Advertisement

15 ದಿನದಲ್ಲಿ ಎಫ್‌ಎಸ್‌ಎಲ್‌ ವರದಿ: ಸಿಎಂ ಬೊಮ್ಮಾಯಿ ಆದೇಶ

06:27 PM Dec 29, 2022 | Team Udayavani |

ಬೆಳಗಾವಿ: ಈ ಹಿಂದೆ ವಿಧಿ  ವಿಜ್ಞಾನ ಪ್ರಯೋಗಾಲಯಲದ ವರದಿಗಳು ಕೈಸೇರಲು 30 ದಿನ ಬೇಕಾಗಿದ್ದು, ಈಗ 15 ದಿನಗಳಲ್ಲಿ ವರದಿ ಸಿಗುವಂತೆ ಆದೇಶ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ನಗರ ಪೊಲೀಸ್‌ ಆಯುಕ್ತರ ನೂತನ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿ, ಪ್ರಯೋಗಾಲಯದಲ್ಲಿ ಅಗತ್ಯ ತಜ್ಞರ ನೇಮಕಾತಿ ಮಾಡಲಾಗಿದೆ. ಈ ಹಿಂದೆ ವಿಧಿ ವಿಜ್ಞಾನ ವರದಿ ಕೈಸೇರಲು ಮೂರು ತಿಂಗಳು ಹಿಡಿಯುತ್ತಿತ್ತು. ಸದ್ಯ 30 ದಿನಗಳ ವರದಿಗಳನ್ನು ನೀಡಲಾಗುತ್ತಿದೆ. 15 ದಿನದಲ್ಲಿ ವರದಿ ಬಂದರೆ ಅಪರಾಧ ಪ್ರಕರಣ ಪತ್ತೆ ಹಚ್ಚಲು ಅನುಕೂಲಕರವಾಗುತ್ತದೆ ಎಂದರು.

ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ ನಡೆಸಿ ಅಪರಾಧಿಗಳನ್ನು ಬಂಧಿಸಬೇಕು. ಬೆಳಗಾವಿ ಸೇರಿದಂತೆ ಎಲ್ಲ ಜಿಲ್ಲೆಗಳ ಪೊಲೀಸರು ಜನರೊಂದಿಗೆ ನಿಕಟ ಸಂಪರ್ಕ, ವಿಶ್ವಾಸ ಇಟ್ಟುಕೊಳ್ಳಬೇಕು. ಪೊಲೀಸ್‌ ಇಲಾಖೆ ಜನರ ಸಹಕಾರದಿಂದ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದರು.

ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆದಾಗ ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಅಪರಾ ಧಿಗಳನ್ನು ಬಂಧಿಸಿರುವ ಹೆಗ್ಗಳಿಕೆ ನಮ್ಮ ಪೊಲೀಸರಿಗೆ ಇದೆ. ರಾಜ್ಯದ ಪೊಲೀಸರು ದೇಶದಲ್ಲಿಯೇ ಉತ್ತಮ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಗಡಿಭಾಗ ಸೇರಿದಂತೆ ಹಲವು ಸವಾಲುಗಳು ಇವೆ. ಇವುಗಳನ್ನು ಅಚ್ಚುಕಟ್ಟಾಗಿ ಎದುರಿಸಿ ಶಾಂತಿ-ಸುವ್ಯವಸ್ಥೆ ಕಾಪಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಗಮದ ವತಿಯಿಂದ ರಾಜ್ಯದಲ್ಲಿ ಎರಡು ಬಂದಿಖಾನೆಗಳನ್ನು ನಿರ್ಮಿಸಲಾಗುವುದು. ಇದರ ಉದ್ಘಾಟನೆಗೆ ನಾನು ಬರುವುದಿಲ್ಲ, ನೀವೇ ಮಾಡಿ ಎಂದು ಮುಖ್ಯಮಂತ್ರಿಗಳು ಹಾಸ್ಯ ಚಟಾಕಿ ಹಾರಿಸಿದರು.

Advertisement

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಪೊಲೀಸರು ಗಡಿ ವಿಚಾರದಂತಹ ಭಾವನಾತ್ಮಕ ವಿಚಾರಗಳಲ್ಲಿ ಸಹನೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್‌ ಇಲಾಖೆ ಗೃಹ ನಿರ್ಮಾಣದ ಜೊತೆಗೆ ನೂತನ ಪೊಲೀಸ್‌ ಠಾಣೆ, ಎಫ್‌ಎಸ್‌ಎಲ್‌ ಲ್ಯಾಬ್‌ ನಿರ್ಮಾಣ, ವಾಹನ ಹಾಗೂ ನೂತನ ಶಸ್ತ್ರಾಸ್ತ್ರ ಖರೀದಿಸಲು ಮುಖ್ಯಮಂತ್ರಿಗಳು ಅಗತ್ಯ ಅನುದಾನ ನೀಡಿದ್ದಾರೆ ಎಂದರು.

ಶಾಸಕ ಅನಿಲ್‌ ಬೆನಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳಗಾವಿ ಪೊಲೀಸರ ಮೇಲೆ ನನಗೆ, ನನ್ನ ಮೇಲೆ ಪೊಲೀಸರಿಗೆ ಪ್ರೀತಿ ಇದೆ. ನಾನು ಶಾಸಕನಾಗುವ ಮುನ್ನ ನಿತ್ಯವೂ ಕಲ್ಲು ತೂರಾಟ, ಗಲಾಟೆ ನಡೆಯುತ್ತಿತ್ತು. ಐದು ವರ್ಷಗಳ ಅವಧಿಯಲ್ಲಿ ಒಂದೂ ಇಂತ ಘಟನೆಗಳು ಮರುಕಳಿಸಿಲ್ಲ. ಇದಕ್ಕೆ ಪೊಲೀಸರ ದಕ್ಷತೆ ಕಾರಣ ಎಂದರು.

ಕೊರೊನಾ ಕಾಲದಲ್ಲಿ ಜನರ ಸೇವೆ ಮಾಡಿದ್ದಾರೆ. ಬೆಳಗಾವಿ ನಗರದ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಿದ್ದಾರೆ. ಬ್ರಿಟಿಷ್‌ ಕಾಲೋನಿಯಲ್ಲಿ ಪೊಲೀಸರಿಗೆ ವಸತಿ ಗೃಹಗಳನ್ನು ನಿರ್ಮಿಸಬೇಕು. ಬಂದೋಬಸ್ತ್ ಆಗಮಿಸುವ ಪೊಲೀಸರಿಗೆ ನಗರದಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಲಾ ಅಂಗಡಿ, ಶಾಸಕ ಮಹೇಶ ಕುಮಠಳ್ಳಿ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯೆಲ್‌, ಪೊಲೀಸ್‌ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕ ಪ್ರವೀಣ ಸೂದ್‌, ಹೆಚ್ಚುವರಿ ಡಿಜಿ ಅರುಣ ಚಕ್ರವರ್ತಿ, ಬೆಳಗಾವಿ ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ, ಜಿಲ್ಲಾ ಕಾರಿ ನಿತೇಶ ಪಾಟೀಲ, ಉತ್ತರ ವಲಯ ಐಜಿಪಿ ಎನ್‌. ಸತೀಶ್‌ ಕುಮಾರ್‌, ಪೊಲೀಸ್‌ ಕಮಿಷನರ್‌ ಡಾ. ಎಂ.ಬಿ. ಬೋರಲಿಂಗಯ್ಯ ಸ್ವಾಗತಿಸಿದರು. ಎಸ್‌ಪಿ ಡಾ. ಸಂಜೀವ ಪಾಟೀಲ, ಡಿಸಿಪಿಗಳಾದ ರವೀಂದ್ರ ಗಡಾದಿ, ಸ್ನೇಹ ಪಿ.ವಿ., ಸಿದ್ದನಗೌಡ ಪಾಟೀಲ ಇದ್ದರು.

2500 ಪೊಲೀಸ್‌ ವಸತಿ ಗೃಹಗಳ ನಿರ್ಮಾಣ
ರಾಜ್ಯ ಪೊಲೀಸ್‌ ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದಿಂದ ಈ ವರ್ಷವೇ 2500 ಮನೆಗಳು ಪೂರ್ಣಗೊಳಿಸಲಾಗುವುದು. ಒಂದೇ ವರ್ಷದಲ್ಲಿ 116 ಪೊಲೀಸ್‌ ಠಾಣೆಗಳನ್ನು ನಿರ್ಮಿಸಲಾಗಿದೆ. ಪೊಲೀಸ್‌ ಸಾರಿಗೆ ವ್ಯವಸ್ಥೆ ಬಲಪಡಿಸಲು 80 ಕೋಟಿ ರೂ. ನೀಡಲಾಗಿದೆ. 300ಕ್ಕೂ ಹೆಚ್ಚು ಜೀಪ್‌, ಸ್ಕಾರ್ಪಿಯೋ, ಬುಲೇರೋ ಖರೀದಿಸಲಾಗಿದೆ. ಎಲ್ಲ ಪೊಲೀಸ್‌ ಅಧಿಕಾರಿಗಳಿಗೂ ವಾಹನಗಳನ್ನು ಒದಗಿಸಲು ಸರ್ಕಾರ ಆದೇಶ ಹೊರಡಿಸಿದೆ. ಡಿವೈಎಸ್ಪಿ
ಹಂತದ ಅಧಿ ಕಾರಿಗಳಿಗೆ ಸ್ಕಾರ್ಪಿಯೋ ವಾಹನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next