Advertisement

Desi Swara: ಶಾಪ ನೀಡುವವರು ಕೋಪವನ್ನು ಗೆದ್ದಿರುವುದಿಲ್ಲವೇ? 

01:08 PM Feb 17, 2024 | Team Udayavani |

ಶಾಪ ಎಂದರೆ ಒಬ್ಬರ ಕಟುನುಡಿ. ಆ ಶಾಪದ ಫ‌ಲಾನುಭವಿಗಳು ತಪ್ಪು ಮಾಡಿದವರು. ಆ ಶಾಪವನ್ನು ನೀಡಿದವರು ಅತೀಂದ್ರಿಯಶಕ್ತಿ ಉಳ್ಳವರು. ಇಂಥವರು ದೊಡ್ಡ ಸಾಧಕರೂ ಆಗಿರಬಹುದು ಅಥವಾ ವಾಮಾಚಾರಿಗಳೂ ಆಗಿರಬಹುದು. ಒಟ್ಟಾರೆ ಹೇಳುವುದಾದರೆ ಸಾಮಾನ್ಯ ಮನುಷ್ಯರಿಗಿಂತ ಹೆಚ್ಚು ಅರಿತವರು ಮತ್ತು ಸಾಧಿಸಿರುವವರು. ಮನಸ್ಸು ಕ್ಷೊàಭೆಗೊಂಡ ಸಮಯದಲ್ಲಿ ಅವರಿಂದ ಹೊರಹೊಮ್ಮಿದ ಕಟುನುಡಿಗಳೇ ಶಾಪ. ಆ ಶಾಪವು ಕೇವಲ ನುಡಿಗಳೇ ಆಗಿರದೇ, ಯಾರನ್ನು ಕುರಿತು ಶಾಪ ನೀಡಲಾಗಿದೆಯೋ ಅಂಥವರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿ ಮನಸ್ಸಿನಲ್ಲಿ ಮನೆ ಮಾಡಿ ಆ ಕಟುನುಡಿಯಂತೆಯೇ ವರ್ತಿಸಲೂ ಆರಂಭಿಸುತ್ತಾರೆ. ಇದೂ ಒಂದು ರೀತಿ ವಶೀಕರಣವೇ ಸರಿ. ಶಾಪ ಪಡೆದುಕೊಳ್ಳುವವರು ಅತೀ ಸಾಮಾನ್ಯರೂ ಆಗಿರಬಹುದು. ಆದರೆ ಶಾಪ ಕೊಡುವವರು ಮಾತ್ರ ವಿಶಿಷ್ಟ ಶಕ್ತಿಯುಳ್ಳವರೇ ಆಗಿರುತ್ತಾರೆ. )

Advertisement

ಬಹಳ ವರ್ಷಗಳ ಹಿಂದಿನ ಮಾತು. ಸ್ನೇಹಿತರ ಮನೆಗೆ ಹೋಗಿದ್ದೆ. ಅವರ ಮನೆಗೆ ಯಾರೋ ಹಿರಿಯರು ಬಂದಿದ್ದರು. ನನ್ನ ಸ್ನೇಹಿತರು ಅವರನ್ನು ಪರಿಚಯ ಮಾಡಿಕೊಡುತ್ತಾ “ಇವರು ಬಹಳ ತಿಳಿದುಕೊಂಡಿದ್ದಾರೆ’ ಎಂದರು. ಉಭಯಕುಶಲೋಪರಿಯ ಅನಂತರ ನನ್ನಲ್ಲಿ ಕೆಲವಾರು ವರ್ಷಗಳಿಂದ ಇದ್ದ ಕೆಲವು ಅನುಮಾನಗಳನ್ನು ಇವರಲ್ಲೇಕೆ ಪರಿಹರಿಸಿಕೊಳ್ಳಬಾರದು ಎಂದೆನಿಸಿ ನನ್ನ ಮೊದಲ ಅನುಮಾನವನ್ನು ಅವರ ಮುಂದೆ ಇಟ್ಟೆ. ಆ ಮೊದಲ ಪ್ರಶ್ನೆಯೇ “ಶಾಪ ಎಂದರೇನು?’ ನನ್ನ ಪ್ರಶ್ನೆಗೆ ಉತ್ತರವಂತೂ ಸಿಗಲಿಲ್ಲ. ಶಾಪ ಎಂಬ ಪ್ರಶ್ನೆಗೆ ಶಾಪ ವಿಮೋಚನೆಯಾಗದೇ ಮತ್ತೆ ಮನದ ಮೂಲೆಯನ್ನೇ ಸೇರಿತು. ಆ ಪ್ರಶ್ನೆಯೇನೂ ಅಲ್ಲಿ ಒಂಟಿಯಾಗಿರಲಿಲ್ಲ ಬದಲಾಗಿ ಇದರಂತೆಯೇ ಅಲ್ಲಿ ಮನ ಮಾಡಿದ್ದ ಕೆಲವಾರು ಪ್ರಶ್ನೆಗಳೊಂದಿಗೆ ಮತ್ತೆ ಸೇರಿತು.

ಅಂದು, ಬಹುಶಃ ಇಂದೂ, ಮನದ ಮೂಲೆಯಲ್ಲಿದ್ದ ಆ ಪ್ರಶ್ನೆಗಳಾದರೂ ಯಾವುವು? ಶಾಪ ಎಂದರೇನು? ವರ ಎಂದರೇನು?, ಶಾಪ ನೀಡುವವರು ಸಾಮಾನ್ಯವಾಗಿ ಸಿಟ್ಟಿನಲ್ಲೇ ಶಾಪ ನೀಡಿರುವುದಾದರೆ, ಅಷ್ಟು ಸಾಧಿಸಿರುವವರು ಕೋಪವನ್ನು ಗೆದ್ದಿರುವುದಿಲ್ಲವೇ?, ಶಾಪಕ್ಕೆ ಗುರಿಯಾದವರು ತಪ್ಪು ಮಾಡಿರಲೇಬೇಕೆ?, ವರ ನೀಡಬೇಕಾದರೆ ಅವರಿಗೆ ಇರಬೇಕಾದ ಅರ್ಹತೆ ಏನು?, ವರ ಪಡೆಯಲು ಇರಬೇಕಾದ ಅರ್ಹತೆ ಏನು? ಸದ್ಯಕ್ಕಂತೂ ಇಷ್ಟು ಪ್ರಶ್ನೆಗಳು ಗೆದ್ದಲು ಹಿಡಿದು ಕೂತಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ.

ಸದ್ಯಕ್ಕೆ “ಶಾಪ ಎಂದರೇನು?’ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ದಿಶೆಯಲ್ಲಿ ಒಂದೆರಡು “ಶಾಪ’ದ ಸನ್ನಿವೇಶಗಳನ್ನೇ ನೋಡೋಣ. ಸತ್ಯಯುಗ, ತ್ರೇತಾಯುಗ ಮತ್ತು ದ್ವಾಪರಯುಗದ ಕಥೆಗಳಲ್ಲೇ ನಮಗೆ ಹೆಚ್ಚಾಗಿ ಶಾಪದ ಕಥೆಗಳು ಕಂಡು ಬರುವುದು. ಈ ಕಲಿಯುಗದಲ್ಲೂ ಶಾಪ ಎಂಬುದು ಇದೆಯೇ? ಸಾಧ್ಯವಾದರೆ ಮುಂದೆ ನೋಡೋಣ.

Advertisement

ಮಹಾವಿಷ್ಣು ಎಂದ ಕೂಡಲೇ ನಮಗೆ ಮನಸ್ಸಿಗೆ ಬರುವುದೇ ದಶಾವತಾರ. ವೈಕುಂಠದ ದ್ವಾರಪಾಲಕರಾದವರು ಜಯ ಮತ್ತು ವಿಜಯರು. ಒಮ್ಮೆ ಮಹಾವಿಷ್ಣುವಿನ ದರ್ಶನಕ್ಕೆ ಬಂದ ಬ್ರಹ್ಮಮಾನಸಪುತ್ರರನ್ನು ಇವರು ದ್ವಾರದಲ್ಲೇ ತಡೆಯುತ್ತಾರೆ. ಕುಪಿತರಾದ ಆ ಕುಮಾರರು ಜಯ ವಿಜಯರನ್ನು ಭೂಮಿಯಲ್ಲಿ ಹುಟ್ಟುವಂತೆ ಶಪಿಸುತ್ತಾರೆ. ಮುಂದಿನ ಕಥೆಯಲ್ಲಿ ನಾರಾಯಣನು ಅವರಿಗೆ ಮೂರು ಅಥವಾ ಏಳು ಜನ್ಮಗಳ ಆಯ್ಕೆ ಕೊಡುತ್ತಾನೆ. ಇರಲಿ, ಶಾಪಗ್ರಸ್ತರಾದ ದ್ವಾರಪಾಲಕರು ಭುವಿಯಲ್ಲಿ ರಕ್ಕಸರಾಗಿ ಹುಟ್ಟಿದ ಮೇಲೆ, ಅವರ ದಮನಕ್ಕಾಗಿ ಮಾತ್ರವಲ್ಲದೇ ಮಿಕ್ಕ ಲೋಕ ಕಲ್ಯಾಣಕ್ಕೂ ನಾರಾಯಣನು ಭುವಿಗೆ ಬರುತ್ತಾನೆ ಎಂಬುದು ಬಲು ಪ್ರಚಲಿತ ಮತ್ತು ಪ್ರಸಿದ್ದವಾದ ಮಹಾಕಾವ್ಯ ರೂಪದ ಕಥೆಗಳು.

ದಾನಶೂರ ಎಂದೇ ಖ್ಯಾತನಾದ ಮಹಾರಥಿ ಕರ್ಣನಿಗೂ ಶಾಪಕ್ಕೂ ಬಿಡದ ನಂಟು. ಶಾಪ ಎಂಬುದು ಅವನ ಹೆಸರಿನ ಭಾಗ ಎಂಬಷ್ಟು. ಹಲವಾರು ಪ್ರಸಂಗಗಳನ್ನು ಬದಿಗಿರಿಸಿ, ದಶಾವತಾರಕ್ಕೂ ಕರ್ಣನಿಗೂ ಗಂಟು ಹಾಕಿ ಶಾಪ ವೃತ್ತಾಂತ ನೋಡೋಣ. ಆಚಾರ್ಯ ದ್ರೋಣರಿಂದ ವಿದ್ಯೆ ಕಲಿಯಲಾಗದೆ ತಿರಸ್ಕೃತನಾದ ಕರ್ಣನು ಪರಶುರಾಮರಲ್ಲಿ ಬರುತ್ತಾನೆ. ತಾನು ಕ್ಷತ್ರಿಯನಲ್ಲ ಬ್ರಾಹ್ಮಣ ಎಂದು ಹೇಳಿಕೊಂಡು ವಿದ್ಯೆ ಕಲಿಯುತ್ತಾನೆ.

ಒಮ್ಮೆ ಕರ್ಣನ ಮಡಿಲ ಮೇಲೆ ತಲೆ ಇರಿಸಿ ಮಲಗಿರುವಾಗ ದುಂಬಿಯೊಂದು ಬಂದು ಅವನ ತೊಡೆಯನ್ನೇ ಕೊರೆಯುತ್ತದೆ. ನಿದ್ರೆಯಿಂದ ಎಬ್ಬಿಸಿದರೂ, ಎಬ್ಬಿಸದಿದ್ದರೂ ತಾನು ಗುರುಗಳ ಕೋಪಕ್ಕೆ ಗುರಿಯಾಗುವುದು ಖಚಿತ ಎಂದೇ ಅರಿತ ಕರ್ಣ ನೋವನ್ನು ಸಹಿಸಿಕೊಂಡು ಕೂರುತ್ತಾನೆ. ಹರಿದ ರಕ್ತದಿಂದ ಎಚ್ಚೆತ್ತ ಪರಶುರಾಮ, ಇಂಥಾ ನೋವನ್ನು ಕ್ಷತ್ರಿಯ ಮಾತ್ರ ಸಹಿಸಬಲ್ಲ ಎಂದು ಅರಿತು ಕರ್ಣನಿಗೆ ಶಾಪ ನೀಡುತ್ತಾರೆ. “ಅಗತ್ಯವಿರುವಾಗಲೇ ಆಯುಧಗಳ ಬಗೆಗಿನ ಜ್ಞಾನವು ಮನಸ್ಸಿನಿಂದ ಮರೆಯಾಗಲಿ’ ಎಂಬುದೇ ಶಾಪ.

ಈ ಎರಡೂ ಸನ್ನಿವೇಶಗಳಲ್ಲಿ, ಶಾಪ ನೀಡಿದವರಿಗೆ ಶಾಪ ಕೊಡಲು ಪ್ರೇರೇಪಿಸಿದ್ದೇ ಅವರಲ್ಲಿನ ಕೋಪ. ಬ್ರಹ್ಮ ಮಾನಸಪುತ್ರರಾದ ತಮ್ಮನ್ನೇ ತಡೆಯುವಷ್ಟು ಧೈರ್ಯವೇ ಈ ದ್ವಾರಪಾಲಕರಿಗೆ ಎಂಬ ಅವಮಾನದೊಡಗೂಡಿದ ಸಿಟ್ಟೇ ಆ ಸನ್ನಿವೇಶದ ಶಾಪಕ್ಕೆ ಕಾರಣ. ತಾನು ಬ್ರಾಹ್ಮಣ ಎಂದು ಸುಳ್ಳನ್ನಾಡಿ ತನ್ನಿಂದ ವಿದ್ಯೆ ಕಲಿತವ ಈ ಕರ್ಣ ಎಂಬುದು ಪರಶುರಾಮರ ಸಿಟ್ಟು. ನಿಜಕ್ಕೂ ಆ ಸಂದರ್ಭದಲ್ಲಿ ಸಿಟ್ಟು ಬಂದಿತ್ತೇ ? ಅಥವಾ ಬೇರಾವುದೋ ಸ್ಥಿತಿಯು ಕೋಪಕ್ಕೆ ತಿರುಗಿ ಶಾಪದಲ್ಲಿ ಕೊನೆಗೊಂಡೀತೇ? ಶಾಪ ನೀಡುವವರ ಸನ್ನಿವೇಶ ಏನೇ ಇರಲಿ ಆದರೆ ಅನುಭವಿಸುವವರು ಶಾಪಗ್ರಸ್ತರೇ ತಾನೇ? ಶಾಪ ಪಡೆದುಕೊಂಡ ಕೂಡಲೇ ತಮ್ಮ ತಪ್ಪು ಅರಿವಾಗಿ ಕ್ಷಮೆ ಕೇಳಿ ಶಾಪ ವಾಪಸ್‌ ತೆಗೆದುಕೊಳ್ಳುವಂತೆ ಬೇಡಿರುವ ಸನ್ನಿವೇಶಗಳು ಅನೇಕ.

ಇಲ್ಲಿ ಅರಿವಾಗುವ ವಿಷಯ ಏನೆಂದರೆ “ಶಾಪ ನೀಡಿದವರಿಗೆ’ ತಮ್ಮದೇ ಶಾಪವನ್ನೂ ವಾಪಸು ತೆಗೆದುಕೊಳ್ಳಲಾಗದೇ ಇರೋದು. ಅರ್ಥಾತ್‌ ಶಾಪವಿತ್ತವರಿಗೆ ಶಾಪವೀಯುವ ಅರ್ಹತೆ ಇತ್ತು. ಆದರೆ ಅದನ್ನು ವಾಪಸು ಪಡೆಯುವ ಅರ್ಹತೆ ಇಲ್ಲ. ಶಾಪ ವಿಮೋಚನೆ ಎಂಬುದು ಹೆಚ್ಚು ಸಮಯದಲ್ಲಿ ಹರಿಹರರಲ್ಲೇ ಕೊನೆಯಾಗುತ್ತದೆ. ಅವರಿಂದಲೇ ಪರಿಹಾರ, ಅವರಿಂದಲೇ ವಿಮೋಚನೆ.

ಒಂದರ್ಥದಲ್ಲಿ ಶಾಪ ಎಂದರೆ ಒಬ್ಬರ ಕಟುನುಡಿ. ಆ ಶಾಪದ ಫ‌ಲಾನುಭವಿಗಳು ತಪ್ಪು ಮಾಡಿದವರು. ಆ ಶಾಪವನ್ನು ನೀಡಿದವರು ಅತೀಂದ್ರಿಯಶಕ್ತಿ ಉಳ್ಳವರು. ಇಂಥವರು ದೊಡ್ಡ ಸಾಧಕರೂ ಆಗಿರಬಹುದು ಅಥವಾ ವಾಮಾಚಾರಿಗಳೂ ಆಗಿರಬಹುದು. ಒಟ್ಟಾರೆ ಹೇಳುವುದಾದರೆ ಸಾಮಾನ್ಯ ಮನುಷ್ಯರಿಗಿಂತ ಹೆಚ್ಚು ಅರಿತವರು ಮತ್ತು ಸಾಧಿಸಿರುವವರು. ಮನಸ್ಸು ಕ್ಷೊàಭೆಗೊಂಡ ಸಮಯದಲ್ಲಿ ಅವರಿಂದ ಹೊರಹೊಮ್ಮಿದ ಕಟುನುಡಿಗಳೇ ಶಾಪ. ಆ ಶಾಪವು ಕೇವಲ ನುಡಿಗಳೇ ಆಗಿರದೇ, ಯಾರನ್ನು ಕುರಿತು ಶಾಪ ನೀಡಲಾಗಿದೆಯೋ ಅಂಥವರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿ ಮನಸ್ಸಿನಲ್ಲಿ ಮನೆ ಮಾಡಿ ಆ ಕಟುನುಡಿಯಂತೆಯೇ ವರ್ತಿಸಲೂ ಆರಂಭಿಸುತ್ತಾರೆ. ಇದೂ ಒಂದು ರೀತಿ ವಶೀಕರಣವೇ ಸರಿ. ಶಾಪ ಪಡೆದುಕೊಳ್ಳುವವರು ಅತೀ ಸಾಮಾನ್ಯರೂ ಆಗಿರಬಹುದು. ಆದರೆ ಶಾಪ ಕೊಡುವವರು ಮಾತ್ರ ವಿಶಿಷ್ಟ ಶಕ್ತಿಯುಳ್ಳವರೇ ಆಗಿರುತ್ತಾರೆ.

ನಮ್ಮದೇ ಕಾನೂನಿನ ಪ್ರಕಾರ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಕೂಡದು ಎಂಬ ನೀತಿಯನ್ನೇ ಅನುಸರಿಸಿದರೆ, ಶಾಪ ಎಂಬ ಸನ್ನಿವೇಶವು ಸದಾ ಕಾಲ ಸರಿಯೇ ಆಗಿರುತ್ತದೆಯೇ? ಯಾವುದೋ ಸನ್ನಿವೇಶದಲ್ಲಿ, ತಪ್ಪೇ ಮಾಡಿಲ್ಲದವನು ಶಾಪ ಹೊಂದುವವನೇ ಆದರೆ, ನಿಜಕ್ಕೂ ತಪ್ಪು ಮಾಡಿದವರು ಶಾಪ ನೀಡಿದವರೇ ಅಲ್ಲವೇ? ಇಂಥಾ ಉದಾಹರಣೆಯೂ ನಮ್ಮ ಕಥೆಗಳಲ್ಲಿ ಇವೆ. ಅಂಥಾ ಒಂದು ಉದಾಹರಣೆಯೇ ಭಕ್ತ ಅಂಬರೀಷ. ಹಲವಾರು ಬಾರಿ ಶಾಪ ನೀಡುವವರೂ ಮತ್ತು ಪಡೆಯುವವರೂ ಮುಖಾಮುಖಿಯೇ ಆಗಿರುತ್ತಾರೆ. ಆದರೆ ಕಾಳಿದಾಸನು ತನ್ನ ಅಭಿಜ್ಞಾನ ಶಾಕುಂತಲ ನಾಟಕದಲ್ಲಿ ಶಾಪದ ಸನ್ನಿವೇಶವನ್ನು ಭಿನ್ನವಾಗಿ ತೋರಿಸಿದ್ದಾನೆ.

ಆ ಸನ್ನಿವೇಶದಲ್ಲಿ ಶಾಪಗ್ರಸ್ತಳಿಗೆ ಅದರ ಬಗ್ಗೆ ಅರಿವೇ ಇರುವುದಿಲ್ಲ. ಹಾಗಾಗಿ ಅವಳು ಆ ಕಟುನುಡಿಗಳನ್ನು ಕೇಳಿರುವುದೂ ಇಲ್ಲ. ಹೀಗಿದ್ದೂ ಅಲ್ಲೆಲ್ಲೊ ಇದ್ದ ದುಷ್ಯಂತನಿಗೆ ಅದರ ಪರಿಣಾಮ ಬೀರಿದ್ದಾದರೂ ಹೇಗೆ? ಕಥೆಯನ್ನು ಕಥೆಯಾಗಿ ತೆಗೆದುಕೊಂಡರೆ ಶಾಪದ ಫ‌ಲವಾಗಿ ದುಷ್ಯಂತನಿಗೆ ಶಕುಂತಲೆ ಯಾರು ಎಂದೇ ಗೊತ್ತಾಗಲಿಲ್ಲ ಎಂಬುದು. ಭಿನ್ನವಾಗಿ ಆಲೋಚಿಸಿದರೆ, ಸಭೆಯ ಮಧ್ಯೆಯಲ್ಲಿ ಯಾರೋ ಒಬ್ಬಳು ಒಂದಿಬ್ಬರು ಋಷಿಕುಮಾರರ ಜತೆಗೆ ಬಂದು “ಹೇ ರಾಜನ್‌ ನೀನೇ ನನ್ನ ಗಂಡ’ ಎಂದರೆ ರಾಜನ ಬಗೆಗಿನ ಗೌರವವಾದರೂ ಏನಾದೀತು? ತನ್ನ ಘನತೆ ಕಾಪಾಡಿಕೊಳ್ಳಲು ಅವಳನ್ನು ಗುರುತಿಸಲೇ ಇಲ್ಲ ಎಂಬಂಥ ಸನ್ನಿವೇಶವೇಕೆ ಏರ್ಪಾಡಾಗಿರಬಾರದು? ಆ ಅನಂತರ ಪ್ರೇಮವೇ ಗೆದ್ದು ದುಷ್ಯಂತನು ಓಡೋಡಿ ಬಂದಿರಬಾರದೇಕೆ? ಪ್ರಶ್ನೆಗಳಿಗೆ ಉತ್ತರ ಹುಡುಕುವ ದಿಶೆಯಲ್ಲಿ ಬರೀ ಪ್ರಶ್ನೆಗಳೇ ಇವೆಯಲ್ಲಾ?

ಶಾಪ ನೀಡುವವರಿಗೆ ಇರಬೇಕಾದ ಅರ್ಹತೆಗಳು ಏನು? ತಪಸ್ಸಿನ ಶಕ್ತಿಯೇ? ಅಧ್ಯಯನವೇ? ತಮಗಿರುವ ವಿಶೇಷ ಶಕ್ತಿಯನ್ನೇ ಬಳಸಿ ಶಾಪ ನೀಡಿದ್ದೇ ಆದಲ್ಲಿ, ಶಾಪದ ಅನಂತರ ತಮ್ಮ ಶಕ್ತಿಯನ್ನು ಪುನಶ್ಚೇತನಗೊಳಿಸಿಕೊಳ್ಳಬೇಕೇ? ತನ್ನ ತಪಶಕ್ತಿಯಿಂದ ಬಲಾಕ ಪಕ್ಷಿಯನ್ನೇ ಬಲಿ ತೆಗೆದುಕೊಂಡ ಕೌಶಿಕ ಮುನಿಯು ಆ ಪಕ್ಷಿಯನ್ನು ಶಪಿಸಲಿಲ್ಲ. ಹಾಗೆಯೇ, ಮುಂದೆ ತನಗೆ ಭಿಕ್ಷೆ ನೀಡಲು ತಡ ಮಾಡಿದ ಸಾಧ್ವಿಯನ್ನು ಶಪಿಸಲಿಲ್ಲ ಬದಲಿಗೆ ಎರಡೂ ಸನ್ನಿವೇಶದಲ್ಲಿ ಅವನು ತನ್ನ ಕೆಂಗಣ್ಣನ್ನು ಮಾತ್ರ ಬೀರಿದ್ದು. ಶಾಪ ಎಂದರೆ ಕಠೊರನುಡಿಗಳು ಇರಲೇಬೇಕು? ಅಥವಾ ಕಠೊರ ವರ್ತನೆಯೇ ಸಾಕೇ ?

ಇಷ್ಟೆಲ್ಲಾ ಹೇಳಿದ ಮೇಲೆ ನನ್ನ ಮೂಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆಯೇ? ಇಲ್ಲವೇ? ನೀವೇ ಹೇಳಿ ಆಯ್ತಾ? ಶಾಪದ ಬಗ್ಗೆ ಅರಿತ ಮೇಲೆ ವರ ಎಂಬುದರ ಬಗ್ಗೆ ಅರಿಯಲು ಅಷ್ಟು ಕಷ್ಟವಲ್ಲ ಎಂದುಕೊಳ್ಳುವುದು ಸರಿಯಲ್ಲ. ಸಾಧು ಸಂತ ಭಕ್ತರೂ ವರ ಪಡೆದಿದ್ದರು, ರಕ್ಕಸರೂ ವರ ಪಡೆದಿದ್ದರು. ಇರಲಿ, ಮುಂದಿನ ದಿನಗಳಲ್ಲಿ ಈ “ವರ’ದ ಬಗ್ಗೆ ಮಾತನಾಡೋಣ.

* ಶ್ರೀನಾಥ್‌ ಭಲ್ಲೆ, ರಿಚ್ಮಂಡ್‌

Advertisement

Udayavani is now on Telegram. Click here to join our channel and stay updated with the latest news.

Next