Advertisement

30 ರಂದು ಡಾ|ಮಹಾಂತ ಸ್ವಾಮೀಜಿ ಜಯಂತ್ಯುತ್ಸವ 

04:57 PM Sep 24, 2021 | Team Udayavani |

ದಾವಣಗೆರೆ: ಲಿಂಗಾಯತ ಪಂಚಮಸಾಲಿ ಜಗದ್ಗುರು ಡಾ| ಮಹಾಂತ ಮಹಾಸ್ವಾಮಿಯವರ ಜಯಂತ್ಯುತ್ಸವ, ಲಿಂಗಾಯತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ಅಭಿಯಾನ, ಯುವ ಘಟಕ ರಾಜ್ಯ ಅಧ್ಯಕ್ಷರ ಪದಗ್ರಹಣ ಸಮಾರಂಭ ಸೆ. 30 ರಂದು ದಾವಣಗೆರೆಯ ತ್ರಿಶೂಲ್‌ ಕಲಾಭವನದಲ್ಲಿ ನಡೆಯಲಿದೆ ಎಂದು ಅಖೀಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ತಿಳಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಅಖೀಲ ಭಾರತ ಲಿಂಗಾಯತ ಸಮಾಜದ ಜಗದ್ಗುರು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಸುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಪ್ರತಿಜ್ಞಾ ಪಂಚಾಯತ್‌ ಅಭಿಯಾನ ನಡೆಯಲಿದೆ. ಇದೇ ಸಂದರ್ಭದಲ್ಲಿ ರಾಜ್ಯ ಯುವ ಘಟಕದ ನೂತನ ಅಧ್ಯಕ್ಷ, ಮಾಜಿ ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದರು.

Advertisement

ಅಂದು ಮಧ್ಯಾಹ್ನ 3ಕ್ಕೆ ದಾವಣಗೆರೆಗೆ ಆಗಮಿಸುವ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಹಾತ್ಮಗಾಂಧಿ ವೃತ್ತದವರೆಗೆ 5 ಸಾವಿರ ಬೈಕ್‌ ಗಳೊಂದಿಗೆ ಸ್ವಾಗತಿಸಲಾಗುವುದು. ಮಹಾತ್ಮಗಾಂಧಿ ವೃತ್ತದಿಂದ ವೇದಿಕೆ ಕಾರ್ಯಕ್ರಮ ನಡೆಯುವ ತ್ರಿಶೂಲ್‌ ಕಲಾಭವನದವರೆಗೆ ವಾದ್ಯಮೇಳಗಳೊಂದಿಗೆ ಸ್ವಾಮೀಜಿಯವರನ್ನ ಕರೆತರಲಾಗುವುದು. ಶ್ರೀಶೈಲ, ಐರಣಿ, ಹೊನ್ನಾಳಿ ಹಿರೇಕಲ್ಮಠದ ಆನೆಗಳು ಸಹ ಭಾಗವಹಿಸಲಿವೆ. ಸಂಜೆ 5ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌, ಶಾಸಕ ಬಸನಗೌಡ ಯತ್ನಾಳ್‌, ಸ್ವಾಮೀಜಿಗಳು, ಗಣ್ಯರು ಭಾಗವಹಿಸುವರು. 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಅಖೀಲ ಭಾರತ ಲಿಂಗಾಯತ ಸಮಾಜದ ಜಗದ್ಗುರು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಜ.14 ರಿಂದ ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ 718 ಕಿಲೋಮೀಟರ್‌ ಪಾದಯಾತ್ರೆ ನಡೆಸಲಾಗಿತ್ತು. 10 ಲಕ್ಷ ಜನರ ಬೃಹತ್‌ ಸಮಾವೇಶ ಆಯೋಜಿಸಲಾಗಿತ್ತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 23 ದಿನಗಳ ಧರಣಿ ಕೈಗೊಳ್ಳಲಾಗಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು 6 ತಿಂಗಳಲ್ಲಿ ಬೇಡಿಕೆ ಈಡೇರಿಸುವ ಸಕಾರಾತ್ಮಕ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಧರಣಿ ಹಿಂಪಡೆಯಲಾಗಿದೆ. ಸರ್ಕಾರ ನೀಡಿದ್ದ ಗಡುವು ಸೆ. 15ಕ್ಕೆ ಮುಕ್ತಾಯಗೊಂಡಿದೆ. ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮದೊಳಗೆ ಸರ್ಕಾರ ಬೇಡಿಕೆ ಈಡೇರಿಸುವ ನಿರೀಕ್ಷೆ ಇದೆ. ಇಲ್ಲದಿದ್ದಲ್ಲಿ ಅ.1 ರಿಂದ ಮತ್ತೆ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾಧ್ಯಕ್ಷ ಆರ್‌.ವಿ. ಅಶೋಕ್‌ ಗೋಪನಾಳ್‌, ನಗರಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್‌, ಪ್ರಭು ಕಲುºರ್ಗಿ, ಎಸ್‌. ಓಂಕಾರಪ್ಪ, ಮಹಾಂತೇಶ್‌ ಒಣರೊಟ್ಟಿ, ಟಿ. ಶಂಕರಪ್ಪ, ನಂಜಪ್ಪ, ಸೋಗಿ ಮುರುಗೇಶ್‌, ಜಯಪ್ರಕಾಶ್‌ ಸತ್ತೂರು, ಪ್ರಶಾಂತ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next