Advertisement

ಧರ್ಮಸ್ಥಳದಲ್ಲಿ ವ್ಯಸನಮುಕ್ತ ಸಾಧಕರ ಸಮಾವೇಶ, ಶತದಿನೋತ್ಸವ ಸಂಭ್ರಮ

10:25 AM Feb 14, 2020 | Lakshmi GovindaRaj |

ಬೆಳ್ತಂಗಡಿ: ಕುಟುಂಬ ಪ್ರಧಾನ ವ್ಯವಸ್ಥೆಯ ಭಾರತದ ಜೀವನ ಪದ್ಧತಿ ವಿಶ್ವಕ್ಕೆ ಮಾದರಿಯಾಗಿದೆ. ಮಂಜುನಾಥನ ಸನ್ನಿಧಿಯಲ್ಲಿ, ಸರ್ಕಾರದ ಯೋಜನೆಗಿಂತಲೂ ಮಿಗಿಲಾದ ಡಾ.ಹೆಗ್ಗಡೆ ಅವರ ಸಮಾಜಮುಖೀ ಚಿಂತನೆಯಿಂದ ಗ್ರಾಮ, ಗ್ರಾಮಗಳು ವ್ಯಸನಮುಕ್ತ ವಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅನ್ನಾಸಾಹೇಬ್‌ ಹೇಳಿದರು.

Advertisement

ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ವ್ಯಸನಮುಕ್ತ ಸಾಧ ಕರ ಸಮಾವೇಶ ಮತ್ತು ಶತದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಡು ಮುಟ್ಟದ ಸೊಪ್ಪಿಲ್ಲ, ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ.ಹೆಗ್ಗಡೆ ತಲುಪದ ಸೇವಾ ಕ್ಷೇತ್ರವಿಲ್ಲ ಎಂದು ಹೇಳಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನವಜೀವನ ಸಮಿತಿ ಆಶ್ರಯದಲ್ಲಿ ವ್ಯಸನಮುಕ್ತ ಆರೋಗ್ಯ ಪೂರ್ಣ ಸಮಾಜ ರೂಪಿಸುವ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದರು.

ದುಶ್ಚಟಗಳ ದಮನ ಸಂಕಲ್ಪ ಶಕ್ತಿ ಹೊಂದಿ: ಹೇಮಾ ವತಿ ವೀ.ಹೆಗ್ಗಡೆ ಮಾತನಾಡಿ, ಮಹಿಳೆಯರು ದುಶ್ಚಟಗಳ ದಮನ ಮಾಡುವ ಸಂಕಲ್ಪ ಶಕ್ತಿ ಮತ್ತು ಆತ್ಮಬಲ ಹೊಂದಿರಬೇಕು. ಜನ ಜಾಗೃತಿ ವೇದಿಕೆಯ ನಿರಂತರ ಪರಿಶ್ರಮ- ಪ್ರಯತ್ನದಿಂದ ವ್ಯಸನ ಮುಕ್ತರಾಗಿ ಅನೇಕ ಕುಟುಂಬಗಳು ಇಂದು ಚೇತರಿಸಿ ನವಜೀವನ ನಡೆಸುತ್ತಿವೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ವ್ಯಸನಮುಕ್ತರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ಆಶೀರ್ವಾದ ಪಡೆದು ಪವಿತ್ರಾತ್ಮರಾಗಿ ದ್ದೀರಿ.

ಮುಂದೆ ದೃಢ ಸಂಕಲ್ಪದಿಂದ ಅಂತರಂಗ- ಬಹಿರಂಗ ಪರಿ ಶುದ್ಧರಾಗಿ ಆರೋಗ್ಯಪೂರ್ಣ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಕೆ. ರೋಹಿಣಿ, ಶ್ರೀ.ಕ್ಷೇ.ಧ.ಗ್ರಾ.ಯೋ.ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಡಾ.ಎಲ್‌.ಎಚ್‌. ಮಂಜುನಾಥ್‌, ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಸತೀಶ್‌ ಹೊನ್ನವಳ್ಳಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ದೇವದಾಸ್‌ ಹೆಬ್ಟಾರ್‌, ಶಾಸಕ ಹರೀಶ್‌ ಪೂಂಜ, ಜನ ಜಾಗೃತಿ ವೇದಿಕೆ ನಿರ್ದೇಶಕ ವಿವೇಕ್‌ ವಿ.ಪಾಸ್‌, ವೇದಿಕೆ ರಾಜ್ಯಾಧ್ಯಕ್ಷ ವಿ. ರಾಮಸ್ವಾಮಿ, ಭಾಸ್ಕರ್‌ ಎನ್‌.ಮತ್ತು ನಾಗೇಶ್‌ ಉಪಸ್ಥಿತರಿದ್ದರು.

ಸನ್ಮಾನ, ಜಾಗೃತಿ ಅಣ್ಣ-ಜಾಗೃತಿ ಮಿತ್ರ ಪ್ರಶಸ್ತಿ ಪ್ರದಾನ
-ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲ್ಯಾನ್‌ಅವರನ್ನು ಸನ್ಮಾನಿಸಲಾಯಿತು.

Advertisement

-ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಕೆ.ರೋಹಿಣಿ ಜನಜಾಗೃತಿ ವೇದಿಕೆಗೆ ಮದ್ಯವರ್ಜನ ಶಿಬಿರ ಆಯೋಜಿಸಲು 10 ಲಕ್ಷ ರೂ.ನೆರವು ನೀಡಿದರು.

-ಮದ್ಯವರ್ಜನ ಶಿಬಿರದಲ್ಲಿ ವ್ಯಸನಮುಕ್ತರಾಗಿ ನವಜೀವನ ನಡೆಸುತ್ತಿರುವ ಹುಣಸೂರಿನ ಕೃಷ್ಣೇಗೌಡ ಮತ್ತು ಮಂಡ್ಯದ ಸವಿತಾ ರುದ್ರಾಚಾರಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

-ಮದ್ಯ ವ್ಯಸನಿಗಳ ಮನ ಪರಿವರ್ತನೆ ಮಾಡಿ ವ್ಯಸನಮುಕ್ತರ ನ್ನಾಗಿ ಮಾಡಿದ 10 ಮಂದಿ ಸಾಧಕರಿಗೆ ಜಾಗೃತಿ ಅಣ್ಣ ಮತ್ತು ಜಾಗೃತಿ ಮಿತ್ರ ಪುರಸ್ಕಾರ ನೀಡಿ ಗೌರವಿಸಲಾಯಿತು.

-ವೇದಿಕೆಯ ಅನಂತ್‌ ಅವರು ಶ್ರೀ ಮಂಜುನಾಥ ಸ್ವಾಮಿ ಕುರಿತು ರಚಿಸಿದ ಭಕ್ತಿಗೀತೆಯ ದ್ವನಿಸುರುಳಿಯನ್ನು ಡಾ|ಹೆಗ್ಗಡೆ ಬಿಡುಗಡೆಗೊಳಿಸಿದರು.

-ಸಚಿವೆ ಶಶಿಕಲಾ ಜೊಲ್ಲೆ ಅನ್ನಾಸಾಹೇಬ್‌ ಅವರನ್ನು ಹೆಗ್ಗಡೆಯವರು ಗೌರವಿಸಿದರು.

ಶಾಲಾ-ಕಾಲೇಜುಗಳ ಬಳಿ ಡ್ರಗ್ಸ್‌ ಮಾರಾಟ ಜಾಲ ಹೆಚ್ಚಾಗುತ್ತಿದೆ. ಇದನ್ನು ಸರ್ಕಾರ ತಡೆಗಟ್ಟಬೇಕು. ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದಂತೆ ತಡೆಯಲು ಶಾಲಾ-ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಲಾಗುತ್ತಿದೆ.
-ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ

ಕಿರು ಆರ್ಥಿಕ ಯೋಜನೆ ಮೂಲಕ ಸ್ವ-ಸಹಾಯ ಸಂಘಗಳ ಸಹಭಾಗಿತ್ವದಲ್ಲಿ ಮಹಿಳೆಯರು ಇಂದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಶೇಕಡಾ ನೂರರಷ್ಟು ಸಾಲ ಮರು ಪಾವತಿಯಾಗುತ್ತಿದೆ. ಮಹಿಳೆಯರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಬೇಕು.
-ಶಶಿಕಲಾ ಜೊಲ್ಲೆ ಅನ್ನಾಸಾಹೇಬ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next