Advertisement

ಸಾಲ, ಅಡಮಾನಗಳಿಗೆ ತೊಂದರೆ, ದೊರೆಯದ ಆರ್‌ಟಿಸಿ

12:20 AM Jul 16, 2023 | Team Udayavani |

ಕುಂದಾಪುರ/ಕೋಟ: ರಾಜ್ಯಾದ್ಯಂತ ಉಪನೋಂದಣಿ ಕಚೇರಿಗಳಲ್ಲಿ ಚುರುಕಿನ ನೋಂದಣಿ ಹಾಗೂ ಸರಳ ಪ್ರಕ್ರಿಯೆಯ ಉದ್ದೇಶ ದಿಂದ ಸರಕಾರ “ಕಾವೇರಿ -2′ ತಂತ್ರಾಂಶವನ್ನು ಜಾರಿಗೆ ತಂದಿದೆ. ಆದರೆ ಪ್ರಸ್ತುತ ಇದರಲ್ಲಿರುವ ತಾಂತ್ರಿಕ ದೋಷಗಳಿಂದ ಜನ ಹೈರಾಣಾಗುತ್ತಿದ್ದಾರೆ. ನೋಂದಣಿ ಪ್ರಕ್ರಿಯೆಗಳು ರಾಜ್ಯಾದ್ಯಂತ ಸರಿಯಾಗಿ ನಡೆಯುತ್ತಿಲ್ಲ. ಉಡುಪಿ ಜಿಲ್ಲೆಯಲ್ಲಿ ಜು. 12ಕ್ಕೆ ಕೆ2 ಅಳವಡಿಸಿ ಭರ್ತಿ ಒಂದು ತಿಂಗಳಾಗಿದ್ದು, ತಂತ್ರಾಂಶ ಸುಧಾರಣೆ ನಿಟ್ಟಿನಲ್ಲಿ ಗಮನ ಹರಿಸಿಲ್ಲ.

Advertisement

ಸ್ವಯಂ ಸೇವೆ
ಸಾರ್ವಜನಿಕರು ಕಾವೇರಿ -2 ತಂತ್ರಾಂಶದಲ್ಲಿ ಸ್ವತಃ ಲಾಗಿನ್‌ ಆಗಿ ಆಸ್ತಿ ನೋಂದಣಿ, ಕ್ರಯ, ಕರಾರು, ದಾನ, ಒಪ್ಪಂದ ಹಾಗೂ ಉಯಿಲು (ವಿಲ್‌) ಸೇರಿ ನಾನಾ ಸೇವೆಗಳನ್ನು ಪಡೆಯಬಹುದು. ಸಮಯ ಉಳಿತಾಯದ ದೃಷ್ಟಿಯಿಂದ ರಾಜ್ಯದ ಬಹುತೇಕ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಕೆ2 ತಂತ್ರಾಂಶವನ್ನು ಅಳವಡಿಸಲಾಗಿದೆ. ಆದರೆ ಸರ್ವರ್‌ ಸಮಸ್ಯೆ ಯಿಂದಾಗಿ ಸಾರ್ವಜನಿಕರು ಸಲ್ಲಿಸಿದ ದಾಖಲೆ ಗಳನ್ನು ಉಪನೋಂದಣಾಧಿಕಾರಿ ಆನ್‌ಲೈನ್‌ ಮೂಲಕ ಪರಿಶೀಲಿಸುವುದು ವಿಳಂಬವಾಗುತ್ತದೆ. ದಾಖಲೆ ಪರಿಶೀಲಿಸಿ ನೋಂದಣಿ ಮಾಡುವವರ, ಮಾಡಿಸಿಕೊಳ್ಳುವವರ ಬಯೊಮೆಟ್ರಿಕ್‌, ಛಾಯಾಚಿತ್ರ ಪಡೆಯುವಂತಹ ಮುಂದಿನ ಹಂತಕ್ಕೆ ಹೋಗುವುದು ಕಷ್ಟವಾಗುತ್ತದೆ. ಅಷ್ಟೆಲ್ಲ ದಾಟಿ ಹೋದರೂ ಹಣ ಪಾವತಿ ನೆಮ್ಮದಿ ಕೆಡಿಸುತ್ತದೆ.

ಡಿಜಿಟಲ್‌ ಪೇ
ನೋಂದಣಿ ಶುಲ್ಕ ಪಾವತಿಗೆ ಯುಪಿಐ ಹಾಗೂ ನೆಟ್‌ ಬ್ಯಾಂಕಿಂಗ್‌ ಸೌಲಭ್ಯ ಮಾತ್ರ ಇದೆ. ಈ ಹಿಂದೆ ಬ್ಯಾಂಕ್‌ಗಳಲ್ಲಿ ಪಾವತಿಸಿ ಚಲನ್‌ ತಂದು ಅದರ ನಂಬರ್‌ ದಾಖಲಿಸಿದರೆ ಸಾಕಿತ್ತು. ಕೆ2 ತಂತ್ರಾಂಶದಲ್ಲಿ ಇದನ್ನು ತೆಗೆಯಲಾಗಿದೆ. ಇದರಿಂದಾಗಿ ಸಾರ್ವಜನಿಕರ ಬ್ಯಾಂಕ್‌ ಖಾತೆ ಯಿಂದ ಹಣ ಕಡಿತವಾದರೂ ನೋಂದಣಿ ಇಲಾ ಖೆಗೆ ಜಮೆ ಆಗದೆ ಇರುವುದು, ಹಣ ಪಾವತಿಗೆ ಬ್ಯಾಂಕ್‌ ಹಾಗೂ ಇಂಟರ್ನೆಟ್‌ ಸಮಸ್ಯೆಯಿಂದ ವಿಳಂಬವಾಗುವುದು ಇತ್ಯಾದಿ ಒಟ್ಟು ನೋಂದಣಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತಿವೆ.

ಖಾತೆ ಬದಲಿಲ್ಲ
ಕಾವೇರಿ ತಂತ್ರಾಂಶದಿಂದ ಕೆ2 ತಂತ್ರಾಂಶಕ್ಕೆ ಬದಲಾಗುವ ಮುನ್ನ 3 ತಿಂಗಳ ಅವಧಿಯಲ್ಲಿ ಹೊಸ ತಂತ್ರಾಂಶ ಪರಿಶೀಲನ ಹಂತದಲ್ಲಿದ್ದಾಗ 11ಇ ನಕ್ಷೆ ಮೂಲಕ ನೋಂದಣಿಯಾದ ಆಸ್ತಿ ಗಳಿಗೆ ಇನ್ನೂ ಖಾತೆ ಬದಲಾಗಿಲ್ಲ. ಕಾವೇರಿ ತಂತ್ರಾಂಶ ದಿಂದ ಭೂಮಿ ತಂತ್ರಾಂಶಕ್ಕೆ ಮಾಹಿತಿ ರವಾನೆಯಾ ಗಿಲ್ಲ. ಇದರಿಂದ ಆರ್‌ಟಿಸಿ ಆಗಿಲ್ಲ. ರಾಜ್ಯದಲ್ಲಿ ಇಂತಹ ಸುಮಾರು 18 ಸಾವಿರ ಪ್ರಕರಣಗಳಿವೆ.

ಆಧಾರ್‌ ಅನುಮತಿ ಇಲ್ಲ
ನೋಂದಣಿದಾರರು ಆನ್‌ಲೈನ್‌ ಮೂಲಕ ಸಲ್ಲಿಸಿದ ಆಧಾರ್‌ ಮಾಹಿತಿ ಸರಿಯಿದೆಯೇ ಇಲ್ಲವೇ, ಅದೇ ವ್ಯಕ್ತಿ ನೋಂದಣಿಗೆ ಬಂದಿದ್ದಾರೆಯೇ ಎಂದು ಪರಿಶೀಲಿಸಲು ಆಧಾರ್‌ ಮಾನ್ಯತೆ ನೀಡಲಾಗಿಲ್ಲ. ಬಯೊಮೆಟ್ರಿಕ್‌ ಮೂಲಕ ಅದೇ ವ್ಯಕ್ತಿಯಆಧಾರ್‌ ನಂಬರ್‌ ಎಂದು ತಿಳಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ನಕಲಿ, ಅನಧಿಕೃತ ವ್ಯಕ್ತಿಗಳ ಮೂಲಕ ನೋಂದಣಿ ನಡೆಯುವ ಸಾಧ್ಯತೆಯೂ ಇದೆ.

Advertisement

ಸಾಲಗಳಿಗೆ ತೊಂದರೆ
ಕೆ2 ಸಮಸ್ಯೆಯಿಂದಾಗಿ ಮೊದಲಿನಂತೆ ನೋಂದಣಿ ಆಗುತ್ತಿಲ್ಲ. ಖಾತೆ ಬದಲಾಗದೆ ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳಲ್ಲಿ ಗೃಹ ಸಾಲ, ವಿದ್ಯಾಭ್ಯಾಸ ಸಾಲ, ಬೇರೆ ಬೇರೆ ಸಾಲಗಳಿಗೆ ಅಡಮಾನಕ್ಕೆ ತೊಂದರೆಯಾಗುತ್ತಿದ್ದು, ಸಾರ್ವಜನಿಕರು ತೊಂದರೆಗೊಳಗಾಗಿದ್ದಾರೆ.

ಸಮಸ್ಯೆಗಳು
ಪುರಸಭೆ, ಪ.ಪಂ., ನಗರಸಭೆ ವ್ಯಾಪ್ತಿಯ ಕೃಷಿಭೂಮಿ ಕೆ2ನಲ್ಲಿ ದಾಖಲಾಗದ ಕಾರಣ ನೋಂದಣಿ ಆಗುತ್ತಿಲ್ಲ. ಕೆಲವೊಮ್ಮೆ ಸಾರ್ವಜನಿಕರಿಗೆ ತಂತ್ರಾಂಶ ಲಾಗಿನ್‌ ಆಗುವುದಿಲ್ಲ, ಕಾರಣ ಸರ್ವರ್‌ ಸಮಸ್ಯೆ. ಪಹಣಿಯಲ್ಲಿ ಹೆಸರು ನಮೂದಿಸುವಾಗ ಅಲ್ಪ ವಿರಾಮ, ಪೂರ್ಣ ವಿರಾಮದ ಚಿಹ್ನೆಗಳು ನಮೂದಿಸಲ್ಪಟ್ಟರೆ ನೋಂದಣಿ ಸಾಧ್ಯವಾಗುತ್ತಿಲ್ಲ. ಪಹಣಿಯಲ್ಲಿ ಅನೇಕ ಹೆಸರುಗಳಿದ್ದರೆ ಸಮಸ್ಯೆಯಾಗುತ್ತದೆ. ಇ.ಸಿ. ನೋಂದಣಿ ಸರ್ವರ್‌ನಲ್ಲಿ ತೋರಿಸುವುದಿಲ್ಲ. ಭೂಮಿ ನೋಂದಣಿಯಲ್ಲಿ ಮಾರುಕಟ್ಟೆ ದರ, ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ ಹೆಚ್ಚುವರಿ ತೋರಿಸುತ್ತಿದ್ದು ಸಾರ್ವಜನಿಕರು ಅನವಶ್ಯವಾಗಿ ಹೆಚ್ಚಿನ ಹಣ ಪಾವತಿಸ‌ಬೇಕಾಗುತ್ತದೆ. ವಿಭಾಗಪತ್ರ ನೋಂದಣಿ ಸಮಯದಲ್ಲಿ ಒಂದು ಆಸ್ತಿ 4 ಸರ್ವೆ ನಂಬರ್‌ಗಳನ್ನು ಹೊಂದಿದ್ದರೆ 4 ಆಸ್ತಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ಇಂತಹ ಹಲವಾರು ಸಮಸ್ಯೆಗಳಿಂದ ನೋಂದಣಿ ಪ್ರಕ್ರಿಯೆ ವಿಳಂಬ, ಸಾರ್ವಜನಿಕರ ಸಮಯ ಪೋಲು, ಹಣ ಹಾಳು.

ಕಾವೇರಿ ತಂತ್ರಾಂಶದಲ್ಲಿ ಹಲವಾರು ಡಾಟಾ ಅಳವಡಿಸಬೇಕಿದೆ. ಆರ್‌ಟಿಸಿ ಆಗದಿರುವ ಸಮಸ್ಯೆಗಳ ಬಗ್ಗೆ ಮೇಲಧಿಕಾರಿಗಳ, ಸಚಿವರ ಗಮನಕ್ಕೆ ತರಲಾಗಿದೆ. ಹಣ ಪಾವತಿ ಲೋಪ ಸರಿಪಡಿಸಲು ಸರಕಾರದಿಂದ ಬ್ಯಾಂಕ್‌ಗಳಿಗೆ ಮಾಹಿತಿ ನೀಡಲಾಗಿದೆ. ಕೆ2 ತಂತ್ರಾಂಶ ಜನಸ್ನೇಹಿಯಾಗಿದೆ. ಮಧ್ಯವರ್ತಿಗಳಿಲ್ಲದೆ ಜನರ ಕೆಲಸಗಳು ಸುಲಭವಾಗಿ ಆಗಲಿದೆ. ಒಂದೆರಡು ತಿಂಗಳಲ್ಲಿ ತಂತ್ರಾಂಶ ಉನ್ನತೀಕರಣಗೊಂಡು ಸಮಸ್ಯೆಗಳು ಬಗೆಹರಿಯಲಿವೆ. ಅಲ್ಲಿಯ ತನಕ ಸಾರ್ವಜನಿಕರು ಸಹಕಾರ ನೀಡಬೇಕು.
– ಶ್ರೀಧರ್‌,
ಜಿಲ್ಲಾ ನೋಂದಣಾಧಿಕಾರಿಗಳು, ಉಡುಪಿ
– ಸೈಯದ್‌ ನೂರ್‌ ಪಾಷ, ಜಿಲ್ಲಾ ನೋಂದಣಾಧಿಕಾರಿಗಳು, ದ.ಕ.

-ಲಕ್ಷ್ಮೀಮಚ್ಚಿನ, ರಾಜೇಶ್‌ ಗಾಣಿಗ

Advertisement

Udayavani is now on Telegram. Click here to join our channel and stay updated with the latest news.

Next