Advertisement

ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲು ಅಕ್ಕಿ, ತೊಗರಿ ವಿತರಣೆ

11:57 PM Mar 20, 2020 | Team Udayavani |

ಬೆಂಗಳೂರು: ಕೊರೊನಾ ಭೀತಿಯಿಂದ ಶಾಲಾ ಮಕ್ಕಳಿಗೆ ರಜಾ ನೀಡಿರುವುದರಿಂದ ಈ ಅವಧಿಯಲ್ಲಿ ಬಿಸಿಯೂಟದ ಬದಲು ಅಕ್ಕಿ ಮತ್ತು ತೊಗರಿ ಬೇಳೆಯನ್ನು ಮಕ್ಕಳ ಪಾಲಕ, ಪೋಷಕರಿಗೆ ನಿಯಮಾನುಸಾರ ವಿತರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Advertisement

ಮಾ.14ರಿಂದ ಏ.14ರವರೆಗಿನ 21ದಿನ (ಸರ್ಕಾರಿ ರಜಾ ದಿನ ಹೊರತುಪಡಿಸಿ)ದ ಅಕ್ಕಿ, ತೊಗರಿ ಬೇಳೆಯನ್ನು ಮಕ್ಕಳ ಪಾಲಕ, ಪೋಷಕರಿಗೆ ವಿತರಿಸಲು ತಿಳಿಸಿದೆ. 1ರಿಂದ 5ನೇ ತರಗತಿ ಮಕ್ಕಳಿಗೆ ಪ್ರತಿ ದಿನಕ್ಕೆ 100 ಗ್ರಾಂ ಅಕ್ಕಿ, 50 ಗ್ರಾಂ ತೊಗರಿಬೇಳೆ, 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ದಿನಕ್ಕೆ 150ಗ್ರಾಂ ಅಕ್ಕಿ, 75 ಗ್ರಾಂ ತೊಗರಿ ಬೇಳೆಯಂತೆ 21 ದಿನ ಅಕ್ಕಿ, ತೊಗರಿ ಸೇರಿಸಿ ಒಂದೇ ದಿನ ವಿತರಿಸುವಂತೆ ನಿರ್ದೇಶನ ನೀಡಿದೆ.

ಶಾಲೆಗಳಲ್ಲಿ ವಿತರಣೆಗೆ ಅಕ್ಕಿ, ತೊಗರಿ ಬೇಳೆ ಇದೆಯೇ ಎಂಬುದನ್ನು ಆಯಾ ಶಾಲೆಯ ಮುಖ್ಯೋಪಾಧ್ಯಾಯರು ಸ್ಪಷ್ಟಪಡಿಸಿಕೊಂಡು, ಒಂದೊಮ್ಮೆ ಉಗ್ರಾಣದಲ್ಲಿ ಅಕ್ಕಿ, ತೊಗರಿ ಬೇಳೆ ಇಲ್ಲದೇ ಇದ್ದರೆ ತಾಲೂಕು ಅಕ್ಷರ ದಾಸೋಹದ ಮೂಲಕ ಪಡೆದುಕೊಳ್ಳುವ ಕೆಲಸ ಮಾಡಬೇಕು.

ಆಹಾರ ಸಾಮಗ್ರಿಗಳ ವಿತರಣೆಯಲ್ಲಿ ಅಡುಗೆ ಸಿಬ್ಬಂದಿಯನ್ನು ತೊಡಗಿಸಿಕೊಂಡು ಅವರಿಗೂ ಏ.10ವರೆಗಿನ ವೇತನ ನೀಡಬೇಕು. ಎನ್‌ಜಿಒಗಳು ಬಿಸಿಯೂಟ ಒದಗಿಸುತ್ತಿದ್ದಲ್ಲಿ, ಆ ಎನ್‌ಜಿಒಗಳು ಅಕ್ಕಿ, ತೊಗರಿಬೇಳೆಯನ್ನು ಶಾಲೆಗಳಿಗೆ ನೀಡಿ, ವಿದ್ಯಾರ್ಥಿಗಳ ಪಾಲಕ, ಪೋಷಕರಿಗೆ ವಿತರಿಸುವ ಅವಕಾಶ ಮಾಡಿಕೊಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next