌, “ನಾನು ಮೊದಲಿನಿಂದಲೂ ನಟ ಜಾನಿ ಲಿವರ್‌ ಅವರ ಅಭಿಮಾನಿ. ಅವರ ಸಿನಿಮಾಗಳನ್ನು, ಅವರ ಹಾಸ್ಯ ಪ್ರವೃತ್ತಿಯನ್ನು ತುಂಬ ಎಂಜಾಯ್‌ ಮಾಡುತ್ತೇನೆ. ರೆಹಮಾನ್‌ ಸಿಕ್ಕಾಗಲೆಲ್ಲಾ ಯಾವಾಗ ಹೀರೋ ಆಗುತ್ತಿಯಾ ಅಂತ ಕೇಳುತ್ತಿದ್ದೆ. ಸಾಧುಕೋಕಿಲ ನೋಡಿದರೆ ನಗುತರಿಸುತ್ತದೆ. ವೇಣು ಕ್ಯಾಮರ ಕೆಲಸ ಚಿತ್ರದಲ್ಲಿ ಅದ್ಭುತವಾಗಿದೆ. ಚಿತ್ರರಂಗದಲ್ಲಿ ಯಾರನ್ನು ಕೀಳಾಗಿ ನೋಡಬಾರದು. ಇಲ್ಲಿ ಯಾರು ಏನಾಗುತ್ತಾರೆಂದು ಯಾರಿಗೂ ತಿಳಿಯದು. ಹೊಸದಾಗಿ ಬರುವವರನ್ನು ನಾವು ಪ್ರೋತ್ಸಾಹಿಸಬೇಕು. ಸಿನಿಮಾದಲ್ಲಿ ಯಾವುದು ದೊಡ್ಡದು, ಚಿಕ್ಕದು ಅಂತಿರುವುದಿಲ್ಲ. ಪ್ರೇಕ್ಷಕ ಇಷ್ಟಪಟ್ಟರೆ ಚಿತ್ರ ನಮ್ಮನ್ನು ಎಲ್ಲಿಗೋ ತೆಗೆದುಕೊಂಡು ಹೋಗುತ್ತದೆ’ ಎಂದರು.  

ಚಿತ್ರದ ಟೈಟಲ್‌ ಮತ್ತು ಸಬೆjಕ್ಟ್ ಬಗ್ಗೆ ಮಾತನಾಡಿದ ನಿರ್ದೇಶಕ ಕೆ.ಆರ್‌ ಮುರಳಿ ಕೃಷ್ಣ, “ಪ್ರಾರಂಭದಲ್ಲಿ “ಗರ’ ಶೀರ್ಷಿಕೆ ಕೇಳಿದಾಗ ಕೆಲವರು ನಕಾರಾತ್ಮಕ ಸಂದೇಶ ತರುತ್ತದೆಂದು ಹೇಳಿದರು.  

ನೆಗಟಿವ್‌ನಿಂದ ಪಾಸಿಟಿವ್‌ ಹುಡುಕುವ ಮನುಷ್ಯನಾಗಿದ್ದರಿಂದ, ಇದೇ ಸೂಕ್ತವಾದ ಶೀರ್ಷಿಕೆ ಎಂದೆನಿಸಿತು. ನಾವುಗಳು ಸ್ವಾರ್ಥಕ್ಕಾಗಿ ಗರ ಹಾಕುತ್ತೇವೆ. ಆದರೆ ದೇವರು ಹಾಕುವ “ಗರ’ದಿಂದ ಯಾರೂ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಪ್ರತಿಯೊಬ್ಬರಲ್ಲೂ ಎರಡು ಮನಸ್ಸುಗಳು ಇರುತ್ತವೆ. ಒಳ್ಳೆಯವನು ಕೆಟ್ಟವನಾಗಬಹುದು. ಅದೇ ರೀತಿಯಲ್ಲಿ ಕೆಟ್ಟವನೂ ಒಳ್ಳೆಯವನಾಗಬಹುದು. ಕಥೆಯಲ್ಲಿ ಬರುವ ರಂಗಸ್ವಾಮಿ, ಭಗೀರಥ ಎರಡು ಪಾತ್ರಗಳಲ್ಲಿ ಯಾರು ಯಾರ ಮೇಲೆ “ಗರ’ ಹಾಕುತ್ತಾರೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಜಾನಿ ಲಿವರ್‌ ಅವರಂಥ ದೊಡ್ಡ ಕಲಾವಿದರು ಚಿತ್ರದಲ್ಲಿ ನಟಿಸಿದ್ದರಿಂದ ಚಿತ್ರಕ್ಕೆ ತೂಕ ಬಂದಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.  

ಇನ್ನು ತಮ್ಮ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದ ನಟ ಜಾನಿ ಲಿವರ್‌, “ನನಗೆ ಕನ್ನಡದಲ್ಲಿ ಇದೊಂದು ಹೊಸಥರದ ಅನುಭವ ಕೊಟ್ಟ ಸಿನಿಮಾ. ನೋಡುಗರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ. ಪ್ರೇಕ್ಷಕರು ಸಿನಿಮಾ ನೋಡಿ ಖುಷಿಪಟ್ಟರೆ ನಮ್ಮ ಪ್ರಯತ್ನ ಸಾರ್ಥಕವಾದಂತೆ’ ಎಂದರು. ಸಮಾರಂಭದಲ್ಲಿ ಹಾಜರಿದ್ದ ನಟ ಸಾಧು ಕೋಕಿಲ, ನಟಿ ನೇಹಾ ಪಾಟೀಲ್‌ ಮತ್ತಿತರರು ಚಿತ್ರದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು. 

Advertisement

“ಗರ’ ಚಿತ್ರದ ಹಾಡುಗಳಿಗೆ ಮಂಜುಳಾ ಗುರುರಾಜ್‌ ಪುತ್ರ ಸಾಗರ್‌ ಗುರುರಾಜ್‌ ಸಂಗೀತ ಸಂಯೋಜಿಸಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆಯೇ ಸೆಟ್ಟೇರಿದ್ದ “ಗರ’ ಚಿತ್ರ ಅಂತಿಮವಾಗಿ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಮುಂಬರುವ 
ಮಾರ್ಚ್‌ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ. ಚಿತ್ರದಲ್ಲಿ   ನೇಹಾ ಪಾಟೀಲ್‌, ಪ್ರದೀಪ್‌ ಆರ್ಯನ್‌, ತಬಲನಾಣಿ, ಅವಂತಿಕಾ ಮೋಹನ್‌ ನಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next