Advertisement

ಬೆಂಗಳೂರು ಬಿಡಬೇಡಿ: ಮುಖ್ಯಮಂತ್ರಿ ಮನವಿ

09:43 PM Jul 06, 2020 | Sriram |

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದು ರಾಜಧಾನಿಯ ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ. ಯಾರೂ ಬೆಂಗಳೂರು ಬಿಟ್ಟು ಹೋಗುವ ತೀರ್ಮಾನ ಮಾಡಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋವಿಡ್ ಬಗ್ಗೆ ಆತಂಕಪಡಬೇಕಿಲ್ಲ. ರಾಜ್ಯ ಸರಕಾರದ ಮೇಲೆ ಭರವಸೆಯಿಡಿ. ಕೋವಿಡ್ ಪ್ರಕರಣಗಳು ಹೆಚ್ಚಾಗದಂತೆ ನಿಯಂತ್ರಣ ಕ್ರಮಗಳು ಹಾಗೂ ಸೋಂಕಿತರಿಗೆ ಸೂಕ್ತ ಚಿಕಿತ್ಸೆಗೆ ಸರಕಾರ ಈಗಾಗಲೇ ಎಲ್ಲ ರೀತಿಯ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

450 ಆ್ಯಂಬುಲೆನ್ಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ, 10 ಸಾವಿರ ಹಾಸಿಗೆಗಳನ್ನು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಸಿದ್ಧಪಡಿಸಲಾಗುತ್ತಿದೆ. ಕೋವಿಡ್‌ ಕೇರ್‌ ಸೆಂಟರ್‌, ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಕಾರ್ಯನಿರ್ವಹಣೆ ಬಗ್ಗೆಯೂ ನಿಗಾ ವಹಿಸಲಾಗಿದೆ. ಜನತೆ ಸರಕಾರದ ಮೇಲೆ ನಂಬಿಕೆ ಇಡಬೇಕು ಎಂದು ಹೇಳಿದರು.

ರಾಜಧಾನಿಯಿಂದ ಜನ ತಮ್ಮೂರಿಗೆ ತೆರಳುತ್ತಿರುವುದು ಹೆಚ್ಚುತ್ತಿದ್ದಂತೆ, ಎಚ್ಚತ್ತುಕೊಂಡಿರುವ ನಗರದ ಜನಪ್ರತಿನಿಧಿಗಳು ಕೋವಿಡ್ ನಿಗ್ರಹಕ್ಕೆ ಕೆಲ ದಿನಗಳ ಮಟ್ಟಿಗೆ ಲಾಕ್‌ಡೌನ್‌ ಜಾರಿ ಅಥವಾ ಶನಿವಾರ ಮತ್ತು ಭಾನುವಾರ ಲಾಕ್‌ಡೌನ್‌ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಿತ್ಯ ಸಾವಿರ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗುತ್ತಿದ್ದು ಕಂಟೈನ್ಮೆಂಟ್‌ ಹಾಗೂ ಸೀಲ್‌ಡೌನ್‌ ಪ್ರದೇಶಗಳ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

Advertisement

ವಾರದಲ್ಲಿ ಎರಡು ದಿನ ಲಾಕ್‌ಡೌನ್‌ ಜಾರಿಗೊಳಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ನಗರ ಕೋವಿಡ್ ಉಸ್ತುವಾರಿಯೂ ಆಗಿರುವ ಕಂದಾಯ ಸಚಿವ ಆರ್‌.ಅಶೋಕ್‌ ಸೋಮವಾರ ನಡೆಸಿದ ಸಭೆಯಲ್ಲಿ ಪ್ರಸ್ತಾಪವಾಯಿತು. ಬಿಜೆಪಿ ಶಾಸಕರಷ್ಟೇ ಅಲ್ಲದೆ ಕಾಂಗ್ರೆಸ್‌ ಶಾಸಕರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯ ಸರ್ಕಾರದ ಮುಂದೆ ಮತ್ತೆ ಲಾಕ್‌ಡೌನ್‌ ಮಾಡುವ ಪ್ರಸ್ತಾವನೆ ಇಲ್ಲ. ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ವಾರದಲ್ಲಿ ಎರಡು ದಿನ ಲಾಕ್‌ಡೌನ್‌ ಬಗ್ಗೆ ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಪ್ರಸ್ತಾಪ ಮಾಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಅಶೋಕ್‌ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ತೀರಾ ತುರ್ತು ಹೊರತುಪಡಿಸಿ ಬೆಂಗಳೂರಿಗೆ ಹೊರ ಜಿಲ್ಲೆಗಳಿಂದ ಬರುವವರನ್ನು ಹಾಗೂ ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಹೋಗುವುದು ನಿಷೇಧಿಸಬೇಕು. ಅಂತರ ಜಿಲ್ಲೆ ಹಾಗೂ ರಾಜ್ಯಗಳ ನಡುವೆ ಸಂಚಾರ, ಓಡಾಟಕ್ಕೆ ಅವಕಾಶ ಕೊಟ್ಟ ಬಳಿಕವೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಅದಕ್ಕೆ ಕಡಿವಾಣ ಹಾಕಬೇಕು ಎಂಬ ಸಲಹೆಯೂ ಕೇಳಿಬಂದಿತು ಎಂದು ಹೇಳಲಾಗಿದೆ.

ಅನ್ಯ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್‌
ಇದೇ ಸಂದರ್ಭದಲ್ಲಿ ಹೊರ ರಾಜ್ಯಗಳಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್‌ ಕೈ ಬಿಟ್ಟಿರುವ ರಾಜ್ಯ ಸರ್ಕಾರ ಯಾವುದೇ ರಾಜ್ಯದಿಂದ ಬಂದರೂ ಹದಿನಾಲ್ಕು ದಿನ ಹೋಂ ಕ್ವಾರಂಟೈನ್‌ ಕಡ್ಡಾಯಗೊಳಿಸಿ ಸರ್ಕಾರ ಆದೇಶ ನೀಡಿದೆ.

ಈ ಮೊದಲು ಮಹಾರಾಷ್ಟ್ರದಿಂದ ಬಂದವರಿಗೆ ಏಳು ದಿನ ಸಾಂಸ್ಥಿಕ ಹಾಗೂ ಏಳು ದಿನ ಹೋಂ ಕ್ವಾರಂಟೈನ್‌ ಮಾಡಲಾಗುತ್ತಿತ್ತು.ಆದರೆ, ತಮಿಳುನಾಡು ಹಾಗೂ ದೆಹಲಿಯಿಂದ ಬಂದವರಿಗೆ ಮೂರು ದಿನ ಸಾಂಸ್ಥಿಕ ಹಾಗೂ ಹನ್ನೊಂದು ದಿನ ಹೋಂ ಕ್ವಾರಂಟೈನ್‌ ಕಡ್ಡಾಯವಾಗಿತ್ತು. ಮೊದಲು ದೆಹಲಿ ಹಾಗೂ ತಮಿಳುನಾಡಿನಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್‌ತೆಗೆದು ಹಾಕಿದ್ದ ಸರ್ಕಾರ ಇದೀಗ ಮಹಾರಾಷ್ಟ್ರದಿಂದ ಬಂದವರಿಗೂ ಸಾಂಸ್ಥಿಕ ಕ್ವಾರಂಟೈನ್‌ ತೆಗೆದುಹಾಕಿದೆ.

ಮಹಾರಾಷ್ಟ್ರ ಸೇರಿ ಯಾವುದೇ ರಾಜ್ಯದಿಂದ ಬಂದರೂ ಹದಿನಾಲ್ಕು ದಿನ ಹೋಂ ಕ್ವಾರಂಟೈನ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ಪ್ರಸಾದ್‌ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next