Advertisement

ಕರಾವಳಿಗೆ ಉಗ್ರ ಭೀತಿ: ವಿಧ್ವಂಸಕ ಕೃತ್ಯ ಸಾಧ್ಯತೆ 

07:00 AM Apr 08, 2018 | Team Udayavani |

ಪಣಜಿ: ಇಡೀ ದೇಶವನ್ನೇ ನಡುಗಿಸಿದಂಥ 26/11ರ ಮುಂಬೈ ದಾಳಿ ನಡೆದು 10 ವರ್ಷಗಳು ತುಂಬುತ್ತಿರುವಂತೆಯೇ ಅದೇ ಮಾದರಿಯ ಮತ್ತೂಂದು ವಿಧ್ವಂಸಕ ಕೃತ್ಯದ ಭೀತಿ ಆವರಿಸಿದೆ. ಪಾಕಿಸ್ತಾನಿ ಭಯೋತ್ಪಾದಕರು ಮೀನುಗಾರಿಕಾ ದೋಣಿಯೊಂದರಲ್ಲಿ ಭಾರತದ ಕರಾವಳಿ ಪ್ರವೇಶಿಸಿ, ಉಗ್ರ ಕೃತ್ಯ ಎಸಗುವ ಸಾಧ್ಯತೆ ದಟ್ಟವಾಗಿದ್ದು, ದೇಶದ ಪಶ್ಚಿಮ ಕರಾವಳಿಗಳಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ.

Advertisement

ಪಾಕಿಸ್ಥಾನ ವಶಪಡಿಸಿಕೊಂಡಿದ್ದ ಭಾರತದ ಫಿಶಿಂಗ್‌ ಟ್ರಾಲರ್‌ವೊಂದು ದೇಶಕ್ಕೆ ವಾಪಸಾಗುತ್ತಿದ್ದು, ಅದರಲ್ಲಿ ಉಗ್ರರು ಆಗಮಿಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಗೋವಾ ಸರಕಾರವು ತನ್ನ ಕರಾವಳಿಯಾಚೆ ಇರುವ ಎಲ್ಲ ನೌಕೆಗಳು, ಕ್ಯಾಸಿನೋಗಳು, ಜಲ ಕ್ರೀಡಾ ಆಪರೇಟರ್‌ಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಅಲರ್ಟ್‌ ಆಗಿರುವಂತೆ ಸೂಚಿಸಿದೆ. ಗುಪ್ತಚರ ಇಲಾಖೆಯ ಎಚ್ಚರಿಕೆಯು ನಿರ್ದಿಷ್ಟವಾಗಿ ಗೋವಾವನ್ನು ಕೇಂದ್ರೀಕರಿಸಿಲ್ಲ. ಅದು ಮುಂಬಯಿ, ಗುಜರಾತ್‌ ಸೇರಿದಂತೆ ಪಶ್ಚಿಮ ಕರಾವಳಿಯನ್ನು ಉದ್ದೇಶಿಸಿದೆ ಎಂದು ಗೋವಾ ಬಂದರು ಸಚಿವ ಜಯೇಶ್‌ ಸಲಗಾಂವ್ಕರ್‌ ತಿಳಿಸಿದ್ದಾರೆ.

ಅಲರ್ಟ್‌ ಘೋಷಿಸಲು ಕಾರಣವೇನು? ಇತ್ತೀಚೆಗೆ ಭಾರತದ ಮೀನುಗಾರಿಕಾ ದೋಣಿಯೊಂದನ್ನು ಪಾಕಿಸ್ಥಾನವು ವಶಕ್ಕೆ ಪಡೆದುಕೊಂಡಿತ್ತು. ಆ ದೋಣಿಯನ್ನು ಈಗ ಬಿಡುಗಡೆ ಮಾಡಲಾಗಿದ್ದು, ಅದು ಕರಾಚಿಯಿಂದ ಭಾರತಕ್ಕೆ ವಾಪಸಾಗುತ್ತಿದೆ. ಅದರಲ್ಲಿ ಭಯೋತ್ಪಾದಕರು ಇದ್ದು, ಭಾರತದ ಕರಾವಳಿ ತಲುಪುತ್ತಿದ್ದಂತೆ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ಸಂಸ್ಥೆಗಳಿಂದ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ ಎಂದು ಗೋವಾದ ಬಂದರು ಇಲಾಖೆ ತಿಳಿಸಿದೆ.

26/11ರ ದಾಳಿಗೂ ಕಡಲ ನಂಟು
ಇಡೀ ದೇಶವನ್ನೇ ಬೆಚ್ಚಿಬೀಳಿಸಿದಂಥ 26/11ರ ಮುಂಬಯಿ ದಾಳಿ ನಡೆದಿದ್ದೂ ಸಮುದ್ರದ ಮೂಲಕ ಆಗಮಿಸಿದ ಉಗ್ರರಿಂದಲೇ. ಅಂದು ಸಣ್ಣ ಮೋಟಾರು ಹೊಂದಿರುವ, ಹಗುರವಾಗಿದ್ದರೂ ವೇಗವಾಗಿ ಸಂಚರಿಸುವ ಜೆಮಿನಿ ಬೋಟ್‌ಗಳ ಮೂಲಕವೇ ಪಾಕಿಸ್ಥಾನದ ಲಷ್ಕರ್‌ ಉಗ್ರರು ಮುಂಬಯಿ ಕರಾವಳಿಯನ್ನು ತಲುಪಿದ್ದರು. ಎಕೆ47 ರೈಫ‌ಲ್‌ಗ‌ಳು, ಹ್ಯಾಂಡ್‌ ಗ್ರೆನೇಡ್‌ಗಳು ಸೇರಿದಂತೆ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಆಗಮಿಸಿದ್ದ ಪಾಪಿಗಳ ತಂಡ, ನಂತರ ಅಲ್ಲಿಂದ ತಾಜ್‌, ಒಬೆರಾಯ್‌ ಹೋಟೆಲ್‌, ನಾರಿಮನ್‌ ಹೌಸ್‌, ಸಿಎಸ್‌ಟಿ ರೈಲು ನಿಲ್ದಾಣ ಸೇರಿದಂತೆ ಹಲವು ಕಡೆಗೆ ತೆರಳಿ ಗುಂಡಿನ ಮಳೆಗೆರೆದವು. ಈ ಬೀಭತ್ಸ ದಾಳಿಗೆ 159 ಮಂದಿ ಬಲಿಯಾಗಿ, 200ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಇದು ಭಾರತದ ಇತಿಹಾಸದಲ್ಲೇ ನಡೆದ ಅತ್ಯಂತ ಭೀಕರ ಉಗ್ರರ ದಾಳಿಯಾಗಿತ್ತು.

ದಾಳಿ ಬಳಿಕ ಆದ ಬದಲಾವಣೆಗಳೇನು?
ಆ ಭಯಾನಕ ದಾಳಿ ನಡೆದು 10 ವರ್ಷಗಳು ತುಂಬುತ್ತಿವೆ. ಉಗ್ರರ ದಾಳಿಯಿಂದ ಎಚ್ಚೆತ್ತ ಸರಕಾರ ಕರಾವಳಿ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ಅನೇಕ ಕ್ರಮಗಳನ್ನೂ ಕೈಗೊಂಡಿವೆ. ನೌಕಾ ವಲಯಗಳ ರಕ್ಷಣೆಗಾಗಿ 3 ಹಂತದ ಭದ್ರತೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಕಾರ್ಯನಿರ್ವಹಿಸುವ ಸಾಗರ್‌ ಪ್ರಹರಿ ಬಲಕ್ಕೆ ಹೈಸ್ಪೀಡ್‌ ಪ್ರತಿಬಂಧಕ ವಾಹನ, ಕಾಪ್ಟರ್‌ಗಳನ್ನು ಒದಗಿಸಲಾಗಿದೆ. 2ನೇ ಹಂತದ ಭದ್ರತೆಯನ್ನು ಕರಾವಳಿ ರಕ್ಷಕ ಪಡೆ ನೋಡಿ ಕೊಂಡರೆ, 3ನೇ ಹಂತದ ಹೊಣೆಯನ್ನು ನೌಕಾ ಪೊಲೀಸರಿಗೆ ವಹಿಸಲಾಗಿದೆ. ಇವರಿಗೂ ಹೆಚ್ಚುವರಿ ಮಾನವ ಸಂಪನ್ಮೂಲ, ನಿಗಾ ವ್ಯವಸ್ಥೆ, ಸ್ಪೀಡ್‌ ಬೋಟ್‌ ಖರೀದಿಗೆ ಹಣಕಾಸು ನೆರವು ನೀಡ‌ಲಾಗಿದೆ. ಇದಲ್ಲದೆ, ಮೀನುಗಾರರಿಗೆ ಗುರುತಿನ ಕಾರ್ಡ್‌ ವಿತರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next