Advertisement

ಪವಿತ್ರ ಆರ್ಥಿಕತೆಗಾಗಿ ಜನಪರ ಮೈತ್ರಿಕೂಟ ರಚನೆ ಅಗತ್ಯ

09:01 PM Nov 24, 2019 | Team Udayavani |

ಹಾಸನ: ರಾಕ್ಷಸ ಆರ್ಥಿಕ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಪವಿತ್ರ ಆರ್ಥಿಕತೆಗಾಗಿ ಹೋರಾಡಲು ಜನಪರ ಮೈತ್ರಿಕೂಟ ರಚಿಸುವ ಅಗತ್ಯವಿದೆ ಎಂದು ಚಿಂತಕ, ಹೋರಾಟಗಾರ ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟರು. ಗ್ರಾಮ ಸೇವಾ ಸಂಘ, ಗ್ರಾಮ ಸಂಸ್ಕೃತಿ ಅಧ್ಯಯನ ಕೇಂದ್ರ ಹಾಗೂ ಹಸಿರು ಭೂಮಿ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಪವಿತ್ರ ಆರ್ಥಿಕತೆ ಸತ್ಯಾಗ್ರಹ ಮುಂದುವರಿಕೆಗಾಗಿ ಹಾಸನದ ಸಂಸ್ಕೃತ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದರು.

Advertisement

ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಮಾತ್ರ ಆರ್ಥಿಕ ಹಿಂಜರಿತವಿಲ್ಲ. ಯುಪಿಎ ಅವಧಿಯಲ್ಲೂ ಆರ್ಥಿಕ ಹಿಂಜರಿತ ಇತ್ತು. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರೆ ಹಲವು ಉತ್ಪನ್ನಗಳಿಗೆ ಬೆಲೆ ಸಿಗುವುದಿಲ್ಲ. 13 ಒಪ್ಪಂದಗಳು ಇನ್ನೂ ನಡೆಯುತ್ತಿವೆ. ಯಾರ ಬೆಲೆ, ಯಾರು ಕಟ್ಟುತ್ತಾರೋ ಎಂದು ಆತಂಕ ವ್ಯಕ್ತಪಡಿಸಿದರು.

ದುಡಿಯುವ ಜನರ ಶ್ರಮ ಪವಿತ್ರ: ದುಡಿಯುವ ಜನರು ಮತ್ತು ಅವರ ಶ್ರಮವೇ ಪವಿತ್ರ. ದೇವರು, ಮಠಗಳಷ್ಟೇ ಪವಿತ್ರ ಅಲ್ಲ ಎಂದ ಅವರು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮುಚ್ಚಲಾಗುತ್ತಿದೆ. ಜವಾಹರ್‌ ಲಾಲ್‌ ನೆಹರು ವಿಶ್ವದ್ಯಾನಿಲಯದಲ್ಲಿ (ಜೆಎನ್‌ಯು) ಅರ್ಧಕ್ಕಿಂತ ಹೆಚ್ಚು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಲಿತು ಐಎಎಸ್‌ ಅಧಿಕಾರಿಗಳು ಮಂತ್ರಿಗಳಾಗಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ 20 ರೂ. ಇದ್ದ ಶುಲ್ಕವನ್ನು ನೂರು ಪಟ್ಟು ಹೆಚ್ಚಿಸಲಾಗಿದೆ. ಇದು ರಾಕ್ಷಸ ಆರ್ಥಿಕತೆಯ ಒಂದು ತುಣುಕು. ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಬುಡವನ್ನೇ ಅಲ್ಲಾಡಿಸುತ್ತದೆ ಎಂದು ಎಚ್ಚರಿಸಿದರು.

ಹಾಳಾಗುತ್ತಿರುವ ಆರ್ಥಿಕ ವ್ಯವಸ್ಥೆ: ನಿವೃತ್ತ ಪ್ರಾಧ್ಯಾಪಕ ಜಾನಪದ ವಿದ್ವಾಂಸ ಹಂಪನಳ್ಳಿ ತಿಮ್ಮೇಗೌಡ ಮಾತನಾಡಿ, ದೇಶದ ಆರ್ಥಿಕ ವ್ಯವಸ್ಥೆ ಹಾಳಾಗುತ್ತಿದೆ. 1,258 ವಿಜ್ಞಾನಿಗಳು ಅಧ್ಯಯನ ಮಾಡಿ ನೀಡಿರುವ ವರದಿ ಪ್ರಕಾರ 2050ರ ವೇಳೆಗೆ 50 ಸಣ್ಣ ದೇಶಗಳು ಹಾಗೂ 150 ಬೃಹತ್‌ ನಗರಗಳು ಮುಳುಗಿ ಹೋಗುತ್ತವೆ. ಸಮುದ್ರದ ಒಳಗೆ 50 ಬಿಲಿಯನ್‌ ಟನ್‌ ತ್ಯಾಜ್ಯ ಇದೆ. ಇದು ಪರಿಸವನ್ನು ಹಾಳು ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಮಿಕರು ಉದ್ಯೋಗ ಇಲ್ಲದೆ ಬೀದಿಗೆ ಬಿದ್ದಿದ್ದಾರೆ. ಆಟೊಮೊಬೈಲ್‌, ಐಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. 30 ಸಾವಿರ ಕೈಗಾರಿಕೆಗಳು ಮುಚ್ಚಿದ್ದು, ಅಂದಾಜು 25 ರಿಂದ 30 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಹೇಳಿದರು. ರೈತ ಮುಖಂಡ ಎಸ್‌.ಎನ್‌.ಮಂಜುನಾಥ ದತ್ತ ಮಾತನಾಡಿ, ಮತ್ತೂಬ್ಬರ ಶ್ರಮ ಕದಿಯಲು ಯತ್ನಿಸಬಾರದು. ಭೂಮಿಗೆ ಭಾರ ಕೊಟ್ಟರೇ ಯಾರೂ ಬದುಕುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.

Advertisement

ಹಾಳಾಗುತ್ತಿರುವ ಪರಿಸರ: ಕವಯತ್ರಿ ಜ.ನಾ.ತೇಜಶ್ರೀ ಮಾತನಾಡಿ, ಪರಿಸರ ದಿನೆ,ದಿನೇ ಕಲುಷಿತವಾಗುತ್ತಿದೆ. ಪರಿಸರವನ್ನು ಕಲುಷಿತಗೊಳಿಸುವವರನ್ನು ಪ್ರಶ್ನಿಸುವವರಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳುವವರಿಲ್ಲ. ಅಕ್ರಮ ನಡೆಸುವವರನ್ನು ಕೇಳುವವರೇ ಇಲ್ಲ ಎಂದರು. ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಮಕ್ಕಳು ಕನ್ನಡ ಮಾತನಾಡಿದರೆ ದಂಡ ವಿಧಿಸುವ ಶಿಕ್ಷಣ ಸಂಸ್ಥೆಗಳು ಇವೆ. ಇದನ್ನು ಪ್ರಶ್ನಿಸಲಾಗದಷ್ಟು ನಮ್ಮ ಆತ್ಮ ಸಾಕ್ಷಿ ಸತ್ತು ಹೋಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇಂತಹ ಸಭೆ, ಸಮಾವೇಶ ನಡೆದಾಗ ಒಂದು ನಿರ್ಣಯ ತೆಗೆದುಕೊಂಡು ಅದನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದೂ ಅವರು ಸಲಹೆ ನೀಡಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ವಾಗ್ಮಿ ಅಭಿಲಾಷ್‌ ಅವರು, ಆರ್ಥಿಕ ಬಿಕ್ಕಟ್ಟಿನಿಂದ ಭಾರತ ಬಳಲುತ್ತಿದೆ. ನಗರದ ಜನರನ್ನು ಒಟ್ಟಿಗೆ ತರುವುದು ಸತ್ಯಗ್ರಹದ ಉದ್ದೇಶವಾಗಿದೆ. ಅತಿ ಹೆಚ್ಚು ಉದ್ಯೋಗ ತರಲು ಸಾಧ್ಯವಿರುವ ಉತ್ಪಾದಕ ವ್ಯವಸ್ಥೆಗೆ ಪವಿತ್ರ ಆರ್ಥಿಕ ವ್ಯವಸ್ಥೆ ಎಂದು ತಜ್ಞರು ಮುಂದಿಟ್ಟಿದ್ದಾರೆ ಎಂದರು.

ಸಂಪೂರ್ಣ ಕಚ್ಚಾ ವಸ್ತುವಿನಿಂದ ಉತ್ಪಾದನೆ ವ್ಯವಸ್ಥೆ. ಮಾನವ ಸಂಪನ್ಮೂಲ ಬಳಸಿ ಉತ್ಪಾದನೆ ಮಾಡುವ ಕ್ಷೇತ್ರಗಳನ್ನು ಪವಿತ್ರ ಆರ್ಥಿಕತೆ ಎನ್ನಬಹುದು. ಜನರನ್ನು ಒಟ್ಟುಗೂಡಿಸಿ ಹೆಚ್ಚು ದುಡಿಯುವುದು ಮತ್ತು ಕಾಯಕ ಪವಿತ್ರ ಎಂದು ಹೇಳಿದರು. ಕಲಾವಿದ ಜಯಶಂಕರ ಬೆಳಗುಂಬ ಮತ್ತು ಸಂಗಡಿಗರು ಕ್ರಾಂತಿಗೀತೆ ಹಾಡಿದರು. ಗ್ರಾಮ ಸಂಸ್ಕೃತಿ ಅಧ್ಯಯನ ಕೇಂದ್ರದ ಜಿ.ಎಸ್‌.ಮಂಜೇಶ್‌ ಪ್ರಗತಿಪರ ಚಿಂತಕ ಆರ್‌.ಪಿ. ವೆಂಕಟೇಶ್‌ಮೂರ್ತಿ, ಗೊರೂರು ಶಿವೇಶ್‌, ಅಪ್ಪಾಜಿಗೌಡ ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮೀಣ ಆರ್ಥಿಕತೆ ಕುಸಿದಿಲ್ಲ: ಗ್ರಾಮೀಣ ಕ್ಷೇತ್ರದ ಆರ್ಥಿಕತೆ ಈವರೆಗೂ ಕುಸಿದಿಲ್ಲ ಎಂದು ಎಂದು ಚಿಂತಕ, ಹೋರಾಟಗಾರ ರಂಗಕರ್ಮಿ ಪ್ರಸನ್ನ ಹೇಳಿದರು. ಗ್ರಾಮಗಳಲ್ಲಿ ರೈತರು ಮಾಡುವ ಹೋರಾಟ ಮುಖ್ಯ. 30 ವರ್ಷದಿಂದ ಸಾಫ್ಟ್ವೇರ್‌ ಕ್ಷೇತ್ರ ಒಂದು ಪೈಸೆ ತೆರಿಗೆ ಪಾವತಿಸಿಲ್ಲ. ಕಂಪನಿಗಳಿಗೆ ಜಾಗ, ವಿದ್ಯುತ್‌, ರಸ್ತೆ, ವಿಮಾನ ನಿಲ್ದಾಣ ಸೌಲಭ್ಯ ಕಲ್ಪಿಸಲಾಗಿದೆ. ಆದರೂ ಸಾಫ್ಟ್ವೇರ್‌ ಕಂಪನಿಗಳಿಂದ ಆದಾಯ ಬರುತ್ತಿಲ್ಲ ಎಂದು ಹೇಳುವವರ, ರಚನಾತ್ಮಕ ಚಳವಳಿ ಮಾಡುವವರನ್ನು ಅಗೌರವದಿಂದ ಕಾಣಲಾಗುತ್ತಿದೆ ಎಂದು ವಿಷಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next