Advertisement

ಬಂಟ್ವಾಳದ ಮೂಲ ಸೌಕರ್ಯಕ್ಕೆ ಒತ್ತು : ಗ್ರಾಮಾಂತರ ಜಿಲ್ಲೆಯಾಗಿ ಪುತ್ತೂರು

10:29 PM Feb 28, 2021 | Team Udayavani |

ಕೃಷಿಯನ್ನೇ ಮುಖ್ಯ ಆರ್ಥಿಕ ಶಕ್ತಿಯಾಗಿ ಹೊಂದಿರುವ ಬಂಟ್ವಾಳ ತಾಲೂಕು ಪುತ್ತೂರು ಜಿಲ್ಲೆಗೆ ಸೇರ್ಪಡೆಗೊಂಡರೆ ಕೃಷಿ ಪೂರಕವಾಗಿ ಅಭಿವೃದ್ಧಿ ಹೊಂದಲು ಅನುಕೂಲಕರವಾಗುತ್ತದೆ. ಪ್ರಸ್ತುತ ಇರುವ ಬಂಟ್ವಾಳ ತಾಲೂಕಿನ ಹಲವಾರು ಗ್ರಾಮಗಳು ಪುತ್ತೂರಿಗೆ ಹತ್ತಿರವೂ ಆಗಿರುವುದರಿಂದ ಹೆಚ್ಚಿನವರ ಒಲವು ಪುತ್ತೂರು ಜಿಲ್ಲೆಗೆ ಸೇರ್ಪಡೆ ಉತ್ತಮ ಎಂಬುದಾಗಿದೆ.

Advertisement

ಬಂಟ್ವಾಳ: ಗ್ರಾಮಾಂತರ ಜಿಲ್ಲೆಯಾಗಿ ಪುತ್ತೂರು ಘೋಷಣೆಯಾಗುವ ವೇಳೆ ಬಂಟ್ವಾಳ ತಾಲೂಕು ಪುತ್ತೂರಿಗೆ ಸೇರ್ಪಡೆಗೊಂಡಲ್ಲಿ ಇಲ್ಲಿನ ಗ್ರಾಮೀಣಾಭಿ ವೃದಿ, ಕೃಷಿ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿದ್ದು, ತಾಲೂಕಿನ ಹಳ್ಳಿ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಗಲಿದೆ.

ಪುತ್ತೂರು ಜಿಲ್ಲೆಯ ಪ್ರಸ್ತಾವನೆಯಲ್ಲಿ ಬಂಟ್ವಾಳ ಕೂಡ ಹೊಸ ಜಿಲ್ಲೆಯ ಪಟ್ಟಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಪುತ್ತೂರು ಜಿಲ್ಲೆಯ ಅಭಿವೃದ್ಧಿಯ ವೇಳೆ ಗ್ರಾಮಾಂತರ ಪ್ರದೇಶಗಳನ್ನೇ ಕೇಂದ್ರೀಕರಿಸಿ ಅನುದಾನಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚು. ದ.ಕ. ಜಿಲ್ಲೆಯ ಅಭಿವೃದ್ಧಿ ನಗರ ಕೇಂದ್ರಿತವಾಗಿರುವ ಸಾಧ್ಯತೆ ಹೆಚ್ಚಿರುವುದರಿಂದ ಬಂಟ್ವಾಳಕ್ಕೆ ಪುತ್ತೂರು ಹೆಚ್ಚು ಅನು ಕೂಲವಾಗಲಿದೆ ಎಂಬ ಅಭಿಪ್ರಾಯ ವಿದೆ.

ಬಂಟ್ವಾಳ ತಾ| ಕೇಂದ್ರಕ್ಕೆ ಮಂಗಳೂರು ಹತ್ತಿರವಾದರೂ ತಾಲೂಕಿನ ಅರ್ಧ ಕ್ಕಿಂತಲೂ ಅಧಿಕ ಗ್ರಾಮಗಳು ಪುತ್ತೂರಿಗೆ ಸಮೀಪ ದಲ್ಲಿರುವ ಕಾರಣ, ಈ ಭಾಗದ ಮಂದಿ ಪುತ್ತೂರಿನತ್ತ ಒಲವು ವ್ಯಕ್ತಪಡಿಸುತ್ತಿದ್ದಾರೆ.

ಕೃಷಿಯೇ ಆರ್ಥಿಕ ಶಕ್ತಿ
ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ಹಾಗೂ ಬಂಟ್ವಾಳ ಈ ಎಲ್ಲ ತಾಲೂಕುಗಳ ಆರ್ಥಿಕ ಶಕ್ತಿ ಕೃಷಿಯೇ ಆಗಿದೆ. ಹೀಗಾಗಿ ಈ ಭಾಗದ ಕೃಷಿಗೆ ಒತ್ತು ನೀಡಿ ಇಲ್ಲಿನ ಆರ್ಥಿಕತೆಯನ್ನು ಬೆಳಸಬೇಕೇ ಹೊರತು ಕೈಗಾರಿಕೆ ಅಥವಾ ಇನ್ಯಾವುದನ್ನೋ ತಂದು ಈ ತಾಲೂಕುಗಳನ್ನು ಅಭಿವೃದ್ಧಿ ಮಾಡುವುದು ಹೇಳಿದಷ್ಟು ಸುಲಭವಾಗದು.

Advertisement

ಹೀಗಿರುವಾಗ ಪುತ್ತೂರು ಜಿಲ್ಲೆಯ ಅಭಿವೃದ್ಧಿ ಏನಿದ್ದರೂ ಕೃಷಿ ಕೇಂದ್ರಿತವಾಗಿ ರುತ್ತದೆ. ಆದರೆ ದ.ಕ. ಜಿಲ್ಲೆಯ ಅಭಿವೃದ್ಧಿ ಮಂಗಳೂರು ಅಥವಾ ಇನ್ಯಾವುದೋ ನಗರ ಪ್ರದೇಶವನ್ನು ಕೇಂದ್ರೀಕರಿಸಿ ಆಗುವ ಸಾಧ್ಯತೆ ಇದ್ದು, ಆಗ ಬಂಟ್ವಾಳಕ್ಕೆ ಕೃಷಿ ಕೇಂದ್ರಿತವಾಗಿರುವ ಪುತ್ತೂರು ಜಿಲ್ಲೆ ಅನುಕೂಲವನ್ನು ಸೃಷ್ಟಿಸಲಿದೆ.

ಬಂಟ್ವಾಳ ತಾ| ಒಟ್ಟು 71,758 ಹೆಕ್ಟೇರ್‌ ಭೂ ಪ್ರದೇಶವನ್ನು ಹೊಂದಿದ್ದು, ಇದರಲ್ಲಿ ಬಹುತೇಕ ಪಾಲು ಕೃಷಿ ತುಂಬಿ ಕೊಂಡಿದೆ. ಅಡಿಕೆಯೇ ಇಲ್ಲಿನ ಪ್ರಧಾನ ಬೆಳೆಯಾಗಿದ್ದು, 20,486 ಹೆಕ್ಟೇರ್‌ ವಿಸ್ತರಿಸಿ ಕೊಂಡಿದೆ. ಪ್ರಸ್ತುತ ಸುಮಾರು 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಉಳಿದಂತೆ ತೆಂಗು 5,481 ಹೆ, ರಬ್ಬರು-1544 ಹೆ., ಕಾಳುಮೆಣಸು 982 ಹೆ., ಕೊಕ್ಕೊ-277 ಹೆ., ಗೇರು-638 ಹೆ. ಆಗಿರುತ್ತದೆ ಎಂದು ಆಯಾಯ ಇಲಾಖೆಗಳು ಲೆಕ್ಕಾಚಾರ ನೀಡುತ್ತದೆ.

ಬಹುತೇಕ ಗ್ರಾಮಗಳಿಗೆ ಸಮೀಪ.!
ಬಂಟ್ವಾಳ ತಾಲೂಕು ಕೇಂದ್ರ ಮಂಗಳೂರು ಸಮೀಪವಾಗಿ ಕಂಡರೂ, ಬಹುತೇಕ ಗ್ರಾಮಗಳಿಗೆ ಮಂಗಳೂರಿಗಿಂತ ಪುತ್ತೂರೇ ಸಮೀಪದಲ್ಲಿದೆ. ಬಂಟ್ವಾಳ ತಾಲೂಕಿನ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾ.ಪಂ.ಗಳಾದ ಕೆದಿಲ, ಪೆರ್ನೆ, ವಿಟ್ಲಮುಟ್ನೂರು, ಅಳಿಕೆ, ಪುಣಚ, ಕೇಪು, ಮಾಣಿಲ, ಪೆರುವಾಯಿ, ಇಡಿRದುಗೆ ಪುತ್ತೂರು ಸಮೀಪವಾಗಿದೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾ.ಪಂ.ಗಳಾದ ಕನ್ಯಾನ, ಕೊಳ್ನಾಡು, ಸಾಲೆತ್ತೂರು, ವೀರಕಂಭ, ಮಾಣಿ, ಅನಂತಾಡಿ, ನೆಟ್ಲಮುಟ್ನೂರು, ಬರಿಮಾರು, ಕಡೇಶ್ವಾಲ್ಯ, ವಿಟ್ಲಪಟ್ನೂರು, ಬಡಗಕಜೆಕಾರು, ಸರಪಾಡಿ, ಕರೋಪಾಡಿ, ಮಣಿನಾಲ್ಕೂರು, ಉಳಿ, ಪೆರಾಜೆ, ಬಾಳ್ತಿಲ, ಬೋಳಂತೂರು ಗ್ರಾ.ಪಂ.ಗಳಿಗೆ ಪುತ್ತೂರು ಸಮೀಪದಲ್ಲಿದೆ. ಇನ್ನೂ ಒಂದಷ್ಟು ಗ್ರಾಮಗಳಿಗೆ ಪುತ್ತೂರು ಹಾಗೂ ಮಂಗಳೂರು ಎರಡಕ್ಕೂ ಅಂತರ ಒಂದೇ ಆಗುತ್ತದೆ. ಒಂದಷ್ಟು ಗ್ರಾಮಗಳಿಗೆ ಮಂಗಳೂರು ಸಮೀಪದಲ್ಲಿದೆ.

ಬಂಟ್ವಾಳ ತಾಲೂಕು ವ್ಯಾಪ್ತಿಯ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ನರಿಂಗಾನ, ಬಾಳೆಪುಣಿ, ಫಜೀರು, ಇರಾ, ಸಜೀಪನಡು, ಸಜೀಪಪಡು, ಕುರ್ನಾಡು ಗ್ರಾ.ಪಂ.ಗಳು ಈಗಾಗಲೇ ಉಳ್ಳಾಲ ತಾಲೂಕಿಗೆ ಸೇರಿರುವುದರಿಂದ ಅದು ಮುಂದಕ್ಕೆ ದ.ಕ.ಜಿಲ್ಲೆಯ ವ್ಯಾಪ್ತಿಯಲ್ಲೇ ಉಳಿಯುವ ಸಾಧ್ಯತೆ ಹೆಚ್ಚಿದೆ. ಈ ಎಲ್ಲ ಲೆಕ್ಕಾಚಾರಗಳನ್ನು ನೋಡಿದಾಗ ಬಂಟ್ವಾಳ ತಾಲೂಕು ಪುತ್ತೂರಿಗೆ ಸೇರ್ಪಡೆಗೊಂಡಲ್ಲಿ ಹೆಚ್ಚು ಅನುಕೂಲವಾಗಲಿದೆ.

ರಸ್ತೆಗಳು ಮೇಲ್ದರ್ಜೆಗೆ;
ಸಂಪರ್ಕಕ್ಕೆ ಪೂರಕ: ಈಗಾಗಲೇ ಬಹುತೇಕ ಗ್ರಾಮೀಣ ಸಂಪರ್ಕ ರಸ್ತೆಗಳು ಮೇಲ್ದರ್ಜೆಗೇರಿರುವುದರಿಂದ ಬಂಟ್ವಾಳದ ಗ್ರಾಮೀಣ ಭಾಗಗಳಿಂದ ಪುತ್ತೂರನ್ನು ಸಂಪರ್ಕಿಸುವುದು ಕಷ್ಟವೇನಲ್ಲ. ವಿಟ್ಲ ಭಾಗದ ಮಂದಿ ಪ್ರಮುಖ ಪಟ್ಟಣವಾಗಿ ಈಗಾಗಲೇ ಪುತ್ತೂರನ್ನೇ ನಂಬಿದ್ದಾರೆ. ಇನ್ನು ಬಂಟ್ವಾಳ ಕೆಲವೊಂದು ಗ್ರಾಮಗಳ ಮಂದಿ ಪುತ್ತೂರಿಗೆ ಬರಬೇಕಾದರೆ ಉಪ್ಪಿನಂಗಡಿ ಮೂಲಕ ಸಾಗಬೇಕಿದ್ದು, ಉಪ್ಪಿನಂಗಡಿ- ಪುತ್ತೂರು ರಾಜ್ಯ ಹೆದ್ದಾರಿ ಚತುಷ್ಪಥಗೊಳ್ಳುವುದರಿಂದ ಅನುಕೂಲವಾಗಲಿದೆ. ಬಂಟ್ವಾಳದ ಜನತೆ ಜಿಲ್ಲಾ ಕೇಂದ್ರಕ್ಕೆ ಮಂಗಳೂರಿಗೆ ತೆರಳಿ ಟ್ರಾಫಿಕ್‌ ತೊಂದರೆ ಅನುಭವಿಸುವುದು ಕೂಡ ತಪ್ಪಲಿದೆ.

ಪ್ರವಾಸಿ ತಾಣಕ್ಕೆ ಒತ್ತು: ಬಂಟ್ವಾಳ ತಾಲೂಕಿನಲ್ಲಿ ಪ್ರವಾಸಿ ತಾಣಗಳು ಹೆಚ್ಚು ಧಾರ್ಮಿಕ ಕೇಂದ್ರಗಳೇ ಆಗಿರುವುದರಿಂದ ಧಾರ್ಮಿಕ ಚೌಕಟ್ಟಿನ ಆಧಾರದಲ್ಲೇ ಅದನ್ನು ಅಭಿವೃದ್ಧಿ ಮಾಡಬೇಕಾಗುತ್ತದೆ. ತಾಲೂಕಿನ ಕಾರಿಂಜ, ನರಹರಿ ಪರ್ವತ, ಪಣೋಲಿಬೈಲು, ಅಜಿಲಮೊಗರು ಮಸೀದಿ ಧಾರ್ಮಿಕ ಶ್ರದ್ಧಾಕೇಂದ್ರಗಳೇ ಆಗಿವೆ. ಪುತ್ತೂರು ಭಾಗದಲ್ಲೂ ಇಂತಹ ಧಾರ್ಮಿಕ ಕೇಂದ್ರೀಕೃತ ಪ್ರವಾಸಿ ತಾಣಗಳಿರುವುದರಿಂದ ಇವುಗಳ ಅಭಿವೃದ್ಧಿಗೆ ಪುತ್ತೂರು ಜಿಲ್ಲಾ ಕೇಂದ್ರಿತ ಪ್ರವಾಸಿ ತಾಣಗಳ ಅಭಿವೃದ್ಧಿ ಯೋಜನೆ ಅನುಕೂಲವನ್ನು ಸೃಷ್ಟಿಸಲಿದೆ.

- ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next