Advertisement

“ಪತ್ರ ಬರೆಯುವುದಲ್ಲ, ಧೈರ್ಯವಿದ್ದರೆ ಬಹಿರಂಗ ಹೇಳಿಕೆ ನೀಡಿ’

11:41 PM Mar 13, 2020 | Lakshmi GovindaRaj |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಮರ್ಥ ನಾಯಕತ್ವದಲ್ಲಿ ನಾವು ಸಾಗುತ್ತಿದ್ದೇವೆ. ಸರ್ಕಾರ ಅಥವಾ ಯಾವುದೇ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ. ನಾಯಕತ್ವ ಬದಲಾವಣೆಯ ಪ್ರಸ್ತಾವನೆಯೂ ಇಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದರು.

Advertisement

“ಉದಯವಾಣಿ’ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ ಸೇರಿದಂತೆ ಮುಖ್ಯಮಂತ್ರಿ ಕುಟುಂಬದ ಯಾರೂ ಕೂಡ ಸರ್ಕಾರ ಅಥವಾ ಇಲಾಖೆಯ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಈ ಬಗ್ಗೆ ಆರೋಪ ಮಾಡುವವರು ಪತ್ರ ಬರೆಯುವ ಬದಲು, ಧೈರ್ಯದಿಂದ ಬಹಿರಂಗವಾಗಿ ಹೇಳಿಕೆ ನೀಡಲಿ ಎಂದು ಸವಾಲು ಹಾಕಿದರು.

ಸರ್ಕಾರದ ವಿರುದ್ಧ ಆರೋಪ ಮಾಡುವವರು ಧೈರ್ಯದಿಂದ ಹೆಸರು ಹೇಳಿಕೊಂಡು ಮುಂದೆ ಬರಬೇಕು. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಸಂಬಂಧ ಪತ್ರದ ಮೂಲಕ ಅಸ್ಥಿರತೆ ಉಂಟು ಮಾಡಲು ಸಾಧ್ಯವಿಲ್ಲ. ನಿಜವಾಗಿಯೂ ಅವರಿಗೆ ಧೈರ್ಯವಿದ್ದರೆ ಬಹಿರಂಗವಾಗಿ ಹೇಳಿಕೆ ನೀಡಲಿ. ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ. ಅಧಿಕಾರದಲ್ಲಿರುವವರ ಬಗ್ಗೆ ಹಗುರವಾಗಿ ಮಾತನಾಡುವುದು, ಅಪಪ್ರಚಾರ ಮಾಡುವುದು ಸಹಜ. ಇಂತವರ ವಿರುದ್ಧ ತನಿಖೆ, ದೂರು ನೀಡುವುದು ಸರ್ಕಾರಿ ಮಟ್ಟದಲ್ಲಿ ನಡೆಯುತ್ತಿರುತ್ತದೆ ಎಂದು ಎಚ್ಚರಿಕೆ ನೀಡಿದರು.

ಪರ್ಯಾಯ ನಾಯಕತ್ವದ ವಿಚಾರವಿಲ್ಲ: ಬಿ.ಎಸ್‌.ಯಡಿಯೂರಪ್ಪ ಅವರು ನಮ್ಮ ನಾಯಕರಿರುವಾಗ ಪರ್ಯಾಯ ನಾಯಕತ್ವದ ವಿಚಾರದ ಅಗತ್ಯವೇ ಇಲ್ಲ. ನರೇಂದ್ರ ಮೋದಿಯವರು ಮಾಸ್‌ ನಾಯಕರಿದ್ದಾರೆ. ಅವರ ನಂತರ ಯಾರು ಎಂಬುದನ್ನು ಈಗ ವಿಚಾರ ಮಾಡಲು ಸಾಧ್ಯವಿಲ್ಲ. ವಾಜಪೇಯಿಯವರು ಇದ್ದಾಗ ಮುಂದೆ ಯಾರು ಎಂಬುದು ಚರ್ಚೆಯಾಗಿಲ್ಲ. ನಂತರ ಮೋದಿಯವರು ವಿಶ್ವನಾಯಕರಾಗಿ ಬೆಳೆದರು.

ಈಗ ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಅವರು ಇದ್ದಾರೆ. ಮುಂದಿನ ಮೂರುವರೆ ವರ್ಷಗಳ ಕಾಲ ನಮ್ಮ ಸರ್ಕಾರ ಇರಲಿದೆ. ಹೀಗಾಗಿ, ನಾಯಕತ್ವ ಬದಲಾವಣೆಯ ಚರ್ಚೆಯೇ ಇಲ್ಲ. ವೈಯಕ್ತಿಕವಾಗಿ ಅವರು ಬರುತ್ತಾರೆ, ಇವರು ಬರುತ್ತಾರೆ ಎನ್ನುವುದು ಸರಿಯಲ್ಲ. ಬಿಎಸ್‌ ಯಡಿಯೂರಪ್ಪ ಬಿಟ್ಟು ಬೇರೆ ಯಾರು ಎಂಬುದರ ಕಲ್ಪನೆಯನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಮರ್ಥ ಸರ್ಕಾರ ಮತ್ತು ಉತ್ತಮ ಆಡಳಿತ ನಡೆಯುತ್ತಿದೆ. ದೃಢ ನಿರ್ಧಾರದ ಕೆಲವೊಂದು ಕಾರ್ಯಕ್ರಮಗಳನ್ನು ಅವರು ಕೈಗೊಂಡಿದ್ದಾರೆ. ಮಂತ್ರಿಯಾಗಿಲ್ಲ ಅಥವಾ ಇನ್ನಾವುದೋ ಕಾರಣಕ್ಕೆ ಸಣ್ಣಪುಟ್ಟ ಅಸಮಾಧಾನಗಳು ಇರುವುದು ಸಾಮಾನ್ಯ. ಅದೆಲ್ಲವನ್ನು ಹೊರತುಪಡಿಸಿ, ಸರ್ಕಾರ ಸದೃಢವಾಗಿದೆ. ಜನಪರ ಯೋಜನೆಗಳನ್ನು ಜನ ಸದಾ ನೆನೆಯುತ್ತಿರುತ್ತಾರೆ ಎಂದರು.

ಬಿಜೆಪಿ ಅಥವಾ ಸರ್ಕಾರದಲ್ಲಿ ಹೊಸ ಮತ್ತು ಹಳೇ ಸಚಿವರೆಂಬ ಯಾವುದೇ ತಾರತಮ್ಯವಿಲ್ಲ. ಈಗ ಸಚಿವರಾಗಿರುವವರು ನಮ್ಮ ಜತೆ ಸೇರಿಕೊಂಡಿದ್ದಾರೆ ಮತ್ತು ಅತ್ಯಂತ ಅಲ್ಪಾವಧಿಯಲ್ಲಿ ಅವರು ನಮ್ಮವರಾಗಿ ಬಿಟ್ಟಿದ್ದಾರೆ. ಎಲ್ಲಾ ಕಾರ್ಯಕರ್ತರನ್ನು ಸಮಾನವಾಗಿ ಕಾಣುತ್ತಿದ್ದಾರೆ. ಹೊಸ ಅಥವಾ ಹಳೇ ಸಚಿವರೆಂಬುದು ಇಲ್ಲವೇ ಇಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ಅಸಮರ್ಥವಾಗಿದೆ: ಕಾಂಗ್ರೆಸ್‌ನವರೆ ರಾಜೀನಾಮೆ ಕೊಟ್ಟು ಬಂದರೆ ಅದಕ್ಕೆ ಬಿಜೆಪಿ ಹೊಣೆಯಲ್ಲ. ಕಾಂಗ್ರೆಸ್‌ ಮತ್ತು ಕಾಂಗ್ರೆಸ್‌ ಪಕ್ಷದ ದೌರ್ಬಲ್ಯವೇ ಇದಕ್ಕೆ ಕಾರಣ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗದೇ ಇರುವುದು ಕಾಂಗ್ರೆಸ್‌ನ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದರು.

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಮಂತ್ರಿ, ನಂತರ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಈಗ ಸಚಿವನಾಗಿದ್ದರೂ ನನ್ನ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಿಂದೆ ಹೇಗೆ ಇದ್ದೆನೋ, ಹಾಗೆಯೇ ಸೌಮ್ಯ ಹಾಗೂ ಸರಳವಾಗಿ ಈಗಲೂ ಇದ್ದೇನೆ.
-ಜಗದೀಶ್‌ ಶೆಟ್ಟರ್‌, ಕೈಗಾರಿಕೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next