Advertisement

ಮೀನುಗಾರರಿಗೆ ಕಡಲಿಗಿಳಿಯದಂತೆ ಸೂಚನೆ

10:18 AM May 22, 2018 | Harsha Rao |

ಮಂಗಳೂರು: ಅರಬ್ಬೀ ಸಮುದ್ರದ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಮೀನುಗಾರರು ಮುಂದಿನ 48 ಗಂಟೆ ಅವಧಿ ಮೀನುಗಾರಿಕೆಗಾಗಿ ಕಡಲಿಗಿಳಿಯಬಾರದೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

Advertisement

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು ಇದು ವಾಯವ್ಯ ಕಡೆಗೆ ಚಲಿಸುವ ಸಾಧ್ಯತೆಗಳಿವೆ. ಮುಂದಿನ ಐದು ದಿನಗಳಲ್ಲಿ ದಕ್ಷಿಣ ಒಮಾನ್‌ ಮತ್ತು ಯೆಮನ್‌ ಆಗ್ನೇಯ ಕರಾವಳಿಯತ್ತ ಸಾಗಲಿದೆ. ವಾಯುಭಾರ ಕುಸಿತ ಸಂಭವಿಸಿದರೆ ಈ ಭಾಗದ ಸಮುದ್ರದಲ್ಲಿ ಗಾಳಿಯ ವೇಗ ಹೆಚ್ಚಲಿದ್ದು ಗಂಟೆಗೆ 35 ರಿಂದ 45 ಕಿ.ಮೀ. ವೇಗದಲ್ಲಿ ಬೀಸಲಿದೆ. ಈ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯೂ ಇದೆ.

ಕರ್ನಾಟಕ ಕರಾವಳಿಯಲ್ಲಿ ದುಷ್ಪರಿಣಾಮ ಸಾಧ್ಯತೆ ಕಡಿಮೆ ಇದ್ದರೂ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಇದೆ. ಇದರ ಪರಿಣಾಮ ಮೇ 21ರಂದು ಅರಬ್ಬೀ ಸಮುದ್ರದ ದಕ್ಷಿಣ ಹಾಗೂ ಮಧ್ಯ ಭಾಗದಲ್ಲಿ ಹಾಗೂ ಪಶ್ಚಿಮ ಮಧ್ಯ ಅರಬ್ಬೀ ಸಮುದ್ರದಲ್ಲಿ ಮೇ 23ರಂದು ಗಂಟೆಗೆ 45-65 ಕಿಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಚ್ಚರಿಕೆಯ ಸಂದೇಶ 
ಕರಾವಳಿಯ ಮೀನುಗಾರರಿಗೆ ಈಗಾಗಲೇ ಎಚ್ಚರಿಕೆಯನ್ನು ನೀಡಲಾಗಿದೆ. ಮೀನುಗಾರಿಕಾ ಉಪನಿರ್ದೇಶಕ ಮಹೇಶ್‌ ಕುಮಾರ್‌ ಯು. ಉದಯವಾಣಿಯ ಜತೆ ಮಾತನಾಡಿ, ಹವಾಮಾನ ಇಲಾಖೆಯ ಮುನ್ಸೂಚನೆ ಯಂತೆ ಈಗಾಗಲೇ ಮೀನುಗಾರರಿಗೆ ಮುಂದಿನ 48 ಗಂಟೆಗಳ ಕಾಲ ಕಡಲಿಗಿಳಿಯದಂತೆ ಎಚ್ಚರಿಕೆಯ ಸಂದೇಶ ರವಾ ನಿಸಲಾಗಿದೆ. ಇದೇ ಮುಂದಿನ ಜೂನ್‌ 1ರಿಂದ ಮುಂದಿನ 60 ದಿನಗಳವರೆಗೆ ಮೀನುಗಾರಿಕೆಗೆ ನಿಷೇಧ ಇರುವ ಹಿನ್ನೆಲೆಯಲ್ಲಿ ಈಗಾಗಲೇ ಕೆಲ ಮೀನುಗಾರರು ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದಾರೆ. ಅವರು ಮೇ 28ರ ಮೊದಲು ಮೀನುಗಾರಿಕೆ ಸ್ಥಗಿತಗೊಳಿಸಿ ಬರುವುದು ಅನುಮಾನ. ಹಾಗಿದ್ದರೂ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next