Advertisement

ವಸತಿ ಸೌಲಭ್ಯ ಒದಗಿಸಲು ಡಿಸೆಂಬರ್‌ ಗಡುವು

03:12 PM Nov 22, 2017 | |

ಪುತ್ತೂರು: ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಪುತ್ತೂರಿನಲ್ಲಿ ವಸತಿ ಸೌಲಭ್ಯದ ಪ್ರಗತಿ ತುಂಬಾ ಕಡಿಮೆ ಇದೆ. ಇವನ್ನೆಲ್ಲ ಸರಿಪಡಿಸಿ ಡಿಸೆಂಬರ್‌ನೊಳಗೆ ಕೆಲಸ ಮುಗಿಸಬೇಕು. ಅದಾಲತ್‌ ಪಿಡಿಒಗಳಿಗೆ ಕೊನೆಯ ಅವಕಾಶ. ಮುಂದೆ ನೋಟಿಸ್‌ ನೀಡದೆ ಅಮಾನತು ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ಎಚ್ಚರಿಕೆ ನೀಡಿದರು.

Advertisement

ಪುತ್ತೂರು ಶ್ರೀ ಗುರುನಾರಾಯಣ ಸಭಾಭವನದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ವಸತಿ ಅದಾಲತ್‌ನಲ್ಲಿ ಫಲಾನುಭವಿಗಳ ಸಮಸ್ಯೆ ಆಲಿಸಿದ ಅವರು, ಪುತ್ತೂರು ತಾಲೂಕಿಗೆ 1704 ಮನೆ ಮಂಜೂರಾಗಿದ್ದು, 24 ಕೋಟಿ ರೂ. ಬಿಡುಗಡೆಯಾಗಿದೆ. ಜಿಲ್ಲೆಗೆ 8,300 ಮನೆ ಹಾಗೂ 124 ಕೋಟಿ ರೂ. ಅನುದಾನ ಮಂಜೂರಾಗಿದೆ. ಪುತ್ತೂರು ತಾಲೂಕಿನ ಫಲಿತಾಂಶ ನಿರಾಶಾದಾಯಕವಾಗಿದೆ. ಅದರಲ್ಲೂ ರಾಮಕುಂಜ ಶೇ. 61, ಅರಿಯಡ್ಕ ಶೇ. 12, ಕೊಣಾಜೆ ಏನೂ ಇಲ್ಲ ಎಂಬಂತಹ ಸ್ಥಿತಿ ಇದೆ. ಒಂದು ತಾಲೂಕಿನಲ್ಲಿ ಇಷ್ಟು ವ್ಯತ್ಯಾಸ ಬರಲು ಕಾರಣವೇನು ಎನ್ನುವುದೇ ದೊಡ್ಡ ಪ್ರಶ್ನೆ. ಜೀವನದಲ್ಲಿ ಒಂದು ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಆಶೆ. ಇದನ್ನು ಪೂರೈಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಉದಾಸೀನವೂ ಇದೆ ಎಂದರು.

ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ಮಾತನಾಡಿ, ಇದುವರೆಗೆ ದುಡ್ಡು ಪಡೆಯದೇ ಇರುವ ಫಲಾನುಭವಿಗಳೂ ಇದ್ದಾರೆ. ವಿಚಾರಿಸಿದಾಗ ಆಧಾರ್‌ ಲಿಂಕ್‌ ಸಮಸ್ಯೆ ಎನ್ನುತ್ತಾರೆ. ಮೂರು ಬಾರಿ ಲಿಂಕ್‌ ಮಾಡಿಸಲಾಗಿದೆ ಎಂದರು. ಉತ್ತರಿಸಿದ ಜಿ.ಪಂ. ಯೋಜನಾಧಿಕಾರಿ ಲೋಕೇಶ್‌, ನಾಲ್ಕು ಹಂತದ ಹಣವೂ ಬಿಡುಗಡೆ ಆಗಲಿಲ್ಲ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ಮರಳು ಸಮಸ್ಯೆ
34 ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷ ಆಸ್ಗರ್‌ ಆಲಿ ಮಾತನಾಡಿ, ಕೆಲವು ಮನೆಗಳನ್ನು ಬ್ಲಾಕ್‌ ಮಾಡಲಾಗಿದೆ. ಮರಳಿನ ಸಮಸ್ಯೆಯಿಂದ ಕೆಲಸ ಹಿಂದುಳಿದಿದೆ. ಪಿಕಪ್‌ ನಲ್ಲಿ ಕೊಂಡೊಯ್ಯುವಾಗಲೂ ಪೊಲೀಸರು ವಶಕ್ಕೆ ಪಡೆಯುತ್ತಾರೆ ಎಂದರು. ಉತ್ತರಿಸಿದ ಜಿ.ಪಂ. ಸಿಇಒ, ರಚನೆಗೊಂಡ ಜಿಲ್ಲಾ ಸಮಿತಿ, ನಾನ್‌ ಸಿಆರ್‌ಝಡ್‌ ಕ್ಷೇತ್ರಗಳ ನೀತಿಯನ್ನು ಸಡಿಲಿಸಲು ಮುಂದಾಗಿದೆ. 

ಒಂದು ವಾರದಲ್ಲಿ ಸಮಸ್ಯೆ ಬಗೆಹರಿಯಬಹುದು. ಈ ಬಗ್ಗೆ ಎಸ್ಪಿ, ಡಿಸಿಗೂ ಪತ್ರ ಬರೆದಿದ್ದೇನೆ. ಸರಕಾರದ ಯೋಜನೆಗಳಿಗೆ ಮರಳು ಕೊಂಡೊಯ್ಯುವ ವೇಳೆ ಅನಗತ್ಯ ತೊಂದರೆ ಕೊಡದಂತೆ ತಿಳಿಸಲಾಗಿದೆ ಎಂದರು.

Advertisement

ಬಡವರ ಸಮಸ್ಯೆಗೆ ಕಿವಿಯಾಗಿ
34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಫಲಾನುಭವಿಯೊಬ್ಬರು ಮಾತನಾಡಿ, ಫೂಟೋ ತೆಗೆಯುವಾಗ ಬ್ಲಾಕ್‌ ಎಂದು ಬರುತ್ತದೆ ಎಂದರು. ಈ ಬಗ್ಗೆ ಪಿಡಿಒ ಆಸಫ್‌ ಬಳಿ ವಿಚಾರಿಸಿದಾಗ, 2015-16ನೇ ಸಾಲಿನ ಇಂದಿರಾ ಆವಾಸ್‌ ಯೋಜನೆಯಡಿ ನಿರ್ಮಿಸಿದ ಮನೆಯದು. ಇದೀಗ ಬ್ಲಾಕ್‌ ಆಗಿದೆ. ತಾನು ಒಂದು ವರ್ಷದಿಂದ ಇಲ್ಲಿ ಪ್ರಭಾರ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದರು. ಇದರಿಂದ ಕುಪಿತರಾದ ಡಾ| ಎಂ.ಆರ್‌. ರವಿ, ಬಡವರ ಸಮಸ್ಯೆಯನ್ನು ಅಲ್ಲಿಯೇ ಮುಗಿಸಲು ಆಗುವುದಿಲ್ಲವೇ? ಸಮಸ್ಯೆ ಹೊತ್ತುಕೊಂಡು ಅದಾಲತ್‌ ವರೆಗೆ ಬರುವಂತೆ ಮಾಡಿದ್ದೀರಿ. ನಾಚಿಕೆ ಆಗಬೇಕು. ಪಿಡಿಒಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ಜನರಿಗೆ ಗೊತ್ತಾಗಬೇಕು. ಈ ಸ್ಥಿತಿ ಮುಂದುವರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಸತಿ ನಿಗಮಕ್ಕೆ ಭೇಟಿ
ಹಲವು ಮನೆಗಳ ಹೆಸರು ಬ್ಲಾಕ್‌ ಆಗಿರುವುದರ ಬಗ್ಗೆ ಚರ್ಚಿಸಿದಾಗ, ವಸತಿ ನಿಗಮದಲ್ಲೇ ಸಮಸ್ಯೆ ಇರುವುದು ತಿಳಿದು ಬಂದಿತು. ಮುಂದಿನ ದಿನದಲ್ಲಿ ವಸತಿ ನಿಗಮಕ್ಕೆ ತೆರಳಿ, ಸಮಸ್ಯೆ ಬಗೆಹರಿಸಬೇಕಿದೆ. ತಾಲೂಕಿನ ನೋಡಲ್‌ ಅಧಿಕಾರಿಗಳು ಜತೆಗೆ ಬರಬೇಕು ಎಂದು ಸಿಇಒ ತಾಕೀತು ಮಾಡಿದರು.

ಫಲಾನುಭವಿಯೊಬ್ಬರ ಸಮಸ್ಯೆ ಆಲಿಸಿದ ಸಿಇಒ, ಅಧಿಕಾರಿಗಳಿಗೆ ಮನುಷ್ಯತ್ವ ಇರಬೇಕು. ದಪ್ಪ ಚರ್ಮ ಇಟ್ಟುಕೊಂಡು ಕೆಲಸ ಮಾಡಿದರೆ ಆಗುವುದಿಲ್ಲ. ಬಡವರಿಗೆ ಕೆಲಸ ಮಾಡದೇ ಇನ್ಯಾರಿಗಾಗಿ ದುಡಿಯುತ್ತೀರಿ ಎಂದು ಆರ್ಯಾಪು ಗ್ರಾ.ಪಂ. ಪಿಡಿಒ ವಿರುದ್ಧ ಗರಂ ಆದರು.

ಬ್ಯಾಂಕ್‌ ಸಹಕರಿಸುತ್ತಿಲ್ಲ
ಕೌಕ್ರಾಡಿ ಗ್ರಾ.ಪಂ. ಅಧ್ಯಕ್ಷರು ಮಾತನಾಡಿ, 6 ತಿಂಗಳಿಂದ ವಸತಿ ಯೋಜನೆಗಾಗಿ ದುಡಿಯುತ್ತಿದ್ದೇವೆ. ಆಧಾರ್‌ ಲಿಂಕ್‌ಗಾಗಿ ಪದೇ ಪದೇ ಬ್ಯಾಂಕ್‌ ಗೆ ಹೋಗುವಂತಾಗಿದೆ. ಈಗ ಬ್ಯಾಂಕ್‌ನಲ್ಲೂ ರೇಗಲು ಶುರು ಮಾಡಿದ್ದಾರೆ ಎಂದರು. ಉತ್ತರಿಸಿದ ಸಿಇಒ, ಬ್ಯಾಂಕ್‌ನಲ್ಲಿ ಸಮಸ್ಯೆ ಇದೆ ಎಂದು ಹಲವು ದೂರು ಬಂದಿವೆ. ಇದರ ಬಗ್ಗೆ ಸಭೆ ಕರೆದು ಪರಿಶೀಲಿಸಲಾಗುವುದು ಎಂದರು.

ಪುತ್ತೂರು ತಾಲೂಕಿನ 34 ಮನೆಗಳು ಬ್ಲಾಕ್‌ ಆಗಿವೆ. ಇದರ ಬಗ್ಗೆ ನನಗೆ ಮಾಹಿತಿಯೇ ನೀಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಡಾ| ಎಂ.ಆರ್‌. ರವಿ ಗರಂ ಆದರು. ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ, ಸಮಸ್ಯೆಗಳ ರವಾನೆಗೆ ಅನುಕೂಲ ಮಾಡಲಾಗಿದೆ. ಹಾಗಿದ್ದು ಮಾಹಿತಿ ನೀಡುವ ಕೆಲಸ ನಡೆದಿಲ್ಲ ಎನ್ನುವುದು ದುರಂತ. ಪಿಡಿಒ, ಸಿಇಒಗಳನ್ನು ಕೇಳಲು ಸರಕಾರ ಇದೆ. ಬಡವರ ಬಗ್ಗೆ ನಾವು ಕಾಳಜಿ ವಹಿಸಬೇಕು ಎಂಬ ಅರಿವೂ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ, ಇಒ ಜಗದೀಶ್‌, ಜಿ.ಪಂ. ಸದಸ್ಯರಾದ ಅನಿತಾ ಹೇಮನಾಥ ಶೆಟ್ಟಿ, ಸರ್ವೋತ್ತಮ ಗೌಡ, ಪ್ರಮೀಳಾ ಜನಾರ್ದನ್‌, ಪಿ.ಪಿ. ವರ್ಗೀಸ್‌ ಉಪಸ್ಥಿತರಿದ್ದರು.

ಶೋಕಾಸ್‌ ನೋಟಿಸ್‌
ಐತ್ತೂರು ಪಿಡಿಒ, ಅಧ್ಯಕ್ಷರು ಯಾರೂ ಸಭೆಗೆ ಬಂದಿರಲಿಲ್ಲ. ಇಒ ಜಗದೀಶ್‌ ಬಳಿ ವಿಚಾರಿಸಿದಾಗ, ಸಭೆಯ ಮಾಹಿತಿ ತಿಳಿಸಲಾಗಿದೆ ಎಂದರು. ಕೂಡಲೇ ಪಿಡಿಒಗೆ ಶೋಕಾಸ್‌ ನೊಟೀಸ್‌ ಜಾರಿ ಮಾಡುವಂತೆ ಸಿಇಒ ಸೂಚಿಸಿದರು. ಐತ್ತೂರು ಗ್ರಾ.ಪಂ.ನ ಪ್ರಗತಿಯೂ ತೀರಾ ಕಳಪೆಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next