Advertisement

KKRDB ಅಧ್ಯಕ್ಷರಾಗಿ ಡಾ.‌ಅಜಯ್ ಸಿಂಗ್ ನೇಮಕ ; ಗೊಂದಲಕ್ಕೆ ತೆರೆ

07:59 PM Aug 10, 2023 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ (KKRDB) ಮಂಡಳಿ ಅಧ್ಯಕ್ಷರಾಗಿ ಜೇವರ್ಗಿ ಮತಕ್ಷೇತ್ರದ ಶಾಸಕ ಡಾ.‌ಅಜಯ್  ಸಿಂಗ್ ನೇಮಕವಾಗಿದ್ದಾರೆ. ಇವರ ನೇಮಕ ಮುಖಾಂತರ ನಿಗಮ ಮಂಡಳಿಗಳಿಗೆ ನೇಮಕಕ್ಕೆ ಚಾಲನೆ ನೀಡಿದಂತಾಗಿದೆ.

Advertisement

ಕೆಕೆಆರ್ ಡಿಬಿ ಅಧ್ಯಕ್ಷರನ್ನಾಗಿ ಸಚಿವರು ಇಲ್ಲವೇ ಶಾಸಕರನ್ನು ನೇಮಕ ಮಾಡಬೇಕು ಎಂಬ ಗೊಂದಲದ ನಡುವೆ ಶಾಸಕ ಡಾ.‌ಅಜಯ್ ಸಿಂಗ್ ಅವರನ್ನು ನೇಮಕ ಮಾಡುವ ಮೂಲಕ ತೆರೆ ಎಳೆಯಲಾಗಿದೆ.

ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಕೆಕೆಆರ್ ಡಿಬಿ ಮಂಡಳಿಗೆ ಸಚಿವರನ್ನಾಗಿ ನೇಮಕ ಮಾಡಲಾಗಿದ್ದರೆ, ತದನಂತರ ಬಿಜೆಪಿ ಸರ್ಕಾರ ತಿದ್ದುಪಡಿ ತಂದು ಮಂಡಳಿಗೆ ಸಚಿವರ ಬದಲು ಶಾಸಕರು ಅಧ್ಯಕ್ಷರಾಗುವ ನಿಟ್ಟಿನಲ್ಲಿ ತಿದ್ದುಪಡಿ ತರಲಾಗಿತ್ತು.‌ ಆದರೆ ರಾಜ್ಯದಲ್ಲಿ ಪ್ರಸ್ತುತವಾಗಿ ಕಾಂಗ್ರೆಸ್ ಸರ್ಕಾರ ಆಸ್ತಿತ್ವಕ್ಕೆ ಬರುತ್ತಿದ್ದಂತೆ ಮತ್ತೆ ಸಚಿವರೇ ಅಧ್ಯಕ್ಷರಾಗಬೇಕೆಂಬ ವಿಷಯ ಮುಂಚೂಣಿಗೆ ಬಂದಿತ್ತು.‌ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಮಂಡಳಿಗೆ ಈ ಹಿಂದೆ ಸಚಿವರಾಗಿದ್ದಾಗ ಅಧ್ಯಕ್ಷ ಸ್ಥಾನ ನಿಭಾಯಿಸಿದ ಹಿರಿಯ ಶಾಸಕ ಯಲಬುರ್ಗಾ ಕ್ಷೇತ್ರದ ಪ್ರತಿನಿಧಿ ಬಸವರಾಜ ರಾಯರೆಡ್ಡಿ ಅವರು ಈಚೆಗೆ ಸಚಿವರೇ ಅಧ್ಯಕ್ಷರಾಗುವುದು ಸೂಕ್ತ ಎಂದಿದ್ದರು.‌ ಆದರೆ ಬಿಜೆಪಿಯ ತಿದ್ದುಪಡಿ ಮುಂದುವರೆಸಿಕೊಂಡು ಶಾಸಕರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿ ಶಾಸಕರೇ ಅಧ್ಯಕ್ಷರಾಗುವುದನ್ನು ಮುಂದುವರೆಸಲಾಗಿದೆ.

ಜೇವರ್ಗಿ ಕ್ಷೇತ್ರದಿಂದ ಸತತ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಡಾ. ಅಜಯಸಿಂಗ್ ಮೊದಲ ಶಾಸಕರಾಗಿದ್ದಾಗ ದೆಹಲಿ ವಿಶೇಷ ಪ್ರತಿನಿಧಿಯಾಗಿ ಹಾಗೂ ಎರಡನೇ ಸಲ ಶಾಸಕರಾಗಿದ್ದಾಗ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಕೆಲಸ ಮಾಡಿದ್ದರು. ಈಗ ಕೆಕೆಆರ್ ಡಿಬಿ ಅಧ್ಯಕ್ಷರಾಗಿದ್ದಾರೆ. ಸಚಿವ ಸ್ಥಾನದ ತೀವ್ರ ಆಕಾಂಕ್ಷಿಯಾಗಿದ್ದ ಡಾ. ಅಜಯಸಿಂಗ್ ಅವರನ್ನು ಮಂಡಳಿ ಅಧ್ಯಕ್ಷರನ್ನಾಗಿಸಿ ಸಮಾಧಾನಪಡಿಸಲಾಗಿದೆ.

ನಾಲ್ಕು ದಿನಗಳ ಹಿಂದೆ ಕಲಬುರಗಿಯಲ್ಲಿ ನಡೆದ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡುವ ಸಮಾರಂಭದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು, ಕೆಕೆಆರ್ ಡಿಬಿಗೆ ಘೋಷಿತ ಐದು ಸಾವಿರ ಕೋ.ರೂ ಕೊಡಿ. ಜತೆಗೆ ಹಣ ಸಂಪೂರ್ಣ ಖರ್ಚಾಗಲು ಹಾಗೂ ಕಾರ್ಯಗಳಿಗೆ ವೇಗ ನೀಡಲು ಸಿಎಂ ಅವರೇ ಪರಿಶೀಲನೆ ನಡೆಸಬೇಕೆಂದು ಸಲಹೆ ನೀಡಿದ್ದರು. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.

Advertisement

ನಯಾ ಪೈಸೆ ಬಿಡುಗಡೆ ಇಲ್ಲ
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೆಕೆಆರ್ ಡಿಬಿ ಗೆ ನಯಾಪೈಸೆ ಬಿಡುಗಡೆಯಾಗಿಲ್ಲ. ಪ್ರಮುಖವಾಗಿ ಕ್ರಿಯಾ ಯೋಜನೆ ರೂಪಿಸಿಲ್ಲ ಜತೆಗೇ ಅನುಮೋದನೆ ಪಡೆಯಲು ಸಹ ಮುಂದಾಗಿಲ್ಲ. ಈ ಕಾರ್ಯ ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನೂತನ ಅಧ್ಯಕ್ಷರ ಮೇಲಿದೆ.

ಸಿಎಂ ಅಧ್ಯಕ್ಷತೆ ಸಭೆಯಲ್ಲಿ ಚರ್ಚೆ
ಮಂಗಳವಾರ ಬೆಂಗಳೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಕಲಬುರಗಿ ಜಿಲ್ಲೆಯ ಸಚಿವರ- ಶಾಸಕರ ಸಭೆಯಲ್ಲಿ ಕೆಕೆಆರ್ ಡಿಬಿ ಕುರಿತಾಗಿ ಚರ್ಚೆಯಾಗಿತ್ತು.‌ ಸಭೆಯಲ್ಲಿ ಅಧ್ಯಕ್ಷರನ್ನು ನೇಮಕ ಮಾಡುವ ಹಾಗೂ ಮಂಡಳಿ ಕಾರ್ಯದರ್ಶಿ ಅನಿರುದ್ಧ ಶ್ರವಣ ಮುಂದುವರೆಸುವ ನಿಟ್ಟಿನಲ್ಲಿ ಶಾಸಕರಿಂದ ಅಭಿಪ್ರಾಯ ವ್ಯಕ್ತವಾಗಿತ್ತು.‌ ಚರ್ಚೆಯಾದ ಮರುದಿನವೇ ನೇಮಕವಾಗಿದೆ.

ಸದಸ್ಯರೂ ನೇಮಕ
ಕೆಕೆಆರ್ ಡಿಬಿ ಗೆ ಮೊದಲು ಅಧ್ಯಕ್ಷರನ್ನು ನೇಮಕ ಮಾಡಿ ತದನಂತರ ಸದಸ್ಯರನ್ನು ನೇಮಕ ಮಾಡಲಾಗುತ್ತಿತ್ತು. ಆದರೆ ಅಧ್ಯಕ್ಷರ ಜತೆಗೇ ಈಗ ಸದಸ್ಯರ ನ್ನೂ ನೇಮಕ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಮಂಡಳಿಗೆ ರಾಜ್ಯಸಭಾ ಸದಸ್ಯರನ್ನು ಮಂಡಳಿಗೆ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಬಳ್ಳಾರಿಯ ಜಿಲ್ಲೆಯ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ ಹುಸೇನ್, ಉಳಿದಂತೆ ಶಾಸಕರಾದ ಕಲಬುರಗಿ ಜಿಲ್ಲೆಯ ಬಿ.ಆರ್.‌ಪಾಟೀಲ್, ಯಾದಗಿರಿ ಜಿಲ್ಲೆಯ ರಾಜಾ ವೆಂಕಟಪ್ಪ ನಾಯಕ, ಕೊಪ್ಪಳ ಜಿಲ್ಲೆಯ ಬಸವರಾಜ ರಾಯರೆಡ್ಡಿ, ರಾಯಚೂರು ಜಿಲ್ಲೆಯ ಹಂಪನಗೌಡ ಬಾದರ್ಲಿ, ಕೊಪ್ಪಳ ಜಿಲ್ಲೆಯ ರಾಘವೇಂದ್ರ ಹಿಟ್ನಾಳ, ಬಳ್ಳಾರಿ ಜಿಲ್ಲೆಯ ತುಕಾರಾಮ, ಹೊಸಪೇಟೆ ಜಿಲ್ಲೆಯ ಎಚ್. ಆರ್. ಗವಿಯಪ್ಪ, ವಿಧಾನ ಪರಿಷತ್ ಸದಸ್ಯರಾದ ಬೀದರ್ ನ ಅರವಿಂದ ಅರಳಿ ಹಾಗೂ ಕಲಬುರಗಿ ಜಿಲ್ಲೆಯ ತಿಪ್ಪಣ್ಣಪ್ಪ ಕಮಕನೂರ ಸದಸ್ಯರಾಗಿ ನೇಮಕವಾಗಿದ್ದಾರೆ.‌

Advertisement

Udayavani is now on Telegram. Click here to join our channel and stay updated with the latest news.

Next