Advertisement

Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ

06:17 PM Sep 30, 2024 | Team Udayavani |

ಗದಗ: ಜನ್ಮದಿನದ ಸಂಭ್ರಮದಲ್ಲಿರಬೇಕಿದ್ದ ಒಂಬತ್ತು ವರ್ಷದ ಬಾಲಕ ಸೋಮವಾರ (ಸೆ.30) ಶವವಾಗಿ ಪತ್ತೆಯಾಗಿದ್ದಾನೆ.

Advertisement

ನಗರದ ಕೊನೇರಿ ಹೊಂಡದಲ್ಲಿ ರವಿವಾರ ಕಾಲು ಜಾರಿ ಬಿದ್ದು ಕಣ್ಮರೆಯಾಗಿದ್ದ ಬಾಲಕ ಪ್ರಥಮ್ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸೋಮವಾರ ಹೊರತೆಗೆದರು.

ಗಂಗಾಪುರ ಪೇಟೆಯ ನಿವಾಸಿಯಾದ ಪ್ರಥಮ್ ಅಶೋಕ‌ ಮಾಡೋಳ್ಳಿ‌ ರವಿವಾರ ಮಧ್ಯಾಹ್ನ ಕೊನೇರಿ ಹೊಂಡದ ಮೆಟ್ಟಿಲುಗಳ ಮೇಲೆ ಸ್ನೇಹಿತರ ಜತೆಗೆ ಆಟವಾಡುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದಿದ್ದ. ಇನ್ನಿಬ್ಬರು ಬಾಲಕರು ಕಿರುಚುತ್ತ ಹೊರ ಬಂದು ಜನರಿಗೆ ವಿಷಯ ತಿಳಿಸಿದ್ದರು.

ತಕ್ಷಣವೇ ಯುವಕರ ತಂಡ ಹೊಂಡಕ್ಕೆ ಜಿಗಿದು ಬಾಲಕನ ರಕ್ಷಣೆಗೆ ಪ್ರಯತ್ನಿಸಿತು. ಇವರ ಜತೆಗೆ ಅಗ್ನಿಶಾಮಕದಳದ ಸಿಬ್ಬಂದಿ ಕೂಡ ಜತೆಯಾದರು. ಆದರೆ, ಈ ಹೊಂಡದಲ್ಲಿ ಗಣಪತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿಸರ್ಜನೆ ಮಾಡಿದ್ದರಿಂದ ಕೆಸರು ತುಂಬಿತ್ತು. ಜತೆಗೆ ರವಿವಾರ ಸಂಜೆ ವೇಳೆಗೆ ಮಳೆ ಆರಂಭಗೊಂಡಿದ್ದರಿಂದ ಕಾರ್ಯಾಚರಣೆ ಮುಂದುವರಿಸಲು ಸಾಧ್ಯವಾಗಿರಲಿಲ್ಲ.

Advertisement

ಸೋಮವಾರ ಮತ್ತೆ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕನ ಮೃತದೇಹವನ್ನು ಪತ್ತೆಹಚ್ಚಿದರು.

ತಂದೆ-ತಾಯಿ ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಬಾಲಕ ಅಕಾಲಿಕವಾಗಿ ಸಾವನ್ನಪ್ಪಿದ್ದು ಕಂಡು ಸ್ಥಳೀಯರು ಮರುಗಿದರು. ಪ್ರಥಮ್ ಸೆ.30ರಂದು ಜನಿಸಿದ್ದು, ಆತನ ಜನ್ಮದಿನ ಆಚರಿಸಲು ಅಜ್ಜಿ ಎರಡು ದಿನ ಹಿಂದಿನಿಂದಿಲೇ ಸಂಭ್ರಮದ ಸಿದ್ಧತೆ ಆರಂಭಿಸಿದ್ದರು. ಆದರೆ, ಜನ್ಮದಿನದಂದೇ ಶವವಾಗಿ ಪತ್ತೆಯಾದ ಮೊಮ್ಮಗನನ್ನು ಕಂಡು ಅಜ್ಜಿ ಎದೆಬಡಿದುಕೊಂಡು ಅಳುತ್ತಿದ್ದ ದೃಶ್ಯ ನೋಡಿ ಎಲ್ಲರ ಕಣ್ಣಾಲಿಗಳಲ್ಲಿ ನೀರು ಜಿನುಗಿದವು.

Advertisement

Udayavani is now on Telegram. Click here to join our channel and stay updated with the latest news.

Next