Advertisement

ದೀಪಾವಳಿ ಹಬ್ಬದ ವಿಶೇಷ: ಕ್ಷತ್ರೀಯ ಕೊಮಾರಪಂತ ಸಮಾಜದ ‘ಹೊಂಡೆಯಾಟ’

07:16 PM Nov 05, 2021 | Team Udayavani |

ಅಂಕೋಲಾ: ಶೌರ್ಯದ ಪ್ರತೀಕ, ಸೌಹಾರ್ದತೆಯ ಸಂಕೇತವಾಗಿ ದೀಪಾವಳಿ ಹಬ್ಬದ ಬಲಿಪಾಡ್ಯಮಿಯಂದು ಕರಾವಳಿ ಭಾಗದ ಅಂಕೋಲಾದಲ್ಲಿ ಕ್ಷತ್ರೀಯ ಕೊಮಾರಪಂತ ಸಮಾಜದವರು ಪಾರಂಪರಿಕವಾಗಿ ಆಚರಿಸಲಾಗುವ ಹೊಂಡೆ ಹಬ್ಬವು ಪಟ್ಟಣದಲ್ಲಿ ರೋಮಾಂಚನಕಾರಿಯಾಗಿ ನಡೆಯಿತು.

Advertisement

ಕರಾವಳಿ ಪ್ರದೇಶದಲ್ಲಿ ಪ್ರತಿಯೊಂದು ಹಬ್ಬಗಳಿಗೆ ಭಿನ್ನವಾದ ವಿಶೇಷತೆಗಳಿದ್ದು ಎಲ್ಲಾ ಹಬ್ಬಗಳನ್ನು ಸಂಪ್ರದಾಯದಂತೆ ಆಚರಿಸುತ್ತಾ ಬಂದಿರುತ್ತಾರೆ. ಅದರಂತೆ ದೀಪಾವಳಿ ಹಬ್ಬದಲ್ಲಿಯು ವಿಶೇಷತೆಗಳಿವೆ. ದಿಪಾವಳಿ ಹಬ್ಬದ ಬಲಿಪಾಡ್ಯಮಿಯಂದು ತಾಲೂಕಿನ ಕ್ಷತ್ರೀಯ ಕೋಮಾರಪಂಥ ಸಮಾಜದ ವಿಶಿಷ್ಠ ಆಚರಣೆಯ ಹಬ್ಬವೆ ಹೊಂಡೆ ಹಬ್ಬ.

ಕ್ಷತ್ತೀಯ ಕೋಮಾರಪಂತ ಸಮಾಜದವರ ವೀರತ್ವವನ್ನು ಮೆರದು ದೇಶ ಪ್ರೇಮಿಗಳಾಗಿದ್ದರು ಎನ್ನುವ ಐತಿಹಾಸಿಕ ನೆನಪಿಗಾಗಿ ಅಂಕೋಲಾದಲ್ಲಿ ಭಾವಾವೇಶವಾಗಿ ಯುದ್ದೋಪಾದಿಯಲ್ಲಿ ಎರಡು ಬಣಗಳು ಹೋರಾಡಿ ಆಚರಣೆ ಮಾಡುತ್ತಿರುವ ಈ ಹೊಂಡೆ ಹಬ್ಬ ನಗರದ ಶಾಂತಾದುರ್ಗಾ ದೇವಸ್ಥಾನದಿಂದ ಒಂದು ತಂಡ ಕುಂಬಾರ ಕೇರಿ ಕದಂಭೇಶ್ವರ ದೇವಸ್ಥಾನದಿಂದ ಇನ್ನೊಂದು ತಂಡ ಆಗಮಿಸಿ ಹಬ್ಬದ ಆಚರಣೆ ಮಾಡಲಾಗುತ್ತದೆ.

ಕೋಮಾರಪಂಥ ಸಮಾಜದವರು ಮೂಲತ: ಕ್ಷತ್ರೀಯ ವರ್ಗಕ್ಕೆ ಸೇರಿದವರಾಗಿದ್ದು, ಯುದ್ದದ ಸಂದರ್ಭದಲ್ಲಿ ಕೋಮಾರಪಂಥ ಸಮಾಜ ತನ್ನದೇ ಆದ ಕೊಡುಗೆ ನೀಡಿದ ಐತಿಹಾಸಿಕ ಹಿನ್ನಲೆಗಳಿವೆ. ಕೋಮಾರಪಂಥ ಸಮಾಜ ಅಂದು ನಾಡಿನ ರಕ್ಷಣೆಗೆ ಯುದ್ದದಲ್ಲಿ ತೋರಿದ ಸಾಹಸದ ಸಂಕೇತವಾಗಿ ಇಂದು ಪ್ರಸ್ತುತವಾಗಿ ಹಿಂಡಲಕಾಯಿAದ ಪರಸ್ಪರ ಹೊಡೆದಾಡುವದರ ಮೂಲಕ ತಮ್ಮ ಸಂಪ್ರದಾಯವನ್ನು ಅನಾವರಣಗೊಳಿಸುತ್ತಾರೆ. ಈ ಆಟದಲ್ಲಿ ಕೆಚ್ಚಿನ ಭೀಕರತೆ ಇದ್ದರು ಅದು ಸಮಾಜದ ಸೌಹಾರ್ದತೆಯ ಸಂಕೇತವಾಗಿರುತ್ತದೆ. ತನ್ಮೂಲಕ ಎಲ್ಲಾ ಸಮೂದಾಯದವರ ಸಾಮರಸ್ಯಕ್ಕೆ ಸಾಕ್ಷಿಯಾಗಿ ಹೊಂಡೆಯಾಟವು ಶತಶತಮಾನಗಳಿಂದ ನಡೆಯುತ್ತ ಬಂದಿದೆ.

Advertisement

ಈ ಹೊಂಡೆ ಹಬ್ಬದಲ್ಲಿ ಕೋಮಾರಪಂಥ ಸಮಾಜದ ಲಕ್ಷ್ಮೇಶ್ವರ ಹಾಗೂ ಹೊನ್ನೇಕೇರಿಯ ಊರಿನ ಎರಡು ತಂಡಗಳು ಪಾಲ್ಗೊಳ್ಳುತ್ತದೆ. ಕುಂಬಾರಕೇರಿಯ ಕಳಸದೇವಸ್ಥಾನದಿಂದ ಹೊರಟ ಲಕ್ಷ್ಮೇಶ್ವರ ತಂಡವು ವೀರಾವೇಶದಿಂದ ಹೊಂಡೆ ಹೊಂಡೆ ಎನ್ನುತ್ತಾ ಎದುರಾಳಿಯನ್ನು ಎದುರಿಸಲು ನಗರದ ಶ್ರೀ ಶಾಂತಾದುರ್ಗ ದೇವಸ್ಥಾನದ ಎದುರಿನಲ್ಲಿ ಹೊನ್ನೇಕೇರಿ ತಂಡದ ನಡುವೆ ಮುಖಾಮುಖಿಗೊಂಡು ಎರಡು ಗ್ರಾಮ ಹಿರಿಯರಿಂದ ಹೊಂಡೆ ಆಟಕ್ಕೆ ಚಾಲನೆ ದೊರೆಯುತ್ತದೆ.

ಈ ಹೊಂಡೆ ಹಬ್ಬದ ನಿಯಮದಂತೆ ಯಾವುದೇ ಕಾರಣಕ್ಕೆ ಮಂಡಿಯ ಕೆಳಭಾಗಕ್ಕೆ ಹೊಡೆಯಬೇಕೆನ್ನುವ ನಿಯಮ ಪಾಲಿಸಬೇಕಾಗುತ್ತದೆ. ಆದರೂ ಕೆಲವೊಮ್ಮೆ ಗುರಿಕಾರನ ಗುರಿತಪ್ಪಿ ಎದುರಾಳಿಯು ತೀವೃ ತರಹದ ಹೊಡೆತಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಇವುಗಳನ್ನು ನಿಯಂತ್ರಿಸಲು ಸಮಾಜದ ಮುಖಂಡರು ನಿರ್ಣಾಯಕರಾಗಿರುತ್ತಾರೆ. ಎರಡು ಪಂಗಡಗಳಲ್ಲಿ ಯಾರು ಸಮರ ವೀರರು ಎನ್ನುವುದನ್ನು ಈ ನಿರ್ಣಾಯಕರು ನಿರ್ಧರಿಸುತ್ತಾರೆ. ಹೊಂಡೆ ಹಬ್ಬದಲ್ಲಿ ಗೆದ್ದ ಪಂಗಡಕ್ಕೆ ದೊಡ್ಡ ಮೊಗ್ಗೆ ಕಾಯಿಯನ್ನು ನೀಡಿದರೆ, ಎರಡನೆ ಪಂಗಡಕ್ಕೆ ಸಣ್ಣ ಮೊಗ್ಗೆಕಾಯಿಯನ್ನು ನೀಡುವ ಸಂಪ್ರದಾಯ ಪಾರಂಪರಿಕವಾಗಿ ನಡೆದುಕೊಂಡು ಬಂದಿದೆ.

ನಗರದ ಮದ್ಯವರ್ತಿ ಸ್ಥಳ ನಾಲ್ಕು ಕಡೆಗಳಲ್ಲಿ ಹೊಂಡೆಯೊಂದಿಗೆ ಹೋರಾಟಕ್ಕಿಳಿದು ತಮ್ಮ ಕ್ಷತ್ರೀಯ ವರ್ಚಸನ್ನು ತರ‍್ಪಡಿಸಿದ್ದಾರೆ. ನಂತರ ಎರಡು ಪಂಗಡಗಳು ಒಂದಾಗಿ ಊರಿನ ದೊಡ್ಡ ದೇವರನಿಸಿಕೊಂಡ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಗೋವಿಂದ ಗೋವಿಂದ ಎನ್ನುತ್ತ ತೆರಳಿ ಹೋರಾಟದ ನೆನಪುಗಳನ್ನು ಮೆಲಕು ಹಾಕುತ್ತಾರೆ. ಅಲ್ಲದೆ ಹೊಂಡೆ ಹಬ್ಬದ ಸಮಯದಲ್ಲಿ ಆದ ಸಣ್ಣಪುಟ್ಟ ತಪ್ಪುಗಳನ್ನು ಒಪ್ಪಿಕೊಂಡು ಸಮಾಜದವರೆಲ್ಲ ಒಂದಾಗಿ ಬಾಳೋಣ ಎನ್ನುವ ಸಾಮರಸ್ಯ ಮೆರೆಯುತ್ತಾರೆ.

ಅನಾಕಾಲದಿಂದಲೂ ಕೋಮರಪಂಥ ಸಮಾಜ ಹೊಂಡೆ ಹಬ್ಬವನ್ನು ಐತಿಹಾಸಿಕವಾಗಿ ಆಚರಿಸಿಕೊಂಡು ಬಂದಿದ್ದೇವೆ. ಇದರಿಂದ ನಮ್ಮ ಸಮಾಜದದಲ್ಲಿ ಸಂಘಟನೆಯ ಜೊತೆಯ, ಇತರೆ ಸಮಾಜದ ಸೌಹಾರ್ದತೆಯ ಪ್ರತೀಕವಾಗಿ ಹೊಂಡೆಯಾಟ ಜರುಗುತ್ತದೆ.
ವಿಜಯಕುಮಾರ ನಾಯ್ಕ
ಕೋಮಾರಪಂಥ ಸಮಾಜದ ಪ್ರಮುಖ

Advertisement

Udayavani is now on Telegram. Click here to join our channel and stay updated with the latest news.

Next