Advertisement

ಮಹದೇಶ್ವರ ದೇವಾಲಯದ ದಾಸೋಹ ಮತ್ತು ಲಾಡು ತಯಾರಿಕೆಗೆ FSSAI ಲೈಸೆನ್ಸ್!

01:47 PM Nov 09, 2020 | keerthan |

ಚಾಮರಾಜನಗರ: ಐಎಸ್‌ಓ ಪ್ರಮಾಣಪತ್ರ ಪಡೆದ ರಾಜ್ಯದ ಮೊದಲ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಜಿಲ್ಲೆಯ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನ ಈಗ ಮತ್ತೊಂದು ಗರಿಮೆ ಪಡೆದುಕೊಂಡಿದೆ. ದೇವಾಲಯದಲ್ಲಿ ತಯಾರಿಸುವ ಲಾಡು ಪ್ರಸಾದ ಹಾಗೂ ದಾಸೋಹದ ಆಹಾರ ತಯಾರಿಕೆಗೆ ಕೇಂದ್ರ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಲೈಸೆನ್ಸ್ ಪಡೆದುಕೊಂಡಿದೆ.

Advertisement

ಎಫ್‌ಎಸ್‌ಎಸ್‌ಎಐ -ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಧೀನಕ್ಕೊಳಪಟ್ಟ ಸಂಸ್ಥೆಯಾಗಿದ್ದು, ಇದು ಆಹಾರ ತಯಾರಿಕೆಯ ಗುಣಮಟ್ಟವನ್ನು ಖಾತ್ರಿ ಪಡಿಸಲು ಲೈಸೆನ್ಸ್ ನೀಡುತ್ತದೆ. ಸಾಮಾನ್ಯವಾಗಿ ನಾವು ಸಿದ್ಧಪಡಿಸಿದ ಆಹಾರದ ಪೊಟ್ಟಣಗಳ ಮೇಲೆ, ಕಂಪೆನಿಗಳ ಸಿಹಿ ತಿನಿಸು, ಆಹಾರದ ರೆಡಿಮಿಕ್‌ಸ್ಗಳ ಪೊಟ್ಟಣಗಳ ಮೇಲೆ ಎಫ್‌ಎಸ್‌ಎಸ್‌ಎಐ ಮುದ್ರೆ ಇರುವುದನ್ನು ಕಾಣಬಹುದು. ಇದು ಆ ಆಹಾರ ಪದಾರ್ಥದ ತಯಾರಿಕೆಯ ಸ್ವಚ್ಛತೆ, ಗುಣಮಟ್ಟದ ಪದಾರ್ಥಗಳ ಬಳಕೆಯನ್ನು ಖಾತ್ರಿ ಪಡಿಸುವ ಮುದ್ರೆ ಎಂದು ಹೇಳಬಹುದು.

ಜಿಲ್ಲೆಯ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಪರಿಶುದ್ಧ ಮತ್ತು ಗುಣಮಟ್ಟದ ಪ್ರಸಾದ ಮತ್ತು ದಾಸೋಹ ನೀಡುವುದನ್ನು ಖಚಿತಪಡಿಸಲು ಈ ಲೈಸೆನ್ಸ್ ಅನ್ನು ದೇವಾಲಯದ ಆಡಳಿತ ಪಡೆದುಕೊಂಡಿದೆ. ಈ ಲೈಸೆನ್ಸ್ ಪಡೆಯಲು ಆರು ತಿಂಗಳ ಹಿಂದೆಯೇ ಎಫ್‌ಎಸ್‌ಎಸ್‌ಎಐಗೆ ಅರ್ಜಿ ಸಲ್ಲಿಸಲಾಗಿತ್ತು. ಆ ಲೈಸೆನ್ಸ್ ನೀಡಲು ಅವರು ನೀಡುವ ಮಾನದಂಡಗಳನ್ನು ಆಹಾರ ತಯಾರಿಕಾ ಸ್ಥಳದಲ್ಲಿ ಪೂರೈಸಲಾಗಿದೆ ಎಂಬುದನ್ನು ಅರ್ಜಿದಾರರು ಮೊದಲು ಲಿಖಿತವಾಗಿ ತಿಳಿಸಬೇಕು. ಇದನ್ನು ಸಂಸ್ಥೆಯ ಪ್ರತಿನಿಧಿ ಖಚಿತಪಡಿಸಬೇಕು. ಲೈಸೆನ್ಸ್ ಪಡೆದ ಸಂಸ್ಥೆ ಎಫ್‌ಎಸ್‌ಎಸ್‌ಎಐ ಮಾನದಂಡಗಳನ್ನು ಅಳವಡಿಸಿಕೊಂಡು ಆಹಾರ ತಯಾರಿಕೆ ನಡೆಸಲಾರಂಭಿಸಿದ ಮೂರು ತಿಂಗಳೊಳಗೆ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸುತ್ತಾರೆ.

ಪ್ರಸ್ತುತ ಮಲೆ ಮಹದೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರದ ಲಾಡು ತಯಾರಿಕೆ ಹಾಗೂ ದಾಸೋಹ ಅಡುಗೆ ತಯಾರಿಕೆಗೆ ನ.8ರಂದು ಲೈಸೆನ್ಸ್ ದೊರೆತಿದೆ. ಇದು ಒಂದು ವರ್ಷದ ಅವಧಿಗೆ ಊರ್ಜಿತವಾಗುತ್ತದೆ. ಮತ್ತೆ ನವೀಕರಿಸಿಕೊಳ್ಳಬೇಕಾಗುತ್ತದೆ.

Advertisement

ರಾಜ್ಯದಲ್ಲಿ ಸರ್ಕಾರೇತರ ಒಡೆತನಕ್ಕೆ ಒಳಪಟ್ಟಿರುವ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಾಲಯದ  ಅನ್ನ ದಾಸೋಹ, ಪ್ರಸಾದ ತಯಾರಿಕೆಗೆ ಈಗಾಗಲೇ ಎಫ್‌ಎಸ್‌ಎಸ್‌ಎಐ ಲೈಸೆನ್ಸ್ ದೊರೆತಿದೆ. ಸ್ವಚ್ಛತೆ ಬಗ್ಗೆ ಮಹದೇಶ್ವರ ಪ್ರಾಧಿಕಾರ ಈಗಾಗಲೇ ಧರ್ಮಸ್ಥಳದಲ್ಲಿ ತರಬೇತಿ ಸಹ ಪಡೆದುಕೊಂಡು ಬಂದಿದೆ.

ಇದನ್ನೂ ಓದಿ:ಬಂಟ್ವಾಳ: ಕೋವಿಡ್ ನಿಂದ ಲಕ್ಷಾಂತರ ಹಣ ಬಂದಿದೆ ಎಂದು ನಂಬಿಸಿ ವೃದ್ಧೆಯ ಬಂಗಾರ ದೋಚಿದ ಅನಾಮಿಕ!

ಎಫ್‌ಎಸ್‌ಎಸ್‌ಎಐ ವಿಧಿಸುವ ಮಾನದಂಡಗಳು

ಆಹಾರ ತಯಾರಿಕಾ ಸ್ಥಳ ಸಂಪೂರ್ಣ ಸ್ವಚ್ಛವಾಗಿರಬೇಕು. ಕಿಟಕಿಗಳನ್ನು ಕೀಟ ಬಾರದಂತೆ ತಡೆಯುವ ಪರದೆಗಳನ್ನು ಹಾಕಿ ಮುಚ್ಚಬೇಕು. ಅಡುಗೆಗೆ ತಯಾರಿಸುವ ನೀರು ಪರಿಶುದ್ಧವಾಗಿರಬೇಕು. ತಯಾರಿಕಾ ಸ್ಥಳದಲ್ಲಿ ಉತ್ತಮ ಬೆಳಕು, ಗಾಳಿ ಇರಬೇಕು. ಹೊಗೆ ಮುಕ್ತವಾಗಿರಬೇಕು. ಆಹಾರ ಪದಾರ್ಥಗಳು, ಅಡುಗೆ ಎಣ್ಣೆ ಉತ್ತಮ ಗುಣಮಟ್ಟದ್ದಾಗಿರಬೇಕು.  ಪದಾರ್ಥಗಳನ್ನು ಆದ್ಯಂತವಾಗಿ ಸ್ವಚ್ಚಗೊಳಿಸಬೇಕು. ತಯಾರಿಸುವ ಪಾತ್ರೆಗಳನ್ನು ಗುಣಮಟ್ಟದ ಮಾರ್ಜಕದಿಂದ ತೊಳೆಯಬೇಕು. ಆಹಾರ ತಯಾರಿಸುವವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಸೂಕ್ತ ವ್ಯಾಕ್ಸೀನುಗಳನ್ನು ಹಾಕಿಸಿಕೊಳ್ಳಬೇಕು. ಯಾವುದೇ ಕಾಯಿಲೆಯಿಂದ, ಗಾಯಗಳಿಂದ ಬಳಲುತ್ತಿರಬಾರದು.  ಉಗುರು ಕತ್ತರಿಸಬೇಕು. ಧೂಮಪಾನ ಮಾಡಬಾರದು. ಏಪ್ರನ್, ಕೈಗವಸು, ತಲೆಗವಸು ಹಾಕಿಕೊಂಡಿರಬೇಕು. ಆಹಾರ ಬಡಿಸುವಾಗಲೂ ಊಟದ ಹಾಲ್ ಸಂಪೂರ್ಣ ಸ್ವಚ್ಛತೆಯಿಂದ ಕೂಡಿರಬೇಕು. ಆಹಾರ ತಯಾರಿಕೆಯ ನಂತರದ ಕಸ ಮುಸುರೆಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಪ್ಯಾಕಿಂಗ್ ಆಹಾರಗಳನ್ನು ಫುಡ್‌ಗ್ರೇಡ್ ಪ್ಯಾಕೆಟ್‌ಗಳಲ್ಲೇ ನೀಡಬೇಕು. ಇವಿಷ್ಟೇ ಅಲ್ಲದೇ ಇನ್ನೂ ಅನೇಕ ನಿಯಮಗಳನ್ನು ಲೈಸೆನ್ಸ್ ಪಡೆದ ಸಂಸ್ಥೆ ಪಾಲಿಸಬೇಕು.

ಎಫ್‌ಎಸ್‌ಎಸ್‌ಎಐ ಲೈಸೆನ್ಸ್ ಪಡೆದವರು ತಯಾರಿಕೆಯಿಂದ ಹಿಡಿದು ಭಕ್ತಾದಿಗಳಿಗೆ ಪ್ರಸಾದ ತಲುಪುವವರೆಗೂ ಪ್ರತಿಯೊಂದು ಹಂತದಲ್ಲೂ ಗುಣಮಟ್ಟ, ಸ್ವಚ್ಛತೆಯನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಇದನ್ನು ಪ್ರಾಧಿಕಾರ ಕಡ್ಡಾಯವಾಗಿ ಪಾಲಿಸುವ ಬದ್ಧತೆ ಹೊಂದಿದೆ.

ನಮ್ಮ ದೇವಾಲಯಕ್ಕೆ ಬಂದ ಭಕ್ತಾದಿಗಳು ಇಲ್ಲಿನ ದಾಸೋಹದ ಅಡುಗೆ ಮತ್ತು ಲಾಡು ಪ್ರಸಾದವನ್ನು ಸೇವಿಸಲು ಯಾವುದೇ ಅಳುಕು ಇರಬಾರದು. ಅವರು ತೃಪ್ತಿಯಿಂದ ಸಮಾಧಾನದಿಂದ ಮುಕ್ತವಾಗಿ ಪ್ರಸಾದ ಸೇವಿಸಬೇಕು ಎಂಬ ಉದ್ದೇಶದಿಂದಲೇ ಎಫ್‌ಎಸ್‌ಎಸ್‌ಎಐ ಲೈಸೆನ್‌ಸ್ ಪಡೆದುಕೊಂಡಿದ್ದೇವೆ. ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇವೆ ಎನ್ನುತ್ತಾರೆ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ.

ಕೆ.ಎಸ್. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next