Advertisement

ವಿದ್ಯಾರ್ಥಿಗಳಿಂದ ಸಾಹಸ ಕಲೆಗಳ ಪ್ರದರ್ಶನ

02:41 PM Jan 16, 2017 | |

ಚಿಕ್ಕಬಳ್ಳಾಪುರ: ಒಲಂಪಿಕ್ಸ್‌ ಕ್ರೀಡಾಕೂಟ ನೆನಪಿಸಿದ ವರ್ಣರಂಜಿತ ಪಥ ಸಂಚಲನ, ಮೈನವಿರೇಳಿಸುವ ಕುದುರೆ ಸವಾರಿ, ಬೆರಗುಗೊಳಿಸಿದ ಬೈಕ್‌ ಸವಾರಿ, ವಿಸ್ಮಯಗೊಳಿಸಿದ ಪ್ಯಾರಾಮೋಟಾರ್‌ ವಾಯುಕ್ರೀಡೆ. ಎಲ್ಲರ ಮನಗೆದ್ದ ರೋಲರ್‌ ಸ್ಕೇಟ್‌, ಸ್ಕೇಟ್‌ ಬೋರ್ಡ್‌, ವೇವ್‌ಬೋರ್ಡ್‌… ಇಂತಹ ಸಂಭ್ರಮೋಲ್ಲಾಸ, ಸಾಹಸ, ಶೌರ್ಯ, ಶಕ್ತಿ ಯುಕ್ತಿಗಳ, ಕಲೆ ಕೌಶಲ್ಯಗಳ ವೈಭವೋಪೇತ ಕಾರ್ಯಕ್ರಮ ಮೈದಳೆದು ಮನಮೋಹಕ ಕ್ಷಣಗಳಿಗೆ ಸಾಕ್ಷಿಯಾಯಾಗಿದ್ದು ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಸಮಾಗಾಮ ಕ್ರೀಡಾಂಗಣದಲ್ಲಿ.

Advertisement

ಮಕ್ಕಳ ಸಾಹಸಗಾಥೆಗೆ ಬೆರಗಾದ ಜನ: ಸತ್ಯಸಾಯಿ ಗ್ರಾಮದಲ್ಲಿ ಭಾನುವಾರ ಆರಂಭಗೊಂಡ ನಾಲ್ಕು ದಿನಗಳ ಶ್ರೀ ಸತ್ಯಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳ 43ನೇ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಮೇಳದಲ್ಲಿ ಎಳೆ ವಯಸ್ಸಿನಲ್ಲಿಯೇ ಲೋಕೋತ್ತರ ಕೀರ್ತಿ ಸಂಪಾದನೆಯ ಸಾಹಸ ಕಲೆಗಳ ಪ್ರದರ್ಶನ ನೀಡಿದ ಸಂಸ್ಥೆಯ ಮಕ್ಕಳ ಸಾಹಸಗಾಥೆಯನ್ನು ಕಂಡ ಪೋಷಕರು, ಅತಿಥಿಗಳು ಬೆಕ್ಕಸ ಬೆರಗಾದರು. ಲೋಕಸೇವಾ ಶಿಕ್ಷಣ ಸಂಸ್ಥೆಗಳ 3000 ಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿ ತಮ್ಮ ಸಹಸ ಕಲೆಗಳನ್ನು ಪ್ರದರ್ಶಿಸಿದರು. 

ಸಭಿಕರ ವಿಸ್ಮಯಗೊಳಿಸಿದ ಸಾಹಸ ಪ್ರದರ್ಶನ: ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬಾಬಾ ಅವರು ನೀಡಿದ ಧ್ಯೇಯ ವಾಕ್ಯ “ಜೀವನ ಒಂದು ಆಟ, ಅದನ್ನು ಉತ್ಸಾಹದಿಂದ ಆಡಿ ಆನಂದಿಸಿರಿ’ ಎಂಬ ಮಾತನ್ನು ನಿಜಾರ್ಥದಲ್ಲಿ ಮಾಡಿ ತೋರಿಸಿದರು. ವಿದ್ಯಾರ್ಥಿಗಳ ಕೆಚ್ಚು, ಸಮತೋಲನ, ಸ್ಥಿರವಾದ ಆತ್ಮ ವಿಶ್ವಾಸಗಳು ಕಿಂಚಿತ್ತೂ ಅನುಮಾನವಿಲ್ಲದ ಹಾಗೆ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನಗೊಂಡವು. ಕ್ರೀಡಾಜ್ಯೋತಿಯನ್ನು ಹಲವಾರು ಅಡಿ ಎತ್ತರದ ಬೆಟ್ಟದ ತುದಿಗೆ ತಲುಪಿಸಿದ ಜ್ಯೋತಿ ವಾಹನ ಐರಾವತ ಗಮನ ಸೆಳೆಯಿತು. 90 ಅಡಿಗಳ ಎತ್ತರದಲ್ಲಿ ವಿದ್ಯಾರ್ಥಿಗಳು ಮಾಡಿದ ಹಾಟ್‌ಏರ್‌ ಬಲೂನ್‌ ಕಸರತ್ತು ಮತ್ತು 1000 ಅಡಿ ಎತ್ತರದಲ್ಲಿ ಮಾಡಿದ ಪ್ಯಾರಾಮೋಟಾರ್‌ ವಾಯುಕ್ರೀಡೆಗಳು ಸಭಿಕರನ್ನು ವಿಸ್ಮಯಗೊಳಿಸಿದವು.

ಜನಮನ ಸೆಳೆದ ಸಾಹಸ ಕ್ರೀಡೆಗಳು: ವಿದೇಶಿ ಕಲೆಯಾದ ಸಿಂಹ ನೃತ್ಯವನ್ನು ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಪರಿ ಅದ್ಭುತವಾಗಿತ್ತು. ಮೈನವಿರೇಳಿಸುವ ಕುದುರೆ ಸವಾರಿಯನ್ನು ಪ್ರದರ್ಶಿಸುವ ಮೂಲಕ ಹಿರಿಯ ವಿದ್ಯಾರ್ಥಿಗಳು ಕೌತುಕದ ಹೊಸ ಲೋಕವನ್ನೇ ಸೃಷ್ಟಿಸಿದ್ದರು. ವಿಶ್ವಮಾನ್ಯತೆ ಪಡೆದ ಒಂಬತ್ತು ರಾಷ್ಟ್ರಗಳ ಆಕರ್ಷಕ ಸಮವಸ್ತ್ರಗಳನ್ನು ಧರಿಸಿ ಪ್ರದರ್ಶಿಸಿದ ಕ್ರಿಕೆಟ್‌ ಪ್ರದರ್ಶನ ವಿಶ್ವಕಪ್‌ ಪಂದ್ಯಾವಳಿಯನ್ನು ನೆನಪಿಸುವಂತಿತ್ತು. ಕಿರಿಯ ಬಾಲಕರು ಪ್ರದರ್ಶಿಸಿದ ರೋಲರ್‌ ಸ್ಕೇಟ್‌, ಸ್ಕೇಟ್‌ ಬೋರ್ಡ್‌, ವೇವ್‌ಬೋರ್ಡ್‌ ಜನಮನ ಸೆಳೆಯಿತು.

ಆಕರ್ಷಕ ನೃತ್ಯ: ಬ್ರೆಜಿಲ್‌ ಆಧ್ಯಾತ್ಮಿಕ ಧ್ಯಾನ ಕಲೆ ತೈಚಿ ಪ್ರದರ್ಶನ, ಮಲ್ಲಕಂಬ, ಬಾಸ್ಕೆಟ್‌ ಬಾಲ್‌ ಕೌಶಲ್ಯ, ಜಾಂಜ್‌ಪಥಕ್‌ ಜಾನಪದ ನೃತ್ಯ, ಕಾಳಿಂಗ ಮರ್ದನ ನೃತ್ಯ, ಭಾರತ ಮಾತಾ ನೃತ್ಯರೂಪಕ, ಟ್ರಾಂಪೋಲಿನ್‌ ಮೊದಲಾದ ಕಾರ್ಯಕ್ರಮಗಳು ಆಕರ್ಷಕವಾಗಿ ಮೂಡಿಬಂದವು. ಬೈಕ್‌ ಸವಾರಿ, ಅಗ್ನಿ ಚಕ್ರದ ಮಧ್ಯೆ ನುಗ್ಗಿ ನೆಗೆದು ಮುಂದಕ್ಕೆ ಸಾಗುವ ದೃಶ್ಯ ನೆರೆದಿದ್ದ ಸಾವಿರಾರು ಮಂದಿಯನ್ನು ಬೆರಗುಗೊಳಿಸಿದವು. 

Advertisement

ಕ್ರೀಡಾ ಹಾಗೂ ಸಾಂಸ್ಕೃತಿಕ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ರಾಜ್ಯದ ಕ್ರೀಡಾ ಮತ್ತು ಯುವಜನ ಸೇವಾ ಸಚಿವ ಎಂ.ಪ್ರಮೋದ್‌ ಮಧ್ವರಾಜ್‌, ಒಲಂಪಿಕ್‌ ಕ್ರೀಡಾಳು ಜೂಡ್‌ ಫಿಲಿಕ್ಸ್‌, ರಾಷ್ಟ್ರೀಯ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಪುರಸ್ಕೃತ ರಂಜನ್‌ ಸೋಧಿ, ಕೋಲಾರ ಸಂಸದ ಕೆ.ಎಚ್‌.ಮುನಿಯಪ್ಪ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಸಂಸ್ಥೆಯ ಕಾರ್ಯದರ್ಶಿ ಬಿ.ನಾರಾಯಣರಾವ್‌, ಮುಖ್ಯ ಮಾರ್ಗದರ್ಶಿ ಬಿ.ಎನ್‌.ನರಸಿಂಹಮೂರ್ತಿ, ಕರಾಯ ಸಂಜೀವ ಶೆಟ್ಟಿ, ಮಹೇಂದ್ರ ಹೆಗ್ಡೆ, ಎಚ್‌.ರಮಾನಂದ, ಡಾ.ರಮೇಶರಾವ್‌ ಉಪಸ್ಥಿತರಿದ್ದರು.

ಧನಾತ್ಮಕ ಮನೋಭಾವನೆಯಿಂದ ದೇಹ, ಮನಸ್ಸು, ಹೃದಯಗಳನ್ನು ಒಂದಾಗಿಸಿಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಸಾಧನೆಯನ್ನು ಆರಂಭಿಸಿದರೆ ವ್ಯಕ್ತಿಗತವಾಗಿ ಸುಖ, ಶಾಂತಿ, ನೆಮ್ಮದಿ ಸಾಧ್ಯವಾಗುತ್ತದೆ. ಅಲ್ಲದೇ, ಸುತ್ತಮುತ್ತಲಿನವರಿಗೆ ಹಾಗೂ ದೇಶಕ್ಕೆ ಒಳಿತಾಗುತ್ತದೆ. ಈ ನಿಟ್ಟಿನಲ್ಲಿ ಸತ್ಯಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ ಕಲಿಸಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಗೆ.
-ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next