Advertisement

Assembly Election Results ರಾಜ್ಯ ಬಿಜೆಪಿಯಲ್ಲಿ ಉತ್ಸಾಹ; ಕೈ ನಾಯಕರಲ್ಲಿ ಆತ್ಮವಿಶ್ವಾಸ

12:24 AM Dec 04, 2023 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆಗೆ ಉಪಾಂತ್ಯ ಎಂದು ವಿಶ್ಲೇಷಿಸಲಾಗಿದ್ದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಪೈಕಿ ನಾಲ್ಕು ರಾಜ್ಯಗಳ ಫ‌ಲಿತಾಂಶ ಹೊರಬಿದ್ದಿದ್ದು, ಇದು ರಾಜ್ಯ ರಾಜಕೀಯದ ಮೇಲೂ ಪರೋಕ್ಷ ಪರಿಣಾಮ ಬೀರಲಿದೆ. ಮೂರು ರಾಜ್ಯಗಳನ್ನು ಗೆದ್ದ ಉತ್ಸಾಹ ಬಿಜೆಪಿಯಲ್ಲಿದ್ದರೆ, ನೆರೆಯ ತೆಲಂಗಾಣ ಗೆದ್ದಿದ್ದೇವೆ ಎಂಬ ಹುಮ್ಮಸ್ಸು ಕಾಂಗ್ರೆಸ್‌ನಲ್ಲಿ ಕಾಣಿಸತೊಡಗಿದೆ.

Advertisement

ಕಮರಿದ್ದ ಕಮಲ ಪಾಳಯಕ್ಕೆ ಚೈತನ್ಯ
ವಿಧಾನಸಭೆ ಚುನಾವಣೆ ಅನಂತರ ಕಮಲ ಪಾಳಯದ ಉತ್ಸಾಹ ಕರಗಿತ್ತು. ಫ‌ಲಿತಾಂಶದ ಬಳಿಕ ವಿಧಾನಸಭೆ ವಿಪಕ್ಷದ ನಾಯಕ, ಪಕ್ಷಾಧ್ಯಕ್ಷರ ಆಯ್ಕೆ ಮಾಡದೆ ವರಿಷ್ಠರು ಚುರುಕು ಮುಟ್ಟಿಸಿದ್ದರು. ಇದೀಗ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಜಯಭೇರಿ ಬಾರಿಸಿರುವುದು ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದೆ. ಪಕ್ಷಕ್ಕೆ ಬಿ.ವೈ. ವಿಜಯೇಂದ್ರರನ್ನು ಅಧ್ಯಕ್ಷರನ್ನಾಗಿ ನೇಮಿಸಿ, ವಿಧಾನಸಭೆಗೆ ಆರ್‌. ಅಶೋಕ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ಇಬ್ಬರ ಮುಂದೆ ಪಕ್ಷವನ್ನು ತೆಗೆದುಕೊಂಡು ಹೋಗುವ ಬಹುದೊಡ್ಡ ಟಾಸ್ಕ್ ಇದೆ. ಬಿಜೆಪಿಯಿಂದ ಕೆಲವು ನಾಯಕರು ಪಕ್ಷಾಂತರ ಮಾಡಿ ಕಾಂಗ್ರೆಸ್‌ ಸೇರುತ್ತಾರೆ ಎನ್ನುವ ಗುಲ್ಲಿಗೆ ಈ ವಿಜಯ ವಿರಾಮ ಹಾಡಬಹುದೇ ಎಂದು ಕಾದುನೋಡಬೇಕಿದೆ.

ಗ್ಯಾರಂಟಿ ಬಗ್ಗೆ ಪ್ರಶ್ನೆ
ಇಲ್ಲಿನ ಸೋಲಿನ ಬಳಿಕ ಬಿಜೆಪಿಯಲ್ಲಿ ಉಂಟಾಗಿದ್ದ ನಿರ್ವಾತ ಈ ನಾಲ್ಕು ರಾಜ್ಯಗಳ ಫ‌ಲಿತಾಂಶದಿಂದ ದೂರವಾಗಿದೆ. ಇದೇ ವೇಳೆ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಕರ್ನಾಟಕದ ಮಾದರಿ ಎಂದು ಹೊರಟಿದ್ದ ಕಾಂಗ್ರೆಸ್‌ಗೆ ತೆಲಂಗಾಣ ಬಿಟ್ಟರೆ ಉಳಿದ ರಾಜ್ಯಗಳಲ್ಲಿ ಮುಖಭಂಗ ಆಗಿದ್ದು, ಗ್ಯಾರಂಟಿಗಳ ಬಗ್ಗೆ ಪ್ರಶ್ನೆ ಹುಟ್ಟು ಹಾಕಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ನಡೆದ ಮೊದಲ ಚುನಾವಣೆ ಇದಾಗಿದ್ದರಿಂದ ಅಲ್ಲಿನ ಫ‌ಲಿತಾಂಶಗಳನ್ನು ಇಲ್ಲಿನ ಭವಿಷ್ಯದ ರಾಜಕೀಯ ಪಲ್ಲಟಗಳನ್ನು ಮುಂದಿಟ್ಟುಕೊಂಡು ನೋಡಬೇಕಾಗಿದೆ. ಏಕೆಂದರೆ, ಗ್ಯಾರಂಟಿಗಳು, ಪ್ರಧಾನಿ ಮೋದಿಯ ವರ್ಚಸ್ಸು, ಸ್ಥಳೀಯ ನಾಯಕರ ಒಗ್ಗಟ್ಟು ಇವೆಲ್ಲವುಗಳು ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು. ಫ‌ಲಿತಾಂಶ ಬಂದಾಗ ಕಾಂಗ್ರೆಸ್‌ನ ಗೆಲುವು ಮತ್ತು ಬಿಜೆಪಿಯ ಸೋಲಿಗೆ ಇದೇ ಕಾರಣ ಎಂದು ವಿಶ್ಲೇಷಿಸಲಾಯಿತು.

ಕರ್ನಾಟದ ಮಾದರಿಯಂತೆ ನಾಲ್ಕೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಗ್ಯಾರಂಟಿಗಳನ್ನು ಘೋಷಿಸಿತ್ತು. ಆದರೆ, ಪಕ್ಕದ ತೆಲಂಗಾಣ ಬಿಟ್ಟರೆ ಬೇರೆಲ್ಲೂ ಗ್ಯಾರಂಟಿಗಳು ಪರಿಣಾಮ ಬೀರಿಲ್ಲ. ಇಷ್ಟಾದರೂ, ತೆಲಂಗಾಣದ ಫ‌ಲಿತಾಂಶವೊಂದನ್ನೇ ಇಟ್ಟುಕೊಂಡು ಕಾಂಗ್ರೆಸ್‌ ನಾಯಕರು ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ ಎನ್ನುತ್ತಿದ್ದಾರೆ. ಈ ನಡುವೆ ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ತನ್ನ ಕಾರ್ಯತಂತ್ರ ಬದಲಿಸಲಿದೆಯೇ ಎನ್ನುವ ಕುತೂಹಲ ಹುಟ್ಟಿಕೊಂಡಿದೆ.

Advertisement

ರಾಜ್ಯದ ಕಾಂಗ್ರೆಸ್‌ ನಾಯಕರು ತೆಲಂಗಾಣದಲ್ಲಿ ವಾರಗಟ್ಟಲೆ ಠಿಕಾಣಿ ಹೂಡಿದ್ದರು. ಹತ್ತಕ್ಕೂ ಹೆಚ್ಚು ಸಚಿವರು ಪ್ರಚಾರದಲ್ಲಿ ತೊಡಗಿದ್ದರು. ಈ ಮೂಲಕ ತಮ್ಮ ಪ್ರಭಾವ ಅಲ್ಲಿಗೂ ವಿಸ್ತರಣೆಯಾಗಿದೆ ಎಂದು ಕೈ ನಾಯಕರು ಬೀಗುತ್ತಿದ್ದಾರೆ.

ಮತದಾರನ ಭಿನ್ನ ಮನಸ್ಸು
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತದಾರರ ಮನಸ್ಥಿತಿಯೇ ಬೇರೆ, ಲೋಕಸಭೆ ಚುನಾವಣೆ ವೇಳೆಗಿನ ಮನಸ್ಥಿತಿಯೇ ಬೇರೆ. ರಾಜಕೀಯ ಪಕ್ಷಗಳು ಘೋಷಿಸುವ ಪ್ರಣಾಳಿಕೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆಯೋ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗಳೂ ಅಷ್ಟೇ ಪರಿಣಾಮ ಬೀರುತ್ತವೆ. ಸ್ಥಳೀಯವಾಗಿ ಅಭ್ಯರ್ಥಿಗಳನ್ನು ನೋಡಿ ಮತದಾನ ಮಾಡುವವರೇ ಹೆಚ್ಚು. ಆದರೆ, ಲೋಕಸಭೆ ಚುನಾವಣೆಯಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಪ್ರಧಾನಿ ಅಭ್ಯರ್ಥಿಗಳೆಂದು ಬಿಂಬಿತರಾದವರನ್ನು ಅಳೆದು ತೂಗಿಯೇ ಮತದಾನ ಮಾಡುವುದು ಜಾಸ್ತಿ.

ರಾಜಕೀಯ ಪಕ್ಷಗಳ ರಣತಂತ್ರಗಳಲ್ಲೂ ಬದಲಾವಣೆ?
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ 28 ಕ್ಷೇತ್ರಗಳ ಪೈಕಿ 25ರಲ್ಲಿ ಬಿಜೆಪಿ ಗೆದ್ದಿದ್ದರೆ, ತಲಾ ಒಂದೊಂದು ಕ್ಷೇತ್ರಗಳನ್ನು ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳು ಹಂಚಿಕೊಂಡಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಒಟ್ಟಾಗಿ ಚುನಾವಣೆ ಎದುರಿಸಿ ತಲಾ ಒಂದೊಂದು ಸ್ಥಾನ ಗಳಿಸಿತ್ತು. ಈ ಬಾರಿ ಕಾಂಗ್ರೆಸ್‌ ಕೈಬಿಟ್ಟಿರುವ ಜೆಡಿಎಸ್‌, ಎನ್‌ಡಿಎ ಮಿತ್ರಕೂಟಕ್ಕೆ ತನ್ನ ಬೆಂಬಲ ಸೂಚಿಸಿದೆ. ಹೀಗಾಗಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ರಾಜಕೀಯ ಪಕ್ಷಗಳ ಕಾರ್ಯನೀತಿ ಏನಿರಲಿದೆ ಎಂಬುದೂ ಕುತೂಹಲಕ್ಕೆ ಕಾರಣವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮತದಾರರ ಮನದಾಳ ಅರಿಯುವ ಟಾಸ್ಕ್ ಪಕ್ಷಗಳಿಗೆ ಇದೆ.

ಮೋದಿ ವರ್ಚಸ್ಸಿಗೆ ಮನ್ನಣೆ: ಜೋಶಿ
ಹುಬ್ಬಳ್ಳಿ: ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನಲ್ಲಿ ನಾವು ಈ ಚುನಾವಣೆ ಗೆದ್ದಿದ್ದೇವೆ. ಈ ಫಲಿತಾಂಶದಲ್ಲಿ ಜನತೆಯ ಆಶೀರ್ವಾದ ನಮಗೆ ಸಿಕ್ಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದಲ್ಲಿ ಬಿಜೆಪಿ ಚುನಾವಣ ಉಸ್ತುವಾರಿ ವಹಿಸಿದ್ದ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ಮೋದಿ ನೇತೃತ್ವ ಈ ಗೆಲುವಿಗೆ ಕಾರಣವಾಗಿದೆ ಎಂದರು.

ಗ್ಯಾರಂಟಿ ಪಟಾಕಿ ಠುಸ್‌: ಅಶೋಕ್‌
ಬೆಂಗಳೂರು: ನಾಲ್ಕು ರಾಜ್ಯಗಳ ಚುನಾವಣ ಫ‌ಲಿತಾಂಶ ಗಮನಿಸಿದಾಗ ಪ್ರಧಾನಿ ಮೋದಿಯವರ ಪ್ರಭಾವ ಎಲ್ಲೆಡೆ ಕಾಣುತ್ತಿದೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ.

ನಾಲ್ಕು ರಾಜ್ಯಗಳ ಫ‌ಲಿತಾಂಶ ಪ್ರಕಟಗೊಂಡ ಬಳಿಕ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಳೆದ ಚುನಾವಣೆಯಲ್ಲಿ ಈ ನಾಲ್ಕು ರಾಜ್ಯಗಳಲ್ಲೂ ಬಿಜೆಪಿಗೆ ಸೋಲಾಗಿತ್ತು. ಆದರೆ ಇಂದಿನ ಫ‌ಲಿತಾಂಶ ಬಿಜೆಪಿಗೆ ಸಂತಸ ತಂದಿದೆ. ಎಲ್ಲ ರಾಜ್ಯದಲ್ಲೂ ಬಿಜೆಪಿ ತನ್ನ ಸ್ಥಾನ ಹೆಚ್ಚಿಸಿಕೊಂಡಿದೆ. ಬಿಜೆಪಿಗೆ ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೆಯ ಭವಿಷ್ಯ ಇದೆ ಎಂದ‌ರು.

ದೇಶ ಆಳ್ವಿಕೆ ಬಿಜೆಪಿಗೆ: ಬಿಎಸ್‌ವೈ
ಬೆಂಗಳೂರು: ಈ ದೇಶವನ್ನು ಆಳುವ ನಾಯಕತ್ವ ಬಿಜೆಪಿ ಬಿಟ್ಟು ಇತರ ಪಕ್ಷಗಳಲ್ಲಿಲ್ಲ ಎನ್ನುವುದನ್ನು ನಾಲ್ಕು ರಾಜ್ಯಗಳ ಚುನಾವಣ ಫ‌ಲಿತಾಂಶ ಸ್ಪಷ್ಟಪಡಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಶ್ಲೇಷಿಸಿದ್ದಾರೆ.

ಚುನಾವಣ ಫ‌ಲಿತಾಂಶದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮೋದಿ ನಾಯಕತ್ವಕ್ಕೆ ಜನರು ಜೈ ಎಂದಿ¨ªಾರೆ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಸ್ಥಾನಗಳನ್ನು ಗೆದ್ದು ಮೋದಿ ಅವರಿಗೆ ಉಡುಗೊರೆಯಾಗಿ ನೀಡುತ್ತೇವೆ ಎಂದು ಹೇಳಿದ್ದಾರೆ. ರಾಜಸ್ಥಾನದಲ್ಲಿ 115 ಸೀಟುಗಳನ್ನು ಪಡೆದಿದ್ದೇವೆ. ಅಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಇದೀಗ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಮಧ್ಯಪ್ರದೇಶದಲ್ಲಿ 161 ಸ್ಥಾನ ಪಡೆದು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದೇವೆ. ಛತ್ತೀಸ್‌ಗಢದಲ್ಲಿ 52 ಸ್ಥಾನಗಳನ್ನು ಪಡೆದು ಗೆಲುವು ದಕ್ಕಿಸಿಕೊಂಡಿದ್ದೇವೆ ಎಂದರು.

ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆಲುವಿಗೆ “ಗ್ಯಾರಂಟಿ’ ನೆರವು
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವು ಮತ್ತು ನುಡಿದಂತೆ ನಡೆದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರಿಂದ ನೆರೆಯ ತೆಲಂಗಾಣದ ಮತದಾರರು ಕಾಂಗ್ರೆಸ್‌ ಪಕ್ಷದ ಮೇಲೆ ಭರವಸೆ ಇಡುವಂತಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಚುನಾವಣ ಫ‌ಲಿತಾಂಶ ಪ್ರಕಟಗೊಂಡ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ನಾಲ್ಕು ರಾಜ್ಯಗಳ ಚುನಾವಣೆಗಳ ಪೈಕಿ ತೆಲಂಗಾಣದಲ್ಲಿ ಕಾಂಗ್ರೆಸ್‌ ಸ್ಪಷ್ಟ ಗೆಲುವು ಸಾಧಿಸಿದೆ. ತೆಲಂಗಾಣ ನಮ್ಮ ನೆರೆಯ ರಾಜ್ಯವಾಗಿರುವ ಕಾರಣ ಅಲ್ಲಿನ ಗೆಲುವಿನಲ್ಲಿ ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸು ಮತ್ತು ಕಾಂಗ್ರೆಸ್‌ ಪಕ್ಷದ ನಾಯಕರ ಶ್ರಮದ ದೊಡ್ಡ ಪಾತ್ರ ಇದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸಂಭ್ರಮೋತ್ಸವ
ಬೆಂಗಳೂರು: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ಮತ್ತು ತೆಲಂಗಾಣದಲ್ಲಿ ಹೆಚ್ಚಿದ ಸೀಟ್‌ ಗಳಿಕೆ ರಾಜ್ಯದ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ. ಮತ ಎಣಿಕೆ ಪ್ರಾರಂಭಗೊಂಡು ಬಿಜೆಪಿ ಮುನ್ನಡೆಯಲ್ಲಿರುವ ಸೀಟುಗಳ ಸಂಖ್ಯೆ ಹೆಚ್ಚುತ್ತ ಸಾಗುತ್ತಿದ್ದಂತೆ ರಾಜ್ಯ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಕಾರ್ಯಕರ್ತರು ಬಿಜೆಪಿ ಪರ, ನರೇಂದ್ರ ಮೋದಿ ಪರ ಜಯಘೋಷಗಳನ್ನು ಕೂಗುತ್ತಿದ್ದರು. ಪಕ್ಷದ ಗೆಲುವು ಖಾತರಿಯಾಗುತ್ತಿದ್ದಂತೆ ಕಾರ್ಯಕರ್ತರು ಬಿಜೆಪಿ ಬಾವುಟ ಬೀಸುತ್ತ, ನೃತ್ಯ ಮಾಡುತ್ತ ಗೆಲುವನ್ನು ಸಂಭ್ರಮಿಸಿದರು. ಸಿಹಿ ಹಂಚಿ ಸಂತಸ ವ್ಯಕ್ತ ಪಡಿಸಿದರು. ವಿಪಕ್ಷ ನಾಯಕ ಆರ್‌. ಅಶೋಕ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಮುಂತಾದವರು ಕಾರ್ಯಕರ್ತರ ಸಂಭ್ರಮದಲ್ಲಿ ಭಾಗಿಯಾದರು.

ರಾಜ್ಯದಲ್ಲಿ ಲೂಟಿ ಹೊಡೆದ ಹಣವನ್ನು ತೆಲಂಗಾಣದಲ್ಲಿ ವೆಚ್ಚ ಮಾಡಿ ಕಾಂಗ್ರೆಸ್‌ ಪಕ್ಷ ಗೆಲುವು ಸಾಧಿಸಿದೆ . ಪಂಚರಾಜ್ಯಗಳನ್ನೂ ಆವರಿಸಿಕೊಂಡೇ ಬಿಟ್ಟೆವು ಎಂದು ಬೀಗುತ್ತಿದ್ದ ಕಾಂಗ್ರೆಸ್‌ ಗರ್ವಭಂಗ ಆಗಿದೆ. ನರೇಂದ್ರ ಮೋದಿಯವರ ನಾಯಕತ್ವಕ್ಕೆ ಬೆಂಬಲದ ರೂಪದಲ್ಲಿ ಜನತೆ ತೀರ್ಮಾನ ಕೈಗೊಂಡಿ¨ªಾರೆ.
– ಎಚ್‌.ಡಿ. ಕುಮಾರಸ್ವಾಮಿ , ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next