Advertisement

ಮಶಿಹಾಳದ ಈ ಕುಟುಂಬಕ್ಕೆ ಗ್ಯಾಂಗ್ರಿನ್‌ ಕಾಟ!

11:52 AM May 01, 2020 | Naveen |

ದೇವದುರ್ಗ: ತಾಲೂಕಿನ ಮಶಿಹಾಳ ಗ್ರಾಮದ ಪೂಜಾರಿ ಕುಟುಂಬ ಗ್ಯಾಂಗ್ರಿನ್‌ ಕಾಟದಿಂದ ನಲುಗುತ್ತಿದೆ. ಒಂದೇ ಕುಟುಂಬದ ಮೂವರ ಕಾಲಿಗೆ ಗ್ಯಾಂಗ್ರಿನ್‌ ರೋಗ ಅಂಟಿಕೊಂಡಿದೆ. ಮಗಳು ಸಹ ಮಾತು ಬಾರದ ಮೂಕಿ. ಹೀಗಾಗಿ ನಾಲ್ವರ ಜವಾಬ್ದಾರಿ ತಂದೆ ಮಾರ್ಕಂಡಯ್ಯ ಅವರ ಹೆಗಲಿಗೆ ಬಿದ್ದಿದೆ. ಮೂರ್‍ನಾಲ್ಕು ಎಕರೆ ಜಮೀನು ಇದೆಯಾದರೂ ಒಣ ಭೂಮಿ ಮಳೆ ಬಂದಾಗ ಮಾತ್ರ ಬೆಳೆ ಸಿಗುತ್ತದೆ.

Advertisement

ಕುಟುಂಬಕ್ಕೆ ಪಡಿತರ ಕಾರ್ಡ್‌ ಇದೆ. ಆದರೆ ಆಧಾರ್‌ ಲಿಂಕ್‌ ಆಗದೇ ಇರುವುದರಿಂದ ಪಡಿತರ ಸಿಗುತ್ತಿಲ್ಲ. ಸರಕಾರದ ಕೊಡುವ ತಿಂಗಳ ಮಾಸಾಶನ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಕೆಲ ಸಮಸ್ಯೆ ಹಿನ್ನೆಲೆಯಲ್ಲಿ ಅರ್ಜಿ ತಿರಸ್ಕೃತಗೊಂಡಿದೆ. ಸಹಾಯಕ್ಕಾಗಿ ಕೈಚಾಚಿದರೂ ಸೌಲಭ್ಯ ಮಾತ್ರ ಸಿಗುತ್ತಿಲ್ಲ. ಮೂವರು ಮಕ್ಕಳ ಆರೋಗ್ಯದ ಸಂಕಷ್ಟ ಮಧ್ಯೆ ತಂದೆ ಜೀವನ ದೂಡುತ್ತಿದ್ದಾರೆ.

ಶಾಸಕ ಕೆ. ಶಿವನಗೌಡ ನಾಯಕ ಪೂಜಾರಿ ಕುಟುಂಬಕ್ಕೆ ಸರಕಾರದ ಸೌಲಭ್ಯ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಪಾಲನೆಯಾಗುತ್ತಿಲ್ಲ. ಹಾಗಾಗಿ ಕುಟುಂಬ ಕಣ್ಣೀರಿನಲ್ಲೇ ಕೈತೊಳೆಯುವಂತಾಗಿದೆ. ಮಕ್ಕಳೇ ತಂದೆಗೆ ಆಸರೆ ಆಗಬೇಕು. ಆದರೆ ತಂದೆಯೇ ಮಕ್ಕಳ ಜೋಪಾನ ಮಾಡುವಂತ ನರಕ ಸ್ಥಿತಿ ಬಂದಿದೆ. ಸರಕಾರದ ಸೌಲಭ್ಯ ಒದಗಿಸಲು ತಾಲೂಕು ಆಡಳಿತ ಮುಂದಾಗುವುದೇ ಎಂಬ ಪ್ರಶ್ನೆ ಎದುರಾಗಿದೆ. ಕೊರೊನಾ ವೈರಸ್‌ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಅಕ್ಕಿ, ಬೇಳೆ ಸೇರಿ ಆಹಾರ ಪದಾರ್ಥ ವಿತರಿಸಿ ನೆರವಿಗೆ ನಿಂತಿವೆ.

ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next