Advertisement

Dream: ಒಬ್ಬೊಬ್ಬರ ಕನಸು ಒಂದೊಂದು ಬಗೆ…ಹೊಸ ತಲೆಮಾರಿನ ಕನಸು

01:07 PM Oct 12, 2024 | Team Udayavani |

ಒಂದು ನೊಣ ಮನುಷ್ಯನಂತೆ ಯೋಚಿಸಿ ತನ್ನ ಹಿಂದಿನ ಜನ್ಮದ ಅಂತ್ಯಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಕತೆ ನಿಮಗೆ ತಿಳಿದಿರಬಹುದು. ‘ಈಗ’ ಸಿನೆಮಾದ ಮುಖ್ಯ ಎಳೆ ಇದು. ಕೋಟಿ ಗಳಿಕೆ ಮಾಡಿದ್ದ ಈ ಸಿನೆಮಾ ರಾಜಮೌಳಿ ನಿರ್ದೇಶನ ಮಾಡಿದ್ದರೂ ಅದರ ಹಿಂದಿನ ಸ್ಫೂರ್ತಿ ತಂದೆ ವಿಜಯೇಂದ್ರ ಪ್ರಸಾದ್‌ ಅವರದ್ದು. 1990ರ ದಶಕದಲ್ಲಿಯೇ ಕಲ್ಪನೆ ಹುಟ್ಟಿಕೊಂಡು 2012ರಲ್ಲಿ ಅದ್ಭುತ ಸಿನೆಮಾ ರೂಪ ಪಡೆಯಿತು. ಇತ್ತೀಚೆಗೆ ತೆರೆಕಂಡ ಕಲ್ಕಿ ಸಿನೆಮಾದ ಕಾಂಪ್ಲೆಕ್ಸ್ , ಅಪ್ ಡೇಟ್‌ ಜಗತ್ತು ಎಲ್ಲವೂ ಭವಿಷ್ಯದ ಒಂದು ಕನಸು. ಹೀಗಾಗಿ ಮನುಷ್ಯನ ಕನಸು ಬಾನೆತ್ತರಕ್ಕೂ ಸಾಗಬಲ್ಲದು, ಪಾತಾಳ ಲೋಕದಲ್ಲೂ ಹುದುಗಬಹುದು. ಮನುಷ್ಯನ ಕುತೂಹಲ ಹೊಸ ವಿಚಾರಗಳ ಸ್ವೀಕರಿಸುವ ನೈಪುಣ್ಯತೆಯಿಂದ ಅಸಾಧ್ಯವಾದದ್ದನ್ನು ಸಾಧ್ಯವಾಗಿಸುತ್ತಿದೆ.

Advertisement

ಒಬ್ಬೊಬ್ಬರ ಕನಸು ಒಂದೊಂದು ಬಗೆ. ಇಂತಹ ಕನಸಿನಿಂದಲೇ ಭಾರತ ಚಂದ್ರಗ್ರಹಕ್ಕೂ ತಲುಪಿದೆ. ದ್ವಾರಕೆಗೂ ತಲುಪ ಹೊರಟಿದೆ. ತೊಟ್ಟಿಲಲಿ ಅಳುತಿಹ ಕಂದಮ್ಮನಿಗೆ ಚಂದಮಾಮನ ಮೇಲೆ ನಲಿದಾಡುವ ಕನಸು, ಚಿಟಪಟ ಮಾತಾಡುವ ಎಳೆ ಮಕ್ಕಳಿಗೆ ಆಗಸದೆತ್ತರಕ್ಕೆ ಹಾರುವ ಕನಸು, ಯುವ ಮನಸ್ಸುಗಳಿಗೆ ಯೌವನದ ಪ್ರೀತಿಯ ಕನಸು, ಉದ್ಯೋಗಸ್ಥರಿಗೆ ಭವಿಷ್ಯ ಭದ್ರತೆಯ ಕನಸು, ಮುಪ್ಪಿನವರಿಗೆ ಆಸರೆಯ ಕನಸು. ಜಗತ್ತು ನಿಂತಿರುವುದು ನಾಳೆ ಎಂಬ ಕನಸಿನ ಮೇಲೆ. ಹಾಗಿದ್ದಾಗ ಈ ಕನಸು ಹೊಸ ತಲೆಮಾರಿನಲ್ಲಿ ಅತಿಶಯೋಕ್ತಿಯೇ?, ಜೀವನದ ಉತ್ಸಾಹವೇ?

ಇದಷ್ಟೇ ಎಂದುಕೊಂಡರೆ ಬರೀ ಸಪ್ಪೆ ಜೀವನ. ಈಡೇರಬೇಕಾದದ್ದು, ಆಸೆ ಇದ್ದು ಕೈಗೂಡದ ಅದೆಷ್ಟೋ ಕನಸುಗಳ ಜಟಾಪಟಿಯ ನಡುವೆ ಜೀವನದ ಬಂಡಿ ಸಾಗುತ್ತಿದ್ದರಷ್ಟೇ ನಮ್ಮ ಬದುಕು ಕೂಡ ಒಂದು ಅರ್ಥ ಪಡೆದುಕೊಳ್ಳುವುದು. ಈ ನಿಟ್ಟಿನಲ್ಲಿ ಹೊಸ ತಲೆಮಾರಿನ ಕನಸುಗಳ ಅವಲೋಕನ ಮಾಡಿದರೆ ದೊಡ್ಡ ಪಟ್ಟಿಯೇ ಸಿದ್ಧವಾಗುತ್ತದೆ. ಹೊಸ ತಲೆಮಾರಿಗೆ ಕನಸಿನ ಬಗ್ಗೆ ಯೋಚಿಸಿದರೆ ದೊಡ್ಡದೊಂದು ಕಲ್ಪನಾ ಲೋಕವೇ ತೆರೆಯಬಹುದು.

ಹಿಂದೆ ಹೇಗಿತ್ತು?
ನಮ್ಮ ತಾತ ಮುತ್ತಾತನ ಕಾಲದಲ್ಲಿ ಪೇಟೆ ಸುತ್ತಬೇಕು, ಗಾಡಿ ಹತ್ತಬೇಕು, ಸೈಕಲ್‌ ಕೊಳ್ಳಬೇಕು ಎಂಬುದೇ ಜೀವನದ ಪ್ರಮುಖ ಕನಸಾಗಿತ್ತು. ಒಂದರ್ಥದಲ್ಲಿ ಸೀಮಿತ ಕನಸು ಇತ್ತು. ವಿಪರೀತ ಇರಲಿಲ್ಲ. ತಂಗಿಯರ ಮದುವೆ, ಮನೆ , ತೋಟ, ಹೊಸ ಅರಿವೆ ಇಂತವುಗಳೇ ದೊಡ್ಡ ಕನಸು. ಆದರೆ ಈಗ ಇವುಗಳು ತೀರ ಸಾಮಾನ್ಯವಾಗಿವೆ. ಹಾಗಿದ್ದರೂ ಇಂತಹ ಒಂದೊಂದು ಕನಸು ಈಡೇರಿದರೂ ಜೀವನವನ್ನೇ ಗೆದ್ದಷ್ಟು ಸಂತಸ ಪಡುತ್ತಿದ್ದರು.

ಈಗಿನ ತಲೆಮಾರಿನವರ ಕನಸೇನು?
ಈಗಿನ ತಲೆಮಾರಿನವರಿಗೆ ಹೊಸ ವಾಹನ ಕೊಳ್ಳುವುದು, ಮನೆ ಕೊಳ್ಳುವುದು, ಅತ್ಯುತ್ತಮ ಕೆಲಸ ಪಡೆಯುವುದು, ಮನವೊಪ್ಪುವವರನ್ನು ಅರಸುವುದು, ಹಣ ಮಾಡುವುದು, ಐಷಾರಾಮಿಯಾಗಿ ಬದುಕುವುದು, ದೇಶ-ವಿದೇಶ ಸುತ್ತುವುದು… ಹೇಳುತ್ತಾ ಹೋದರೆ ಎಲ್ಲೆ ಇಲ್ಲದ ಕನಸುಗಳಿವು. ಇಂತಹ ಕನಸು ಈಡೇರಿಸಿಕೊಳ್ಳುವವರು ಒಂದು ಕನಸು ಈಡೇರುವ ನಡು ನಡುವೆ ಎಲ್ಲ ಕನಸು ಮಿಶ್ರ ಮಾಡಿ ಆಲ್‌ ರೌಂಡರ್‌ ಆಗುವವರು ಇದ್ದಾರೆ. ಈ ನಡುವೆ ದೇಶಕ್ಕಾಗಿ ಕನಸು ಕಾಣುವವರು ಇದ್ದಾರೆಯೇ? ರಾಷ್ಟ್ರದ, ಪ್ರಕೃತಿಯ ರಕ್ಷಣೆ, ಏಳ್ಗೆ, ಇತರರ ಸಂತೋಷದ ಕನಸು ಕಾಣುವ ಯುವಕರಿದ್ದಾರೆಯೇ? ಎನ್ನುವುದು ಯಕ್ಷಪ್ರಶ್ನೆ.

Advertisement

ಮನೆಯ ನಾಲ್ಕುಗೋಡೆಯ ಒಳಗೆ ಪರದಾಡುವ ಮಹಿಳೆಯ ಕಾಲ ಈಗ ಮರೆಯಾಗಿದೆ. ಗೃಹಿಣಿ ಆದವಳಿಗೆ ಹೊರ ಕೆಲಸದಲ್ಲೂ ಪಾಲಿದೆ. ಇನ್ನು ಯುವ ಸಮೂಹದವರು ವಿದ್ಯಾಭ್ಯಾಸದ ಜೊತೆಗೆ ಕೌಶಲ ಅಭಿವೃದ್ಧಿ ಮಾಡಿಕೊಳ್ಳುತ್ತಾ ಆದಾಯ ಪಡೆಯುವ ಕನಸು ಬೆನ್ನಟ್ಟುತ್ತಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ಹೊಸ ಜನಾಂಗದ ಮುಖ್ಯ ಕನಸು ಹಣ ಸಂಪಾದನೆ, ಹೆಚ್ಚು ಪ್ರಚಾರದಲ್ಲಿ ಇರಲು ಬಯಸುವುದಾಗಿದೆ.

ಇಂದಿನ ತಲೆಮಾರು ಸಾಮಾಜಿಕ ಜಾಲತಾಣ ದಲ್ಲಿಯೇ ಮುಳುಗಿರುತ್ತದೆ. ಪ್ರಸಿದ್ದಿಗಾಗಿ ನಾನಾ ಅವತಾರಗಳನ್ನು ತಾಳುತ್ತಾರೆ. ಅಂತೆಯೇ ತಾವಂದುಕೊಂಡ ಕನಸು ಕೈ ಗೂಡದಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವ ಸೂಕ್ಷ್ಮ ಮನಸ್ಸುಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಇಂದು ತಂತ್ರಜ್ಞಾನಗಳು ಮಾನವನ ಕನಸಿಗೆ ಪೂರಕ ವಾತಾವರಣ ಕಲ್ಪಿಸುತ್ತಲಿದೆ.

ಟೆಕ್ನಾಲಜಿಯಿಂದ ಕನಸು
ಕನಸಿಗೂ ಒಂದು ತಂತ್ರಜ್ಞಾನದ ಆಯಾಮ ಸಿಕ್ಕಿದೆ. ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಆದ ಕಾರಣದಿಂದಲೇ ಬಹುಮುಖ ಆಯಾಮದಲ್ಲಿ ಮಾನವ ಚಿಂತಿಸುತ್ತಾನೆ. ಒಬ್ಬ ವ್ಯಕ್ತಿಗೆ ಅನೇಕ ಪ್ರತಿಭೆ ಇದ್ದರೆ ಈಗ ಎಲ್ಲ ಆಯಾಮದಲ್ಲಿಯೂ ಸಾಗಲೂಬಹುದು. ಒಂದರ್ಥದಲ್ಲಿ ವಿವಿಧ ಆಯಾಮದಲ್ಲಿ ಕನಸು ಸೃಷ್ಟಿ ಆಗುತ್ತಲೇ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಾಯುವ ಅಗತ್ಯವಿಲ್ಲ. ಅಂತರ್ಜಾಲ ಸಂಪರ್ಕ ಬಂದ ಮೇಲಂತೂ ಸಾಮಾಜಿಕ ಜಾಲತಾಣದಲ್ಲಿ ಎಲೆ ಮರಿ ಕಾಯಿಯಂತೆ ಮರೆಯಾಗುತ್ತಿದ್ದವರು ಟಿವಿ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದಾರೆ.

ಕೆಟ್ಟ ಚಟಗಳ ಕನಸು
ಕೆಟ್ಟ ಚಟಗಳು ಈಡೇರಿಕೆಯೂ ಕನಸಾಗಿದ್ದರೆ?. ಆದರೆ ಸಿನೆಮಾದಲ್ಲಿ ತಿಳಿಸಿದಂತೆ ದೊಡ್ಡ ಡಾನ್‌ ಆಗಬೇಕು. ಕೆಟ್ಟದ್ದನ್ನು ಮಾಡಿ ಉನ್ನತ ಮಟ್ಟಕ್ಕೆ ಬರಬೇಕೆಂಬ ಹಂಬಲ ಇರುವುದು ಕಡಿಮೆ. ಆದರೆ ಕೆಲವು ಅನಿವಾರ್ಯ ಕಾರಣದಿಂದ ಇಂತಹ ಕೆಟ್ಟ ಚಟಗಳಿಗೆ, ಕೆಟ್ಟದಾರಿ ತುಳಿದವರಿಗೆ ಹೊರ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಬಹುದು. ಸೋಷಿಯಲ್‌ ಮೀಡಿಯದಾಲ್ಲಿ ಇನ್ವಿನ್ಸಿಬಲ್‌ ಆಗಲು ಹೋಗಿ ಮುಂದೆ ಜೈಲು ಸೇರಲೂ ಬಹುದು.

ಇಂದು ಮನಸ್ಸು ಹಿಡಿತದಲ್ಲಿ ಇರಿಸುವುದು ದೊಡ್ಡ ಸಮಸ್ಯೆ. ಈ ಮನಸ್ಸು ಚಂಚಲವಾಗಿರುವುದೇ ದೊಡ್ಡ ಕನಸು ಅರಸುವವರಿಗೆ ಸಮಸ್ಯೆ. ಹಾಗಾಗಿ ನಮ್ಮ ಯಾವುದೇ ಕನಸಿನ ಸರಿ ತಪ್ಪು, ಒಳಿತು- ಕೆಡುಕುಗಳ ಯೋಚನಾ ಸಾಮರ್ಥ್ಯ ನಮ್ಮಲ್ಲಿ ಬೆಳೆಸಿಕೊಳ್ಳಬೇಕು. ಇದಕ್ಕೆ ಹಿರಿಯರ , ಅನುಭವಸ್ಥರ ಮಾರ್ಗದರ್ಶನ ಕೂಡ ಬಹಳ ಮುಖ್ಯ. ಒಟ್ಟಾರೆಯಾಗಿ ಎಲ್ಲೆ ಇಲ್ಲದ ಕನಸುಗಳೇ ಇಂದು ಜಗತ್ತನ್ನು ಆಳುತ್ತಿದ್ದು ಹೊಸ ತಲೆಮಾರಿನವರಿಗೂ ಇದು ಸಾಧನೆಯ ಹಾದಿಯಾಗಿದೆ.

*ರಾಧಿಕಾ , ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next