Advertisement

ಹದಿನೆಂಟರ ಗಂಟು ಹಳೇ ಸಮಸ್ಯೆಗಳುಂಟು!

01:46 PM Dec 31, 2017 | |

ರಾಯಚೂರು: ಜಿಲ್ಲೆಯಲ್ಲಿ ಕೆಲ ಯೋಜನೆಗಳ ಜಾರಿಯಿಂದ ಬಹುದಿನಗಳ ಆಸೆ ಕೈಗೂಡಿದ ಸಮಾಧಾನ ಒಂದೆಡೆಯಾದರೆ, ಬಿಟ್ಟೂ ಬಿಡದಂತೆ ಕಾಡಿದ ಮಳೆರಾಯ ಮಾಡಿದ ಅವಾಂತರಗಳ ನೋವು ಮತ್ತೂಂದೆಡೆ. ಕೃಷಿ ವಿವಿ ಘೋಷಣೆ, ನೂತನ ತಾಲೂಕುಗಳಿಗೆ ಚಾಲನೆ, ನಂದವಾಡಗಿ ಏತ ನೀರಾವರಿಗೆ ಚಾಲನೆಯಂಥ ಚಟುವಟಿಕೆಗಳು ಜಿಲ್ಲೆಯ ಮಟ್ಟಿಗೆ ನೆಮ್ಮದಿ ತರಿಸಿತು. ಆದರೆ ಈ ಬಾರಿ ಸತತವಾಗಿ ಎರಡು ತಿಂಗಳು ಸುರಿದ ಮಳೆಯಿಂದ ರೈತಾಪಿ ವರ್ಗ ಅಕ್ಷರಶಃ ಕಣ್ಣೀರಿನಲ್ಲಿ ಕೈ ತೊಳೆದಿದ್ದಂತೂ ಸುಳ್ಳಲ್ಲ. ಸುಮಾರು 58 ಕೋಟಿಗೂ ಅಧಿಕ ಬೆಳೆ, ಆಸ್ತಿ ಪಾಸ್ತಿಗೆ ಹಾನಿಯಾದ ವರದಿಯಾಗಿದೆ. ಬೆಳೆಯೆಲ್ಲ ಮಳೆಗೆ ಕೊಚ್ಚಿ ಹೋಗಿ ರೈತಾಪಿ ವರ್ಗ ತಲೆ ಮೇಲೆ ಕೈ ಹೊತ್ತು ಕೂರುವಂತಾಯಿತು.

Advertisement

ಜಿಲ್ಲೆಯಲ್ಲಿ 2017ನೇ ವರ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿ ಸಾಕಷ್ಟು ಕುತೂಹಲ ಮೂಡಿಸಿದವು. ಜಿಲ್ಲೆಯಲ್ಲಿ ಪಕ್ಷಾಂತರ ಪರ್ವದ ಗಾಳಿ ಸುದ್ದಿಗಳು, ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪಗಳು, ಮುಂಬರುವ
ವಿಧಾನಸಭೆ ಚುನಾವಣೆಯ ಲೆಕ್ಕಾಚಾರಗಳಿಗೆ ಈ ವರ್ಷ ವೇದಿಕೆಯಾಯಿತು. 

 ಫೆ.2ರಂದು ಕೃಷಿ ವಿವಿಯ ತಾಂತ್ರಿಕ ವಿಭಾಗದ 3ನೇ ಸೆಮಿಸ್ಟರ್‌ ವಿದ್ಯಾರ್ಥಿ ಸಂಕೇತ್‌ ಬಸವೇಶ್ವರ ನಗರದ ಟವರ್‌ ಏರಿ ಪ್ರತಿಭಟನೆ ನಡೆಸಿದ್ದರು. ಕೃಷಿ ಇಲಾಖೆ ಹುದ್ದೆಗಳ ನೇಮಕಾತಿಯಲ್ಲಿ ತಾಂತ್ರಿಕ ವಿಭಾಗದವರನ್ನು ಕೈಬಿಟ್ಟಿರುವ ಕಾರಣ ಪ್ರತಿಭಟನೆಗೆ ಮುಂದಾಗಿದ್ದರು. ಅವರ ಮನವೊಲಿಸುವಲ್ಲಿ ಅಧಿಕಾರಿಗಳು ಹೈರಾಣಾಗಿದ್ದರು.

ಮಾ.17ರಂದು ಲಿಂಗಸುಗೂರಿನ ಸೌಂಡ್‌ ಸರ್ವಿಸ್‌ ಅಂಗಡಿಯಲ್ಲಿ ಕೆಲಸ ಮಾಡುವ ಐವರು ಯುವಕರು ಜನರೇಟರ್‌ ನಿಂದ ಬಿಡುಗಡೆಯಾದ ಕಾರ್ಬನ್‌ ಹೊಗೆಯಿಂದ ಉಸಿರುಗಟ್ಟಿ ಆಮ್ಲಜನಕ ಸಿಗದೆ ಉಸಿರುಗಟ್ಟಿ ಮೃತಪಟ್ಟಿದ್ದರು. ಕರಡಕಲ್‌ ಗ್ರಾಮದ ಆದಪ್ಪ, ಮೌಲಾಲಿ, ಮಂಜುನಾಥ, ಶಶಿಕುಮಾರ, ಸುರೇಶ ಮೃತಪಟ್ಟ ಯುವಕರು.
 
 ಮೇ 9ರಂದು ತಾಲೂಕಿನ ಗದಾರ್‌ ಗ್ರಾಮದ ಓವರ್‌ಹೆಡ್‌ ಟ್ಯಾಂಕ್‌ನಲ್ಲಿ 16 ಕೋತಿಗಳು ಸಾವನ್ನಪ್ಪಿದ್ದವು. ಬೇಸಿಗೆಯಲ್ಲಿ ನೀರಿನ ದಾಹ ತಣಿಸಿಕೊಳ್ಳಲು ಟ್ಯಾಂಕ್‌ಗೆ ಜಿಗಿದ ಕೋತಿಗಳು ಮೇಲೆರಲು ಯಾವುದೇ ಆಸರೆ ದೊರೆಯದೇ ಒಳಗೆ ಮೃತಪಟ್ಟಿದ್ದವು.
 
 ಜು.13ರಂದು ಲಿಂಗಸೂಗೂರು ತಾಲೂಕಿನ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ನಂದವಾಡಗಿ ಏತ ನೀರಾವರಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅಡಿಗಲ್ಲು ಹಾಕಿದರು. ಲಿಂಗಸುಗೂರು ಮಾನ್ವಿ ಹಾಗೂ ಸಿಂಧನೂರು ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಈ ಯೋಜನೆ ಬಹುವರ್ಷಗಳ ಬೇಡಿಕೆಯಾಗಿತ್ತು.

 ಸೆ.5ರಂದು ಗುಂಡಲಬಂಡಾ ಜಲಾಶಯದಲ್ಲಿ ಈಜಾಡಲು ತೆರಳಿದ್ದ ಎಂಟು ಯುವಕರು ಪ್ರವಾಹಕ್ಕೆ ಸಿಲುಕಿದ್ದರು. 
ಬಸವಸಾಗರ ಜಲಾಶಯದಿಂದ ಕಾಲುವೆಗಳಿಗೆ ಹೆಚ್ಚುವರಿ ನೀರು ಹರಿಸಿದ್ದರಿಂದ ನೀರಿನ ಪ್ರಮಾಣ ದಿಢೀರ್‌ ಹೆಚ್ಚಾಗಿತ್ತು. ಇದರಿಂದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕುಪ್ಪಿ ದ್ಯಾಮನಾಳ ಗ್ರಾಮದ ಎಂಟು ಯುವಕರು ಅಪಾಯಕ್ಕೆ ಸಿಲುಕಿದ್ದರು. ಹಟ್ಟಿ ಪೊಲೀಸರು ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. 

Advertisement

 ಅ.12ರಂದು ಬೆಂಗಳೂರಿನಿಂದ ಮಂತ್ರಾಲಯಕ್ಕೆ ಬರುತ್ತಿದ್ದ ಬಸ್‌ ವ್ಯಾಪಕ ಮಳೆಗೆ ಆಂಧ್ರದ ಹಳ್ಳದಲ್ಲಿ ಸಿಲುಕಿಕೊಂಡಿತ್ತು. ಕರ್ನೂಲ್‌ ಜಿಲ್ಲೆಯ ಪತ್ತಿಕೊಂಡ ಸಮೀಪದ ಚಿನ್ನಹೊತ್ಲಿ ಗ್ರಾಮದ ಹಳ್ಳದಲ್ಲಿ ಪ್ರವಾಹ ಹೆಚ್ಚಿ ಬಸ್‌ ಮಧ್ಯದಲ್ಲೇ ಸಿಲುಕಿತ್ತು. ಚಾಲಕನ ಸಮಯಪ್ರಜ್ಞೆಯಿಂದ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. 

ಮೂವರು ಎಸ್ಪಿ ಬದಲಾವಣೆ
ಒಂದೇ ವರ್ಷದಲ್ಲಿ ಜಿಲ್ಲೆ ಮೂವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಕಂಡಿತು. ಮೇ 15ರಂದು ಎಸ್ಪಿ ಚೇತನಸಿಂಗ್‌ ರಾಠೊಡ್‌ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿತ್ತು. ತುಮಕೂರ ಎಸ್ಪಿ ಡಾ| ದಿವ್ಯಾ ಗೋಪಿನಾಥ್‌
ಅವರನ್ನು ನೂತನ ಎಸ್ಪಿಯಾಗಿ ವರ್ಗ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ವರ್ಗಾವಣೆ ರದ್ದುಗೊಳಿಸಲಾಗಿತ್ತು. ಜೂ.23ಕ್ಕೆ ಪುನಃ ರಾಠೊಡ್‌ ವರ್ಗಾವಣೆ ಮಾಡಲಾಯಿತು. ಜೂ.23ರಂದು ನಿಶಾ ಜೇಮ್ಸ್‌ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದರು. ನ.3ರಂದು ನಿಶಾ ಜೇಮ್ಸ್‌ ವರ್ಗಾವಣೆಯಾಗಿ ಡಿ.ಕಿಶೋರಬಾಬು ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದರು. ಇದರ ಜತೆಗೆ ಜಿಪಂ ಸಿಇಒ ಆಗಿದ್ದ ಎಂ.ಕೂರ್ಮಾರಾವ್‌ ವರ್ಗಾವಣೆಗೊಂಡು ಅಭಿರಾಂ ಜಿ.ಶಂಕರ್‌ ಅಧಿಕಾರ ಸ್ವೀಕರಿಸಿದರು. ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ ಅಮಾನತು ಹಿನ್ನೆಲೆಯಲ್ಲಿ ದರ್ಶನ್‌ ಅವರು ನೂತನ ಪೌರಾಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.

ನಗರಸಭೆಯಲ್ಲಿ ಬೆಳವಣಿಗೆ
ನಗರಸಭೆಯಲ್ಲಿ ಈ ಬಾರಿ ಹಲವು ಅಚ್ಚರಿ ಬೆಳವಣಿಗೆ ನಡೆದವು. ಅಧ್ಯಕ್ಷೆ ಹೇಮಲತಾ ಬೂದಪ್ಪ ವಿರುದ್ಧ ಪಕ್ಷಾತೀತವಾಗಿ ಸದಸ್ಯರು ಅವಿಶ್ವಾಸ ಗೊತ್ತುವಳಿಗೆ ಮುಂದಾದರು. ಸಭೆ ಬಹಿಷ್ಕರಿಸುವ ಮೂಲಕ ಅಧ್ಯಕ್ಷೆ
ವಿರುದ್ಧ ಅಪನಂಬಿಕೆ ವ್ಯಕ್ತಪಡಿಸಿದರು. ಅವಿಶ್ವಾಸಕ್ಕೆ ಬೇಕಾದ ಸದಸ್ಯರ ಸಹಿ ಸಂಗ್ರಹಿಸಿ ಪೌರಾಯುಕ್ತರಿಗೆ ಸಲ್ಲಿಸಿ ಗೊತ್ತುವಳಿ ಸಭೆ ಕರೆಯಲು ತಾಕೀತು ಮಾಡಿದರು. ಆದರೆ ಅವಿಶ್ವಾಸ ಗೊತ್ತುವಳಿ ದಿನವೇ ಗೊತ್ತುವಳಿಗೆ ಬೇಕಾದ ಸದಸ್ಯರು ಹಾಜರಾಗದ ಕಾರಣ ವಿಫಲವಾಯಿತು. ಇದಾಗಿ ಕೆಲವೇ ದಿನಗಳಿಗೆ ಅಧ್ಯಕ್ಷೆ ದೀರ್ಘ‌ ರಜೆಗೆ ತೆರಳಿದ್ದು, ಉಪಾಧ್ಯಕ್ಷ ಜಯಣ್ಣರಿಗೆ ಪ್ರಭಾರ ಅಧ್ಯಕ್ಷ ಹುದ್ದೆ ನೀಡಲಾಯಿತು.

ಮುಗಿಯದ ಕಾಮಗಾರಿ
 ಹಲವು ಕಾಮಗಾರಿಗಳು ಕೂಡ ನನೆಗುದಿಗೆ ಬಿದ್ದವು. ಆಗಸ್ಟ್‌ನಲ್ಲೇ ಮುಗಿಯಬೇಕಿದ್ದ 24/7 ಕುಡಿವ ನೀರಿನ ಕಾಮಗಾರಿ, ಡಿಸೆಂಬರ್‌ ಅಂತ್ಯಕ್ಕೆ ಮುಗಿಯಬೇಕಿದ್ದ ಜಿಲ್ಲಾ ಕ್ರೀಡಾಂಗಣ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿಗಳು ವರ್ಷಾಂತ್ಯಕ್ಕೂ ಮುಗಿಯಲಿಲ್ಲ. ಸಿಂಧನೂರಿನಲ್ಲೂ ಮೇ ಒಳಗೆ ಯುಜಿಡಿ, ಜುಲೈ ಒಳಗೆ ಕುಡಿವ ನೀರಿನ ಕಾಮಗಾರಿ ಮುಗಿಯಬೇಕಿತ್ತು. ಕಾಮಗಾರಿಗೆ ಅವಧಿ ವಿಸ್ತರಿಸುತ್ತಿರುವುದೇ ಸಾಧನೆಯಾಗಿದೆ.

2017ರ ಡಿಸೆಂಬರ್‌ವರೆಗಿನ ಘಟನಾವಳಿಗಳು
ಜನವರಿ
 ಜ.2: ದರ ಕುಸಿದ ಹಿನ್ನೆಲೆಯಲ್ಲಿ ಟೊಮ್ಯಾಟೋ ರಸ್ತೆಗೆ ಸುರಿದು ರೈತರ ಆಕ್ರೋಶ
 ಜ.7: ನಗರದಲ್ಲಿ ಪ್ರಥಮ ಬಾರಿ ಅಂತಾರಾಜ್ಯ ಜಿಲ್ಲಾ ಮಟ್ಟದ ರಿಂಕ್‌ ಹಾಕಿ ಸ್ಪರ್ಧೆ. ರಾಜ್ಯ ಸೇರಿ ನೆರೆ ರಾಜ್ಯದ 35 ತಂಡ ಭಾಗಿ. 
 ಜ.12: ಕಾಗಿನೆಲೆ ಕನಕ ಗುರುಪೀಠದಲ್ಲಿ ಹಾಲುಮತ ಸಂಸ್ಕೃತಿ ವೈಭವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
 ಜ.20: ಸಿಂಧನೂರಿನ ಭಗವಾನ್‌ ಮಹಾವೀರ ಗೋಶಾಲೆಯಲ್ಲಿ ಸಂಗ್ರಹಿಸಿದ್ದ 200 ಎಕರೆ ಭತ್ತದ ಹುಲ್ಲು ಆಕಸ್ಮಿಕ ಬೆಂಕಿಗೆ ಭಸ್ಮ.
 ಜ.20: ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಣೆ ಆರೋಪದಡಿ ಮಾಜಿ ನಕ್ಸಲ್‌ ರಿಜ್ವಾನ್‌ ಬೇಗಂ ಜೆಎಂಎಫ್‌ ನ್ಯಾಯಾಲಯಕ್ಕೆ ಹಾಜರು.

ಫೆಬ್ರವರಿ
 ಫೆ.3: ಮಾನ್ವಿ ತಾಲೂಕಿನ ಕಲ್ಲೂರಿನ ಶಾಲೆ ಎದುರು ಟ್ರ್ಯಾಕ್ಟರ್‌ ಹರಿದು ವಿದ್ಯಾರ್ಥಿ ಬಸವಲಿಂಗ ಮೃತಪಟ್ಟಿದ್ದರಿಂದ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗಿತ್ತು.
 ಫೆ.27: ಕೆರೆಗಳ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ನಟ ಯಶ್‌ ನಗರಕ್ಕೆ ಭೇಟಿ. ತಡರಾತ್ರಿ 11:30ಕ್ಕೆ ಭೇಟಿ.

ಮಾರ್ಚ್‌
 ಮಾ.4: ಆರ್‌ಟಿಒ ವೃತ್ತದಿಂದ ಎಸ್‌ಪಿ ಕಚೇರಿವರೆಗೆ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಕರವೇ (ಶಿವರಾಮೆಗೌಡ ಬಣ) ಜಿಲ್ಲಾಧ್ಯಕ್ಷ ಅಶೋಕ್‌ ಜೈನ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಹೆಸರಿಗೆ ವೀಳ್ಯದೆಲೆ ಅಗಿದು ಉಗಿಯುವ ಮೂಲಕ ವಿನೂತನ ಹೋರಾಟ ನಡೆಸಲಾಯಿತು. ಇನ್ನೂ ರಸ್ತೆ ಅರೆಬರೆಯಾಗಿದೆ. 
ಮಾ.7: ಹಟ್ಟಿ ಚಿನ್ನದ ಗಣಿಯಲ್ಲಿ 2.33 ಕೆಜಿ ಚಿನ್ನ ಕದ್ದ ಇಬ್ಬರು ಅಧಿ ಕಾರಿಗಳ ಬಂಧನ 
ಮಾ.15: ಬಜೆಟ್‌ನಲ್ಲಿ ಜಿಲ್ಲೆಗೆ ಪ್ರತ್ಯೇಕ ವಿವಿ ಘೋಷಣೆ. ಜತೆಗೆ ಸಿರವಾರ, ಮಸ್ಕಿಗೆ ತಾಲೂಕು ಭಾಗ್ಯ.
ಮಾ.26: ಸಾಕಷ್ಟು ವಿವಾದ ಸೃಷ್ಟಿಸಿದ್ದ ರಿಮ್ಸ್‌ ಐಸಿಯುನಲ್ಲಿದ್ದ ಮಗು ನಾಪತ್ತೆ. ಆಡಳಿತ ಮಂಡಳಿ ವಿರುದ್ಧ ಜನಾಕ್ರೋಶ. ವಾರದಲ್ಲಿ ಮಗು ಪತ್ತೆ ಮಾಡಿ, ಆರೋಪಿಗಳ ಬಂಧನ. 

ಏಪ್ರಿಲ್‌
 ಏ.13: ಮಾನ್ವಿಯ ಕುರುಕುಂದಾದಲ್ಲಿ ತಂದೆ ಕೊಲೆ ಮಾಡಿದ ಸುದ್ದಿ ತಿಳಿಯಲು ದೌಡಾಯಿಸಿದ ಪುತ್ರನನ್ನು ಮಾತನಾಡಿಸುವ ನೆಪದಲ್ಲಿ ನಿಂತಿದ್ದ ಕೊಲೆಗಾರ ತಾಪಂ ಸದಸ್ಯ ದೇವರಾಜ್‌ನ ಬರ್ಬರ ಕೊಲೆ. ಎರಡು ದಿನದಲ್ಲಿ
ಆರೋಪಿ ಬಂಧನ.

ಮೇ
  ಮೇ 9: ಸಿಂಧನೂರಿನ ಬಸವರಾಜೇಶ್ವರಿ ಕ್ಯಾಂಪ್‌ನಲ್ಲಿ ಬೆಳಗ್ಗೆ ನಾಡಬಾಂಬ್‌ ಸ್ಫೋಟ, ಇಬ್ಬರಿಗೆ ಗಾಯ. ಪೊಲೀಸರಿಂದ ವಿಶೇಷ ತನಿಖೆ. ಹಲವು ವರ್ಷಗಳ ಹಿಂದೆ ಹೂಳಿಟ್ಟ ನಾಡಬಾಂಬ್‌ ಎಂಬ ಸ್ಪಷ್ಟನೆ.
  ಮೇ 19: ಸಿಂಧನೂರಿನ ದಡೇಸೂಗೂರು ಬಳಿ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರ ಸಾವು. ಗಂಗಾವತಿ ಮೂಲದ ಹುಸೇನ್‌ ಭಾಷಾ, ಪತ್ನಿ ಮೌಲಾಬಿ, ಮಕ್ಕಳಾದ ಶಾಹೀರ್‌ ಮತ್ತೂಂದು ಮಗು ಮೃತಪಟ್ಟಿತ್ತು. ಮತ್ತೂಂದು ಮಗು ಬದುಕುಳಿದಿತ್ತು.
  ಮೇ 30: ನಗರದ ದಲಿತರ ಮನೆಯಲ್ಲಿ ಭೋಜನ ಸವಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ

ಜೂನ್‌
 ಜೂ. 16: ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಿರಿಯ ಅಧಿಕಾರಿ ಬಿ.ಆರ್‌.ಗೌಡೂರ್‌ ಮನೆ, ಕಚೇರಿ ಮೇಲೆ ಎಸಿಬಿ ದಾಳಿ. 
 ಜೂ.24: ಗುಂಜಳ್ಳಿಯ ಹೊಂಡದಲ್ಲಿ ಬಿದ್ದು ಬಾಲಕರಾದ ಮಹಿಬೂಬ್‌, ಸಾಹಿಲ್‌ ಸಾವು 

ಜುಲೈ
 ಜು.29: ಮಾನ್ವಿಯ ಕ್ವಾರಿ ಯೊಂದರಲ್ಲಿ ಸಂಗ್ರಹವಾದ ನೀರಿನಲ್ಲಿ ಬಿದ್ದು ಪಟ್ಟಣದ ನಿವಾಸಿ ಲಕ್ಷ್ಮೀ (40),
ಪುತ್ರಿ ಮಲ್ಲಮ್ಮ (13) ಸಾವು.  

ಆಗಸ್ಟ್‌
 ಆ.3: ಟಿಎಲ್‌ಬಿಸಿ ಕಾಲುವೆಗೆ ನೀರು ಹರಿಸಲು ಸಿಂಧನೂರು, ಸಿರವಾರದಲ್ಲಿ ರೈತರಿಂದ ಬಂದ್‌.

ಸೆಪ್ಟೆಂಬರ್‌
 ಸೆ.6:
ಯುವತಿಯರನ್ನು ವೇಶ್ಯಾ ವಾಟಿಕೆಗೆ ತಳ್ಳುತ್ತಿದ್ದ ಪಶ್ಚಿಮ ಬಂಗಾಳದ ಪರ್ವೀನ್‌, ರೇಶ್ಮಾ ಪೊಲೀಸರ ವಶಕ್ಕೆ. 
 ಸೆ.17: ಜಿಲ್ಲೆಯಲ್ಲಿ ಭಾರೀ ಮಳೆ ಜನಜೀವನ ಅಸ್ತವ್ಯಸ್ತ. ಕೃಷ್ಣಾ ನದಿಗೆ ಬಸವಸಾಗರದಿಂದ 2.40 ಲಕ್ಷ ಕ್ಯುಸೆಕ್‌
ನೀರು ಹರಿಸಿದ್ದರಿಂದ ನಡುಗಡ್ಡೆಗಳಿಗೆ ಸಂಪರ್ಕ ಕಡಿತ.

ಅಕ್ಟೋಬರ್‌
 ಅ.8: ಸತತ ಮಳೆಗೆ ಹಾಳಾದ ಬೆಳೆ, ಆಸ್ತಿ ಪಾಸ್ತಿಗಳ ಸಮೀಕ್ಷೆ. 74 ಸಾವಿರ ಹೆಕ್ಟೇರ್‌ ಬೆಳೆ ನಷ್ಟ ಎಂದು ಅಂದಾಜಿಸಿ
ಸರ್ಕಾರಕ್ಕೆ ಜಿಲ್ಲಾಡಳಿತ ವರದಿ. 
 ಅ.26: ಉದ್ಯೋಗ ನೀಡುವಂತೆ ಆಗ್ರಹಿಸಿ ವೈಟಿಪಿಎಸ್‌ ಎದುರು ಬೂ ಸಂತ್ರಸ್ತರಿಂದ ಅರೆಬೆತ್ತಲೆ ಪ್ರತಿಭಟನೆ.
 ಅ.29: ಮದ್ಯ ನಿಷೇಧಕ್ಕೆ ಆಗ್ರಹಿಸಿ ಬೃಹತ್‌ ಜನಾಂದೋಲನ ಹೋರಾಟ. ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌, ತರಳಬಾಳು ಶ್ರೀಗಳು ಸೇರಿ ಅನೇಕರು ಭಾಗಿ. 

ನವೆಂಬರ್‌
 ನ.1: ಮಾನ್ವಿ ತಾಲೂಕು ಕರಡಿ ಗುಡ್ಡದ ಜನಪದ ಗಾಯಕಿ ದುರ್ಗಮ್ಮಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ.
 ನ.13: ರಾಯಚೂರು ನಗರದ ವ್ಯಾಪ್ತಿಯಲ್ಲಿ ರಿಂಗ್‌ ರೋಡ್‌ ನಿರ್ಮಾಣಕ್ಕೆ ಅ ಧಿವೇಶನದಲ್ಲಿ ಅಸ್ತು. 
 ನ.13: ಬೆಳಗಾವಿಯಲ್ಲಿ ನಡೆದ ಐಸಿಸಿ ಸಭೆಯಲ್ಲಿ ರೈತರ ಒತ್ತಾಯವನ್ನೂ ಕಡೆಗಣಿಸಿ ಡಿ.15 ವರೆಗೆ ಟಿಎಲ್‌ಬಿಸಿ
ಕಾಲುವೆಗೆ ನೀರು ಹರಿಸಲು ನಿರ್ಧಾರ. 

ಡಿಸೆಂಬರ್‌
 ಡಿ.11: ವೈಜನಾಥ ಪಾಟೀಲರಿಗೆ ಸ್ವಾಮಿ ರಾಮಾನಂದ ತೀರ್ಥ ಪ್ರಶಸ್ತಿ ಪ್ರದಾನ.
 ಡಿ.12: ಬಿಜೆಪಿ ಪರಿವರ್ತನಾ ರ್ಯಾಲಿ ಜಿಲ್ಲೆಯ ದೇವದುರ್ಗ ಹಾಗೂ ರಾಯಚೂರಿಗೆ ಆಗಮನ.
 ಡಿ.15: ಮಾನ್ವಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ 362 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ
ಚಾಲನೆ. 

ಗುಡ್‌ನ್ಯೂಸ್‌
ವೈಟಿಪಿಎಸ್‌ಪವರ್‌ಫುಲ್‌!
ವೈಟಿಪಿಎಸ್‌ನ 800 ಮೆ.ವ್ಯಾ. ಸಾಮರ್ಥ್ಯದ 2 ಘಟಕಗಳನ್ನು ವಾಣಿಜ್ಯಿಕ ಉತ್ಪಾದನೆಗೆ ಘೋಷಿಸಲಾಯಿತು. ಆದರೂ ಕೇಂದ್ರದಿಂದ ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಸಾಧ್ಯವಾಗಿಲ್ಲ. ಮಾ.7ರಂದು ಮೊದಲನೇ ಘಟಕದ ವಾಣಿಜ್ಯಿಕ ಉತ್ಪಾದನೆಗೆ (ಸಿಒಡಿ) ಘೋಷಣೆ ಮಾಡಲಾಯಿತು. ಏ.6ರಂದು 2ನೇ ಘಟಕ ಕೂಡ ವಿದ್ಯುತ್‌ ಉತ್ಪಾದನೆಗೆ ಸಿದ್ಧ ಎಂದು ಕೆಪಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ ನಾಯಕ ಘೋಷಿಸಿದರು. 

ರಾಹುಲ್‌ ಗಾಂಧಿಗೆ ಆತ್ಮೀಯ ಸನ್ಮಾನ ಹೈ-ಕ ಭಾಗಕ್ಕೆ 371ನೇ ಕಲಂ ಜಾರಿಗೊಳಿಸಿ ವಿಶೇಷ ಸ್ಥಾನಮಾನ ಕಲ್ಪಿಸಿದ ಹಿನ್ನೆಲೆಯಲ್ಲಿ ಎಐಸಿಸಿ ಉಪಾಧ್ಯಕ್ಷರಾಗಿದ್ದ ರಾಹುಲ್‌ ಗಾಂಧಿ  ಅವರಿಗೆ ಆ.12ರಂದು ಅಭಿನಂದನೆ ಸಲ್ಲಿಸಲಾಯಿತು. ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜಿಸುವ ಮೂಲಕ ಅವರನ್ನು
ಅಭಿನಂದಿಸಲಾಯಿತು. ಇದು ಜಿಲ್ಲೆಯ ಕೆಲ ನಾಯಕರ ಪ್ರತಿಷ್ಠೆ ಪ್ರಶ್ನೆಯಾಗಿದ್ದು ಕುತೂಹಲಕ್ಕೆ ಕಾರಣವಾಯಿತು. ಕಾರ್ಯಕ್ರಮದ ಬೆನ್ನಲ್ಲೇ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದು, ಮುಖಂಡರು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದು ಗಮನಾರ್ಹ 

ದೇವರು ಜಾತ್ರೆ..
ರಾಯರ ಸನ್ನಿಧಿಗೆ ರಜನಿಕಾಂತ್‌ 
ಎಂದಿನಂತೆ ಈ ಬಾರಿಯೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ ಹಲವು ವಿಚಾರಗಳಿಂದ ಗಮನ ಸೆಳೆಯಿತು. ಆರಾಧನೆ, ಹಲವು ಗಣ್ಯರ ಭೇಟಿ ಮಧ್ಯ ಶ್ರೀಮಠದ ಕಾರ್ಯಕ್ರಮಗಳು ಗಮನ ಸೆಳೆದವು. ಜು.24ರಂದು ಕಿರಿಕ್‌ ಪಾರ್ಟಿ ಯಶಸ್ವಿ ಯಾತ್ರೆಯಲ್ಲಿದ್ದ ಸಿನಿಮಾ ತಂಡ ಮಠಕ್ಕೆ ಭೇಟಿ ನೀಡಿತ್ತು. ಆ.20ರಂದು ಮಂತ್ರಾಲಯದ ಶ್ರೀಮಠದಲ್ಲಿ ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಸಹಯೋಗದಲ್ಲಿ 2,500 ಗಾಯಕರಿಂದ ಏಕಕಾಲಕ್ಕೆ ಸತತ ಆರು ಗಂಟೆ ಕೀರ್ತನೆ ಗಾಯನ ನಡೆಯಿತು. ಈ ಕಾರ್ಯಕ್ರಮ ವಿವಿಧ 9 ದಾಖಲೆಗಳನ್ನು ನಿರ್ಮಿಸಿತು. ಇನ್ನು ವರ್ಷಾಂತ್ಯದಲ್ಲಿ ನ.21ರಂದು ಸೂಪರ್‌ ಸ್ಟಾರ್‌ ರಜನಿಕಾಂತ್‌ ಸದ್ದಿಲ್ಲದೇ ಶ್ರೀಮಠಕ್ಕೆ ಭೇಟಿ ನೀಡಿದ್ದು
ದೊಡ್ಡ ಸುದ್ದಿಯಾಗಿತ್ತು. 

ಬ್ಯಾಡ್‌ನ್ಯೂಸ್‌
ಪತ್ನಿ, ಮಕ್ಕಳಿಗೆ ಬೆಂಕಿ
ಜ.2: ಕೌಟುಂಬಿಕ ಕಲಹದಿಂದ ಪತ್ನಿ ಇಬ್ಬರು ಮಕ್ಕಳನ್ನು ಸುಟ್ಟು ಹಾಕಿದ ಘಟನೆ ಜಿಲ್ಲೆಯನ್ನು ಬೆಚ್ಚಿ ಬೀಳಿಸಿತ್ತು. ಘಟನೆಯಲ್ಲಿ ಮಾಧುರಿ (28), ಮಕ್ಕಳಾದ ಮಾನಸ, ಮಾತೃ ಎನ್ನುವ ಕಂದಮ್ಮಗಳ ಜೀವ ಬೆಂದುಹೋಗಿತ್ತು. ಪ್ರಕರಣದಲ್ಲಿ ರಾಘವೇಂದ್ರನನ್ನು ಬಂಧಿಸಲಾಗಿತು. 
ಮೇ 24: ಸಿಂಧನೂರು ತಾಲೂಕಿನ 54ನೇ ಉಪಕಾಲುವೆಗೆ ಟ್ರ್ಯಾಕ್ಟರ್‌ ಪಲ್ಟಿಯಾಗಿ ಮೂವರು ಕಾರ್ಮಿಕರ ಸಾವು.

ಸಿದ್ದಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next