Advertisement

ಕರಾವಳಿಗರನ್ನು ಕರೆತರಲೂ ಆಗದ; ಬಿಟ್ಟು ಕೊಡಲೂ ಆಗದ ಇಕ್ಕಟ್ಟು!

01:30 AM May 26, 2020 | Sriram |

ವಿಶೇಷ ವರದಿ- ಮಂಗಳೂರು: ಒಂದೆಡೆ ಮುಂಬಯಿಯಲ್ಲಿ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಕರಾವಳಿ ಮಂದಿ; ಇನ್ನೊಂದೆಡೆ ಕೋವಿಡ್-19 ಭೀತಿಯಲ್ಲಿಯೇ ದಿನ ಕಳೆದು ತಾಯ್ನಾಡಿಗೆ ಬರುವ ತುಡಿತದಲ್ಲಿರುವ ಮಂದಿ; ಇಷ್ಟೇ ಅಲ್ಲ, ಮುಂಬಯಿಯಿಂದ ಬಂದವರ ಮೂಲಕ ಕರಾವಳಿಯಲ್ಲಿ ಕೋವಿಡ್-19 ಸಂಖ್ಯೆ ಹೆಚ್ಚಳದ ಆತಂಕ…

Advertisement

ಕರಾವಳಿಗರು ಹೊಟೇಲ್‌ಗ‌ಳಿಂದ ಹಿಡಿದು ದೊಡ್ಡ ಉದ್ಯಮ ಕ್ಷೇತ್ರಗಳಲ್ಲಿ ಮುಂಬಯಿ ಮಹಾನಗರದಲ್ಲಿ ಮಿಂಚುತ್ತಿದ್ದಾರೆ. ಹಲವಾರು ಮಂದಿಯ ವ್ಯಾಪಾರ-ಉದ್ಯಮಕ್ಕೆ ಈ ನಗರ ನೆಚ್ಚಿನದ್ದಾಗಿದೆ. ಅಲ್ಲಿನ ಆರ್ಥಿಕ ಚಟುವಟಿಕೆಗೆ ಬೆನ್ನೆಲುಬಾದಂತೆ ತಾಯ್ನಾಡಿನ ಅಭಿವೃದ್ಧಿ, ಆರ್ಥಿಕತೆಗೂ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಹೀಗೆ, ಕರಾವಳಿ ಹಾಗೂ ಮುಂಬಯಿ ನಂಟು ಸುದೀರ್ಘ‌ ವರ್ಷದಿಂದ ಬೆಸೆದುಕೊಂಡಿದೆ. ಆದರೆ ಈ ಸಂಪರ್ಕ ಸೇತುವಿಗೆ ಕೋವಿಡ್-19 ಹಾನಿ ಮಾಡಿದೆ.

ಅಡಕತ್ತರಿಯಲ್ಲಿ!
ಅತ್ತ ಕೋವಿಡ್‌-19 ಸೋಂಕು ಮಹಾರಾಷ್ಟ್ರದಲ್ಲಿ ತೀವ್ರವಾಗುತ್ತಿದ್ದಂತೆ ಊರಿಗೆ ಹೋಗುವ ತುಡಿತದಲ್ಲಿ ಕರಾವಳಿಗರಿದ್ದಾರೆ. ವಿವಿಧ ಸಂಘಟನೆಗಳೂ ಅವರನ್ನು ಸುರಕ್ಷಿತವಾಗಿ ಕರೆತರಲು ಯತ್ನಿಸುತ್ತಿವೆ. ಆದರೆ ಅವರು ಊರಿಗೆ ಬಂದರೆ ಮತ್ತಷ್ಟು ಕೋವಿಡ್-19 ಪ್ರಕರಣಗಳು ಏರಿಕೆಯಾಗಬಹುದು ಎಂಬ ಆತಂಕ ಇಲ್ಲಿನವರದ್ದು. ಈ ನಡುವೆ ಒಟ್ಟಾಗಿ ಪ್ರಯಾಣಿಸುವ ವೇಳೆ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಕೆಲವರು ತಮ್ಮ ಊರಿನ ಭೇಟಿಯನ್ನು ಮುಂದೂಡಿದ್ದಾರೆಂದು ತಿಳಿದುಬಂದಿದೆ. ಆದ್ದರಿಂದ ಕರಾವಳಿಗರ ಆಗಮನ ವಿಚಾರದಲ್ಲಿ ಆಡಳಿತ, ಜನರೂ ಅಡಕತ್ತರಿಗೆ ಸಿಲುಕುವಂತಾಗಿದೆ.

ಅವಿನಾಭಾವ ಸಂಬಂಧಕ್ಕೆ ಪೆಟ್ಟು
ಕೋವಿಡ್-19 ಲಾಕ್‌ಡೌನ್‌ಗೂ ಮೊದಲು ಮಂಗಳೂರಿನಿಂದ ನಿತ್ಯ 15 ಖಾಸಗಿ ಹಾಗೂ ಸರಕಾರಿ ಬಸ್‌ ಸಂಚರಿಸುತ್ತಿದ್ದವು. ನಿತ್ಯ ರೈಲು ಕೂಡ ಅತ್ತಿಂದಿತ್ತ ಹೋಗುತ್ತಿದ್ದು, ಸಾವಿರಾರು ಪ್ರಯಾಣಿಕರು ಮಂಗಳೂರು-ಮುಂಬಯಿ ಮಧ್ಯೆ ಸಂಚರಿ ಸುತ್ತಿದ್ದರು. ಜತೆಗೆ, ಸ್ಪೈಸ್‌ಜೆಟ್‌, ಇಂಡಿಗೋ, ಏರ್‌ಇಂಡಿಯಾ ವಿಮಾನದ ಮೂಲಕವೂ ನಿತ್ಯ ಸಾವಿರಾರು ಜನರು ಆಗಮನ- ನಿರ್ಗಮನವಾಗುತ್ತಿದ್ದರು. ಈ ಮೂಲಕ ಕರಾವಳಿಯ ನಂಟು ಮುಂಬಯಿ ಜತೆಗೆ ಬೆಸೆದಿತ್ತು. ಆದರೆ ಕೊರೊನಾ ಬಂದ ಬಳಿಕ ಈ ಸಂಬಂಧಕ್ಕೆ ಹೊಡೆತ ಬಿದ್ದಿದೆ.

ಮುಂಬಯಿಯ 6 ಪ್ರಕರಣಗಳು
ಮೇ 14ರಂದು ಮುಂಬಯಿಯಿಂದ ಆಗಮಿಸಿದ 34 ವರ್ಷದ ಗರ್ಭಿಣಿಗೆ ಕೋವಿಡ್-19 ಇರುವುದು ಮೇ 17ರಂದು ದೃಢಪಟ್ಟಿತ್ತು. ಮಹಾರಾಷ್ಟ್ರದಿಂದ ಬಂದ ವ್ಯಕ್ತಿಯೊಬ್ಬರು ಮೇ 20ರಂದು ಮೂಡುಬಿದಿರೆ ಕಡಂದಲೆಯ ಕ್ವಾರಂಟೈನ್‌ ಕೇಂದ್ರಕ್ಕೆ ದಾಖಲಾಗಿ ವಾಸ್ತವ್ಯ ಇದ್ದು 21ರಂದು ಆತ್ಮಹತ್ಯೆ ಮಾಡಿದ್ದು ಅವರಲ್ಲೂ ಕೋವಿಡ್-19 ಇರುವುದು ದೃಢಪಟ್ಟಿತ್ತು. ಮೇ 18ರಂದು ಡೊಂಬಿವಿಲಿ ಥಾಣೆಯಿಂದ ಬೆಳ್ತಂಗಡಿಗೆ ಆಗಮಿಸಿದ 29 ವರ್ಷದ ಮಹಿಳೆಗೆ ಕೋವಿಡ್-19 ಇರುವುದು ಮೇ 22ರಂದು ದೃಢಪಟ್ಟಿದೆ. ಮೇ 18ರಂದು ಥಾಣೆಯಿಂದ ಆಗಮಿಸಿದ 55 ವರ್ಷ ಪ್ರಾಯದ ಗಂಡಸು, ಪುಣೆಯಿಂದ ಆಗಮಿಸಿದ ಸುಮಾರು 30 ವರ್ಷ ಪ್ರಾಯದ ಗಂಡಸು ಹಾಗೂ ಕುರ್ಲಾದಿಂದ ಆಗಮಿಸಿದ 25 ವರ್ಷ ಪ್ರಾಯದ ಗಂಡಸಿಗೆ ಕೋವಿಡ್-19 ಇರುವುದು ದೃಢಪಟ್ಟಿದೆ.

Advertisement

1,200 ಮಂದಿ ಆಗಮನ
ಸೇವಾಸಿಂಧು ಮೂಲಕ ದ.ಕ. ಜಿಲ್ಲೆಗೆ ಮಹಾರಾಷ್ಟ್ರದ ಸುಮಾರು 4700 ಮಂದಿ ಆಗಮಿಸಲು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಆದ್ಯತೆಯ ಮೇರೆಗೆ 2,500 ಮಂದಿಯ ಅರ್ಜಿಗೆ ಅನುಮತಿ ನೀಡಲಾಗಿದೆ. ಈ ಪೈಕಿ 1,200 ಮಂದಿ ಮೇ 25ರವರೆಗೆ ದ.ಕ. ಜಿಲ್ಲೆಗೆ ಬಂದಿದ್ದಾರೆ. ಉಳಿದ 1,300ರಷ್ಟು ಮಂದಿ ಆಗಮಿಸಲು ಅವರಿಗೆ ಜಿಲ್ಲಾಡಳಿತದಿಂದ ದಿನಾಂಕ ನೀಡಲಾಗಿದೆ. ಅವರಿಗೆ ಜಿಲ್ಲೆಗೆ ಬರಲು ಅವಕಾಶವಿದೆ. ಬರುವವರು 7 ದಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಬೇಕಾಗಿದೆ. ಆದರೆ ಹೊಸದಾಗಿ ಅರ್ಜಿ ಸಲ್ಲಿಸಿ ಮಹಾರಾಷ್ಟ್ರದಿಂದ ದ.ಕ. ಜಿಲ್ಲೆಗೆ ಆಗಮಿಸಲು ಸದ್ಯಕ್ಕೆ ಅವಕಾಶವಿಲ್ಲ. ಮಹಾ ರಾಷ್ಟ್ರ ಸೇರಿದಂತೆ 6 ರಾಜ್ಯಗಳಿಂದ ಕರ್ನಾಟಕಕ್ಕೆ ಬರಲು ಸರಕಾರ ನಿರ್ಬಂಧ ವಿಧಿಸಿದೆ.
-ಎಂ.ಜೆ.ರೂಪಾ, ಅಪರ ಜಿಲ್ಲಾಧಿಕಾರಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next