Advertisement

ಸಿನಿ ರಸಿಕರ ಗಮನ ಸೆಳೆದ ‘ಗರುಡ ಗಮನ, ವೃಷಭ ವಾಹನ’ಟ್ರೈಲರ್

06:06 PM Oct 15, 2021 | Team Udayavani |

ಬೆಂಗಳೂರು: ‘ಒಂದು ಮೊಟ್ಟೆಯ ಕತೆ’ ಖ್ಯಾತಿಯ ರಾಜ್ ಬಿ ಶೆಟ್ಟಿ, ನಟಿಸಿ, ನಿರ್ದೇಶಿಸಿರುವ ‘ಗರುಡ ಗಮನ, ವೃಷಭ ವಾಹನ’ ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ.

Advertisement

ಶಿವ ಹಾಗೂ ಹರಿ ಎಂಬ ಇಬ್ಬರು ಸ್ನೇಹಿತರ ಕತೆ ಇದೆಂಬುದು ಟ್ರೇಲರ್ ನೋಡಿದರೆ ಗೊತ್ತಾಗುತ್ತಿದೆ. ಮುಂಗೋಪಿ, ಹಿಂಸೆಗೆ ಹಿಂಜರಿಯದ ವ್ಯಕ್ತಿ ಶಿವನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದು, ಹರಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಕರಾವಳಿ ಭಾಗದ ಕತೆಯನ್ನು ಸಿನಿಮಾ ಹೊಂದಿದ್ದು, ಕರಾವಳಿ ಸಂಸ್ಕೃತಿಯು ಕತೆಯ ಒಳಗೆ ಸೇರಿಕೊಂಡಿದೆ ಎಂಬುದು ಟ್ರೇಲರ್‌ನಲ್ಲಿ ವೇದ್ಯವಾಗುತ್ತಿದೆ.

ಟ್ರೇಲರ್‌ನಲ್ಲಿಯೇ ರಾಜ್ ಬಿ ಶೆಟ್ಟಿ ನಟನೆ ಗಮನ ಸೆಳೆಯುತ್ತಿದೆ, ಸಿನಿಮಾದಲ್ಲಿ ಇನ್ನಷ್ಟು ಇಂಟೆನ್ಸ್‌ ಆಗಿ ರಾಜ್ ಬಿ ಶೆಟ್ಟಿ ಆವರಿಸಿಕೊಳ್ಳುವ ಎಲ್ಲ ಕುರುಹು ಟ್ರೇಲರ್‌ನಲ್ಲಿದೆ. ಹರಿ ಪೊಲೀಸ್ ಅಧಿಕಾರಿ ಆಗಿದ್ದು ಆತನ ಗೆಳೆಯ ಶಿವ ಕೊಲೆಗಾರನಾಗಿರುವ ಬಗ್ಗೆಯೂ ಟ್ರೇಲರ್‌ನಲ್ಲಿ ಸುಳಿವಿದೆ. ಕತೆಯ ಕೆಲವು ಸುಳಿವುಗಳನ್ನಷ್ಟೆ ಟ್ರೇಲರ್ ಬಿಟ್ಟುಕೊಟ್ಟಿದ್ದು, ಪೂರ್ಣ ಕತೆಯನ್ನು ಆಸ್ವಾದಿಸಲು ಸಿನಿಮಾ ಬಿಡುಗಡೆವರೆಗೆ ಕಾಯಬೇಕು.

ಸಿನಿಮಾ ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗಿದ್ದು, ನವೆಂಬರ್ 19 ಕ್ಕೆ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಜೂನ್ ತಿಂಗಳಿನಲ್ಲಿಯೇ ಸಿನಿಮಾ ಬಿಡುಗಡೆ ಅಗುವುದಿತ್ತು, ಆದರೆ ಕೋವಿಡ್ ಕಾರಣದಿಂದ ಬಿಡುಗಡೆ ತಡವಾಗಿದೆ. ತಮ್ಮ ಸಿನಿಮಾದ ಮೇಲೆ ಬಹಳ ನಂಬಿಕೆ ಹೊಂದಿರುವ ರಾಜ್ ಬಿ ಶೆಟ್ಟಿ, ”ಯಾವುದೇ ಕಾರಣಕ್ಕೂ ನೇರವಾಗಿ ಒಟಿಟಿಯಲ್ಲಿ ನಮ್ಮ ಸಿನಿಮಾ ಬಿಡುಗಡೆ ಆಗುವುದಿಲ್ಲ” ಎಂದಿದ್ದರು. ಅಂತೆಯೇ ತಡವಾದರೂ ಸರಿ ಚಿತ್ರಮಂದಿರಗಳಿಗೆ ಸಿನಿಮಾವನ್ನು ತರುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next