Advertisement

ಚೌತಿ ಹಬ್ಬಕ್ಕೆ ಗಣಪನಿಗೆ ಬಗೆಬಗೆಯ ರೂಪ 

04:37 PM Aug 23, 2018 | |

ಹೊನ್ನಾವರ: ಅತಿವೃಷ್ಟಿ, ಅನಾವೃಷ್ಟಿ ಏನೇ ಆಗಲಿ ಗಣೇಶ ಚೌತಿ ಹಬ್ಬಕ್ಕೆ ತಿಂಗಳಿರುವಾಗಲೇ ಜಿಲ್ಲೆಯಲ್ಲಿ ಚೌತಿ ಸಂಭ್ರಮ ಗರಿಗೆದರುತ್ತದೆ. ಈಗಾಗಲೇ ಗಣಪತಿ ಶಾಲೆಯಲ್ಲಿ ಜೇಡಿ ಮಣ್ಣಿನ ಗಣಪತಿ ರೂಪ ಪಡೆಯುತ್ತಿದ್ದಾನೆ.

Advertisement

ಕರ್ಕಿಯ ಭೂಸ್ವರ್ಗಕೇರಿಯಲ್ಲಿರುವ ಭಂಡಾರಿಗಳ ಗಣಪತಿ ಜಿಲ್ಲೆಯಲ್ಲಿ ಪ್ರಸಿದ್ಧ. ಇಲ್ಲಿ ಮೂರು ಕುಟುಂಬಗಳು 500ಕ್ಕೂ ಹೆಚ್ಚು ಗಣಪತಿ ಸಿದ್ಧಪಡಿಸುತ್ತವೆ. ಕರ್ಕಿ ಗದ್ದೆಯ ಜೇಡಿಮಣ್ಣನ್ನು ಮಳೆಗಾಲಕ್ಕೂ ಮೊದಲೇ ಸಂಗ್ರಹಿಸಿ ಅದರಲ್ಲಿದ್ದ ಕಲ್ಲುಗಳನ್ನು ಆಯ್ದು, ಮಣ್ಣನ್ನು ಮೃದುವಾಗಿಸಿ, ಕೈಯಿಂದಲೇ ಗಣಪತಿ ನಿರ್ಮಿಸಿ ಪರಿಸರ ಪೂರಕ ಬಣ್ಣಗಳಿಂದ ಅವುಗಳನ್ನು ಚೆಂದಗೊಳಿಸುವುದು ಭಂಡಾರಿ ಕುಟುಂಬದ ವಂಶಪಾರಂಪರ್ಯ ವೃತ್ತಿ. ಅಚ್ಚುಗಳನ್ನು ಬಳಸದ ಕಾರಣ ಪ್ರತಿ ಮೂರ್ತಿಯೂ ತನ್ನದೇಯಾದ ವಿಶಿಷ್ಟತೆಯಿಂದ ಕೂಡಿರುತ್ತದೆ. ದೇವಾಲಯಗಳಲ್ಲಿ ಪಂಚವಾದ್ಯ ನುಡಿಸುವ ಭಂಡಾರಿ ಸಮಾಜದವರು ಜಿಲ್ಲೆಯಲ್ಲಿ ದೇವಾಲಯದ ಪರಿಸರದಲ್ಲಿ ನೆಲೆಸಿದ್ದಾರೆ. ಬೇಸಿಗೆಯಲ್ಲಿ ಮೃದಂಗ, ಚಂಡೆ ವಾದಕರಾಗಿ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ದುಡಿಯುವ ಇವರು ವಾದ್ಯಗಳ ದುರಸ್ತಿ ಮತ್ತು ಮಳೆಗಾಲದಲ್ಲಿ ಮೂರ್ತಿ ತಯಾರಿಸುತ್ತಾರೆ. ಎಲ್ಲ ಕಲೆಗಳು ವಿಶೇಷ ಲಾಭ ತರದಿದ್ದರೂ ಕುಟುಂಬದ ವೃತ್ತಿಯೆಂದು ನಡೆಸಿಕೊಂಡು ಬಂದಿದ್ದಾರೆ.

ಪೊಲೀಸ ಠಾಣೆಯಿಂದ ಆರಂಭಿಸಿ ಸಾಧಾರಣ ಎಲ್ಲ ಪ್ರಮುಖ ಸ್ಥಳಗಳಲ್ಲಿ ಜಿಲ್ಲೆಯಾದ್ಯಂತ ಸಾವಿರದಷ್ಟು ಸಾರ್ವಜನಿಕ ಗಣೇಶ ಮೂರ್ತಿಗಳ ಸ್ಥಾಪನೆಯಾಗುತ್ತದೆ. ಮನೆಮನೆಗಳಲ್ಲಿ ಗಣಪತಿ ಕೂರಿಸುತ್ತಾರೆ. ಜಗತ್ತಿನ ಅತ್ಯಂತ ಪುರಾತನ ಎರಡನೇ ಶತಮಾನದ ಗೋಕರ್ಣ ಮತ್ತು ಮೂರನೇ ಶತಮಾನದ ಇಡಗುಂಜಿಯ ಬಾಲಗಣೇಶ ಮೂರ್ತಿಗಳು ಜಿಲ್ಲೆಯಲ್ಲಿವೆ. ಆ ಕಾಲದಲ್ಲಿ ಗಣಪತಿಗೆ ಎರಡೂ ದಂತಗಳಿದ್ದವು. ಹಾವು, ಇಲಿ ಇರಲಿಲ್ಲ. ಗಣೇಶ ಪುರಾಣ ರಚನೆಯಾದ ಮೇಲೆ ಅದನ್ನು ಆಧರಿಸಿ 40 ಗಣಪತಿ ರೂಪಗಳು ರಚನೆಯಾದವು. ಈಗಂತೂ ಗಣಪತಿ ಸರ್ವರೂಪದಲ್ಲೂ ಸರ್ವರೀತಿಯ ವಾಹನದಲ್ಲಿ ಕಾಣಿಸಿಕೊಳ್ಳುತ್ತಾನೆ. ಚೌತಿಗಾಗಿ ವಿಶೇಷ ರೈಲು ಹೊರಡಲಿದೆ. ಚೌತಿಯ ಮೂರು ದಿನ ದುಪ್ಪಟ್ಟು ದರಕೊಟ್ಟು ಟಿಕೆಟ್‌ ಬುಕ್‌ ಆಗಿದೆ. ಪೌರಾಣಿಕ ಹಿನ್ನೆಲೆಯ ಜೊತೆಯಲ್ಲಿ ಮಹಾರಾಷ್ಟ್ರ ಭಾಗವಾಗಿದ್ದ ಉತ್ತರ ಕನ್ನಡದಲ್ಲಿ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವದ ಪ್ರಭಾವ ದಟ್ಟವಾಗಿದ್ದು, ಸಮಗ್ರ ಜಿಲ್ಲೆಯಲ್ಲಿ ಈಗಲೇ ಚೌತಿಯ ಗಾಳಿ ಬೀಸತೊಡಗಿದೆ.

ಮೂರ್ತಿ ನೋಡಲು ಸರತಿಸಾಲು
ಚೌತಿಗೆ ನಾಲ್ಕು ದಿನ ಇರುವಾಗ ಭಂಡಾರಿ ಕೇರಿಯ ಗಣಪತಿ ನೋಡಲು ಜನ ಸಾಲುಗಟ್ಟಿ ನಿಲ್ಲುತ್ತಾರೆ. ಶಿವಲಿಂಗ ಗಣಪ, ಬೆಣ್ಣೆ ಗಣಪ, ಸಿಂಹ ಸವಾರಿ, ಯಕ್ಷಗಾಣ ವೇಷ, ತಿರುಪತಿ ತಿಮ್ಮಪ್ಪ ಹೀಗೆ ವೈವಿಧ್ಯಮಯ ಮೂರ್ತಿ ನೋಡಲು ವಿದ್ಯಾರ್ಥಿಗಳು ಪದೇ ಪದೇ ಬರುತ್ತಾರೆ. ಹೆದ್ದಾರಿಯಲ್ಲಿ ಹೋಗುವ ಪ್ರವಾಸಿಗರು ಕುತೂಹಲದಿಂದ ಬಂದು ಗಣಪತಿ ನೋಡಿ ಖುಷಿ ಪಡುತ್ತಾರೆ. ಈ ಅವಧಿಯಲ್ಲಿ ಕಲಾವಿದರಿಗೆ ಹಗಲು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಗಲು ಬಂದವರಿಗೆ ಗಣಪತಿ ತೋರಿಸಿ ವಿವರಿಸುತ್ತಾರೆ. ನಮಗೆ ತೊಂದರೆಯಾದರೂ ಸರಿ ಸಾವಿರಾರು ಕಲಾಪ್ರೇಮಿಗಳು ನಮ್ಮ ಕೇರಿಗೆ ಆಗಮಿಸಿ ಖುಷಿ ಪಡುವುದು ನಮಗೆ ದೊಡ್ಡ ಉಡುಗೊರೆ ಎನ್ನುತ್ತಾರೆ. ಜಿಲ್ಲೆಯ ಎಲ್ಲೆಡೆ ಮೂರ್ತಿ ಕಲಾವಿದರ ಮನೆಗಳಲ್ಲಿ ಗಣಪತಿ ಸಿದ್ಧವಾಗುತ್ತಿದೆ. ಕೆಕ್ಕಾರ ಡಿ.ಜಿ. ಭಟ್‌ ಕೆಲವೇ ಕೆಲವು ಅಪರೂಪದ ಮೂರ್ತಿಗಳನ್ನು ರಚಿಸುತ್ತಾರೆ. ಮೂರ್ತಿ ಕಲಾವಿದರು ದೇಶದ ಪರಂಪರೆ, ಸಂಸ್ಕೃತಿ ಉಳಿಸಲು ಮಹತ್ವದ ಕೊಡುಗೆ ನೀಡಿದ್ದಾರೆ. 

ಜೀಯು ಹೊನ್ನಾವರ

Advertisement
Advertisement

Udayavani is now on Telegram. Click here to join our channel and stay updated with the latest news.

Next