Advertisement

ಮಂಗಳೂರು ಕೇಂದ್ರ ಕಾರಾಗೃಹದೊಳಗೂ ಹೊಡೆದಾಟ!

09:46 AM Jan 10, 2018 | Team Udayavani |

ಮಹಾನಗರ: ಹಲ್ಲೆ, ಗಾಂಜಾ ಮುಂತಾದ ಘಟನೆಗಳಿಂದ ಸದಾ ಸುದ್ದಿಯಲ್ಲಿರುವ ಮಂಗಳೂರಿನ ಕೇಂದ್ರ ಕಾರಾಗೃಹ ಈಗ ಮತ್ತೆ ಮಾರಾಮಾರಿ ಮೂಲಕ ಗಮನ ಸೆಳೆದಿದೆ. ಇತ್ತೀಚಿನ ವರ್ಷಗಳಲ್ಲಿ ಭೂಗತ ಲೋಕದ ಗ್ಯಾಂಗ್‌ವಾರ್‌, ಕೋಮು ಹೊಡೆದಾಟ ಜೈಲಿನೊಳಗೂ ನುಸುಳಿದೆ. ಪರಿಣಾಮ ಜೈಲಿನ ಅಂಗಳ ರಣರಂಗವಾಗಿ ಪರಿಣಾಮಿಸುತ್ತಿದೆ. ಕಾರಾಗೃಹ ಇಲಾಖೆ, ಪೊಲೀಸ್‌ ಇಲಾಖೆಯ ನೆಮ್ಮದಿ ಕೆಡಿಸಿದೆ.

Advertisement

ಸೋಮವಾರ ಜೈಲಿನಲ್ಲಿ ಎರಡು ಗುಂಪುಗಳು ಪರಸ್ಪರ ಬಡಿದಾಡಿಕೊಂಡು ಸುಮಾರು 10 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಸಂಜೆ 4.30ರ ವೇಳೆಗೆ ವಿಚಾರಣಾಧೀನ ಕೈದಿಗಳನ್ನು ವಿಸಿಟಿಂಗ್‌ಗೆ ಹಾಗೂ ಟೀಬ್ರೇಕ್‌ಗೆ ಬಿಡಲಾಗಿತ್ತು. ಈ ವೇಳೆ ಮಿಥುನ್‌ ಹಾಗೂ ಸಾಧಿಕ್‌ ನಡುವೆ ನಡೆದ ಮಾತಿನ ಚಕಮಕಿ ಅನಂತರ ಗುಂಪುಘರ್ಷಣೆಯ ತಿರುವು ಪಡೆದುಕೊಂಡು ಕೈಗೆ ಸಿಕ್ಕಿದ ವಸ್ತುಗಳನ್ನು ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ.
ಹೊಡೆದಾಟ ನಿಯಂತ್ರಿಸಲು ಹೋದ ಪೊಲೀಸರಿಗೂ ಏಟು ಬಿದ್ದಿವೆ. ಜೈಲು ವಸ್ತುಶಃ ಬೀದಿಕಾಳಗ ತಾಣವಾಗಿ
ಪರಿಣಮಿಸಿದೆ. ಪೊಲೀಸರು ಲಾಠಿಪ್ರಹಾರ ಮಾಡಿ ಗಲಭೆ ನಿಯಂತ್ರಿಸಿದ್ದಾರೆ.

ಕಳೆದ ಸೆಪ್ಟಂಬರ್‌ ತಿಂಗಳೊಂದರಲ್ಲೇ ಜೈಲಿನೊಳಗೆ 3 ಹಲ್ಲೆ ಪ್ರಕರಣಗಳು ನಡೆದಿತ್ತು. ಸೆ.11 ರಂದು ಉಡುಪಿಯ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ನಿರಂಜನ್‌ ಭಟ್‌ ಮತ್ತು ನವನೀತ್‌ ಶೆಟ್ಟಿ ಅವರ ಮೇಲೆ ಸಹ ಕೈದಿಗಳಿಂದ ಹಲ್ಲೆಯಾಗಿತ್ತು. ಇದಕ್ಕೂ ಮೊದಲು ವಿಚಾರಣಾಧೀನ ಕೈದಿ ತಾರನಾಥ್‌ ಹಾಗೂ ದನ ಕಳ್ಳತನದ ಆರೋಪದಲ್ಲಿ ಜೈಲಿನಲ್ಲಿದ್ದ ಕೈದಿಯೋರ್ವನ ಮೇಲೂ ಹಲ್ಲೆ ನಡೆದಿತ್ತು. ಇದಾದ ಬಳಿಕ ನಡೆದ ಬೃಹತ್‌ ಪೊಲೀಸ್‌ ಕಾರ್ಯಾಚರಣೆಯಲ್ಲಿ ಗಾಂಜಾ ಪ್ಯಾಕೇಟ್‌ಗಳು, ಮೊಬೈಲ್‌, ಪಂಚ್‌, ರಾಡ್‌ಗಳನ್ನು, ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಿಸಿದ ಹುಕ್ಕಾ ರೀತಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

ಜೈಲಿನೊಳಗೆ ಮಾರಕ ಅಸ್ತ್ರಗಳು ರವಾನೆಯಾಗುತ್ತಿವೆ ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು.

ಕೋಮು ಆಯಾಮ
ಕೆಲವು ಬಾರಿ ಕಾರಾಗೃಹದೊಳಗಿನ ಹೊಡೆದಾಟ ಕೋಮು ಆಯಾಮ ಪಡೆದುಕೊಂಡಿದ್ದು ಇದೆ. ವಿವಿಧ ಸಂಘಟನೆಗಳ ಸದಸ್ಯರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದಾಗ ಪರಸ್ಪರ ಗುರಾಯಿಸಿಕೊಂಡು ಬಳಿಕ ಹೊಡೆದಾಟಗಳಿಗೆ ಕಾರಣವಾದ ಘಟನೆಗಳು ಸಂಭವಿಸಿವೆ. ಹೊರಗೆ ಕೋಮುಸಂಘರ್ಷ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿನೊಳಗೆ ಬಂದವರನ್ನು ಇನ್ನೊಂದು ಕೋಮಿನ ಕೈದಿಗಳು ಥಳಿಸಿದ ಪ್ರಕರಣಗಳು ನಡೆದಿವೆ. ಇತ್ತೀಚಿನ
ವರ್ಷಗಳಲ್ಲಿ ತಮ್ಮ ಸಮುದಾಯಗಳ ಅನುಕಂಪ ಗಿಟ್ಟಿಸಿಕೊಳ್ಳುವ ನೆಪದಲ್ಲಿ ಕೋಮು ಆಧಾರದಲ್ಲಿ ತಮ್ಮನ್ನು
ವರ್ಗಿಕರಿಸಿಕೊಂಡಿರುವ ಭೂಗತ ಲೋಕದ ಪಾತಕಿಗಳು ಇದಕ್ಕೆ ಕುಮ್ಮಕ್ಕು ನೀಡಿ ಬಳಿಕ ಇದನ್ನು ಮಾಧ್ಯಮಗಳ
ಮುಂದೆ ಹೇಳಿಕೊಂಡದ್ದು ಇದೆ. ಸೋಮವಾರ ನಡೆದ ಘಟನೆಯೂ ಇದೇ ಸ್ವರೂಪದಲ್ಲಿ ನಡೆದಿದೆ ಎನ್ನಲಾಗಿದೆ.

Advertisement

ಈ ಹಿಂದೆ ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಸ್ಥಳಾವಕಾಶದ ಕೊರತೆ ಇತ್ತು. ಇದು ಪರೋಕ್ಷವಾಗಿ ಕೈದಿಗಳಿಗೆ ಹೊಡೆದಾಟಕ್ಕೆ ಸಹಕಾರಿಯಾಗಿತ್ತು ಎಂದು ಹೇಳಲಾಗುತ್ತಿತ್ತು. ಜೈಲ್‌ನೊಳಗೆ ಹೊಡೆದಾಟಗಳು ತೀವ್ರಗೊಂಡು ಹತ್ಯೆಯ ಘಟನೆ ನಡೆದ ಬಳಿಕ ಜೈಲಿನ ಭದ್ರತೆಗೆ ಕೈಗಾರಿಕ ಭದ್ರತಾ ಪಡೆಯ ಸಿಬಂದಿಯನ್ನು ನಿಯೋಜಿಸಲಾಯಿತು. ಇವರು ಜೈಲಿನ ಹೊರಗೆ ಹಾಗೂ ಇದಕ್ಕೆ ಹೊಂದಿಕೊಂಡಿರುವ ರಸ್ತೆ ಬದಿಯಲ್ಲಿ ಕಾವಲು ಬಂದೂಕು ಸಹಿತ ಕಾವಲು ಇರುತ್ತಾರೆ. ಹಳೆ ಜೈಲಿನ ಆವರಣ ಗೋಡೆ ಸುಮಾರು 30 ಅಡಿ ಎತ್ತರವಿದ್ದು, ಮೇಲ್ಗಡೆ ಅದಕ್ಕೆ ವಿದ್ಯುತ್‌ ತಂತಿ ಬೇಲಿ ಇದೆ. ಆದರೂ ಗಾಂಜಾ, ಶಸ್ತ್ರಾಸ್ತ, ಮೊಬೈಲ್‌ಗ‌ಳು ಜೈಲಿನೊಳಗೆ ನುಸುಳುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಕಾರಾಗೃಹದ ಒಳ ಭಾಗಕ್ಕೆ ಹೊರಗಿನಿಂದ ಪೊಟ್ಟಣಗಳನ್ನು ಎಸೆಯುವ ಪ್ರಕ್ರಿಯೆ ನಡೆಯುತ್ತಿದೆ. ಹಿತೈಷಿಗಳು ಹೊರಗಿನ ರಸ್ತೆಯಲ್ಲಿ ನಿಂತು ಗಾಂಜಾ ಮತ್ತು ಮೊಬೈಲ್‌ ಎಸೆಯುವ ಘಟನೆಗಳು ನಡೆಯುವುದು ಇದೆ.

ಸಂಘರ್ಷದಿಂದ ಸದಾ ಸುದ್ದಿಯಲ್ಲಿ 
ಮಂಗಳೂರು ಜೈಲಿನಲ್ಲಿ ಬರೇ ಘರ್ಷಣೆಗಳು ಮಾತ್ರ ನಡೆದಿಲ್ಲ. ಹತ್ಯೆ ನಡೆದ ಕುಖ್ಯಾತಿಯೂ ಇದೆ. 2015ರಲ್ಲಿ ಜೈಲಿನೊಳಗೆ ನಡೆದ ಮಾರಾಮಾರಿಯಲ್ಲಿ ಇಬ್ಬರು ವಿಚಾರಾಧೀನ ಕೈದಿಗಳ ಹತ್ಯೆ ನಡೆದಿತ್ತು. ಮುಂಬಯಿ ಭೂಗತ ಜಗತ್ತಿನೊಂದಿಗೆ ಮಂಗಳೂರು ಜೋಡಿಸಿಕೊಂಡಿದ್ದ ಕಾಲದಲ್ಲಿ ಪ್ರಮುಖ ಪಾತಕಿಗಳ ಬಲಗೈಬಂಟರು ಎನಿಸಿಕೊಂಡವರು ಈ ಕಾರಾಗೃಹದಲ್ಲಿದ್ದರು. ಆದರೆ ಜೈಲಿನೊಳಗೆ ಕಾದಾಡಿಕೊಂಡ ಘಟನೆ ಅಪರೂಪವಾಗಿತ್ತು. ಯಾವಾಗ ಹೊಸ ಹೊಸ ಪಾತಕಿಗಳ ಪ್ರವೇಶವಾಯಿತೋ, ಆಗ ಕಾರಾಗೃಹದ ಅಂಗಳ ಬಿಸಿಯೇರ ತೊಡಗಿತು. ಭೂಗತ ಪಾತಕಿಗಳ ಸಹಚರರೊಳಗೆ ಹೊರಗೆ ನಡೆಯುತ್ತಿದ್ದ ಕಾಳಗ ಜೈಲಿನೊಳಗೂ ಮುಂದುವರಿಯಿತು.

Advertisement

Udayavani is now on Telegram. Click here to join our channel and stay updated with the latest news.

Next