Advertisement

ಡೆಲ್ಲಿ ಕ್ಯಾಪಿಟಲ್ಸ್‌ : ಪಂತ್‌ ಕ್ಯಾಪ್ಟನ್ಸಿಗೊಂದು ಟೆಸ್ಟ್‌

10:42 PM Apr 06, 2021 | Team Udayavani |

ಇತಿಹಾಸವನ್ನು ಅವಲೋಕಿಸಿ ಹೇಳುವುದಾದರೆ ಡೆಲ್ಲಿ ಕ್ಯಾಪಿಟಲ್ಸ್‌ ಒಂದು ಸಾಮಾನ್ಯ ತಂಡ. ಇದು ಎಂದೂ ಕಪ್‌ ಗೆಲ್ಲುವ ಫೇವರಿಟ್‌ ಟೀಮ್‌ ಆಗಿರಲೇ ಇಲ್ಲ. ಹೀಗಾಗಿ ಡೆಲ್ಲಿ ಮೇಲೆ ಯಾರೂ ಬೆಟ್‌ ಕೂಡ ಕಟ್ಟುತ್ತಿರಲಿಲ್ಲ. ಆದರೂ ಹೆಸರು ಬದಲಿಸಿಕೊಂಡ ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ ಕಳೆದ ವರ್ಷ ಮೊದಲ ಸಲ ಫೈನಲ್‌ಗೆ ಲಗ್ಗೆ ಇರಿಸಿತು. ಅಲ್ಲಿ ಜೋಶ್‌ ತೋರಲು ವಿಫಲವಾಗಿ ಮುಂಬೈಗೆ ಶರಣಾಯಿತು.

Advertisement

2020ರಲ್ಲಿ ಡೆಲ್ಲಿಯನ್ನು ಪ್ರಶಸ್ತಿ ಸುತ್ತಿಗೆ ಮುನ್ನಡೆಸಿದ ಶ್ರೇಯಸ್‌ ಅಯ್ಯರ್‌ ಈ ಬಾರಿ ಗಾಯಾಳಾಗಿ ಹೊರಗುಳಿದಿದ್ದಾರೆ. ಹೀಗಾಗಿ ಟೀಮ್‌ ಇಂಡಿಯಾದ ಕೀಪರ್‌, ಸ್ಫೋಟಕ ಆಟಗಾರ, ಮ್ಯಾಚ್‌ ವಿನ್ನರ್‌ ಖ್ಯಾತಿಯ ರಿಷಭ್‌ ಪಂತ್‌ಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಪಂತ್‌ ಡೆಲ್ಲಿ ತಂಡದ ಅದೃಷ್ಟವನ್ನು ಬದಲಿಸಬಲ್ಲರೇ? ಕುತೂಹಲ ಸಹಜ.

ಸಾಲಿಡ್‌ ಬ್ಯಾಟಿಂಗ್‌ ಲೈನ್‌ಅಪ್‌
ಅಯ್ಯರ್‌ ಹೊರತಾಗಿಯೂ ಡೆಲ್ಲಿಯ ಬ್ಯಾಟಿಂಗ್‌ ಲೈನ್‌ಅಪ್‌ ಸಾಲಿಡ್‌ ಆಗಿಯೇ ಇದೆ. ಪೃಥ್ವಿ ಶಾ, ಧವನ್‌, ರಹಾನೆ ಅಗ್ರ ಕ್ರಮಾಂಕದ ಪ್ರಮುಖರು. ಅಯ್ಯರ್‌ ಜಾಗಕ್ಕೆ ಸ್ಮಿತ್‌ ಸೂಕ್ತ ಬದಲಿ ಆಟಗಾರ. ಬಳಿಕ ಪಂತ್‌, ಸ್ಟೋಯಿನಿಸ್‌, ಹೆಟ್‌ಮೈರ್‌, ಬಿಲ್ಲಿಂಗ್ಸ್‌ ಬಿಗ್‌ ಹಿಟ್ಟರ್‌ಗಳ ಪಾತ್ರ ನಿರ್ವಹಿಸಬಲ್ಲರು.

ಧವನ್‌ ಕಳೆದ ವರ್ಷ 618 ರನ್‌ ಬಾರಿಸಿ ದ್ವಿತೀಯ ಸರ್ವಾಧಿಕ ಸ್ಕೋರರ್‌ ಎನಿಸಿದ್ದರು. ಇಂಗ್ಲೆಂಡ್‌ ಎದುರಿನ ಏಕದಿನ ಸರಣಿಯಲ್ಲೂ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಶಾ ಅವರಂತೂ ವಿಜಯ್‌ ಹಜಾರೆ ಟ್ರೋಫಿಯಲ್ಲಿ 827 ರನ್‌ ಪೇರಿಸಿ ದಾಖಲೆಗೈದ ಹುರುಪಿನಲ್ಲಿದ್ದಾರೆ. ಪಂತ್‌ಗೆ ಫಾರ್ಮ್ ಅಗತ್ಯವಿಲ್ಲ. ಆದರೆ ಹೆಟ್‌ಮೈರ್‌ ಸಿಡಿದು ನಿಲ್ಲುವ ಅಗತ್ಯವಿದೆ.

ರಬಾಡ-ನೋರ್ಜೆ ನಿರ್ಣಾಯಕ
ಬೌಲಿಂಗ್‌ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ರಬಾಡ-ನೋರ್ಜೆ ಜೋಡಿಯೇ ಡೆಲ್ಲಿಯ ಶಕ್ತಿ. ಕಳೆದ ವರ್ಷ ಇವರಿಬ್ಬರು ಸೇರಿ 52 ವಿಕೆಟ್‌ ಬೇಟೆಯಾಡಿದ್ದರು. ಇವರಿಗೆ ವೋಕ್ಸ್‌, ಇಶಾಂತ್‌ ಶರ್ಮ, ಉಮೇಶ್‌ ಯಾದವ್‌ ಹೆಚ್ಚಿನ ಬೆಂಬಲ ನೀಡಬೇಕಾದ ಅಗ್ಯವಿದೆ.
ತಂಡದ ಸ್ಪಿನ್‌ ವಿಭಾಗದಲ್ಲಿ ತ್ರಿವಳಿಗಳಾದ ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌ ಮತ್ತು ಅಮಿತ್‌ ಮಿಶ್ರಾ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆ ಇದೆ.

Advertisement

ಬದಲಿ ಆಟಗಾರರ ಕೊರತೆ
ಕ್ವಾಲಿಟಿ ಹಾಗೂ ಸಮರ್ಥ ಬದಲಿ ಆಟಗಾರರ ಕೊರತೆ ಡೆಲ್ಲಿಯ ಪ್ರಮುಖ ಸಮಸ್ಯೆ. ಉದಾಹರಣೆಗೆ, ರಬಾಡ-ನೋರ್ಜೆ ಮೊದಲ ಪಂದ್ಯದಲ್ಲಿ ಆಡುವುದಿಲ್ಲ; ಇವರಿಗೆ ಸಮರ್ಥ ಬದಲಿ “ವಿಕೆಟ್‌ ಟೇಕರ್‌’ ವೇಗಿಗಳು ಯಾರಿದ್ದಾರೆ ಎಂಬುದೊಂದು ಪ್ರಶ್ನೆ. ಅಕಸ್ಮಾತ್‌ ಪಂತ್‌ ಹೊರಗುಳಿಯುವ ಸಂದರ್ಭ ಎದುರಾದರೆ ಸೂಕ್ತ ಪರ್ಯಾಯ ಆಯ್ಕೆ ಯಾರು ಎಂಬುದು ಕೂಡ ಯೋಚಿಸಬೇಕಾದ ಸಂಗತಿ. ಕೀಪಿಂಗ್‌ ಏನೋ ವಿಷ್ಣು ವಿನೋದ್‌ ಮಾಡಬಲ್ಲರು. ಆದರೆ ಪಂತ್‌ ಶೈಲಿಯ ಬ್ಯಾಟಿಂಗ್‌ ಅವರಿಂದ ಸಾಧ್ಯವಿಲ್ಲ.

ಸ್ಥಿರ ಪ್ರದರ್ಶನದ ಅನಿವಾರ್ಯತೆ
ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗುವುದು ಡೆಲ್ಲಿಯ ಪ್ರಮುಖ ಸಮಸ್ಯೆ. ಕಳೆದ ವರ್ಷ ಒಂದು ಹಂತದಲ್ಲಿ ಸತತ 7 ಪಂದ್ಯಗಳನ್ನು ಗೆದ್ದ ಬಳಿಕ ನಿರಂತರ 4 ಮುಖಾಮುಖೀಗಳಲ್ಲಿ ಎಡವಿ ಪ್ಲೇ ಆಫ್‌ ಅವಕಾಶವನ್ನೇ ಕೈಚೆಲ್ಲುವ ಅಪಾಯಕ್ಕೆ ಸಿಲುಕಿತ್ತು. ಈ ವರ್ಷ ಇಂಥ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕಿದೆ.

ಒಟ್ಟಾರೆ ಡೆಲ್ಲಿ ಓಟ ಈ ವರ್ಷ ಎಲ್ಲಿಯ ತನಕ ಮುಂದುವರಿಯುತ್ತದೋ ಹೇಳಲಾಗದು. ಆದರೆ ಯುವ ಕ್ರಿಕೆಟಿಗ ರಿಷಭ್‌ ಪಂತ್‌ ಪಾಲಿಗೆ ಇದೊಂದು ನಾಯಕತ್ವದ ಅಗ್ನಿಪರೀಕ್ಷೆ ಎಂಬುದು ಸುಳ್ಳಲ್ಲ. ಯಶಸ್ವಿಯಾದರೆ ಟೀಮ್‌ ಇಂಡಿಯಾಕ್ಕೆ ಮತ್ತೋರ್ವ “ಧೋನಿ’ ಸಿಗುವುದರಲ್ಲಿ ಅನುಮಾನವಿಲ್ಲ.

ತಂಡ: ರಿಷಭ್‌ ಪಂತ್‌ (ನಾಯಕ), ಶಿಖರ್‌ ಧವನ್‌, ಪೃಥ್ವಿ ಶಾ, ಅಜಿಂಕ್ಯ ರಹಾನೆ, ಶಿಮ್ರನ್‌ ಹೆಟ್‌ಮೈರ್‌, ಮಾರ್ಕಸ್‌ ಸ್ಟೋಯಿನಿಸ್‌, ಕ್ರಿಸ್‌ ವೋಕ್ಸ್‌, ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಅಮಿತ್‌ ಮಿಶ್ರಾ, ಲಲಿತ್‌ ಯಾದವ್‌, ಪ್ರವೀಣ್‌ ದುಬೆ, ಕಾಗಿಸೊ ರಬಾಡ, ಅನ್ರಿಚ್‌ ನೋರ್ಜೆ, ಇಶಾಂತ್‌ ಶರ್ಮ, ಆವೇಶ್‌ ಖಾನ್‌, ಸ್ಟೀವನ್‌ ಸ್ಮಿತ್‌, ಉಮೇಶ್‌ ಯಾದವ್‌, ರಿಪಲ್‌ ಪಟೇಲ್‌, ವಿಷ್ಣು ವಿನೋದ್‌, ಲುಕ್ಮನ್‌ ಮರಿವಾಲಾ, ಎಂ. ಸಿದ್ಧಾರ್ಥ್, ಟಾಮ್‌ ಕರನ್‌, ಸ್ಯಾಮ್‌ ಬಿಲ್ಲಿಂಗ್ಸ್‌.
ರನ್ನರ್ ಅಪ್‌: 01
2020: ಮುಂಬೈ ವಿರುದ್ಧ 5 ವಿಕೆಟ್‌ ಸೋಲು

Advertisement

Udayavani is now on Telegram. Click here to join our channel and stay updated with the latest news.

Next