Advertisement

ಉತ್ತರ ಕರ್ನಾಟಕ ನೀರಾವರಿ ಯೋಜನೆಗಳಿಗೆ ಮುಕ್ತಿ ನೀಡಿ!

01:52 AM Mar 17, 2022 | Team Udayavani |

ಅಭಿವೃದ್ದಿಯ ವಿಷಯ ಬಂದಾಗ ಸರಕಾರಗಳು ಹಿಂದಿನಿಂದಲೂ ಉತ್ತರ ಕರ್ನಾಟಕವನ್ನು 2ನೇ ಆದ್ಯತೆಯಾಗಿ ಪರಿಗಣಿಸಿವೆ. ನಮ್ಮ ದಶಕಗಳ ಬಹುದೊಡ್ಡ ಬೇಡಿಕೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ಮಹಾದಾಯಿಯಂತಹ ಮಹತ್ವದ ಯೋಜನೆಗಳು ಕೇವಲ ಚುನಾವಣೆ ವಸ್ತುಗಳಾಗಿವೆ. ಇವುಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸುವ ಇಚ್ಚಾಶಕ್ತಿ ಯಾರಿಂದಲೂ ಸಾಧ್ಯವಾಗುತ್ತಿಲ್ಲ.

Advertisement

ನೀರಾವರಿ, ರೈತರ ಸಮಸ್ಯೆಗಳು, ಮೂಲ ಸೌಕರ್ಯ ಯಾವುದೇ ಇರಬಹುದು ಅಥವಾ ಸಾಂಸ್ಕೃತಿಕ ನೀತಿಗಳಾಗಿ  ರಬಹುದು ಯಾವುದೇ ವಿಷಯದಲ್ಲಿಯೂ ಉತ್ತರ ಕರ್ನಾಟಕಕ್ಕೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ ಕಳೆದ 20 ವರ್ಷಗಳಲ್ಲಿ ಪ್ರಾರಂಭವಾದ ಬಹುಪಾಲು ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಕೆಲವು ಪೂರ್ಣಗೊಂಡರೂ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ. ಇದರ ಜತೆಗೆ ಏತ ನೀರಾವರಿ ಯೋಜನೆಗಳೂ ಇಚ್ಚಾÏಶಕ್ತಿ ಕೊರತೆಯಿಂದ ಕುಂಟುತ್ತಾ ಸಾಗಿವೆ.

ಕುಲಹಳ್ಳಿ ಹುನ್ನೂರು ಏತ ನೀರಾವರಿ ಯೋಜನೆ: ಘಟ ಪ್ರಭಾ ಎಡದಂಡೆ ಕಾಲುವೆಯಡಿ ಬಾಧಿತವಾದ ಜಮಖಂಡಿ ತಾಲೂಕಿನ ಕುಲಹಳ್ಳಿ-ಹುನ್ನೂರ ಭಾಗದ 9,164 ಹೆಕ್ಟೇರ್‌ ಪ್ರದೇಶಕ್ಕೆ 0.88 ಟಿ.ಎಂ.ಸಿ. ನೀರು ಒದಗಿಸುವ ಕೇವಲ 73.75 ಕೋ. ರೂ. ಮೊತ್ತದ ಯೋಜನೆಗೆ 2017ರಲ್ಲಿಯೇ ಅನುಮೋದನೆ ದೊರೆತರೂ ಯೋಜನೆ ಇಂದಿಗೂ ಪೂರ್ಣವಾಗಿಲ್ಲ.

ವೆಂಕಟೇಶ್ವರ ಏತ ನೀರಾವರಿ ಯೋಜನೆ: ಜಮಖಂಡಿ ತಾಲೂ ಕಿನ 6 ಗ್ರಾಮಗಳು ಮುಧೋಳ ತಾಲೂಕಿನ 4 ಗ್ರಾಮ  ಗಳ 7200 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುವ 174.42 ಕೋಟಿ ಮೊತ್ತದ ಬಹುಬೇಡಿಕೆಯ ಯೋಜನೆಗೆ ಅನುಮೋದನೆ ದೊರೆತು 7 ವರ್ಷವಾದರೂ ಪೂರ್ಣಗೊಂಡಿಲ್ಲ.

ವೀರಭದ್ರೇಶ್ವರ ಏತ ನೀರಾವರಿ ಯೋಜನೆ: 544 ಕೋಟಿ ರೂ. ವೆಚ್ಚದಲ್ಲಿ ಘಟಪ್ರಭಾ ನದಿಯ 2.5 ಟಿ.ಎಂ.ಸಿ ನೀರು ಬಳಸಿಕೊಂಡು ಅನುಷ್ಠಾನಗೊಳಿಸುತ್ತಿರುವ ಈ ಯೋಜನೆ ಪೂರ್ಣ ಗೊಂಡರೆ ಮುಧೋಳ ಹಾಗೂ ರಾಮದುರ್ಗ ತಾಲೂ ಕಿನ 10 ಸಣ್ಣ ನೀರಾವರಿ ಕೆರೆಗಳನ್ನು ತುಂಬಿಸುವ ಜತೆಗೆ 17,377 ಹೆಕ್ಟೇರ್‌ ಭೂಮಿಗೆ ನೀರಾವರಿ ಸೌಕರ್ಯ ಕಲ್ಪಿಸಬಹುದು. ಶ್ರೀ ರಾಮೇಶ್ವರ ಏತ ನೀರಾವರಿ ಯೋಜನೆ: ಘಟಪ್ರಭಾ ನದಿಯ 2.20 ಟಿ.ಎಂ.ಸಿ ನೀರು ಬಳಸಿಕೊಂಡು ರಾಮದುರ್ಗ, ಸವ ದತ್ತಿ ಹಾಗೂ ಗೋಕಾಕ ತಾಲೂಕಿನ 13,800 ಹೆಕ್ಟೇರ್‌ ಪ್ರದೇಶಕ್ಕೆ ನೀರಾ ವರಿ ಸೌಲಭ್ಯ ಕಲ್ಪಿಸುವ ಯೋಜನೆಯಲ್ಲಿ 13,800 ಹೆಕ್ಟೇರ್‌ ತೂಬು ಗಾಲುವೆ ಸೃಷ್ಟಿಲಾಗಿದ್ದು, ಹೊಲಗಾಲುವೆ ನಿರ್ಮಾಣವಾಗಬೇಕಿದೆ.

Advertisement

ಸಾಲಾಪೂರ ಏತ ನೀರಾವರಿ ಯೋಜನೆ: ರಾಮೇಶ್ವರ ಮತ್ತು ವೀರಭದ್ರೇಶ್ವರ ಯೋಜನೆಗಳಿಂದ ವಂಚಿತವಾದ ರಾಮ   ದುರ್ಗ ತಾಲೂಕಿನ 19, ಬಾದಾಮಿ ತಾಲೂಕಿನ 6 ಹಾಗೂ ಮುಧೋಳ ತಾಲೂಕಿನ 2 ಗ್ರಾಮಗಳ 13,000 ಹೆಕ್ಟೇರ್‌ ಪ್ರದೇಶಕ್ಕೆ 2 ಹಂತಗಳಲ್ಲಿ 566 ಕೋ. ರೂ. ಮೊತ್ತದ ಯೋಜನೆಗೆ ಚಾಲನೆ ನೀಡಿದರೂ ಇನ್ನು 327 ಕೋ. ರೂ. ವೆಚ್ಚದ ಮೊದಲನೇ ಹಂತದ ಕಾಮಗಾರಿಗಳೇ ಪೂರ್ಣಗೊಂಡಿಲ್ಲ,

ಗೊಡಚಿನಮಲ್ಕಿ ಏತ ನೀರಾವರಿ ಯೋಜನೆ: ಘಟಪ್ರಭಾ ಮತ್ತು ಮಾರ್ಕಂಡೇಯ ನದಿಯ 0.50 ಟಿ.ಎಂ.ಸಿ ನೀರು ಉಪ ಯೋಗಿಸಿಕೊಂಡು ಗೋಕಾಕ ತಾಲೂಕಿನ 12 ಗ್ರಾಮಗಳ 2568.42 ಹೆಕ್ಟೇರ್‌ ಪ್ರದೇಶಕ್ಕೆ ನೀರೊದಗಿಸಲು ಕೇವಲ 73.75 ಕೋಟಿ ಮೊತ್ತ ದ ಯೋಜನೆಯನ್ನು ಇಂದಿಗೂ ಪೂರ್ಣ ಗೊಳಿಸಲು ಸಾಧ್ಯವಾಗುತ್ತಿಲ್ಲ.

ಚಚಡಿ ಹಾಗೂ ಮುರಗೋಡ ಏತ ನೀರಾವರಿ ಯೋಜನೆ ಗಳು: ಮಾರ್ಕಂಡೇಯ ಬಲದಂಡೆ ಕಾಲುವೆ ಉಪಯೋಗಿಸಿ  ಕೊಂಡು ಬೈಲಹೊಂಗಲ್‌ ತಾಲೂಕಿನ 2,718 ಹೆಕ್ಟೇರ್‌ ಪ್ರದೇಶಕ್ಕೆ ಚಚಡಿ ಏತ ನೀರಾವರಿ ಯೋಜನೆ ನೀರುಣಿಸಲು ಸಾಧ್ಯವಾದರೆ, ಮುರಗೋಡ ಏತ ನೀರಾವರಿ ಮೂಲಕ 1,939 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಬಹುದು.

ಕೊಣ್ಣೂರು ಏತ ನೀರಾವರಿ ಯೋಜನೆ: 0.39 ಟಿ.ಎಂ.ಸಿ ಮಲಪ್ರಭಾ ನೀರು ಬಳಸಿಕೊಂಡು ಬಾದಾಮಿ ಮತ್ತು ನರ ಗುಂದ ತಾಲೂಕಿನ 1578 ಹೆಕ್ಟೇರ್‌ ಪ್ರದೇಶಕ್ಕೆ ನೀರು ಒದಗಿ ಸುವ ಯೋಜ ನೆಗೆ ಆಡಳಿತಾತ್ಮಕ ಅನುಮೋದನೆ ದೊರೆತರೂ ಭೂ ಸ್ವಾಧಿನ ಪಕ್ರಿಯೆಯಿಂದಾಗಿ ಯೋಜನೆ ಅನುಷ್ಠಾನ ಸಾಧ್ಯವಾಗುತ್ತಿಲ್ಲ.

ಬಸವೇಶ್ವರ (ಕೆಂಪವಾಡ) ಏತ ನೀರಾವರಿ ಯೋಜನೆ: ಒಂದು ಬದಿಯಲ್ಲಿ ಸಮೃದ್ಧ ಕೃಷ್ಣೆ ಮತ್ತೊಂದು ಬದಿಯಲ್ಲಿ ಭೀಕರ ಬರಗಾಲಕ್ಕೆ ತುತ್ತಾಗುವ ಅಥಣಿ ತಾಲೂಕಿನ 22 ಹಳ್ಳಿ ಗಳ ಒಣ ಭೂಮಿ ರೈತರಿಗೆ ವರದಾನವಾಗಬಲ್ಲ ಈ ಯೋಜನೆ ಘೋಷಣೆ ಯಾದಾಗ ಅಥಣಿ ತಾಲೂಕಿನ ರೈತನಿಗೆ 2-3 ವರ್ಷದಲ್ಲಿ ತನ್ನ ಭೂಮಿಯೂ ಹಸುರಿನಿಂದ ಕಂಗೊಳಿಸುತ್ತದೆ ಎಂಬ ಕನಸು ಇತ್ತು. 1363.48 ಕೋಟಿ ರೂ. ವೆಚ್ಚದಲ್ಲಿ 27,462 ಹೆಕ್ಟೇರ್‌ಗೆ ನೀರು ಣಿಸುವ ಈ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ.

ಸಾರ್ಥಕವಾಗದ ಹರಿನಾಲ-ತಿಗಡಿ ಆಣೆಕಟ್ಟು: ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಹರಿನಾಲಾಗೆ ಅಡ್ಡಲಾಗಿ ಬೈಲಹೊಂಗಲ್‌ ತಾಲೂಕಿನ ನಾವಲಗಟ್ಟಿ ಸಮೀಪ ತಿಗಡಿ ಬಳಿ 0.73 ಟಿ.ಎಂ.ಸಿ. ಸಾಮರ್ಥ್ಯದ ಚಿಕ್ಕ ಜಲಾ  ಶಯ ಕಟ್ಟಲಾಗಿದೆ. ಈ ಯೋಜನೆ ನವೀಲುತೀರ್ಥ ಜಲಾ ಶಯಕ್ಕಿಂತಲೂ ಹಳೆಯದಾಗಿದೆ.

1960ರಲ್ಲಿಯೇ ಯೋಜನೆ ರೂಪಿಸಿದರೂ 2002ರಲ್ಲಿ ಎಸ್‌.ಎಂ. ಕೃಷ್ಣ ಅವಧಿಯಲ್ಲಿ ಯೋಜನೆ ಆರಂಭ ವಾಯಿತು. ಈ ಚಿಕ್ಕ ಜಲಾಶಯದ ಮೂಲಕ ಬೈಲಹೊಂಗಲ್‌-ಕಿತ್ತೂರು ತಾಲೂಕಿನ 8 ಗ್ರಾಮಗಳ ಕೃಷಿ ಭೂಮಿಗೆ ನೀರೊದ ಗಿಸುವ ಗುರಿ ಹೊಂದಲಾಗಿತ್ತು. ಜಲಾಶಯದ 9 ಕಿ.ಮೀ. ಉದ್ದದ ಎಡ ದಂಡೆ ಹಾಗೂ 10.72 ಕಿ.ಮೀ. ಉದ್ದದ ಬಲದಂಡೆ ಕಾಲುವೆ ಮೂಲಕ 3,480 ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸ ಬಹುದು. ಎರಡೂ ಕಾಲುವೆಗಳ ಕಾಮಗಾರಿ ಪೂರ್ಣಗೊಂಡರೂ ನೀರು ಹರಿಸುತ್ತಿಲ್ಲ. ಕಾಲುವೆಗಳು ಕಸ, ಕಡ್ಡಿ, ಕೆಸರು ತುಂಬಿ ಹಾಳಾಗಿವೆ. ಯೋಜನೆಗಾಗಿ ಜನವಸತಿ ಪ್ರದೇಶದ 198 ಮನೆಗಳ ಪುನರ್‌ವಸತಿ ಕಾರ್ಯ ಇಂದಿಗೂ ಪೂರ್ಣವಾಗದೇ 1500 ಜನರ ಬದುಕು ಅತಂತ್ರವಾಗಿದೆ. ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿಯವರು ಜಲಸಂಪನ್ಮೂಲ ಸಚಿವ ರಾಗಿದ್ದಾಗಲೇ ಕಾಲುವೆಗೆ ನೀರು ಹರಿಸುವ ಭರವಸೆ ನೀಡಿದ್ದರು. ಇಂದಿಗೂ ಅದು ಸಾಧ್ಯವಾಗಿಲ್ಲ. ಬೈಲಹೊಂಗಲ್‌ ತಾಲೂಕಿನಲ್ಲಿ 1975ರಲ್ಲಿಯೇ ಜಾರಿ ಯಾದ 11 ಏತ ನೀರಾವರಿ ಯೋಜನೆಗಳು 15 ವರ್ಷಗಳಿಂದ ವಿವಿಧ ಕಾರಣದಿಂದ ಸ್ಥಗಿತಗೊಂಡಿವೆ. ಈ ಯೋಜನೆಯ ಉಪಕರಣ ಗಳನ್ನು ನವೀಕರಣಗೊಳಿಸಿ ಮರು ಪ್ರಾರಂಭಿಸಿದರೆ 55 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸಬಹುದು.

ಇವುಗಳಲ್ಲದೇ ತುಬಚಿ-ಬಬಲೇಶ್ವರ ಹಾಗೂ ಹೆರಕಲ್‌ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿದರೆ ಗರಿಷ್ಠ ಪ್ರಯೋಜನ ಪಡೆಯಬಹುದು. ಏಷ್ಯಾದ ಅತೀ ದೊಡ್ಡದಾದ ರಾಮಥಾಳ ಸೂಕ್ಷ್ಮ ನೀರಾವರಿ ಯೋಜನೆ ಹಳ್ಳ ಹಿಡಿದಿದ್ದು ಸರಿ ದಾರಿಗೆ ತರುವ ಕೆಲಸವಾಗಬೇಕಿದೆ.

ಈಗಾಗಲೇ ಕರ್ನಾಟಕ ನೀರಾವರಿ ನಿಗಮ ಕೈಗೆತ್ತಿಕೊಂಡ ಕೃಷ್ಣಾ ನದಿಯಿಂದ ರಾಯಬಾಗ ತಾಲೂಕಿನ 39 ಕೆರೆಗಳು ಹಾಗೂ ಕುಡಚಿ ಮತಕ್ಷೇತ್ರದ 19 ಕೆರೆಗಳನ್ನು ತುಂಬುವ ಕೆಲಸ ನನೆಗುದಿಗೆ ಬಿದ್ದಿದೆ. ಮಲಪ್ರಭಾ ನದಿ ಮೂಲಕ ಬೈಲ ಹೊಂಗಲ್‌ ತಾಲೂಕಿನ 64 ಕೆರೆ ತುಂಬುವ ಕಾರ್ಯ ಕುಂಟುತ್ತ ಸಾಗು ತಿದೆ. ತುಪರಿಹಳ್ಳ ಮತ್ತು ಬೆಡ್ತಿ ನದಿಯಿಂದ ಧಾರವಾಡ ಜಿಲ್ಲೆ ಕೆರೆಗಳನ್ನು ತುಂಬುವ ಕಾರ್ಯ ಪೂರ್ಣಗೊಳ್ಳಬೇಕಿದೆ. ಕಳಸಾ- ಬಂಡೂರಿ ನಾಲಾ ಯೋಜನೆ ಪೂರ್ಣಗೊಂಡರೆ ಬೆಳಗಾವಿ ಜಿಲ್ಲೆಯ ನೀರಾವರಿಗೆ ಬಲ ಬರುತ್ತದೆ. ಬಳ್ಳಾರಿ ನಾಲಾ ಅಣೆಕಟ್ಟು ಕಾಲುವೆ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಬೆಳಗಾವಿ, ಗೋಕಾಕ, ಸವದತ್ತಿ, ಬೈಲಹೊಂಗಲ್‌ ತಾಲೂ ಕಿನ 8,200 ಹೆಕ್ಟೇರ್‌ ಪ್ರದೇಶ ಹಸುರಿನಿಂದ ಕಂಗೊಳಿಸುತ್ತದೆ.

ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆ ಮತ್ತು ಉಪಕಾಲುವೆಗಳ ವಿಸ್ತರಣೆ ಹಾಗೂ ಆಧುನೀಕರಣ ಕಾರ್ಯಕ್ಕೆ ವೇಗ ದೊರೆಯಬೇಕು. ಇದರ ಅಡಿಯಲ್ಲಿ ಬರುವ ದಡ್ಡಿ- ನಾಗ ನೂರ, ರುಸ್ತಂಪೂರ, ಕೊಟಬಾಗಿ ಏತ ನೀರಾವರಿ ಯೋಜನೆಗಳು ಪೂರ್ಣಗೊಂಡರೂ ಕಾಲುವೆ ನಿರ್ಮಾಣ ಕಾರ್ಯ ಇನ್ನು ಮುಗಿದಿಲ್ಲ. ಹಿಪ್ಪರಗಿ ಯೋಜನೆಯಡಿಯಲ್ಲಿಯ ಐನಾಪೂರ, ಕರಿಮಸೂತಿ, ಹಲ್ಯಾಳ ಹಾಗೂ ಸಾವಳಗಿ-ತುಂಗಳ ಏತ ನೀರಾವರಿ ಯೋಜನೆಗಳು ಹಾಗೂ ಕಾಲುವೆ ನಿರ್ಮಾಣ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಬೇಕಿದೆ. ಮಹಾ ರಾಷ್ಟ್ರ ಹಾಗೂ ಕರ್ನಾಟಕ ಜಂಟಿ ಯಾಗಿ ಅನುಷ್ಠಾನಗೊಳಿಸುತ್ತಿರುವ ದೂದ್‌ ಗಂಗಾ ಯೋಜನೆ ಜಾರಿ ಯಾದರೆ ಕರ್ನಾಟಕದ 15,167 ಹೆಕ್ಟೇರ್‌ ಹಾಗೂ ಮಹಾ ರಾಷ್ಟ್ರದ 44,766 ಹೆಕ್ಟೇರ್‌ ನೀರಾವರಿಗೆ ಅನುಕೂಲವಾಗುತ್ತದೆ.

ಬೆಣ್ಣೆತೊರಾ, ಅಮಾರ್ಜಾ, ಕಾರಂಜಾ, ಮುಲ್ಲಾಮಾರಿ, ಭೀಮಾ ಏತ ನೀರಾವರಿ ಯೋಜನೆ ಜಾರಿಯಾದರೆ ಬೀದರ್‌, ಕಲಬುರಗಿ, ವಿಜಯಪುರ ಜಿಲ್ಲೆಗಳ ರೈತರಿಗೆ ಹೆಚ್ಚು ಅನು ಕೂಲವಾಗುತ್ತದೆ. ಗೋದಾವರಿ ನದಿಯ ಉಪನದಿ  ಯಾದ ಮಾಂಜರಾ ನದಿಯಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸಿ 12 ತಿಂಗಳು ನೀರು ಹರಿಯುವಂತೆ ಮಾಡಿದರೆ ಬೀದರ್‌ ಜಿಲ್ಲೆಗೆ ಅನುಕೂಲವಾಗುತ್ತದೆ. ಸಿಂಗಟಲೂರ ಏತ ನೀರಾವರಿ ಯೋಜನೆ ಪೂರ್ಣಗೊಂಡರೆ ಬಳ್ಳಾರಿ, ವಿಜಯನಗರ, ಕೊಪ್ಪಳ, ಗದಗ ಜಿಲ್ಲೆಗಳ 1,07,380 ಎಕ್ರೆ ಪ್ರದೇಶಕ್ಕೆ ನೀರು ದೊರೆಯುತ್ತದೆ. ತುಂಗಭದ್ರಾ ಜಲಾಶಯದಲ್ಲಿ ಭಾರೀ ಪ್ರಮಾಣದಲ್ಲಿ ಹೂಳು ತುಂಬಿರುವುದರಿಂದ ನವಲಿ ಬಳಿ ಸಮತೋಲಿತ ಡ್ಯಾಂ ನಿರ್ಮಾಣ ಅಗತ್ಯವಾಗಿದೆ. ಅಳ ವಂಡಿ-ಬೇಟಗೇರಿ, ಕರಡೊಣ-ರಾಮದುರ್ಗ, ಬಹ ದ್ದೂರ- ಬಂಡಿ ನೀರಾವರಿ ತ್ವರಿತ ಅನುಷ್ಠಾನ ಕೊಪ್ಪಳ ಮತ್ತು ಗದಗ ಜಿಲ್ಲೆಗಳ ರೈತರ ಕೃಷಿ ಚಟುವಟಿಕೆಗಳ ವೃದ್ದಿಗೆ ಅನುಕೂಲವಾಗಲಿದೆ.

ಕೃಷ್ಣಾ, ಘಟಪ್ರಭಾ, ಮಲಪ್ರಭಾ, ತುಂಗಭದ್ರಾ ನದಿಗಳ ಜಲಾ ಶಯದಲ್ಲಿ 12 ತಿಂಗಳು ಸಮತೋಲಿತವಾಗಿ ನೀರು ಹರಿಸುವ ವ್ಯವಸ್ಥಿತ ನಿರ್ವಹಣೆಯ ಜತೆಗೆ ನದಿಗಳಲ್ಲಿ ಚೆಕ್‌ಡ್ಯಾಂ ನಿರ್ಮಾಣದ ಸಂಖ್ಯೆ ಹೆಚ್ಚಿಸಿದರೆ ನದಿ ಪಾತ್ರದ ಸುತ್ತಲಿನಲ್ಲಿ ಅಂತರ್ಜಲ ಮಟ್ಟ ಸಮೃದ್ಧವಾಗುತ್ತದೆ. 2 ವರ್ಷಗಳಲ್ಲಿ ಉತ್ತರ ಕರ್ನಾಟಕವನ್ನು ಸಮೃದ್ಧ ಗೊಳಿಸುವ ಇಚ್ಚಾಶಕ್ತಿ ಪ್ರಕಟಿಸಿದರೆ ಈ ಎಲ್ಲ ಯೋಜನೆ ಗಳಿಗೆ ಮುಕ್ತಿ ನೀಡಬಹುದು. ಸಿಎಂ, ಕೃಷಿ, ಜಲಸಂಪನ್ಮೂಲ ಸಚಿವರು ಉತ್ತರ ಕರ್ನಾಟಕದವರಾಗಿದ್ದಾರೆ. ಇದಕ್ಕಿಂತ ಬಹುದೊಡ್ಡ ಅವಕಾಶ ಉತ್ತರ ಕರ್ನಾಟಕಕ್ಕೆ ಮತ್ತೆ ಸಿಗಲಿಕ್ಕಿಲ್ಲ!

-ಸಂಗಮೇಶ ನಿರಾಣಿ

 

Advertisement

Udayavani is now on Telegram. Click here to join our channel and stay updated with the latest news.

Next