Advertisement

ಏನೆಂದು ಹೆಸರಿಡಲಿ, ಈ ಚೆಂದ ಅನುಭವಕೆ?

03:54 PM Aug 11, 2020 | Suhan S |

ಕನಸಲ್ಲಿ ಕಂಡ ಕನಸಿನ ಹುಡುಗನೇ, ನಿನ್ನಾಗಮನದ ಆ ಕನಸುಗಳು ಬರೀ ಕನಸಾಗಿ ಉಳಿಯುವುದು ನನಗಿಷ್ಟವಿಲ್ಲ. ಹೃದಯವೆಂಬ ಖಾಲಿ ಡಬ್ಬದಲ್ಲಿ ನಿನ್ನ ಮೇಲಿರುವ ಅಷ್ಟೂ ಪ್ರೀತಿಯ ತುಂಬಿರುವೆ. ಈಗ ಆ ಪ್ರೀತಿಯ ಪ್ರಮಾಣ ವಿಪರೀತ ಹೆಚ್ಚಿ, ಅದು ಡಬ್ಬಿಯಿಂದ ಆಚೆಗೂ ಚೆಲ್ಲತೊಡಗಿದೆ.

Advertisement

ಅದು ವ್ಯರ್ಥವಾಗದಂತೆ, ಚೆಲ್ಲಿ ಹೋಗದಂತೆ, ನಮ್ಮ ಪ್ರೇಮದ ರೀತಿ ಮತ್ಯಾರಿಗೂ ಗೊತ್ತಾಗದಂತೆ ನೋಡಿಕೊಳ್ಳಬೇಕಾದವನು, ಆಗಾಗ ನನ್ನನ್ನು ಸಮಾಧಾನಿಸುತ್ತಾ, ಪ್ರೀತಿಯ ಮಾತುಗಳಿಂದ ಧೈರ್ಯ ಹೇಳುತ್ತಾ ಕೈ ಹಿಡಿದು ನಡೆಸಬೇಕಿರುವವನು ನೀನು. ಇದೆಲ್ಲಾ ನಿನಗೆ ಗೊತ್ತಿಲ್ಲವಾ? ಇಂಥ ಸಂಗತಿಗಳು ನಿನಗೆ ಬೇಗ ಅರ್ಥವಾಗುವುದಿಲ್ಲವಾ? ಅಥವಾ, ಎಲ್ಲಾ ಅರ್ಥವಾದರೂ ಏನೂ ಮಾತಾಡದೆ ಇದ್ದುಬಿಡುವುದೇ ನಿನಗೆ ಇಷ್ಟವಾ? ತಂಪು ಗಾಳಿಗೆ ಇಂಪಾಗಿ ನರ್ತಿಸುವ ನನ್ನ ಮುಂಗುರುಳ ನರ್ತನಕೆ ಮನಸೋತು ನೀನು ಮಂದಹಾಸ ಬೀರಿ, ನನ್ನ ಮೊಗವ ನಿನ್ನ ಬೊಗಸೆಯಲ್ಲಿ ಹಿಡಿಯುತ್ತೀಯಲ್ಲ; ಆ ಕ್ಷಣದಲ್ಲಿ ನನಗೆ ಆಗುವ ಖುಷಿಯನ್ನು ಏನೆಂದು ಬಣ್ಣಿಸಲಿ? ನಾನು ಮಾತು ಹೊರಡದೆ, ಹೇಳಲಾರೆನು ತಾಳಲಾರೆನು ಎಂದು ನಿಂತುಕೊಂಡರೆ- ಅದೇ ಸಮಯಕ್ಕೆ ನೀನೂ ಸೈಲೆಂಟಾಗಿ ನಿಲ್ಲುವುದಾ? ಕಳ್ಳ ನೀನು, ನಿನ್ನಂದ, ಮಾತು, ಕೃತಿಗಳಿಂದ ನನ್ನ ಮನ ಕದ್ದೆ. ಕೊಲೆಗಾರ ನೀನು- ನಾ ಅಳುವಾಗ ನಿನ್ನ ಚಾಣಾಕ್ಷತನದಿಂದ ನನ್ನಲ್ಲಿನ ದುಃಖವನ್ನು ಕೊಂದೆ. ನನ್ನ ನಗಿಸಿ, ಆ ನಗುವಿನಲ್ಲಿ ನಿನ್ನ ಸಂತೋಷ ಕಂಡುಕೊಂಡೆ. ಜಿಪುಣ ನೀನು- ಎಂದೆಂದಿಗೂ ನನ್ನ ಬಿಟ್ಟುಕೊಡಲಿಲ್ಲ. ಜಾಣ ನೀನು, ಯಾರ ಬಲೆಗೂ ಬೀಳದ, ಭದ್ರ ಬೀಗ ಹಾಕಿದ್ದ ನನ್ನ ಹೃದಯಕ್ಕೆ ಸದ್ದಿಲ್ಲದೇ ಬೀಗದ ಕೈ ಕದ್ದು ಒಳಗೆ ಬಂದು ಕುಳಿತು, ಒಲವಿನ ರಾಗ ಹೇಳಿಕೊಡಲು ಪ್ರಾರಂಭಿಸಿದೆ.

ಕೋಟಿಕೋಟಿ ಕನಸುಗಳ ಹೊತ್ತುತಂದ ಗೆಳೆಯನೇ, ನನಗೊಂದು ಪ್ರೀತಿಯ ಹೆಸರಿಟ್ಟು, ನೀನು ಮಾತ್ರ ಆ ಹೆಸರಿನಿಂದ ಕರೆಯುವಾಗ, ಅದೇನೋ ಖುಷಿ ನನಗೆ. ಅದೇ ಹೆಸರನ್ನು ನೀನು ಮತ್ತೂಮ್ಮೆ, ಮಗದೊಮ್ಮೆ ಕರೆಯಲಿ ಎಂಬ ಆಸೆಯಿಂದ, ನೀನು ಕರೆದದ್ದು ಕೇಳಿಸಲೇ ಇಲ್ಲ ಅನ್ನುವಂತೆ ಆಗಾಗ ನಟಿಸುತ್ತಲೇ ಇರುತ್ತೇನೆ ನಾನು. ಈ ಸತ್ಯ ಗೊತ್ತಿದ್ದರೂ ಗೊತ್ತಿಲ್ಲದಂತೆ, ನೀನೂ ನಟಿಸುತ್ತಿರುವೆ. ಇದೇ ಅಲ್ಲವೇ ಪ್ರೀತಿ ಎಂದರೆ? ನಮ್ಮಿಬ್ಬರ ಪ್ರೀತಿಯ ತೊರೆಗೆ ಅಡ್ಡಗಾಲಿಕ್ಕಲು ಯಾರೂ ಮಧ್ಯೆ ಬಾರದಿರಲಿ. ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಿ ನಮ್ಮ ಪ್ರೀತಿಯ ಮೇಲೆ…

 

-ಸೌಮ್ಯಶ್ರೀ ಸುದರ್ಶನ್‌ ಹಿರೇಮಠ್

Advertisement
Advertisement

Udayavani is now on Telegram. Click here to join our channel and stay updated with the latest news.

Next