Advertisement

ಗ್ಯಾಂಗ್‌ ವೈಷಮ್ಯ: ಅಮಾಯಕ ಯುವಕನ ಕಡಿದು ಕೊಲೆ

09:17 AM Jan 23, 2018 | |

ಮಂಗಳೂರು: ಗ್ಯಾಂಗ್‌ ವೈಷಮ್ಯಕ್ಕೆ ಸಂಬಂಧಿಸಿ ತಂಡವೊಂದು ಅಮಾಯಕ ಯುವಕನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದ ಘಟನೆ ಸೋಮವಾರ ಮುಂಜಾನೆ ತಣ್ಣೀರುಬಾವಿ ಬೆಂಗ್ರೆ ಯಲ್ಲಿ ನಡೆದಿದೆ. ತಣ್ಣೀರುಬಾವಿ ಬೆಂಗ್ರೆ ನಿವಾಸಿ ಶಿವರಾಜ್‌ (39) ಕೊಲೆಯಾದ ವ್ಯಕ್ತಿಯಾಗಿದ್ದು, ಮೀನುಗಾರಿಕೆ ವೃತ್ತಿಯಲ್ಲಿ ತೊಡ ಗಿಸಿ ಕೊಂಡಿದ್ದರು. ಕೊಲೆಕೃತ್ಯಕ್ಕೆ ಸಂಬಂಧಿಸಿ ದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಶಿವರಾಜ್‌ ಮನೆಯ ಟೆರೇಸ್‌ ಮೇಲೆ ರಾತ್ರಿ ಮಲಗಿದ್ದರು. ನಸುಕಿನ 4.30ರ ವೇಳೆ 4ರಿಂದ 5 ಮಂದಿ ಯುವಕರ ತಂಡವೊಂದು ಅವರು ಮಲಗಿದ್ದಲ್ಲಿಯೇ ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದು ಪರಾರಿ ಯಾಗಿದೆ. ಶಿವರಾಜ್‌ ಆರ್ತನಾದ ಕೇಳಿ ಮನೆಯೊಳಗೆ ಮಲಗಿದ್ದ ಸಹೋದರರಾದ ಭರತೇಶ್‌ ಹಾಗೂ ಜಯರಾಜ್‌ ಕೋಟ್ಯಾನ್‌ ಟೆರೇಸ್‌ಗೆ ಧಾವಿಸಿ ಬಂದಾಗ ಶಿವರಾಜ್‌ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂತು.

ಕೂಡಲೇ ಎ.ಜೆ. ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ತತ್‌ಕ್ಷಣ ಭರತೇಶ್‌ ಪಣಂಬೂರು ಪೊಲೀಸರಿಗೆ ದೂರ ವಾಣಿ ಮಾಡಿ ಮಾಹಿತಿ ನೀಡಿದ್ದು, ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ದರು. ಎ.ಜೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸ ಲಾಯಿತು. ಎಸಿಪಿ ಉದಯ ನಾಯಕ್‌, ಎಸಿಪಿ ವೆಲೆಂಟೈನ್‌ ಡಿ’ಸೋಜಾ, ಪಣಂಬೂರು ಇನ್ಸ್‌ಪೆಕ್ಟರ್‌ ರಫೀಕ್‌, ಕದ್ರಿ ಇನ್‌ಸ್ಪೆಕ್ಟರ್‌ ಮಾರುತಿ ನಾಯ್ಕ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶಿವರಾಜ್‌ ಸಹೋದರ ಜಯರಾಜ್‌ ಕೋಟ್ಯಾನ್‌ ನೀಡಿರುವ ದೂರಿ ನಂತೆ ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮೂವರು ಆರೋಪಿಗಳು ವಶಕ್ಕೆ
ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಣ್ಣೀರುಬಾವಿ ನಿವಾಸಿಗಳಾದ ಸುನಿಲ್‌ ಪೂಜಾರಿ (32), ಧೀರಜ್‌ (25), ತಣ್ಣೀರುಬಾವಿ ಯಲ್ಲಿ ವಾಸವಿರುವ ರೋಣ ತಾಲೂಕಿನ ಲಕ್ಕಲಕಟ್ಟೆ ನಿವಾಸಿ ಮಲ್ಲೇಶ ಅಲಿಯಾಸ್‌ ಮಾದೇಶ (23) ಪೊಲೀಸರ ವಶವಾಗಿರುವ ಆರೋಪಿ ಗಳು. ಹಳೆಯ ವೈಯಕ್ತಿಕ ದ್ವೇಷ ದಿಂದ ಈ ಕೊಲೆ ಮಾಡಿದ್ದಾರೆ.  ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದು ವರಿದಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪಣಂಬೂರು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ವಿಸ್ತೃತ ತನಿಖೆ ಮುಂದುವರಿದಿದೆ.

ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್‌ ಶಾಂತಾರಾಮ್‌, ಪಿಎಸ್‌ಐ ಶ್ಯಾಮಸುಂದರ್‌, ಎಎಸ್‌ಐ ಶಶಿಧರ ಶೆಟ್ಟಿ, ಸಿಬಂದಿಗಳಾದ ರಾಮ ಪೂಜಾರಿ, ಗಣೇಶ್‌, ಚಂದ್ರಶೇಖರ್‌, ಶೀನಪ್ಪ, ಚಂದ್ರ, ಸುಬ್ರಹ್ಮಣ್ಯ, ಚಂದ್ರಹಾಸ, ಯೋಗೀಶ್‌, ರಾಜೇಂದ್ರ ಪ್ರಸಾದ್‌, ಅಬ್ದುಲ್‌ ಜಬ್ಟಾರ್‌, ಪ್ರಶಾಂತ್‌ ಶೆಟ್ಟಿ, ಮಣಿ, ಅಶಿತ್‌ ಡಿ’ಸೋಜಾ, ತೇಜ ಕುಮಾರ್‌, ರಿತೇಶ್‌ ಭಾಗವಹಿಸಿದ್ದರು.

Advertisement

ಗ್ಯಾಂಗ್‌ ದ್ವೇಷಕ್ಕೆ ಅಮಾಯಕ ಬಲಿ? 
ಕೊಲೆಗೀಡಾದ ಶಿವರಾಜ್‌ ಸಹೋದರ ಭರತೇಶ್‌ ರೌಡಿಯಾಗಿ ಗುರುತಿಸಿಕೊಂಡಿದ್ದು, ಬಿಜೈ ರಾಜಾ ಕೊಲೆ ಪ್ರಕರಣದ ಆರೋಪಿ ಗಳಲ್ಲೋರ್ವ. ಪಣಂಬೂರು ಪೊಲೀಸ್‌ ಠಾಣೆ ಯಲ್ಲಿ ಈತನ ವಿರುದ್ಧ ಕೊಲೆ ಯತ್ನ, ಹಲ್ಲೆ ಸೇರಿ ದಂತೆ ಹಲವು ಪ್ರಕರಣಗಳು ದಾಖ ಲಾಗಿವೆ. ಕೆಲವು ದಿನಗಳ ಹಿಂದೆ ಸ್ಥಳೀಯ ಯುವಕರ ತಂಡ ಹಾಗೂ ಭರತೇಶ್‌ ತಂಡದ ನಡುವೆ ಮಾತಿನ ಚಕಮಕಿ ನಡೆದು ಪಣಂಬೂರು ಪೊಲೀಸ್‌ ಠಾಣೆಗೂ ದೂರು ಬಂದಿತ್ತು. ಪೊಲೀಸರು ಎಚ್ಚರಿಕೆ ನೀಡಿ ಕಳು ಹಿಸಿ ಕೊಟ್ಟಿದ್ದರು. ಆದರೆ ಎರಡೂ ತಂಡಗಳ ನಡುವೆ ದ್ವೇಷ ಹೊಗೆಯಾಡುತ್ತಿತ್ತು ಎನ್ನಲಾಗಿದೆ. ಕೊಲೆಗೆ ಸಂಬಂಧಿಸಿ ಮೂವರ‌ನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಅಣ್ಣನೆಂದು ಭ್ರಮಿಸಿ ತಮ್ಮನನ್ನು  ಕಡಿದರು
ಮನೆಯ ಟೆರೇಸ್‌ನ ಮೇಲೆ ಯಾವತ್ತೂ ಭರತೇಶ್‌ ಮಲಗುತ್ತಿದ್ದ. ತಂದೆ, ತಾಯಿ ಹಾಗೂ ಇನ್ನಿಬ್ಬರು ಸಹೋದರರು ಮನೆ ಯೊಳಗೆ ಮಲಗುತ್ತಿದ್ದರು. ಸೋಮವಾರ ಬೆಳಗ್ಗೆ ಬೇಗ ಏಳಲಿಕ್ಕಿದ್ದ ಕಾರಣ ಭರತೇಶ್‌ ಮನೆಯೊಳಗೆ ಮಲಗಿದ್ದು, ಸಹೋದರ ಶಿವರಾಜ್‌ ಟೆರೇಸ್‌ ಮೇಲೆ ಮಲಗಿದ್ದರು. ಭರತೇಶ್‌ ದಿನಚರಿಯ ಮಾಹಿತಿ ಹೊಂದಿದ್ದ ಎದುರಾಳಿ ತಂಡದ ಯುವಕರು ಆತನನ್ನು ಮುಗಿಸಲು ಸೋಮವಾರ ನಸುಕಿನ ವೇಳೆ ಟೆರೇಸ್‌ನ ಮೇಲೇರಿ ಮಾರಕಾಸ್ತ್ರಗಳಿಂದ ಮಲಗಿದ್ದವರ ಮೇಲೆ ಯದ್ವಾತದ್ವಾ ಹಲ್ಲೆ ಮಾಡಿದೆ. ಮಲಗಿರುವುದು ಭರತೇಶನೇ ಎಂದು ಆರೋಪಿಗಳು ತಪ್ಪು ತಿಳಿದು ಆತನ ಸಹೋದರ ಶಿವರಾಜ್‌ ಮೇಲೆ ಹಲ್ಲೆ ಮಾಡಿರಬೇಕು ಎಂದು ಶಂಕಿಸಲಾಗಿದೆ.

ಮೀನುಗಾರಿಕೆ ಮಾಡುತ್ತಿದ್ದರು
ಅಮಾಯಕ ಶಿವರಾಜ್‌ ಅವರದ್ದು ತಂದೆ, ತಾಯಿ ಹಾಗೂ ಭರತೇಶ್‌ ಸೇರಿದಂತೆ ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರ ಕುಟುಂಬ. ತಂಗಿಯಂದಿರಿಗೆ ವಿವಾಹವಾಗಿದ್ದು, ಒಬ್ಬರು ಮುಂಬಯಿ ಯಲ್ಲಿದ್ದಾರೆ. ಶಿವರಾಜ್‌ ಅವಿವಾಹಿತರಾಗಿದ್ದು, ತಂದೆ ಅನಾರೋಗ್ಯದಿಂದಿದ್ದಾರೆ. ದಿನವೂ ಬೆಳಗ್ಗೆ ಮೀನುಗಾರಿಕೆಗೆ ತೆರಳುತ್ತಿದ್ದ ಅವರು ಮಧ್ಯಾಹ್ನದ ಬಳಿಕ ಹಿಂದಿರುಗುತ್ತಿದ್ದರು. ಮಿತಭಾಷಿಯಾಗಿದ್ದು, ಯಾರೊಂದಿಗೂ ವೈಷಮ್ಯ ಹೊಂದಿರಲಿಲ್ಲ, ತನ್ನ ಪಾಡಿಗೆ ತಾನಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ನಾಯಿಯ ಗಮನಕ್ಕೂ ಬರಲಿಲ್ಲ
ಭರತೇಶ್‌ ಟೆರೇಸ್‌ ಮೇಲೆ ಮಲಗಿದ್ದರೆ ಆತನ ಬಳಿ ನಾಯಿ ಕಾವಲಿರುತ್ತಿತ್ತು. ಕೊಂಚ ಸದ್ದಾದರೂ ಜೋರಾಗಿ ಬೊಗಳುತ್ತಿತ್ತು. ರವಿವಾರ ಭರತೇಶ್‌ ಮನೆಯೊಳಗೆ ಮಲಗಿದ್ದ ಕಾರಣ ಅದು ಕೂಡ ಮನೆಯ ಮೆಟ್ಟಿಲಲ್ಲಿ ಮಲಗಿತ್ತು. ಹಾಗಾಗಿ ದುಷ್ಕರ್ಮಿಗಳು ಸ್ಟೇರ್‌ಕೇಸ್‌ ಏರಿ ಟೆರೇಸ್‌ ಮೇಲೆ ಹೋದದ್ದು ನಾಯಿಯ ಗಮನಕ್ಕೆ ಬಂದಿರಲಿಲ್ಲ. ಒಂದು ವೇಳೆ ನಾನು ಸ್ಟೇರ್‌ಕೇಸ್‌ ಮೇಲೆ ಮಲಗಿದ್ದರೆ ಮುನ್ಸೂಚನೆ ಸಿಗುತ್ತಿತ್ತು ಎನ್ನುತ್ತಾನೆ ಭರತೇಶ್‌.

Advertisement

Udayavani is now on Telegram. Click here to join our channel and stay updated with the latest news.

Next