Advertisement

ದಿನಭತ್ತೆ ಹೆಚ್ಚಳಕ್ಕೆ ಆರ್ಥಿಕ ಇಲಾಖೆ ಅನುಮೋದನೆ

09:54 AM Feb 12, 2020 | mahesh |

ಉಡುಪಿ: ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕದಳದ ಸಿಬಂದಿಯ ವೇತನ ಹೆಚ್ಚಳಕ್ಕೆ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರಕಿದ್ದು, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸುಮಾರು 456 ಗೃಹ ರಕ್ಷಕದಳ ಸಿಬಂದಿಗೆ ಪ್ರಯೋಜನ ಸಿಗಲಿದೆ.

Advertisement

ದಿನ ಭತ್ತೆ 750 ರೂ.ಗೆ ಏರಿಕೆ!
ಬೆಂಗಳೂರು ವಲಯದ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುವ ಗೃಹರಕ್ಷಕರಿಗೆ 500 ರೂ. (ದಿನಭತ್ತೆ) ನಿಗದಿಪಡಿಸ ಲಾಗಿದೆ. ಉಳಿದೆಡೆ 380 ರೂ. ನೀಡಲಾಗುತ್ತಿದೆ. ಇದೀಗ ಸರಕಾರ ಗೃಹ ರಕ್ಷಕರಿಗೆ 750 ರೂ.ಗೇರಿಸಿ 2020ರ ಎಪ್ರಿಲ್‌ 1ರಿಂದ ಅನುಷ್ಠಾನಗೊಳಿಸುವಂತೆ ಆಡಳಿತ ಇಲಾಖೆ ಕಾರ್ಯದರ್ಶಿ ಸಿ.ಆರ್‌. ಹೇಮಲತಾ ಆದೇಶ ನೀಡಿದ್ದಾರೆ. ಸಂಪುಟದ ಹಸಿರು ನಿಶಾನೆ ದೊರಕುವುದಷ್ಟೇ ಬಾಕಿ.

ಇತರ ಗೃಹರಕ್ಷಕರು ಕಿಡಿ!
ಇದು ಪೊಲೀಸ್‌ ಇಲಾಖೆಯಲ್ಲಿರುವ ಗೃಹ ರಕ್ಷಕರಿಗೆ ಮಾತ್ರ ಅನ್ವಯವಾಗಿರುವುದರಿಂದ ಉಳಿದ ಗೃಹರಕ್ಷಕ ಸಿಬಂದಿಯ ಕಣ್ಣು ಕೆಂಪಾಗಿಸಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಪ್ರವಾಸಿ ಮಿತ್ರ, ಗಣಿ ಇಲಾಖೆ, ಅಗ್ನಿಶಾಮಕ ದಳ, ನೆರೆ ನಿರ್ವಹಣೆ ಸಹಿತ ವಿವಿಧ ಕಡೆ 1,500 ಗೃಹರಕ್ಷಕರ ಸಿಬಂದಿ ದಿನಗೂಲಿ ಆಧಾರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಇದೀಗ ವೇತನ ತಾರತಮ್ಯದಿಂದಾಗಿ ಪೊಲೀಸ್‌ ಇಲಾಖೆ ಹೊರತುಪಡಿಸಿ ಇತರ ಇಲಾಖೆಗಳಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಭತ್ತೆ ಏರಿಕೆಯನ್ನು ಅವರಿಗೂ ಅನ್ವಯಿಸುವಂತೆ ಅವಳಿ ಜಿಲ್ಲೆಯಿಂದ ಮನವಿ ಸಲ್ಲಿಕೆಯಾಗಿದೆ.

ದ.ಕ.: 1,000; ಉಡುಪಿ: 500 ಗೃಹರಕ್ಷಕ ಸಿಬಂದಿ
ದ.ಕ. ಜಿಲ್ಲೆಯಲ್ಲಿ ಒಟ್ಟು 1,000 ಮಂದಿ ಗೃಹರಕ್ಷಕರಿದ್ದಾರೆ. ಅವರಲ್ಲಿ 350 ಮಂದಿ ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 650 ಮಂದಿ ಖಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 500 ಮಂದಿ ಗೃಹರಕ್ಷಕ
ರಿದ್ದು, 132 ಜನ ಕರಾವಳಿ ಪೊಲೀಸ್‌ ಪಡೆ, 106 ಜನ ಆರಕ್ಷಕರ ಠಾಣೆ, 10 ಮಂದಿ ಪ್ರವಾಸಿ ಮಿತ್ರದಲ್ಲಿ, ಐವರು ಗಣಿ ಇಲಾಖೆಯಲ್ಲಿ, 19 ಮಂದಿ ಅಗ್ನಿಶಾಮಕ ದಳದಲ್ಲಿ, ತಲಾ 10 ಮಂದಿ ನೆರೆ ನಿರ್ವಹಣೆ, ಜೈಲು ಕರ್ತವ್ಯದಲ್ಲಿದ್ದಾರೆ.

Advertisement

ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುವ ಗೃಹ ರಕ್ಷಕ ದಳದ ಸಿಬಂದಿಗೆ 750 ರೂ. ದಿನಭತ್ತೆ ನೀಡುವಂತೆ ಇಲಾಖೆಯಿಂದ ಯಾವುದೇ ರೀತಿಯಾದ ಲಿಖೀತ ಆದೇಶ ಬಂದಿಲ್ಲ. ಸಚಿವ ಸಂಪುಟದಲ್ಲಿ ವಿಷಯ ಪ್ರಸ್ತಾವವಿದೆ ಎಂದು ತಿಳಿದುಬಂದಿದೆಯಷ್ಟೆ.
-ಡಾ| ಮುರಲೀ ಮೋಹನ್‌, ಡಾ| ಪ್ರಶಾಂತ ಶೆಟ್ಟಿ,  ಸಮಾದೇಷ್ಟರು, ದ.ಕ./ ಉಡುಪಿ ಜಿಲ್ಲಾ ಗೃಹರಕ್ಷಕ ದಳ

ಸರಕಾರ ನಮ್ಮ ಸೇವೆಯನ್ನು ಪರಿಗಣಿಸುತ್ತಿಲ್ಲ. ಇದೀಗ ವೇತನ ತಾರತಮ್ಯದಿಂದ ಇತರ ಇಲಾಖೆಗಳಲ್ಲಿ ಕೆಲಸ ಮಾಡಲು ಮನಸ್ಸು ಒಪ್ಪುತ್ತಿಲ್ಲ. ತಿಂಗಳಪೂರ್ತಿ ಕೆಲಸ ಮಾಡಿ ದರೆ 9,000 ರೂ. ಸಂಬಳ ಸಿಗುತ್ತದೆ. ರಜೆ ಹಾಕಿದರೆ ವೇತನದಲ್ಲಿ ಕಡಿತವಾಗುತ್ತದೆ. ಜೀವನ ಭದ್ರತೆಗಾಗಿ ಪರದಾಡುವ ಸ್ಥಿತಿ ಬಂದಿದೆ.
– ಹೆಸರು ಹೇಳಲಿಚ್ಛಿಸದ ಗೃಹರಕ್ಷಕ ಸಿಬಂದಿ

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next