Advertisement

Dengue case ನೀರು ನಿಲ್ಲದಂತೆ ನಿಗಾ ವಹಿಸಿ: ಅಪರ ಜಿಲ್ಲಾಧಿಕಾರಿ

12:28 AM Jul 11, 2024 | Team Udayavani |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣ ಹೆಚ್ಚುತ್ತಿವೆ. ಡೆಂಗ್ಯೂ ನಿರ್ಮೂಲನೆಗೆ ಎಲ್ಲ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜನವಸತಿ ಪ್ರದೇಶ ಹಾಗೂ ತಮ್ಮ ಇಲಾಖಾ ವ್ಯಾಪ್ತಿಯ ಕಟ್ಟಡ, ಆವರಣಗಳಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ| ಜಿ. ಸಂತೋಷ್‌ ಕುಮಾರ್‌ ಹೇಳಿದರು.

Advertisement

ಡೆಂಗ್ಯೂ ಪ್ರಕರಣಗಳ ಬಗ್ಗೆ ಮುನ್ನೆಚ್ಚರಿಕೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಯ ಅಧಿಕಾರಿ ಗಳೊಂದಿಗೆ ತುರ್ತು ಸಭೆಯಲ್ಲಿ ಮಾತ ನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಹಲವಾರು ಡೆಂಗ್ಯೂ ಪ್ರಕರಣಗಳು ಕಂಡು ಬಂದಿದ್ದು, ಪಾಲಿಕೆಯ ಎಂ.ಪಿ.ಡಬ್ಲ್ಯೂ ಸಿಬಂದಿ ಮುಂದಿನ ಎರಡು ದಿನಗಳಲ್ಲಿ ಪ್ರತಿ ವಾರ್ಡ್‌ಗಳಿಗೆ ಭೇಟಿ ನೀಡಿ ಲಾರ್ವ ಉತ್ಪತ್ತಿಗೆ ಕಾರಣವಾಗುವ ನೀರಿನ ಸಂಗ್ರಹಗಳನ್ನು ಗುರುತಿಸಿ ನಾಶಗೊಳಿ ಸಲು ಕ್ರಮ ಕೈಗೊಳ್ಳಬೇಕು ಎಂದರು.

ಎಲ್ಲ ತಹಶೀಲ್ದಾರ್‌, ಕಾರ್ಯ ನಿರ್ವಾಹಕ ಅಧಿಕಾರಿ, ಕಮಿಷನರ್‌ಗಳು ಹಾಗೂ ಆಯಾ ತಾಲೂಕಿನ ಆರೋಗ್ಯಾಧಿಕಾರಿಗಳು ಕೂಡಲೇ ಸಭೆ ನಡೆಸಿ ತಮ್ಮ ವ್ಯಾಪ್ತಿಯ ಪ್ರದೇಶ ಗಳಿಗೆ ಭೇಟಿ ನೀಡಿ ಲಾರ್ವಾ ಉತ್ಪತ್ತಿ ಪ್ರದೇಶಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಜಾಲತಾಣ, ಕರಪತ್ರಗಳ ಮೂಲಕವೂ ಜಾಗೃತಿ ಮೂಡಿಸಬೇಕು ಎಂದರು.

ಶಾಲಾ ಮುಖ್ಯಸ್ಥರ ಜತೆ ಸಭೆ
ಇತ್ತೀಚೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದ್ದು, ಶಿಕ್ಷಣ ಇಲಾಖೆಯಿಂದ ಆಯಾ ಪ್ರದೇಶ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಶಾಲಾ ಕಾಲೇಜುಗಳಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿ, ಡೇ ಕೇರ್‌ ಸೆಂಟರ್‌ಗಳು ಹಾಗೂ ಗರ್ಭಿಣಿಯರಿಗೆ ಡೆಂಗ್ಯೂ ರೋಗ ಹರಡದಂತೆ ಜಾಗೃತಿ ಮೂಡಿಸಬೇಕು. ಆಶಾ ಕಾರ್ಯಕರ್ತೆಯರಿಂದ ಗರ್ಭಿಣಿ
ಯರ ಅರೋಗ್ಯ ಸ್ಥಿತಿಗತಿಗಳ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡ ಬೇಕು. ಕಹಿ ಬೇವಿನ ಎಣ್ಣೆ ಯನ್ನು ಹಚ್ಚುವುದರಿಂದ ಸೊಳ್ಳೆ ಕಡಿತದಿಂದಪಾರಾಗಬಹುದು ಎಂದರು.

Advertisement

ಎಲ್ಲ ಸರಕಾರಿ ಹಾಸ್ಟೆಲ್‌ಗ‌ಳಲ್ಲೂ ಶುಚಿತ್ವ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.

ಕಾರ್ಮಿಕರಿಗೆ ಮಾಹಿತಿ ನೀಡಿ
ಕಟ್ಟಡ ನಿರ್ಮಾಣ ಕಾರ್ಯಕ್ಕೆ ಹೊರ ರಾಜ್ಯದಿಂದ ಬಂದಂತಹ ವಲಸೆ ಕಾರ್ಮಿಕರು ಇರುವ ಜಾಗದಲ್ಲಿ ಶುಚಿತ್ವ ಕಾಪಾಡಿಕೊಳ್ಳುವಂತೆ ತಿಳಿಸಬೇಕು. ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕರಿಗೆ ಡೆಂಗ್ಯೂ ಬಗ್ಗೆ ಮಾಹಿತಿ ನೀಡಬೇಕು. ಕೃಷಿ ಇಲಾಖೆಯಿಂದ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಕೃಷಿಕರ ಸಭೆ ನಡೆಸಿ ಮಾಹಿತಿಯನ್ನು ನೀಡುವಂತೆ ಅವರು ಸೂಚಿಸಿದರು.

ಸರಕಾರಿ ಕಟ್ಟಡಗಳನ್ನು ಪರಿಶೀಲಿಸಿ
ಸರಕಾರಿ ಕಟ್ಟಡಗಳ ಮೇಲ್ಛಾವಣಿ ಯಲ್ಲಿ ನೀರು ನಿಲ್ಲದೆ ಇರುವಂತೆ ನೋಡಿಕೊಳ್ಳಬೇಕು, ಪ್ರತಿ ಶುಕ್ರವಾರ ಕಡ್ಡಾಯವಾಗಿ ಹಾಗೂ ಪ್ರತಿದಿನ ಖುದ್ದು ಇಲಾಖೆಯ ಅಧಿಕಾರಿಗಳೇ ತಮ್ಮ ಇಲಾಖೆಯ ಸುತ್ತಮುತ್ತಲೂ ನೀರು ಸಂಗ್ರಹವಾಗಿದೆಯೇ ಎಂಬುದರ ಬಗ್ಗೆ ಪರೀಕ್ಷಿಸಬೇಕು ಎಂದು ಡಾ| ಜಿ. ಸಂತೋಷ್‌ ಅವರು ಹೇಳಿದರು.

ಜಿಲ್ಲಾ ರೋಗವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್‌, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ನರ್ಸಿಂಗ್‌ ಕಾಲೇಜುಗಳ ಮುಖ್ಯಸ್ಥರು ಹಾಗೂ ಸಿಬಂದಿ ವರ್ಗದವರು ಸಭೆಯಲ್ಲಿದ್ದರು.

ವೈದ್ಯರ ಸಲಹೆಯಿಲ್ಲದೆ ಪ್ಯಾರಸಿಟಾಮೋಲ್‌ ಸೇವನೆ ಅಪಾಯಕಾರಿ: ಡಿಎಚ್‌ಒ
ಜ್ವರ ಕಾಣಿಸಿಕೊಂಡರೆ ಹೆಚ್ಚಾಗಿ ನೋವು ನಿವಾರಕಗಳನ್ನು (ಪ್ಯಾರಸಿಟಾಮೋಲ್‌) ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಡೆಂಗ್ಯೂ ಜ್ವರದಲ್ಲಿ ಬಿಳಿ ರಕ್ತ ಕಣ ಕಡಿಮೆಯಾಗುತ್ತದೆ. ಆದ್ದರಿಂದ ಜ್ವರ ಇರುವ ಸಂದರ್ಭದಲ್ಲಿ ವೈದ್ಯರ ಸಲಹೆ ಇಲ್ಲದೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡಲ್ಲಿ ಸಾವು ಸಂಭವಿಸಬಹುದು ಅಥವಾ ಗಂಭೀರ ಅಡ್ಡ ಪರಿಣಾಮಗಳು ಉಂಟಾಗಬಹುದು. ಡೆಂಗ್ಯೂ ಸಂದರ್ಭದಲ್ಲಿ ಪಪ್ಪಾಯಿ ಎಲೆಯ ಜ್ಯೂಸ್‌ ಸೇವಿಸುವುದು ಕೂಡ ಹಾನಿಕಾರಕ. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಯಾವುದೇ ಸ್ವಯಂ ಚಿಕಿತ್ಸೆಯನ್ನು ಮಾಡಬಾರದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್‌.ಆರ್‌. ತಿಮ್ಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next