Advertisement

ಒಂದು ಮಿಡ್‌ನೈಟ್‌ ಕೈಗೊಜ್ಜು

03:54 PM May 20, 2017 | Team Udayavani |

ಬೆಂಗಳೂರಿನ ವಿಷಯವಾಗಿ ಹಲವರಿಗೆ ಅಸಮಾಧಾನವಿದೆ. ಈ ಊರಿನ ಜನರಿಗೆ ಹೃದಯವಂತಿಕೆಯಿಲ್ಲ. ಕೃತಜ್ಞತೆ ಹೇಳುವ, ಸಹಾಯ ಮಾಡುವ ಬುದ್ಧಿಯಿಲ್ಲ. ಸಮಾಧಾನದಿಂದ ಮಾತಾಡುವ ತಾಳ್ಮೆಯೂ ಇಲ್ಲ… ದೂರುಗಳ ಪಟ್ಟಿ ಹೀಗೆ ಬೆಳೆಯುತ್ತಲೇ ಹೋಗುತ್ತದೆ. ಈ ನಿಷ್ಠುರ ಸತ್ಯಗಳ ನಡುವೆಯೇ ಮನಸ್ಸನ್ನು ಬೆಚ್ಚಗಾಗಿಸುವ ಪ್ರಸಂಗಗಳೂ ಈ ಬೆರಗಿನ ಬೆಂಗಳೂರಲ್ಲಿ ನಡೆದು ಬಿಡುತ್ತವೆ. ಅಂತಹ ಹೃದ್ಯ ಪ್ರಸಂಗದ ಅನಾವರಣಕ್ಕೆ ಈ ಅಂಕಣ ಮೀಸಲು. 

Advertisement

ನಾನು ಜನಿಸಿದ್ದು ಬೆಂಗಳೂರಾದರೂ ಹೈಸ್ಕೂಲ್‌ವರೆಗೆ ಓದಿದ್ದು ತುಮಕೂರಿನಲ್ಲಿ. ಕಾರಣ ನಮ್ಮದು ಬಡ ಕುಟುಂಬ ಆಗಿದ್ದರಿಂದ 6 ಜನ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವುದು ಕಷ್ಟವೇ ಆಗಿತ್ತು. ಈ ಕಾರಣ ನನ್ನ ತಂದೆ ತಾಯಿಗಳು ನನ್ನಣ್ಣ ಮತ್ತು ನನ್ನನ್ನು ಅಜ್ಜಿಯವರ ಸುಪರ್ದಿಗೆ ಕೊಟ್ಟಿದ್ದರು! ನಾನು ಹೈಸ್ಕೂಲ್‌  ಮುಗಿಸಿ ಬೆಂಗಳೂರಿನ ಕಡಗೆ ಬಂದೆ. ನಮ್ಮಣ್ಣ ನಮ್ಮಜ್ಜಿಯ ಜೊತೆಯಲ್ಲೇ ಉಳಿದ.

ಕಾಲೇಜು ದಿನಗಳಲ್ಲಿ ಮನೆಯ ಖರ್ಚು ವೆಚ್ಚ ನಿಭಾಯಿಸುವ ಹೊಣೆ ಇದ್ದಿದ್ದರಿಂದ ಕಾಸು ಬರುವ ಕೆಲಸಗಳನ್ನೆಲ್ಲ ಹುಡುಕಿ ಮಾಡುತ್ತಿದ್ದುದ್ದು ಇದೇ ಬೆಂಗಳೂರಲ್ಲೇ! ಕಾಫಿ ಪುಡಿ ಅಂಗಡಿಯಲ್ಲಿ ಪೊಟ್ಟಣ ಕಟ್ಟಿದ್ದು, ಪ್ರಿಂಟಿಂಗ್‌ ಪ್ರಸ್‌ನಲ್ಲಿ ಬೈಂಡಿಂಗ್‌, ಆಟೋ ಓಡಿಸಿದ್ದು, ಟೈಲರ್‌ ಅಂಗಡಿಯಲ್ಲಿ ಹೊಲಿಗೆ ಕಲಿತದ್ದು, ಅಕ್ಕಿ ಮಂಡಿಯಲ್ಲಿ ಲೆಕ್ಕ ಬರೆದಿದ್ದು… ಇವು ನಾಗೇಂದ್ರಯ್ಯನ ದಶಾವತಾರಗಳು!

ಅಕ್ಕಿ ಮಂಡಿಯಲ್ಲಿದ್ದ ಕಾಲದಲ್ಲಿ ನಾಟಕ ನನ್ನನ್ನು ಸೆಳೆಯಿತು. ಅಲ್ಲಿಂದ ನನ್ನ ಬದುಕಿನ ದಿಕ್ಕು ಬದಲಾಯಿತು. ಲೆಕ್ಕ ಬರೆಯುವ ಕೆಲಸ ಸಂಜೆಯ ವೇಳೆಗೆಲ್ಲ ಮುಗಿಯುತ್ತಿತ್ತು. ನಂತರ ಸ್ನೇಹಿತರೊಡನೆ ಚಾಮರಾಜಪೇಟೆಯ ಪಟಿಂಗರ ಕಟ್ಟೆಯಲ್ಲಿ ಝಂಡಾ ಹೂಡುತ್ತಿದ್ದೆವು. ಒಮ್ಮೆ ನನ್ನ ಸಂಬಂಧಿ ಅನಿಲ್‌ ಕುಮಾರ್‌ ಜೈನ್‌ ನಾಟಕದ ತಾಲೀಮಿಗೆ ಹೊರಟಿದ್ದ. “ಸ್ಪಂದನ’ ನಾಟಕ ತಂಡದಲ್ಲಿ ಆತ ನಟಿಸುತ್ತಿದ್ದ. ತಾಲೀಮು ನಡೀತಿದ್ದಿದ್ದು ಚಾಮರಾಜಪೇಟೆಯ ಮಕ್ಕಳ ಕೂಟದಲ್ಲಿ. ನಾವು ಕೂರುತ್ತಿದ್ದ ಪಟಿಂಗರ ಕಟ್ಟೆಯ ಮುಂದೆಯೇ ಹಾದು ಹೋಗಬೇಕಿತ್ತು ಆತ. ನಾನು ಅಲ್ಲಿ ಕೂತಿದ್ದನ್ನು ನೋಡಿ “ಇÇÉೇನೋ ಸುಮ್ನೆ ಕಾಲ ಕಳೀತೀಯ? ಬಾ ನನ್ನ ಜೊತೆ’ ಅಂತ ಬಲವಂತದಿಂದ ಕರೆದುಕೊಂಡು ಹೋದ. ಪಟಿಂಗರ ಕಟ್ಟೆಗೆ ನಮಸ್ಕಾರ ಹೇಳಿ, ನಾಟಕದ ಕಟ್ಟೆ ಸೇರಿಕೊಂಡೆ. 

ನಾಟಕ ರಂಗದಲ್ಲಿ ತೊಡಗಿಕೊಂಡ ಮೇಲೆ ಬಹುತೇಕ ರಾಜ್ಯ, ಅನೇಕ ನಗರ, ಪಟ್ಟಣಗಳಲ್ಲದೆ ಹಳ್ಳಿ ಹಳ್ಳಿಗಳಲ್ಲೂ ಪ್ರದರ್ಶನಗಳನ್ನು ಮಾಡಿದ್ದಿದೆ. ಎಷ್ಟೇ ದೇಶ, ರಾಜ್ಯ ಸುತ್ತಿದರೂ ಹೊರಟಾಗ ಇರುತ್ತಿದ್ದ ಉತ್ಸಾಹ… ಹೋದ ಒಂದೆರಡು ದಿನಗಳಲ್ಲೇ ಮುಗಿದು ಹೋಗಿ, ಯಾವಾಗ ಬೆಂಗ್ಳೂರು ಸೇರಿ¤àವೋ ಅಂತನ್ನಿಸುವಷ್ಟು ಈ ಊರು ಸೆಳೆದಿದೆ.

Advertisement

ಸಿನಿಮಾಕ್ಕೆ ಜಿಗಿದ ಮೇಲೆ ಕೆಲವೊಮ್ಮೆ ಚೆನ್ನೈನಲ್ಲಿ ತಿಂಗಳುಗಟ್ಟಲೆ ಇರಬೇಕಾದ ಪರಿಸ್ಥಿತಿ ಬರುತ್ತಿತ್ತು. ಆಗೆಲ್ಲ ಅನಿಸುತ್ತಿದ್ದು ಒಂದೇ, ಯಾವಾಗ ಬೆಂಗ್ಳೂರ್‌ಗೆ ಹೋಗಿ, ನನ್ನ ಮನೆಯಲ್ಲಿ ತಿಳಿಸಾರು, ಅನ್ನ ಉಣ್ಣುತ್ತೇನೋ ಅಂತ. ಒಮ್ಮೆ ಚೆನ್ನೈನಲ್ಲಿ ಹದಿನೈದು ದಿನ ಇರಬೇಕಾಯ್ತು. ತಡರಾತ್ರಿಯಲ್ಲಿ ಅಲ್ಲಿಂದ ಕೆಲಸ ಮುಗಿಸಿ, ಬೆಂಗಳೂರಿಗೆ ಹೊರಟೆ. ಇಲ್ಲಿಗೆ ಬಂದಾಗ ಮಧ್ಯರಾತ್ರಿ ಮೂರೂವರೆ! ನನ್ನ ಧರ್ಮಪತ್ನಿಗೆ ಅನ್ನ ಸಾರು ಮಾಡಿಕೊಡಲು ಕೇಳಿಕೊಂಡೆ. “ಇಷ್ಟೊತ್ತಿನಲ್ಲಿ ಸಾರು ಮಾಡುವುದು ಕಷ್ಟ… ನೀವು  ಸ್ನಾನ ಮಾಡಿ ಬನ್ನಿ, ನಾನು ಅನ್ನ ಕೈಗೊಜ್ಜು ಮಾಡ್ತೀನಿ” ಅಂದಳು. (ಕೈಗೊಜ್ಜು ಅಂದ್ರೆ ಒಂದಷ್ಟು ಹುಣಸೆ ಹುಳಿ ಕಿವುಚಿ ಅದಕ್ಕೊಂದಿಷ್ಟು ಈರುಳ್ಳಿ ಸಣ್ಣಗೆ ಹೆಚ್ಚಿ ಹಾಕಿ, ಒಂದೆರಡು ಹಸಿ ಮೆಣಸಿನ ಕಾಯಿಯನ್ನು ಬೆಳ್ಳುಳ್ಳಿಯೊಂದಿಗೆ ಜಜ್ಜಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಸೇರಿಸಿ… ತುಪ್ಪದ ಒಗ್ಗರಣೆ ಕೊಟ್ಟರಾಯ್ತು. ದಿಢೀರ್‌ ಕೈಗೊಜ್ಜು ರೆಡಿ) ಅದನ್ನು ಚೆನ್ನಾಗಿ ತಿಂದು ಮಲಗಿದ ನಾನು, ಮತ್ತೆ ಎದ್ದಿದ್ದು ಸಂಜೆ ವೇಳೆಗೆ! ಅನ್ನಪೂರ್ಣೆ ಅಮೃತ ಹಸ್ತದಿಂದ ಅಕ್ಕರೆಯಿಂದ ಮಾಡಿ ಉಣಬಡಿಸಿದ್ದಳು. 

ಹೀಗೆ ನಮಗೆ ನಮ್ಮನೆ… ನಮ್ಮೂರು ಬೆಂಗಳೂರು ಅಂದ್ರೆ ಅಷ್ಟೊಂದು ಮೋಹ. ಎÇÉೆಲ್ಲೂ ಕಸ ಬಿದ್ದಿರಲಿ, ಊರ ತುಂಬಾ ವಾಹನಗಳು ಹೊಗೆ ಏಳಿಸುತ್ತಿರಲಿ, ಮೆಟ್ರೋ ಮೇಲೆ ಮೆಟ್ರೋ ಬರಲಿ, ವಾಹನ ದಟ್ಟಣೆ ಹೆಚ್ಚಾದರೂ, ಮನೆ ಬಾಡಿಗೆ, ಮನೆ ಕಟ್ಟುವುದು ಇನ್ನಷ್ಟು ಕಷ್ಟವಾದರೂ, ಮಳೆ ಇಲ್ಲದಿದ್ದರೂ, ಏನೇ ಆದರೂ ಈ ಬೆಂಗಳೂರು ಅಂದದೂರು. ಎಂದೆಂದಿಗೂ ನಮ್ಮೂರು.

 ನಾಗೇಂದ್ರ ಶಾ, ರಂಗಕರ್ಮಿ, ಚಿತ್ರನಟ

Advertisement

Udayavani is now on Telegram. Click here to join our channel and stay updated with the latest news.

Next