Advertisement

ಶೂಟೌಟ್‌ ಪದ ಬಳಕೆ ದೊಡ್ಡದು ಮಾಡಬೇಡಿ: ಸಿಎಂ

06:50 AM Dec 27, 2018 | Team Udayavani |

ಬೆಂಗಳೂರು: ಮದ್ದೂರಿನ ಜೆಡಿಎಸ್‌ ಮುಖಂಡ ಪ್ರಕಾಶ್‌ ಹಂತಕರನ್ನು ಸ್ಮೋಕ್‌ ಔಟ್‌ ಮಾಡಿ ಎಂದು ಹೇಳುವ ಬದಲು
ಭಾವಾವೇಶದಲ್ಲಿ ಶೂಟೌಟ್‌ ಮಾಡಿ ಎಂಬ ಪದ ಬಳಸಿದ್ದೇನೆ. ಅದನ್ನೇ ದೊಡ್ಡದು ಮಾಡುವುದು ಸರಿಯಲ್ಲ ಎಂದು
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೊಲೀಸ್‌ ಇಲಾಖೆಗೆ ಹೊಸದಾಗಿ 911 ಗಸ್ತು ದ್ವಿಚಕ್ರ ವಾಹನಗಳನ್ನು ಹಸ್ತಾಂತರಿಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು. “ನಾನು ಭಾವುಕ ಮನುಷ್ಯ. ಹಾಗಾಗಿ ಆ ಸಂದರ್ಭದಲ್ಲಿ ಹಾಗೆ ಮಾತನಾಡಿದ್ದೆ. ಪದ ಬಳಕೆ ತಪ್ಪಾಗಿದೆ. ಬೇಕಂತಲೇ ನಾನು ಪದ ಬಳಕೆ ಮಾಡಿಲ್ಲ. ಈ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಆದರೂ, ಬಿಜೆಪಿ ನಾಯಕರು ಇದನ್ನು ವಿವಾದ ಮಾಡುತ್ತಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ರೈತರ ಮೇಲೆ ಹಾವೇರಿಯಲ್ಲಿ ಗೋಲಿಬಾರ್‌ ಮಾಡಲಾಗಿತ್ತು. ಆಗ ಬಿಜೆಪಿ ನಾಯಕರು ಚಕಾರ ಎತ್ತಿರಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೂಂಡಾಗಳ ನಾಯಕ: ಕುಮಾರಸ್ವಾಮಿ ಗೂಂಡಾಗಳ ನಾಯಕ. ಈ ಹಿಂದೆ 22 ಜನ ಹಿಂದೂ ಯುವಕರ ಹತ್ಯೆಯಾದಾಗ ಯಾವುದೇ ರೀತಿಯ ಹೇಳಿಕೆ ಕೊಡಲಿಲ್ಲ. ಈಗ ತಮ್ಮ ಸ್ನೇಹಿತ, ಜೆಡಿಎಸ್‌ ಮುಖಂಡ ಹತ್ಯೆಯಾದರೆ ಶೂಟೌಟ್‌ ಮಾಡಿ ಎಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಹೇಳಿದ್ದು ಶೋಭೆ ತರುವಂಥದಲ್ಲ ಎಂದು ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ಬಾಗಲಕೋಟೆಯಲ್ಲಿ ಕಿಡಿ ಕಾರಿದರು.

ಸಿಎಂ ವಿರುದ್ಧ ದೂರು: ಮುಖ್ಯಮಂತ್ರಿಯವರು ಶೂಟೌಟ್‌ ಪದ ಬಳಸಿರುವುದನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತ
ಟಿ.ನರಸಿಂಹಮೂರ್ತಿ ಎಂಬುವರು ಬೆಂಗಳೂರಿನಲ್ಲಿ ಬುಧವಾರ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಡಿ.24ರಂದು ಮದ್ದೂರಿನ ಜೆಡಿಎಸ್‌ ಮುಖಂಡ ಪ್ರಕಾಶ್‌ ಅವರ ಹತ್ಯೆ ಸಂಬಂಧ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಕೊಲೆಗೈದ ದುಷ್ಕರ್ಮಿಗಳ ಮೇಲೆ ಶೂಟೌಟ್‌ ಮಾಡಿ ಎಂದು ಪೊಲೀಸರಿಗೆ ಕರೆ ನೀಡಿದ್ದಾರೆ.

ಜತೆಗೆ, ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಮುಖ್ಯಮಂತ್ರಿಯವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಎಚ್ಚರಿಕೆ ವಹಿಸಬೇಕು. ಜವಾಬ್ದಾರಿ ಸ್ಥಾನದಲ್ಲಿರುವ ಅವರ ಶೂಟೌಟ್‌ ಹೇಳಿಕೆಯಿಂದ ಸಮಾಜದಲ್ಲಿ ಕೆಟ್ಟ ಪರಿಣಾಮ ಬೀರಲಿದೆ. ಅಲ್ಲದೆ, ಪೊಲೀಸ್‌ ತನಿಖೆಯ ದಿಕ್ಕು ತಪ್ಪಿಸಿದಂ ತಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Advertisement

ವೇತನ, ಭತ್ಯೆ ಪರಿಷ್ಕರಣೆ ಸುಳಿವು ನೀಡಿದ ಸಿಎಂ
ಬೆಂಗಳೂರು: ರಾಜ್ಯ ಪೊಲೀಸರಿಗೆ ಹೊಸ ವರ್ಷದಲ್ಲಿ ಅವರ ಬಹುದಿನಗಳ ಬೇಡಿಕೆ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಕೆಳ ಹಂತದ ಪೊಲೀಸರು ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಅವರಿಗೆ ಮತ್ತು 
ಅವರ ಕುಟುಂಬ ವರ್ಗಕ್ಕೆ ಸೌಲಭ್ಯ ಕಲ್ಪಿಸುವ ಸಂಬಂಧ ಸರ್ಕಾರಕ್ಕೆ ಹಲವು ವರದಿಗಳು ಸಲ್ಲಿಕೆಯಾಗಿವೆ. ಈ ವರದಿಗಳನ್ನೆಲ್ಲಾ ಪರಿಗಣಿಸಿ ಪೊಲೀಸ್‌ ಸಿಬ್ಬಂದಿಗೆ ಹೊಸ ವರ್ಷದ ಉಡುಗೊರೆ ಕೊಡಲಾಗುವುದು ಎಂದು ಹೇಳಿದರು. ವಿಧಾನಸೌದ ಮುಂಭಾಗದಲ್ಲಿ
ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಬೆಳೆಯುತ್ತಿದ್ದು ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್‌ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next