Advertisement

ಗಂಗಾವತಿ: ಕೃಷಿ ಸೇವಾ ಸಹಕಾರಿ ಸಂಘಗಳಿಗೆ ಮುಚ್ಚುವ ಭೀತಿ?

05:25 PM Jul 08, 2024 | Team Udayavani |

ಉದಯವಾಣಿ ಸಮಾಚಾರ
ಗಂಗಾವತಿ: ಇಡೀ ಏಷ್ಯಾ ಖಂಡಕ್ಕೆ ಸಹಕಾರಿ ಚಳವಳಿ ಮೂಲಕ ಸಹಕಾರಿ ತತ್ವಗಳ ಆಚರಣೆಗೆ ನಾಂದಿ ಹಾಡಿದ ರಾಜ್ಯದಲ್ಲಿ ಈಗ ಕೃಷಿ ಸೇವಾ ಸಹಕಾರಿ ಸಂಘಗಳ ಭವಿಷ್ಯ ತೂಗುಯ್ನಾಲೆಯಲ್ಲಿದೆ. ಕಳೆದೆರಡು ವರ್ಷಗಳಿಂದ ಎಸ್‌ಬಿಐ(ಎಡಿಬಿ) ಬ್ಯಾಂಕ್‌ ಕೆಲ ನಿಯಮಗಳ ಉಲ್ಲಂಘನೆ ಮತ್ತು ಸರಕಾರದ ಇಚ್ಛಾಶಕ್ತಿ ಕೊರತೆಯಿಂದ ರಾಜ್ಯದ ಬಹುತೇಕ ವ್ಯವಸಾಯ ಸೇವಾ ಸಹಕಾರಿ ಸಂಘಗಳು ಮುಚ್ಚುವ ಭೀತಿ ಎದುರಿಸುತ್ತಿವೆ.

Advertisement

ರಾಜ್ಯದ ರೈತರ ಆರ್ಥಿಕ ಸಂಕಷ್ಟ ದೂರ ಮಾಡಲು ಕೃಷಿಗಾಗಿ ಪ್ರತಿ ವರ್ಷ ವ್ಯವಸಾಯ ಸೇವಾ ಸಹಕಾರಿ ಸಂಘಗಳು ರೈತರಿಗೆ ಬಿತ್ತನೆ ಮತ್ತಿತರ ಕೃಷಿ ಕಾರ್ಯಗಳಿಗೆ ಕಡಿಮೆ ಬಡ್ಡಿದರದಲ್ಲಿ ಅಥವಾ ಪ್ರಸ್ತುತ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸುತ್ತಿದ್ದು, ಖಾಸಗಿ ವ್ಯಕ್ತಿಗಳ ಬಡ್ಡಿ ವ್ಯವಹಾರಕ್ಕೆ ಬಹುತೇಕ ಕಡಿವಾಣ ಬಿದ್ದಿದೆ. ಆದರೆ ಕೇಂದ್ರ, ರಾಜ್ಯ ಸರಕಾರದ ನಿರ್ಲಕ್ಷ್ಯ ಹಾಗೂ ಎಸ್‌ಬಿಐ (ಎಡಿಬಿ) ಬ್ಯಾಂಕ್‌ನ ಕಮರ್ಷಿಯಲ್‌ ನಿಯಮಗಳಿಂದ ರಾಜ್ಯದ ಸಾವಿರಾರು ವ್ಯವಸಾಯ ಸೇವಾ ಸಹಕಾರಿ ಸಂಘಗಳು ಮುಚ್ಚುವ ಹಂತ ತಲುಪಿದ್ದು ರೈತರಿಗೆ ಪುನರ್‌ ಸಾಲ ಕೊಡಲು ಸಾಧ್ಯವಿಲ್ಲದೇ ಸಂಕಷ್ಟದಲ್ಲಿವೆ. ಈ ಬಗ್ಗೆ ಗಮನ ಹರಿಸಬೇಕಿದ್ದ ಕೇಂದ್ರ, ರಾಜ್ಯ ಸಹಕಾರಿ ಇಲಾಖೆ ನಿರ್ಲಕ್ಷ್ಯ ವಹಿಸಿದ್ದರಿಂದ ಶತಮಾನದ ಸಹಕಾರಿ ಚಳವಳಿಗೇ ಮಂಕು ಕವಿದಿದೆ.

ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳು ರೈತರಿಗೆ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಘೋಷಣೆ ಮಾಡಿದಾಗಿನಿಂದ ಸಂಘಗಳು ಮತ್ತಷ್ಟು ಸೊರಗುತ್ತಿವೆ. ಕೊಪ್ಪಳ ಜಿಲ್ಲೆಯೊಂದರಲ್ಲಿಯೇ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮೂಲಕ 2022-23 ಹಾಗೂ 2023-24ನೇ ಸಾಲಿನಲ್ಲಿ ಶೂನ್ಯ ಬಡ್ಡಿದರದಲ್ಲಿ 230 ಕೋಟಿ ರೂ.ಗಳಷ್ಟು ಸಾಲ ರೈತರಿಗೆ ವಿತರಣೆಯಾಗಿದೆ.

ಜಿಲ್ಲೆಯ ಬಹುತೇಕ ವ್ಯವಸಾಯ ಸೇವಾ ಸಹಕಾರಿ ಸಂಘಗಳು ಜಿಲ್ಲಾ ಮಧ್ಯವರ್ತಿ (ಆರ್‌ಡಿಸಿಸಿ) ಬ್ಯಾಂಕ್‌ನಡಿಯಲ್ಲಿ ಹಣಕಾಸು ವ್ಯವಹಾರ ಮಾಡುತ್ತಿದ್ದು, ಸಹಕಾರಿ ಸಂಘಗಳಿಗೆ ಆರ್‌ಡಿಸಿಸಿ ಬ್ಯಾಂಕ್‌ ಸಾಲ ನೀಡಿ ಸರಕಾರದಿಂದ ಬಡ್ಡಿ ಪಡೆಯುತ್ತದೆ. ಆದರೆ ಜಿಲ್ಲೆಯ ಇನ್ನುಳಿದ ಸಹಕಾರಿ ಸಂಘಗಳು ಎಸ್‌ಬಿಐ (ಎಡಿಬಿ) ಬ್ಯಾಂಕ್‌ ವ್ಯಾಪ್ತಿಗೆ ಬರುವುದರಿಂದ ಕಮರ್ಷಿಯಲ್‌
ನಿಯಮದಡಿಯಲ್ಲಿ ಸಂಘಗಳಿಗೆ ಸಾಲ ನೀಡಿ ಶೇ.8.70 ದರದಲ್ಲಿ ಬಡ್ಡಿ ಪಡೆಯುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬಡ್ಡಿ ನಿಯಮ ಉಲ್ಲಂಘಿಸಿ ಶೇ.2ರಷ್ಟು ಹೆಚ್ಚುವರಿ ಬಡ್ಡಿ ಪಡೆಯುವ ಮೂಲಕ ಸಹಕಾರಿ ಸಂಘಗಳ ಆರ್ಥಿಕ ದುಸ್ಥಿತಿಗೆ ಕಾರಣವಾಗಿದೆ.

ಈ ಕುರಿತು ವ್ಯವಸಾಯ ಸೇವಾ ಸಹಕಾರಿ ಸಂಘಗಳ ಸಹಕಾರಿ ಧುರೀಣರು ರಾಜ್ಯದ ಸಹಕಾರಿ ಸಚಿವ ಕೆ.ಎನ್‌. ರಾಜಣ್ಣನವರ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಇದರಿಂದ ರಾಜ್ಯದ ಸಹಕಾರಿ ಸಂಘಗಳ ಸ್ಥಿತಿ ಗಂಭೀರವಾಗಿದೆ. ರಾಜ್ಯ ಸರಕಾರ ಕೂಡಲೇ ಮುತುವರ್ಜಿ ವಹಿಸಿ ವ್ಯವಸಾಯ ಸೇವಾ ಸಹಕಾರಿ ಸಂಘಗಳನ್ನು ಕಮರ್ಷಿಯಲ್‌ ವ್ಯಾಪ್ತಿಯಿಂದ ಆರ್‌ಡಿಸಿಸಿ ಬ್ಯಾಂಕ್‌ಗಳ ವ್ಯಾಪ್ತಿಗೆ ತರಲು ನಿಯಮ ರೂಪಿಸಬೇಕಿದೆ. ಶೂನ್ಯ ಬಡ್ಡಿ ಯೋಜನೆಯಡಿ ಸರಕಾರದಿಂದ ಸಹಕಾರಿಗಳಿಗೆ
ಬರಬೇಕಿರುವ 30 ಕೋಟಿ ಪ್ರೋತ್ಸಾಹಧನ ಕೂಡಲೇ ಬಿಡುಗಡೆ ಮಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ಪುನಶ್ಚೇತನಗೊಳಿಸುವ ಕಾರ್ಯ ಆಗಬೇಕಿದೆ.

Advertisement

ರೈತರಿಗೆ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಿದೆ. ಸರಕಾರ ಪ್ರೋತ್ಸಾಹಧನ (ಸರಕಾರ ಭರಿಸಬೇಕಿರುವ ಶೂನ್ಯ ಬಡ್ಡಿ ಹಣ) ಕಳೆದೆರಡು ವರ್ಷಗಳಿಂದ ಬಿಡುಗಡೆ ಮಾಡಿಲ್ಲ. ಆದ್ದರಿಂದ ಸಹಕಾರಿ ಸಂಘಗಳು ಕಮರ್ಷಿಯಲ್‌ ಬ್ಯಾಂಕ್‌ಗಳಿಗೆ ಶೇ.2 ಹೆಚ್ಚುವರಿ ಬಡ್ಡಿ ಪಾವತಿಸಲು ಹೆಣಗಾಡುತ್ತಿದ್ದು ಸಹಕಾರಿ ಸಂಘಗಳು ಮುಚ್ಚುವ ಹಂತ ತಲುಪಿವೆ. ಆದ್ದರಿಂದ ರಿಜರ್ವ್‌ ಬ್ಯಾಂಕ್‌ ಹಾಗೂ ಕೇಂದ್ರ, ರಾಜ್ಯ ಸರಕಾರ ಸಹಕಾರಿ ಸಂಘಗಳ ನೆರವಿಗೆ ಬರಬೇಕಿದೆ. ಇಲ್ಲದಿದ್ದರೆ ರೈತರಿಗೆ ಸಾಲ ಸೌಲಭ್ಯ ನೀಡಲು ಆಗಲ್ಲ.
*ಜಗದೀಶ, ಅಧ್ಯಕ್ಷರು, ವ್ಯವಸಾಯ ಸೇವಾ ಸಹಕಾರಿ ಸಂಘ ಢಣಾಪೂರ

ರಾಜ್ಯ ಸರಕಾರ ನಿಯಮ ಜಾರಿ ಮಾಡಿ ಎಲ್ಲ ವ್ಯವಸಾಯ ಸೇವಾ ಸಹಕಾರಿ ಸಂಘಗಳನ್ನು ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ ವ್ಯಾಪ್ತಿಗೆ ತರಬೇಕು. ಇದರಿಂದ ಕಮರ್ಷಿಯಲ್‌ ಬ್ಯಾಂಕುಗಳ ಹೆಚ್ಚುವರಿ ಬಡ್ಡಿದರದಿಂದ ಸಹಕಾರಿ ಸಂಘಗಳನ್ನು ಸಂರಕ್ಷಣೆ ಮಾಡಲು ಸಾಧ್ಯ. ರಾಯಚೂರು-ಕೊಪ್ಪಳ ಮಧ್ಯವರ್ತಿ ಸಹಕಾರಿ ಬ್ಯಾಂಕ್‌ ವ್ಯಾಪ್ತಿಗೆ ಶೇ.95 ಸಹಕಾರಿ ಸಂಘಗಳಿದ್ದು ಉಳಿದವು ಎಸ್‌ಬಿಐ (ಎಡಿಬಿ)ಅಥವಾ ಇತರೆ ಕಮರ್ಷಿಯಲ್‌ ಬ್ಯಾಂಕ್‌ ಹಿಡಿತದಿಂದ ಸ್ವಯಂ ಆಗಿ ಹೊರಗೆ ಬರಬೇಕು. ರಾಜ್ಯ ಸರಕಾರ ಶೂನ್ಯ ಬಡ್ಡಿ ಯೋಜನೆ ಪ್ರೋತ್ಸಾಹಧನ ಕಾಲಕಾಲಕ್ಕೆ ಸಂಘಗಳಿಗೆ ಬಿಡುಗಡೆ ಮಾಡಬೇಕು.
*ಹಾಲಪ್ಪ ಆಚಾರ, ಸಹಕಾರಿ ಧುರೀಣರು, ಮಾಜಿ ಸಚಿವ

■ ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next