Advertisement
ಸುಪ್ರೀಂಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ನ್ಯಾ.ನಾಗಮೋಹನ್ದಾಸ್ ಸಮಿತಿ ವರದಿಗೆ ಶನಿವಾರ ನಡೆದ ಸಂಪುಟ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ನೀಡಲಾಯಿತು. ಏಪ್ರಿಲ್ 6 ರಂದು ಸುಪ್ರೀಂಕೋರ್ಟ್ ಮುಂದೆ ದತ್ತ ಪೀಠಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆಗೆ ಬರಲಿದ್ದು ಆಗ ವರದಿಯನ್ನು ಸುಪ್ರೀಂಕೋರ್ಟ್ಗೂ ಸಲ್ಲಿಸಲಾಗುವುದು ಎಂದು ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
Related Articles
Advertisement
ಉಳಿದಂತೆ, ಸಾಗರಮಾಲಾ ಯೋಜನೆಯಡಿ 65 ಕೋಟಿ ರೂ. ವೆಚ್ಚದಲ್ಲಿ ಹಳೆ ಮಂಗಳೂರು ಬಂದರಿನಲ್ಲಿ ಹಾಗೂ 61 ಕೋಟಿ ರೂ. ವೆಚ್ಚದಲ್ಲಿ ಕಾರವಾರ ಬಂದರಿನಲ್ಲಿ ಕೋಸ್ಟಲ್ ಬರ್ತ್ ನಿರ್ಮಾಣ, 29 ಕೋಟಿ ರೂ. ವೆಚ್ಚದಲ್ಲಿ ಹಳೇ ಮಂಗಳೂರು ಬಂದರು ಬೇಂಗ್ರೆ ಬದಿ ಹೂಳೆತ್ತುವ ಕಾಮಗಾರಿ, 215 ಕೋಟಿ ರೂ. ವೆಚ್ಚದಲ್ಲಿ ಕಾರವಾರಿ ಬಂದರಿನ ದಕ್ಷಿಣ ಹಾಗೂ ಉತ್ತರ ಭಾಗಕ್ಕೆ ಬ್ರೇಕ್ ವಾಟರ್ ನಿರ್ಮಿಸುವ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಗ್ರಾಮ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದು. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ 129 ಕೆರೆ ತುಂಬಿಸಲು 129 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ. ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ಮಂಗಳೂರು ತಾಲೂಕು ಹರೆಕಳ ಗ್ರಾಮದಲ್ಲಿ 170 ಕೋಟಿ ರೂ. ವೆಚ್ಚದಲ್ಲಿ ಉಪ್ಪು ನೀರು ತಡೆಯಲು ಕಿಂಡಿ ಅಣೆಕಟ್ಟು ಕಟ್ಟಲು ಸಂಪುಟ ಒಪ್ಪಿಗೆ ದೊರೆತಿದೆ.
ಸರ್ಕಾರಿ ನೌಕರರಿಗೆಶೇ.30 ರಷ್ಟು ವೇತನ ಪರಿಷ್ಕರಣೆಗೆ ಅಸ್ತು
*ರಾಜ್ಯ ಸರ್ಕಾರಿ ನೌಕರರಿಗೆ ಶೇ.30 ರಷ್ಟು ವೇತನ ಪರಿಷ್ಕರಣೆ ಸಂಬಂಧ ಆರನೇ ವೇತನ ಆಯೋಗ ನೀಡಿದ್ದ ಶಿಫಾರಸಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವೇತನ ಪರಿಷ್ಕರಣೆ ಸಂಬಂಧ ಈಗಾಗಲೇ ಆದೇಶ ಹೊರಡಿಸಲಾಗಿದೆಯಾದರೂ ಸಂಪುಟದಲ್ಲಿ ಘಟನೋತ್ತರ ಅನುಮತಿ ಪಡೆಯಲಾಗಿದೆ. ನಾಡಧ್ವಜ ವಿಚಾರ ಮುಂದೂಡಿಕೆ
ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜದ ವಿನ್ಯಾಸ ಸಿದ್ಧಪಡಿಸಿ ಕಾನೂನಿನ ಸ್ವರೂಪ ನೀಡುವ ಕುರಿತು ವಿಷಯ ಮುಂದೂಡಲಾಗಿದೆ. ಸಂಪುಟದಲ್ಲಿ ಈ ಕುರಿತು ಚರ್ಚೆಗೆ ಬರಲಿಲ್ಲ ಎಂದು ಟಿ.ಬಿ.ಜಯಚಂದ್ರ ತಿಳಿಸಿದರು. ಮೂಲಗಳ ಪ್ರಕಾರ, ಚರ್ಚೆಯಾಯಿತಾದರೂ ಧ್ವಜದ ವಿನ್ಯಾಸದ ಒಮ್ಮತ ಬಾರದ ಕಾರಣ ಕನ್ನಡ ಸಂಘಟನೆಗಳ ಜತೆ ಮತ್ತೂಮ್ಮೆ ಚರ್ಚಿಸಿ ತೀರ್ಮಾನಿಸುವ ಸಲುವಾಗಿ ವಿಷಯ ಮುಂದೂಡಲಾಗಿದೆ ಎನ್ನಲಾಗಿದೆ.