Advertisement

ರೈತರ ಕೃಷಿ ಭೂಮಿಯ ಬೆಳೆ ಸಮೀಕ್ಷೆ ಕಾರ್ಯ

10:22 PM Sep 23, 2020 | mahesh |

ಬಂಟ್ವಾಳ: ರಾಜ್ಯ ಸರಕಾರವು ಈ ಬಾರಿ ರೈತರೇ ತಮ್ಮ ಬೆಳೆಗಳ ವಿವರ ಅಪ್‌ಲೋಡ್‌ ಮಾಡುವ ಬೆಳೆ ಸಮೀಕ್ಷೆ ಆ್ಯಪ್‌ ಯೋಜನೆ ಜಾರಿಗೆ ತಂದಿದ್ದು, ಇದರ ಜತೆಗೆ ಪಿಆರ್‌ ಆ್ಯಪ್‌ ಕೂಡ ಸಮೀಕ್ಷಾ ಕಾರ್ಯದಲ್ಲಿ ತೊಡಗಿದೆ. ಬಂಟ್ವಾಳ ತಾಲೂಕಿನಲ್ಲಿ ಸೆ. 22ರ ವರೆಗೆ 64,843 ಪ್ಲಾಟ್‌ಗಳು ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಅಪ್‌ಲೋಡ್‌ ಆಗಿದ್ದು,ಶೇ. 28.66 ಪ್ರಗತಿ ಸಾಧಿಸಲಾಗಿದೆ.

Advertisement

ರೈತರ ಪಹಣಿ ಪತ್ರ (ಆರ್‌ಟಿಸಿ)ದಲ್ಲಿರುವ ಸಬ್‌ ಸರ್ವೇ ನಂ.ಗಳು ಒಂದು ಪ್ಲಾಟ್‌ ಆಗಿದ್ದು, ಸಾಮಾನ್ಯವಾಗಿ ಒಂದು ಆರ್‌ಟಿಸಿಯಲ್ಲಿ ಒಂದಕ್ಕಿಂತ ಹೆಚ್ಚು ಸಬ್‌ ಸರ್ವೇ ನಂಬರ್‌ಗಳಿರುತ್ತವೆ. ಹೀಗಿ ರುವಾಗ ಅದರ ಆಧಾರದಲ್ಲಿ ಪ್ಲಾಟ್‌ಗಳ ಸಂಖ್ಯೆ ನಿರ್ಧರಿಸಿ ಸಮೀಕ್ಷೆ ನಡೆಸಲಾಗುತ್ತದೆ. ತಾಲೂಕಿನಲ್ಲಿ ಒಟ್ಟು 2,26,218 ಪ್ಲಾಟ್‌ಗಳಿವೆ.

ರೈತರೇ ತಮ್ಮ ಬೆಳೆ ಸಮೀಕ್ಷೆ ನಡೆಸಬೇಕಿದ್ದರೂ ಬಹುತೇಕ ಮಂದಿಗೆ ಇದು ಅಸಾಧ್ಯವಾದ ಕಾರಣ ಕೃಷಿ ಇಲಾಖೆ ಮೂಲಕ ನೇಮಕವಾಗಿದ್ದ ಖಾಸಗಿ ನಿವಾಸಿಗಳು (ಪಿಆರ್‌) ನೆರವಾಗುತ್ತಿದ್ದಾರೆ. ಇವರ ಜತೆಗೆ ಕಂದಾಯ ಇಲಾಖೆಯ ಗ್ರಾಮಕರಣಿಕರು ಹಾಗೂ ಸಹಾಯಕರು ಕೂಡ ಕೃಷಿಕರ ಬಳಿಗೆ ತೆರಳಿ ಸಮೀಕ್ಷೆ ನಡೆಸಿ ಅದರ ವೇಗ ಹೆಚ್ಚಿಸಿದ್ದಾರೆ. ತಾಲೂಕಿನಲ್ಲಿ 186 ಮಂದಿ ಪಿಆರ್‌ಗಳು ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದಾರೆ.

ಪಿಆರ್‌ಗಳ ಆ್ಯಪ್‌ ಕೂಡ ಬಿಡುಗಡೆ
ರೈತರೇ ಸಮೀಕ್ಷೆ ಮಾಡುವ ಆ್ಯಪ್‌ನಲ್ಲಿ ಬೆಳೆ ಸಮೀಕ್ಷೆ ಕಾರ್ಯವು ವಿಳಂಬವಾದ ಹಿನ್ನೆಲೆಯಲ್ಲಿ ಸರಕಾರವು ಪಿಆರ್‌ಗಳ ಆ್ಯಪನ್ನು ಕೂಡ ಬಿಡುಗಡೆ ಮಾಡಿದ್ದು, ಹೀಗಾಗಿ ಸಮೀಕ್ಷಾ ಕಾರ್ಯ ವೇಗವನ್ನು ಪಡೆದುಕೊಂಡಿದೆ. ಬೆಳೆ ವಿವರ ಎರಡರಲ್ಲೂ ಅಪ್‌ಲೋಡ್‌ ಮಾಡುವುದಕ್ಕೆ ಅವಕಾಶವಿದ್ದು, ಪಿಆರ್‌ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡುವ ವೇಳೆ ಪ್ಲಾಟ್‌ನ ಮಾಲಕರ ಆಧಾರ್‌ ಕಾರ್ಡ್‌ ಅಗತ್ಯವಾಗಿದೆ. ಹೀಗಾಗಿ ಪಿಆರ್‌ಗಳು ಸಮೀಕ್ಷೆಗೆ ಬಂದಾಗ ಆಧಾರ್‌ ಪ್ರತಿ ಒದಗಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೋಬಳಿವಾರು ವಿವರ
ತಾಲೂಕಿನಲ್ಲಿ ಒಟ್ಟು 2,26,218 ಪ್ಲಾಟ್‌ಗಳಿದ್ದು, ಪ್ರಸ್ತುತ ಸೆ. 22ರ ವರೆಗೆ 64,843 ಪ್ಲಾಟ್‌ಗಳು ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಅಪ್‌ಲೋಡ್‌ ಆಗಿದ್ದು, ಶೇ. 28.66 ಪ್ರಗತಿ ಸಾಧಿಸಲಾಗಿದೆ. ಹೋಬಳಿವಾರು ನೋಡುವುದಾದರೆ ಬಂಟ್ವಾಳ ಹೋಬಳಿಯಲ್ಲಿ 59,643ರ ಪೈಕಿ 16,058 ಪ್ಲಾಟ್‌ಗಳು (ಶೇ. 26.92 ಪ್ರಗತಿ), ಪಾಣೆಮಂಗಳೂರಿನಲ್ಲಿ 92,663ರ ಪೈಕಿ 26,443 (ಶೇ. 28.54), ವಿಟ್ಲದಲ್ಲಿ 73,912ರ ಪೈಕಿ 22,333 (ಶೇ. 30.22) ಪ್ಲಾಟ್‌ಗಳು ಅಪ್‌ಲೋಡ್‌ ಆಗಿವೆ.

Advertisement

ಹವಾಮಾನ ವೈಪರೀತ್ಯ: ಬೆಳೆ ಸಮೀಕ್ಷೆಗೆ ಹಿನ್ನಡೆ
ಬೆಳ್ತಂಗಡಿ: ರೈತರೇ ಮೊಬೈಲ್‌ ಆ್ಯಪ್‌ ಮೂಲಕ ತಮ್ಮ ಜಮೀನು ಬೆಳೆ ಸಮೀಕ್ಷೆ ಮಾಡುವ ಬೆಳೆ ಸಮೀಕ್ಷೆ ಸೆ. 23ರಂದು ರಾತ್ರಿ 8ಕ್ಕೆ ಕೊನೆ
ಗೊಂಡಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ ಶೇ. 30.41 ಪ್ಲಾಟ್‌ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ರೈತರು ಖಾಸಗಿ ವ್ಯಕ್ತಿಗಳ ಸಹಾಯ ಪಡೆದು ಬೆಳೆ ಸಮೀಕ್ಷೆ ನಡೆಸಬೇಕಿದೆ. ಬೆಳ್ತಂಗಡಿ ತಾ|ನಲ್ಲಿ ಒಟ್ಟು ಹೊಂದಿರುವ 1,59,268 ಪ್ಲಾಟ್‌ಗಳ ಸರ್ವೇ ಕಾರ್ಯ ನಡೆಸಲು ಗುರಿ ಹೊಂದಲಾಗಿತ್ತು. ಈ ಪೈಕಿ ರೈತರು 37,206 ಪ್ಲಾಟ್‌ ಸಮೀಕ್ಷೆ ನಡೆಸಿದ್ದು, ಖಾಸಗಿ ವ್ಯಕ್ತಿಗಳು 11,232 ಸಹಿತ ಒಟ್ಟು 48,440 ಪ್ಲಾಟ್‌ಗಳಷ್ಟೇ ಅಪ್ಲೋಡ್‌ ಆಗಿವೆ.

ಜಿಲ್ಲೆಯಲ್ಲೇ ಬೆಳ್ತಂಗಡಿ ತಾ|ನಲ್ಲಿ ಅತೀ ಕಡಿಮೆ ಸಮೀಕ್ಷೆ ಕಾರ್ಯ ನಡೆದಿದ್ದು, 1,10,828 ಪ್ಲಾಟ್‌ ಸರ್ವೇ ನಡೆಸಲು ಬಾಕಿ ಉಳಿದಿದೆ. ತಾಂತ್ರಿಕ ತೊಂದರೆಗಳು, ಮಾಹಿತಿ ಕೊರತೆ, ನೋಂದಣಿಗೆ ರೈತರ ನಿರಾಸಕ್ತಿ, ಅತೀ ಹೆಚ್ಚು ಜಿಪಿಎಸ್‌ ಸಮಸ್ಯೆ ಜತೆಗೆ ಮಳೆ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದುದರಿಂದ ನಿರೀಕ್ಷಿಸಿದಷ್ಟು ಗುರಿ ತಲುಪಲು ಸಾಧ್ಯವಾಗಿಲ್ಲ. ಸೆ. 23ರಂದು ರೈತರ ಆ್ಯಪ್‌ ನಿಷ್ಕ್ರಿಯೆಗೊಳ್ಳಲಿದೆ. ಈಗಾಗಲೇ ತಾ|ನಲ್ಲಿ 155 ಮಂದಿ ಖಾಸಗಿ ವ್ಯಕ್ತಿಗಳನ್ನು ನಿಯೋಜಿಸಲಾಗಿದೆ. ಇವರ ಸಹಾಯ ಪಡೆದು ಬೆಳೆ ಸಮೀಕ್ಷೆ ನಡೆಸಲು ರೈತರು ಮುಂದಾಗಬೇಕು ಎಂದು ಬೆಳ್ತಂಗಡಿ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ರಂಜಿತ್‌ ಕುಮಾರ್‌ ತಿಳಿಸಿದ್ದಾರೆ.

ಸಮೀಕ್ಷೆಗೆ ಕಂದಾಯ ಇಲಾಖೆಯ ಸಹಕಾರ
ಬೆಳೆ ಸಮೀಕ್ಷೆ ಆ್ಯಪ್‌ಗ್ಳ ಮೂಲಕ ತಾಲೂಕಿನಲ್ಲಿ ಪ್ಲಾಟ್‌ಗಳ ಅಪ್‌ಲೋಡ್‌ ಕಾರ್ಯ ನಡೆಯುತ್ತಿದ್ದು, ಪ್ರಸ್ತುತ ರೈತರೇ ಅಪ್‌ಲೋಡ್‌ ಮಾಡುವ ಜತೆಗೆ ಪಿಆರ್‌ಗಳ ಆ್ಯಪ್‌ ಕೂಡ ಬಿಡುಗಡೆಗೊಂಡಿದೆ. ಬೆಳೆ ಸಮೀಕ್ಷೆ ಕಾರ್ಯದಲ್ಲಿ ಕಂದಾಯ ಇಲಾಖೆಯ ಗ್ರಾಮಕರಣಿಕರು ಹಾಗೂ ಗ್ರಾಮ ಸಹಾಯಕರು ರೈತರ ಬಳಿಗೆ ತೆರಳಿ ಪಿಆರ್‌ಗಳ ಜತೆ ಕೆಲಸ ಮಾಡುತ್ತಿದ್ದಾರೆ.
-ನಾರಾಯಣ ಶೆಟ್ಟಿ , ಸಹಾಯಕ ಕೃಷಿ ನಿರ್ದೇಶಕರು, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next