Advertisement

ಅಪ್ಪ ಬಿಜೆಪಿ, ಮಗ ಕಾಂಗ್ರೆಸ್‌: ನಿಷ್ಠೆ ಯಾರಿಗೆ?

02:56 PM Nov 24, 2021 | Team Udayavani |

ಹಾಸನ: ಮಾಜಿ ಸಚಿವ ಎ.ಮಂಜು ಅವರು 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸೇರಿ ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗೂ ಇಳಿದಿದ್ದರು. ಆದರೆ, ಈಗ ಅವರು ಕಾಂಗ್ರೆಸ್‌ನತ್ತ ಚಿತ್ರ ಹರಿಸಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಈಗ ಬಿಜೆಪಿಯಿಂದ ಕಾಂಗ್ರೆಸ್‌ಗೆ ಅವರು ಪಕ್ಷಾಂತರ ಮಾಡಲು ಸಜ್ಜಾಗಿದ್ದಾರೆ.

Advertisement

ಅದರ ಮೊದಲ ಹೆಜ್ಜೆಯಾಗಿ ತಮ್ಮ ಪುತ್ರ ಡಾ.ಮಂತರ್‌ಗೌಡ ಅವರಿಗೆ ವಿಧಾನ ಪರಿಷತ್‌ ಚುನಾವಣೆಗೆ ಕೊಡಗು ಜಿಲ್ಲೆಯಿಂದ ಕಾಂಗ್ರೆಸ್‌ನಿಂದ ಟೆಕೆಟ್‌ ಕೊಡಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಪಕ್ಷಾಂತರ ಹೊಸದೇನೂ ಅಲ್ಲ: ಎ.ಮಂಜು ಅವರಿಗೆ ಪಕ್ಷಾಂತರ ಹೊಸದೇನೂ ಅಲ್ಲ. ಅವರು ಸಕ್ರಿಯ ರಾಜಕಾರಣ ಆರಂಭಿಸಿದ ದಿನದಿಂದಿಲೂ ಪಕ್ಷಾಂತರ ಮಾಡಿಕೊಂಡೇ ಬಂದಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಯನ್ನೂ ಮಾಡಿಕೊಂಡು ಬಂದಿದ್ದಾರೆ. ಎನ್‌ಎಸ್‌ಯುಐ (ವಿದ್ಯಾರ್ಥಿ ಕಾಂಗ್ರೆಸ್‌), ಯುವ ಕಾಂಗ್ರೆಸ್‌ನಲ್ಲಿದ್ದ ಎ.ಮಂಜು ಅವರು ಅರಕಲಗೂಡು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದಿದ್ದಾಗ 1994ರಲ್ಲಿ ಬಂಡಾಯವಾಗಿ ಸ್ಪರ್ಧೆಗಿಳಿದು ಸೋತಿದ್ದರು.

ಆನಂತರ 1999ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ ಎ. ಮಂಜು ಅವರು, 2004 ಚುನಾವಣೆ ವೇಳೆಗೆ ಕಾಂಗ್ರೆಸ್‌ ಸೇರಿ ಚುನಾವಣೆ ಎದುರಿಸಿ ಸೋತಿದ್ದರು. 2008ರಲ್ಲಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಗೆದ್ದಿದ್ದರು. 2013ರ ಚುನಾವಣೆಯಲ್ಲೂ ಕಾಂಗ್ರೆಸ್‌ ನಿಂದ ಸತತ ಎರಡನೇ ಬಾರಿ ಅರಕಲಗೂಡು ಕ್ಷೇತ್ರದಿಂದ ಗೆದ್ದು ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಎರಡೂವರೆ ವರ್ಷ ಮಂತ್ರಿಯೂ ಆಗಿದ್ದರು. ಆದರೆ, 2018ರ ವಿಧಾನ ಸಭಾ ಚುನಾವಣೆಯಲ್ಲಿ ಸೋತಿದ್ದ ಅವರು ಒಂದೇ ವರ್ಷದಲ್ಲಿ ಬಿಜೆಪಿ ಸೇರಿದ್ದರು.

ಬಿಜೆಪಿ ಸೇರಿ ಮೂರು ವರ್ಷವಾಗಿಲ್ಲ: ಬಿಜೆಪಿ ಸೇರಿ ಇನ್ನೂ ಮೂರು ವರ್ಷ ಆಗಿಲ್ಲ. ಆಗಲೇ ಬಿಜೆಪಿಯಿಂದ ಹೊರಗೆ ಕಾಲಿಟ್ಟಿರುವ ಎ.ಮಂಜು ಅವರು ಕಾಂಗ್ರೆಸ್‌ ನ ಬಾಗಿಲಿನಲ್ಲಿ ನಿಂತಿದ್ದಾರೆ. ಕಾಂಗ್ರೆಸ್‌ ಸೇರುವ ಪ್ರಯತ್ನವನ್ನು 6 ತಿಂಗಳ ಹಿಂದೆಯೇ ಎ.ಮಂಜು ಅವರು ಆರಂಭಿಸಿದ್ದರು. ಆದರೆ, ರಾಜ್ಯಮಟ್ಟದಲ್ಲಿ ಇಬ್ಬರು ಕಾಂಗ್ರೆಸ್‌ ಮುಖಂಡರ ಪೈಕಿ ಒಬ್ಬರು, ಎ. ಮಂಜು ಅವರ ಕಾಂಗ್ರೆಸ್‌ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

Advertisement

ಎ.ಮಂಜು ಬದಲು ಜೆಡಿಎಸ್‌ ಶಾಸಕ ಎ.ಟಿ.ರಾಮಸ್ವಾಮಿ ಅವರನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನ ಮಾಡಿದ್ದರು. ಆದರೆ, ಈಗ ಎ.ಮಂಜು ಅವರು ತಮ್ಮ ಪುತ್ರನನ್ನು ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿಸುವ ಮೂಲಕ ಕಾಂಗ್ರೆಸ್‌ ಸೇರುವ ಹಾದಿಯನ್ನು ಬಹುತೇಕ ಸುಗಮ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:- ACB Raid : ಅಧಿಕಾರಿಯ ಮನೆಯ ನೀರಿನ ಪೈಪ್ ನಲ್ಲಿ ಇತ್ತು ಕಂತೆ ಕಂತೆ ಹಣ

ಕಾಂಗ್ರೆಸ್‌ನಿಂದ ಗ್ರೀನ್‌ ಸಿಗ್ನಲ್‌ ಸಿಕ್ಕ ತಕ್ಷಣ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲು ಸಜ್ಜಾಗಿ ನಿಂತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಅರಕಲಗೂಡು ಕ್ಷೇತ್ರದಿಂದ ಕಾಂಗ್ರೆಸ್‌ನಿಂದಲೇ ಸ್ಪರ್ಧೆಗಿಳಿಯುವ ಸಿದ್ಧತೆಯಲ್ಲಿದ್ದಾರೆ.

ಭಂಡ ರಾಜಕಾರಣ: ಹೀಗೆ ನಿರಂತರವಾಗಿ ಪಕ್ಷಾಂತರ ಮಾಡಿಕೊಂಡೇ ಬಂದಿರುವ ಎ.ಮಂಜು ಅವರಿಗೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಅಡ್ಡಾಡುವುದು ಸಲೀಸಾಗಿಬಿಟ್ಟಿದೆ. ಈಗ ತಮ್ಮ ಪುತ್ರನನ್ನು ಮೇಲ್ಮನೆ ಚುನಾವಣೆಯಲ್ಲಿ ಸ್ಪರ್ಧೆಗಿಳಿಸಿರುವ ನಾನಿನ್ನೂ ಬಿಜೆಪಿಯಲ್ಲಿಯೇ ಇದ್ದೇನೆ.

ಬಿಜೆಪಿ ಅಭ್ಯರ್ಥಿಗಳ ಪರವಾಗಿಯೇ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಭಂಡ ರಾಜಕಾರಣವನ್ನೂ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಮುಖಂಡರಿಗಂತೂ ಎ.ಮಂಜು ಮೇಲೆ ವಿಶ್ವಾಸ ಉಳಿದಿಲ್ಲ. ಆದರೆ, ಪಕ್ಷದಿಂದ ಹೊರ ಹಾಕುವ ಧೈರ್ಯವನ್ನು ಮಾಡುವ ಸ್ಥಿತಿಯಲ್ಲಿಯೂ ಬಿಜೆಪಿ ಮುಖಂಡರಿಲ್ಲ.

ಹಾಗಾಗಿ, ಇನ್ನೂ ಕೆಲ ದಿನ ಬಿಜೆಪಿ ಮುಖಂಡರು ಮುಜುಗರ ಸಹಿಸಿಕೊಂಡೇ ಇರಬೇಕಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಮುಖಂಡರಾಗಲಿ, ಕಾಂಗ್ರೆಸ್‌ ಮುಖಂಡರಾಗಲಿ ಎ. ಮಂಜು ಅವರಿಂದ ನಿಷ್ಠೆಯನ್ನು ನಿರೀಕ್ಷಿಸಲಂತೂ ಸಾಧ್ಯವಿಲ್ಲ. ಅನುಕೂಲ ಸಿಂಧು ರಾಜಕಾರಣವೇ ಎ. ಮಂಜು ಅವರ ಜಾಯಮಾನವಾಗಿರುವಾಗ ಅವರಿಂದ ಬದ್ಧತೆಯನ್ನು ನಿರೀಕ್ಷಿಸುವುದೂ ತಪ್ಪಾಗಬಹುಬಹುದು!

ನನ್ನ ಮಗನ ಪರ ಪ್ರಚಾರಕೆ ಹೋಗಲ್ಲ : ಮಂಜು

ಹಾಸನ: ಕೊಡಗು ಜಿಲ್ಲೆಯಲ್ಲಿ ವಿಧಾನ ಪರಿಷತ್‌ ಚುನಾವಣೆಗೆ ನನ್ನ ಮಗ ಮಂತರ್‌ಗೌಡ ಸ್ಪರ್ಧಿಸಿದ್ದಾರೆ. ಆದರೆ, ನಾನು ಅಲ್ಲಿ ಪ್ರಚಾರಕ್ಕೆ ಹೋಗದೆ, ಹಾಸನ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್‌.ಎಂ.ವಿಶ್ವನಾಥ್‌ ಪರ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ಎ.ಮಂಜು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮಗ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವುದರಲ್ಲಿ ವಿಶೇಷ ಏನಿಲ್ಲ. ಸೋನಿಯಾ ಗಾಂಧಿ, ಮೇನಕಾ ಗಾಂಧಿ ಒಂದೇ ಕುಟುಂಬದವರು.

ಅವರೂ ಬೇರೆ ಬೇರೆ ಪಕ್ಷದಲ್ಲಿಲ್ಲವೇ? ದೇವೇಗೌಡ ಕುಟುಂಬದವರು ಎಲ್ಲ ಪಾರ್ಟಿಯಲ್ಲೂ ಇದ್ದಾರೆ. ಆ ಕುಟುಂಬದಲ್ಲಿ ಒಳ ಒಪ್ಪಂದದ ರಾಜಕಾರಣವೂ ನಡೆಯುತ್ತದೆ. ಹಾಸನ ಜಿಲ್ಲೆಯಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಮಂತರ್‌ಗೌಡ ಅಭ್ಯರ್ಥಿಯಾಗಬೇಕಾಗಿತ್ತು.

ಏಕೆ ತಪ್ಪಿತು ಎಂದು ಮುಂದಿನ ದಿನಗಳಲ್ಲಿ ಹೇಳುವೆ ಎಂದರು. ನಾನು ನೇರ ರಾಜಕಾರಣಿ: ವೈಯಕ್ತಿಕವಾಗಿ ಎಲ್ಲ ಪಕ್ಷದವರೂ ನನ್ನೊಂದಿಗೆ ಚನ್ನಾಗಿದ್ದಾರೆ. ಡಿ.ಕೆ. ಶಿವಕುಮಾರ್‌, ಸಿದದ್ದರಾಮಯ್ಯ, ಎಚ್‌. ಡಿ. ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ ಅವ ರೊಂದಿಗೂ ನಾನು ಮಾತನಾಡುತ್ತೇನೆ. ನಾನು ನೇರ ರಾಜಕಾರಣಿ. ಅರಕಲಗೂಡು ಕ್ಷೇತ್ರದಲ್ಲಿ 400 ಮಂದಿ ಬಿಜೆಪಿ ಬೆಂಬಲಿತ ಚುನಾಯಿತ ಪ್ರತಿನಿಧಿಗಳಿದ್ದಾರೆ. ಅವರೆಲ್ಲರ ಪ್ರಥಮ ಪ್ರಾಶಸ್ತ್ಯದ ಮತಗಳೂ ಬಿಜೆಪಿ ಅಭ್ಯರ್ಥಿಗೆ ಬರುವಂತೆ ನೋಡಿಕೊಳ್ಳುವೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next