Advertisement

ಸಸಿನೆಟ್ಟು ಪೋಷಿಸಿದ ಮಕ್ಕಳಿಗೆ ಪ್ರೋತ್ಸಾಹ ಧನ

03:37 PM Aug 29, 2021 | Team Udayavani |

ಬೆಂಗಳೂರು: ನಗರ ಜಿಲ್ಲಾಡಳಿತ ವ್ಯಾಪ್ತಿಯ ರಾಜಾನುಕುಂಟೆ ಗ್ರಾಮ ಪಂಚಾಯಿತಿ ಹೊಸ ಆಲೋಚನೆಗೆ ಮುನ್ನುಡಿ ಬರೆದಿದ್ದು, ಶಾಲಾ
ಹಂತದಲ್ಲೇ ಮಕ್ಕಳಿಗೆ ಕಲಿಕೆ ಜತೆಗೆ ಕೃಷಿ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಆಸ್ತಕಿ ಮೂಡಿಸಲು ಶಾಲಾ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಸಸಿ ಪಡೆದು ನೆಡುವ ಯೋಜನೆ ರೂಪಿಸಿದೆ.

Advertisement

ಶಾಲಾ ಮಕ್ಕಳೇ ಪೋಷಿಸಿ ನೀರೆರೆದು ಬೆಳೆಸಿದ ವಿವಿಧ ಜಾತಿಯ ಹಣ್ಣಿನ ಸಸಿ ಪಡೆದು ಅವರಿಗೆ ಪ್ರೋತ್ಸಾಹ ಧನ ನೀಡಿ ಆ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಶಾಲಾ ಮಕ್ಕಳ ಕೊಡುಗೆಯೂ ಇರುವ ವಿನೂತನ ಯೋಜನೆ ಅನುಷ್ಠಾನಗೊಳಿಸಿದೆ. ಯಲಹಂಕ ತಾಲೂಕು ವ್ಯಾಪ್ತಿಯ ರಾಜಾನುಕುಂಟೆ ಗ್ರಾಮ ಪಂಚಾಯ್ತಿ ಈಗಾಗಲೇ ಹಲವು ಉತ್ತಮ ಯೋಜನೆಗಳನ್ನು ರೂಪಿಸಿದ್ದು ಇದೀಗ ಶಾಲಾ ಮಕ್ಕಳು ಬೆಳೆಸಿದ ವಿವಿಧ ಜಾತಿಯ ಸಸಿಗಳನ್ನು ಪಡೆದು ನೆಡುವ ಯೋಜನೆ ಗ್ರಾಮಸ್ಥರ ಮಚ್ಚುಗೆಗೂ ಪಾತ್ರವಾಗಿದೆ.

ಶಾಲಾ ಮಕ್ಕಳನ್ನು ಕೇಂದ್ರೀಕರಿಸಿಯೇ ಈ ಅಪ ರೂಪದ ಯೋಜನೆ ಸಿದ್ಧಪಡಿಸಲಾಗಿದ್ದು ಈ ಕಾರ್ಯಕ್ಕಾಗಿ ಗ್ರಾಮ ಪಂಚಾಯಿತಿಯ ಸಂಚಿತ ಅನುದಾನ ಬಳಕೆ ಮಾಡಿಕೊಳ್ಳುತ್ತಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ಜಾರಿಯಾಗಿದೆ.

ಇದನ್ನೂ ಓದಿ:ಉತ್ತರ ಕನ್ನಡಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಒದಗಿಸಲು ಸಿಎಂಗೆ ಒತ್ತಾಯ

ಈಗಾಗಲೇ ಮಾವು, ಹಲವು ಮತ್ತು ನೆರಳೆ ಸಸಿಗಳನ್ನು ಬೆಳೆಸುವಂತೆ ಮನವಿ ಮಾಡಲಾಗಿದೆ. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಈಗಾಗಲೇ ನೀಡಿರುವ ಸಸಿಗಳನ್ನು ರಾಜಾನು ಕುಂಟೆ ಗ್ರಾಮ ಪಂಚಾಯ್ತಿ ಸೇರಿದ ನರ್ಸರಿಯಲ್ಲೇ ಇರಿಸಿ ಅವುಗಳನ್ನು ಪೋಷಿಸಲಾಗುತ್ತಿದೆ. ಗ್ರಾಮ ಪಂಚಾಯ್ತಿ ಗೋಮಾಳ ಜಾಗದಲ್ಲಿ ವಿದ್ಯಾರ್ಥಿಗಳು ನೀಡಿದ ಸಸಿಗಳನ್ನು ನೆಡಲಾಗುತ್ತದೆ ಎಂದು ರಾಜಾನುಕುಂಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷಕೆ.ವೀರಣ್ಣ ಹೇಳಿದ್ದಾರೆ.

Advertisement

ಒಂದು ಸಸಿ ಬೆಳೆಸಿ ನೀಡಿದರೆ 5 ರೂ.: ರಾಜಾನು ಕುಂಟೆ ವ್ಯಾಪ್ತಿಯಲ್ಲಿ ಘನತಾಜ್ಯ ಘಟಕ ಇದೆ. ಆ ಘಟಕದಿಂದ ಸಂಗ್ರಹವಾಗುವ ಹಾಲಿನ ಪ್ಯಾಕೇಟ್‌ ಅನ್ನು ತಂದು ಅವುಗಳನ್ನು ಆಯಾ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಹಾಲಿನ ಪ್ಯಾಕೇಟ್‌ನಲ್ಲಿ ವಿದ್ಯಾರ್ಥಿಗಳು ಸಸಿ ಬೆಳೆಸಿ ಪೋಷಿಸಬೇಕು. ಒಬ್ಬ ವಿದ್ಯಾರ್ಥಿ ಎಷ್ಟು ಬೇಕಾದರೂ ಗಿಡ ಬೆಳೆಸಬಹುದಾಗಿದೆ ಎಂದು ರಾಜಾನಕುಂಟೆಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಜೇಶ್‌ ಹೇಳುತ್ತಾರೆ. ವಿದ್ಯಾರ್ಥಿಗಳಿಗೆ ಮುಂದೆ ಕೃಷಿಯತ್ತ ಮರಳಲಿ ಎಂಬ ಸದುದ್ದೇಶ ಕೂಡ ಇದರಲ್ಲಿ ಸೇರಿದೆ. ಒಂದು ಸಸಿಗೆ 5ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈಗಾಗಲೇ 1500ಕ್ಕೂ ಅಧಿಕ ಸಸಿಗಳನ್ನು ವಿದ್ಯಾರ್ಥಿಗಳಿಂದ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಪಂನಿಂದ ಉತ್ತಮ ಕಾರ್ಯ
ಮಾವು, ಹಲಸು, ನೆರಳೆ ಹಣ್ಣಿನ ಗಿಡಗಳಕೆಳಗೆ ಅನೇಕ ಸಸಿಗಳು ಬಿದ್ದು ಬೆಳೆಯುತ್ತವೆ. ಅವುಗಳನ್ನು ತಂದು ವಿದ್ಯಾರ್ಥಿಗಳು ಪೋಷಣೆ ಮಾಡುತ್ತಾರೆ. ಆ ಗಿಡ ನನ್ನದು ಮುಂದೊಂದು ದಿನ ಹಣ್ಣುಗಳನ್ನು ಈ ಗ್ರಾಮದ ಜನರಿಗೆ ನೀಡಲಿದೆ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಲಿದೆ ಎಂದು ಶ್ರೀರಾಮನ ಹಳ್ಳಿಯ ಸಾಯಿಶಂಕರ ವಿದ್ಯಾ ಶಾಲೆಯ ದೈಹಿಕ ಶಿಕ್ಷಕ ಉಮೇಶ್‌ಕುಮಾರ್‌ ಹೇಳುತ್ತಾರೆ. ಮಕ್ಕಳು ಉತ್ಸಾಹದಿಂದ ಸಸಿ ಬೆಳೆಸುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಈಗಾಗಲೇ ಗ್ರಾಮ ಪಂಚಾಯ್ತಿಗೆ ವಿವಿಧ ಜಾತಿಯ ನೂರಾರು ಹಣ್ಣಿನ ಗಿಡಗಳನ್ನು ಮಕ್ಕಳು
ನೀಡಿದ್ದಾರೆ. ಕೃಷಿ ಮತ್ತು ಪರಿಸರ ಸಂರಕ್ಷಣೆ ದೃಷ್ಟಿಯಿಂದಲೂ ಗ್ರಾಮ ಪಂಚಾಯ್ತಿ ಉತ್ತಮ ಕಾರ್ಯಕ್ರಮ ರೂಪಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಕಲಿಕೆ ಹಂತದಲ್ಲೇ ಮಕ್ಕಳಿಗೆ ಕೃಷಿ ಮತ್ತು ಪರಿಸರದ ಬಗ್ಗೆ ಜಾಗೃತಿಮೂಡಲಿ ಎಂಬುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಶಾಲಾ ಮಕ್ಕಳುಕೂಡ ಆಸಕ್ತಿಯಿಂದ ಸಸಿ ಬೆಳೆಸಿ ಗ್ರಾಮ ಪಂಚಾಯ್ತಿಗಳಿಗೆ ನೀಡುತ್ತಿರುವುದು ಸಂತಸದ ವಿಚಾರವಾಗಿದೆ.
-ರಾಜೇಶ್‌, ಪಿಡಿಒ ರಾಜಾನುಕುಂಟೆ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next