Advertisement

ಈಗ ಮಳೆಯಾದ್ರೆ ಮಾತ್ರ ಕೈಗೆ ಬೆಳೆ

05:29 PM Jul 05, 2022 | Team Udayavani |

ತೆಲಸಂಗ: ಮುನಿದ ಮುಂಗಾರು ಮಳೆ.. ಆತಂಕದಲ್ಲಿ ರೈತ ಸಮುದಾಯ. ಇದು ಅಕ್ಷರಶಃ ನಿಜ. ಈ ವರ್ಷ ಉತ್ತಮ ಮಳೆಯಾಗಿ ರೈತರ ಸ್ಥಿತಿಗತಿ ಉತ್ತಮಗೊಳ್ಳುವ ಆಸೆಗೆ ಮುಂಗಾರು ಮಳೆ ತಣ್ಣೀರೆರೆಚಿದೆ.

Advertisement

ಹೌದು.. ತೆಲಸಂಗ ಹೋಬಳಿಯಲ್ಲಿ ವಾಡಿಕೆಗಿಂತ ಪ್ರಸಕ್ತ ವರ್ಷ ಜೂನ್‌ ತಿಂಗಳಿಗೂ ಮುನ್ನ ಅಂದರೆ ಮೇ 13 ರಂದು 27.2 ಮಿ.ಮೀ, 18 ರಂದು 6.1, 20 ರಂದು 104.2, 21 ರಂದು 28.2 ಮಿ.ಮೀ ಮಳೆ ಸುರಿದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಈ ಹಿಂದಿನ 10 ವರ್ಷದಲ್ಲಿ ಈ ಭಾಗದಲ್ಲಿ ಮೇ ತಿಂಗಳಲ್ಲಿ ಮಳೆ ಆಗಿದ್ದೇ ಇಲ್ಲ. ಬೇಸಿಗೆಯಲ್ಲಿ ಹೊಲಗೆಲಸ ಮಾಡಿ ಬಿತ್ತನೆಗೆ ಭೂಮಿಯನ್ನು ಸಿದ್ದಗೊಳಿಸಿದ್ದ ರೈತರು ಆರಂಭಿಕ ಮಳೆ ವಾಡಿಕೆಗಿಂತ ಮೊದಲೇ ಸುರಿದಿದ್ದರಿಂದ ತೊಗರಿ, ಹೆಸರು, ಉದ್ದು ಬಿತ್ತನೆ ಮಾಡಿದ್ದಾರೆ. ಮೋಡಗಳ ಚೆಲ್ಲಾಟ ರೈತನಿಗೆ ಪ್ರಾಣ ಸಂಕಟ ಎನ್ನುವಂತೆ, ಭೂಮಿಗೂ ತಾಗದಂತೆ ಜೂ.1 ರಂದು ಕೇವಲ 9.1, 3ರಂದು 5.2, 6ರಂದು 4.2 ಮಿ.ಮೀಟರ್‌ ಮಳೆ ಸುರಿದಿದ್ದು ನಂತರ ಮಾಯವಾಗಿದೆ. ಸದ್ಯಕ್ಕೆ ವರುಣನ ಕಣ್ಣುಮುಚ್ಚಾಲೆಯಿಂದ ಮೊಳಕೆಯೊಡೆದು ಮೇಲೆ ಬಂದ ಬೆಳೆ, ಮಳೆಗಾಗಿ ಬಾಯಿತೆರೆದು ನಿಂತಿದೆ. ಈ ವಾರದಲ್ಲಿ ಚೆನ್ನಾಗಿ ಮಳೆ ಸುರಿದರೆ ಮಾತ್ರ ಬಿತ್ತಿದ ಬೆಳೆಯಲ್ಲಿ ಅರ್ಧದಷ್ಟಾದರೂ ಇಳುವರಿ ಕೈಗೆಟುಕಲಿದ್ದು, ಹೀಗೆ ಮುಂದುವರೆದರೆ ಬಿತ್ತನೆಗೆ ಮಾಡಿದ ಖರ್ಚು ಒಂದೆಡೆ ಇರಲಿ, ಹೊಲ ಸ್ವತ್ಛಗೊಳಿಸುವ ಕೂಲಿಯೂ ದೊರೆಯುವುದಿಲ್ಲ ಎನ್ನುವಂತಾಗಿದೆ.

ತೆಲಸಂಗ ಗ್ರಾಮವೊಂದರಲ್ಲಿಯೇ ಗೋವಿನ ಜೋಳ ಕಳೆದ ವರ್ಷ 9263 ಹೆಕ್ಟೇರ್‌, ಪ್ರಸಕ್ತ ವರ್ಷ 8144 ಹೆಕ್ಟೇರ್‌, ತೊಗರಿ ಕಳೆದ ವರ್ಷ 8844 ಹೆಕ್ಟೇರ್‌ -ಪ್ರಸಕ್ತ ವರ್ಷ 4200 ಹೆಕ್ಟೇರ್‌, ಉದ್ದು ಕಳೆದ ವರ್ಷ 1738 ಹೆಕ್ಟೇರ್‌-ಪ್ರಸಕ್ತ ವರ್ಷ 23195 ಹೆಕ್ಟೇರ್‌ ಭೂಮಿ ಬಿತ್ತನೆ ಆಗಿದೆ. ಸದ್ಯ ವರುಣನ ಕೃಪೆಗಾಗಿ ರೈತ ಆಕಾಶದತ್ತ ಮುಖಮಾಡಿ ಕುಳಿತಿದ್ದಾನೆ.

ತೊಗರಿ ಬೆಳೆ ಕೈ ಬಿಟ್ಟು ಉದ್ದು ಬಿತ್ತಿದರು: ಈ ಭಾಗದಲ್ಲಿ ನೀರಾವರಿ ಆಗಿಲ್ಲ. ಮಳೆ ಆದರೆ ಬೆಳೆ. ಹತ್ತಾರು ವರ್ಷಗಳಿಂದ ಮಳೆ ಕೊರತೆಯಿಂದ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಸಾಕಷ್ಟು ಜನ ಪ್ರತಿವರ್ಷ ಗುಳೆ ಹೋಗುವುದು ತಪ್ಪಿಲ್ಲ. ಮಳೆಯಾಶ್ರಿತ ಮಡ್ಡಿ ಭೂಮಿಯಲ್ಲಿ ಬೆಳೆಯಬಹುದಾದ ತೊಗರಿ ಬೆಳೆಗೆ ಕಳೆದ 3 ವರ್ಷ ವರ್ಷಗಳಿಂದ ರೋಗಬಾಧೆ ಕಾಡತೊಡಗಿದೆ. ಸಿಡಿ ಹಾಯ್ದು ಕಾಳು ಬಿಡುತ್ತಿಲ್ಲ. ಕಡಿಮೆ ಮಳೆಯಲ್ಲಿ ಮಡ್ಡಿ ಜಮೀನಿನಲ್ಲಿ ಬೆಳೆಯಬಹುದಾದ ತೊಗರಿ ಬೆಳೆ ನೆಚ್ಚಿದ್ದ ಈ ಭಾಗದ ರೈತರು ಈಗ ಉದ್ದು ಬೆಳೆಯತ್ತ ಮುಖ ಮಾಡಿದ್ದಾರೆ. ಎಲ್ಲಿ ನೋಡಿದರಲ್ಲಿ ಉದ್ದು ನನ್ನನ್ನೇ ನೋಡು ಎಂದು ಅಂದವಾಗಿ ಬೆಳೆದು ನಗುತ್ತಿದೆ. ಆದರೆ ಮಳೆ ಕೈಕೊಟ್ಟಿದ್ದರಿಂದ ಕಮರುವ ಹಂತ ತಲುಪಿದೆ.

ಬೋರು, ಬಾವಿಗಳಿಗಿಲ್ಲ ಇನ್ನೂ ನೀರು: ಕಳೆದ ವರ್ಷ ಮಳೆ ಕಡಿಮೆ ಆಗಿದ್ದರಿಂದ ಅಂತರ್ಜಲ ಕುಸಿದು ಬೇಸಿಗೆಯಲ್ಲಿಯೇ  ಬೋರ್ವೆಲ್ ಗ‌ಳಿಗೆ ನೀರು ಕಡಿಮೆ ಆಗಿವೆ. ಇನ್ನು ಕೆಲವು ಬತ್ತಿ ಹೋಗಿವೆ. ತೋಟಗಾರಿಕಾ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಮತ್ತೆ ಮತ್ತೆ ಸಾವಿರ ಅಡಿಯಷ್ಟು ಬೋರ್ವೆಲ್ ಕೊರೆಯಿಸುತ್ತಿದ್ದಾರೆ. ಜೂನ್‌ ತಿಂಗಳ ಮೊದಲ ವಾರದಲ್ಲಿ ಮಳೆ ಚೆನ್ನಾಗಿ ಸುರಿದರೆ ಬೋರ್ವೆಲ್ ಬಾವಿಗಳಿಗೆ ನೀರಾಗುತ್ತಿದ್ದವು. ವರ್ಷದ ಮಳೆ ಆರಂಭದಿಂದ ತಿಂಗಳು ಕಳೆದರೂ ಒಡ್ಡುವಾರಿ ತುಂಬಿ ಹರಿಯವಷ್ಟು ಮಳೆ ಆಗಿಲ್ಲ. ಹವಾಮಾನ ವೈಪರೀತ್ಯದಿಂದ ತುಂತುರು ಮಳೆಗಳು ಮಾತ್ರ ಸುರಿದಿವೆ. ಮುಂದೆ ಮಳೆ ಆಗಬಹುದೆಂಬ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ ರೈತರು, ತೋಟಗಾರಿಕೆ ಬೆಳೆ ಮಾಡಿದ ರೈತರು, ಸದ್ಯ ಗಾಳಿ ಬೀಸುತ್ತಿರುವ ವಾತಾವರಣ ನೋಡಿ ಆತಂಕಗೊಂಡಿದ್ದಾರೆ.

Advertisement

ಪ್ರಸಕ್ತ ವರ್ಷ ಆರಂಭಿಕ ಮಳೆಯಿಂದ ಭಾರಿ ಪ್ರಮಾಣದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. 9 ಕಡೆ ಬೀಜ ವಿತರಣಾ ಕೇಂದ್ರ ತೆರೆದು ಸಕಾಲಕ್ಕೆ ಬೀಜ ವಿತರಣೆ ಮಾಡಿದ್ದೆವು. ಆದರೆ ಇಷ್ಟೊತ್ತಿಗೆ ಒಂದೆರೆಡು ಒಡ್ಡು ತುಂಬಿ ಹರಿಯುವಷ್ಟು ಮಳೆ ಸುರಿಯಬೇಕಿತ್ತು. ವಾರದಲ್ಲಿ ಚೆನ್ನಾಗಿ ಮಳೆ ಸುರಿಯದಿದ್ದರೆ ಬೆಳೆಗೆ ತೊಂದರೆ ತಪ್ಪಿದ್ದಲ್ಲ.  -ಯಂಕಪ್ಪ ಉಪ್ಪಾರ,ಕೃಷಿ ಅಧಿಕಾರಿ, ತೆಲಸಂಗ.

ಈ ವರ್ಷ ಮಳೆಗಾಲದ ಆರಂಭದಲ್ಲಿಯೇ ಸುರಿದ ಮಳೆಯಿಂದ ತುಂಬಾ ಹರ್ಷಗೊಂಡಿದ್ದೆವು. ಕಳೆದ ಹತ್ತು ವರ್ಷದಿಂದ ಮಳೆ ಚೆನ್ನಾಗಿ ಬಾರದ್ದಕ್ಕೆ ನಷ್ಟ ಅನುಭವಿಸಿದ್ದು, ಈ ವರ್ಷವಾದರೂ ದೇವರು ಕೈ ಹಿಡಿಯುತ್ತಾನೆ ಎಂದುಕೊಂಡಿದ್ದೆವು. ಸದ್ಯ ಮಳೆ ಸುರಿಯದಿದ್ದರೆ ಭೂತಾಯಿ ನಂಬಿ ಬೆಳೆಗೆ ಮಾಡಿದ ಖರ್ಚು ಕೈಗೆಟಕುವುದಿಲ್ಲ. –ನವೀನ ಪೋಳ, ಯುವ ರೈತ, ತೆಲಸಂಗ.

ತೆಲಸಂಗ ಹೋಬಳಿಯಲ್ಲಿಯೇ ಹೆಚ್ಚು ತುಂತುರು ನೀರಾವರಿ ಮಾಡಿ ವಾಣಿಜ್ಯ ಬೆಳೆಗಳನ್ನು ಮಾಡಿದ್ದಾರೆ. ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದ್ದರ ಪರಿಣಾಮ ಸದ್ಯಕ್ಕೆ ತೋಟಗಾರಿಕಾ ಬೆಳೆ ಉಳಿಸಿಕೊಳ್ಳಲು ಮಳೆ ಚೆನ್ನಾಗಿ ಸುರಿಯಬೇಕು. ಎಂದರೆನೇ ಬೋರ್ವೆಲ್ ನೀರು ಹೆಚ್ಚುತ್ತವೆ. ಬೋರ್ವೆಲ್ ನೀರು ಹೆಚ್ಚಿದರೆ ಮಾತ್ರ ಬರುವ ದಿನಗಳಲ್ಲಿ ಬೆಳೆ ಚೆನ್ನಾಗಿ ಪಡೆಯಲು ಸಾಧ್ಯವಿದೆ. -ಶ್ವೇತಾ ಹಾಡಕರ, ತೋಟಗಾರಿಕಾ ಸಹಾಯಕ ನಿರ್ದೇಶಕಿ, ಅಥಣಿ.

-ಜೆ.ಎಂ.ಖೊಬ್ರಿ

 

Advertisement

Udayavani is now on Telegram. Click here to join our channel and stay updated with the latest news.

Next