Advertisement

ಉಚಿತ ಲಸಿಕೆ ಘೋಷಣೆ ನೀತಿ ಸಂಹಿತೆ ಉಲ್ಲಂಘನೆಯಲ್ಲ : ಚುನಾವಣಾ ಆಯೋಗ ಸ್ಪಷ್ಟನೆ

08:44 PM Oct 31, 2020 | sudhir |

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ರಾಜ್ಯದ ಜನತೆಗೆ ಉಚಿತವಾಗಿ ಕೊರೊನಾ ಲಸಿಕೆ ವಿತರಿಸುತ್ತೇವೆ ಎಂಬ ಬಿಜೆಪಿಯ ಆಶ್ವಾಸನೆಯು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಅಲ್ಲ ಎಂದು ಚುನಾವಣಾ ಆಯೋಗ ಶನಿವಾರ ಸ್ಪಷ್ಟಪಡಿಸಿದೆ.

Advertisement

ಆರ್‌ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ ನೀಡಿದ ದೂರಿನ ಹಿನ್ನೆಲೆ ಆಯೋಗವು ಈ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರದಲ್ಲಿ ನೀತಿ ಸಂಹಿತೆಯ ಯಾವುದೇ ನಿಬಂಧನೆಯೂ ಉಲ್ಲಂಘನೆ ಆಗಿಲ್ಲ ಎಂದಿದೆ. ಇಂಥ ಆಶ್ವಾಸನೆಯು ತಾರತಮ್ಯದಿಂದ ಕೂಡಿದ್ದು, ಚುನಾವಣೆ ವೇಳೆ ಕೇಂದ್ರ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಗೋಖಲೆ ಆರೋಪಿಸಿದ್ದರು.

ನಡ್ಡಾ ಪ್ರಚಾರ:
ಬಿಹಾರದ ಸೋನೆಪುರ್‌ನಲ್ಲಿ ಶನಿವಾರ ಚುನಾವಣಾ ಪ್ರಚಾರ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. “ಆರ್‌ಜೆಡಿ ಅರಾಜತಕೆಯ ಪಕ್ಷ, ಕಾಂಗ್ರೆಸ್‌ ದೇಶದ್ರೋಹಿ ಪಕ್ಷ. ಇದು ಬಿಹಾರದ ಮಹಾಘಟಬಂಧನ. ಇಂಥದ್ದೊಂದು ಮೈತ್ರಿಯು ರಾಜ್ಯದ ಅಭಿವೃದ್ಧಿ ಮಾಡಲು ಸಾಧ್ಯವೇ’ ಎಂದು ನಡ್ಡಾ ಪ್ರಶ್ನಿಸಿದ್ದಾರೆ. ಜತೆಗೆ, ನಿಮಗೆ ಲಾಟೀನ್‌ ಸರ್ಕಾರ ಬೇಕೇ ಅಥವಾ ಎಲ್‌ಇಡಿ ಸರ್ಕಾರ ಬೇಕೇ ನೀವೇ ನಿರ್ಧರಿಸಿ ಎಂದೂ ಹೇಳಿದ್ದಾರೆ.

ತೇಜಸ್ವಿ ಸಿಎಂ ಆದ್ರೆ ಅಚ್ಚರಿಯಿಲ್ಲ:
ಬಿಹಾರದಲ್ಲಿ ಒಂದು ಕಡೆ ಯಾವುದೇ ಬೆಂಬಲವಿಲ್ಲದ ಯುವ ನಾಯಕನಿದ್ದಾನೆ. ಸಿಬಿಐ, ಇಡಿಯಂಥ ಕೇಂದ್ರ ತನಿಖಾ ಸಂಸ್ಥೆಗಳು ಆತನ ಬೆನ್ನು ಬಿದ್ದಿವೆ. ಪ್ರತಿಪಕ್ಷಗಳನ್ನು ಹತ್ತಿಕ್ಕಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧವೇ ಆತ ತೊಡೆತಟ್ಟಿ ನಿಂತಿದ್ದಾನೆ. ಚುನಾವಣೆ ಬಳಿಕ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಸಿಎಂ ಆದರೂ ಅಚ್ಚರಿಯಿಲ್ಲ ಎಂದು ಶಿವಸೇನೆ ಸಂಸದ ಸಂಜಯ್‌ ರಾವತ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next