Advertisement

ದಶರಥನ ಪುತ್ರಕಾಮೇಷ್ಟಿಯಾಗ ! ಮರ್ಯಾದಾ ಪುರುಷೋತ್ತಮನ ಜನನ..

02:54 PM Sep 18, 2018 | |

ಸರಯೂ ನದಿ ತೀರದಲ್ಲಿ ಸಂತುಷ್ಟಜನರಿಂದ ತುಂಬಿದ, ಧನ ಧಾನ್ಯಗಳಿಂದ ಸಮೃದ್ಧಿಯಾದ ಕೋಸಲ ಎಂಬ  ದೇಶದಲ್ಲಿ ಸಮಸ್ತ್ತ ಲೋಕಗಳಲ್ಲಿಯೂ ವಿಖ್ಯಾತವಾದ ಮನು ಮಹಾರಾಜನು ನಿರ್ಮಿಸಿದ  ‘ಅಯೋಧ್ಯಾ’ ಎಂಬ ನಗರವಿತ್ತು .

Advertisement

            ಆ ಮಹಾನಗರಿಯ ಬೀದಿಗಳು ಬಹಳ ಅಗಲವಾಗಿಯೂ , ಸಾಲುಮರಗಳಿಂದ ಅಲಂಕೃತವಾಗಿತ್ತು. ಸುಂದರವಾದ ರಾಜ ಮಾರ್ಗಗಳು ಆ ನಗರವನ್ನು ಇನ್ನಷ್ಟು ಮೆರುಗುಗೊಳಿಸಿತ್ತು. ಆ ರಾಜಮಾರ್ಗಗಳು ಧೂಳಾಗದಂತೆ ಪ್ರತಿದಿನವೂ ನೀರು ಚುಮುಕಿಸುತ್ತಿದ್ದರು. ಈ ಕೋಸಲ ರಾಜ್ಯವನ್ನು ಧರ್ಮದಿಂದ ಪರಿಪಾಲಿಸುತ್ತಿದ್ದ, ರಾಷ್ಟ್ರವರ್ಧನನಾದ, ಸೂರ್ಯವಂಶದಲ್ಲಿ ಜನಿಸಿದ ‘ದಶರಥನು’ ಅಮರಾವತಿಯ ದೇವೇಂದ್ರನು ವಾಸಿಸುವಂತೆ ಅಯೋಧ್ಯಾನಗರಿಯಲ್ಲಿ ವಾಸಿಸುತ್ತಿದ್ದನು.

           ಈ ರಾಜ್ಯದಲ್ಲಿ ಎಲ್ಲ ರೀತಿಯ ಯಂತ್ರ ಮತ್ತು ಅಸ್ತ್ರ ಶಸ್ತ್ರಗಳು ಸಮೃದ್ದವಾಗಿದ್ದವು. ಅಲ್ಲಿ ನಾನಾ ವಿಧವಾದ ಕಲೆಯ ಶಿಲ್ಪಿಗಳೂ, ಸ್ತುತಿಪಾಠ ಮಾಡುವ ಸೂತರೂ, ವಂಶಾವಳಿಯನ್ನು ಹೊಗಳುವ ಮಾಗಧರೂ ವಾಸಿಸುತ್ತಿದ್ದರು. ಆ ನಗರಿಯಲ್ಲಿ ನೂರಾರು ಕಟ್ಟಡಗಳಿದ್ದವು. ಅವುಗಳ ಮೇಲೆ ಧ್ವಜಪತಾಕೆಗಳು ಹಾರಾಡುತ್ತಿದ್ದವು.

       ಆ ಪಟ್ಟಣದಲ್ಲಿ ಅಲ್ಲಲ್ಲಿ ನರ್ತಕಿಯರ ಸಂಘಗಳೂ, ಸ್ತ್ರೀ ನಾಟಕ ಮಂಡಳಿಗಳೂ ಇದ್ದವು. ಸುತ್ತಲು ಮಾವು, ಹಲಸು, ಮುಂತಾದ ವೃಕ್ಷಗಳಿಂದ ಕೂಡಿದ ಉದ್ಯಾನವನಗಳಿದ್ದವು. ಅಯೋಧ್ಯಾ ನಗರದ ಸುತ್ತಲೂ ಆಳವಾದ ಕಂದಕಗಳಿದ್ದು, ಅದನ್ನು ದಾಟುವುದು, ಹಾರುವುದು ಅತ್ಯಂತ ಕಠಿಣವಾಗಿತ್ತು. ದಶರಥನಿಗೆ ಕಪ್ಪಕಾಣಿಕೆ ಹೊತ್ತು ತರುವ ಅನೇಕ ಸಾಮಂತ ರಾಜರಿದ್ದರು. ಅಲ್ಲಿನ ರಾಜಗೃಹಗಳು ರತ್ನಖಚಿತವಾಗಿದ್ದವು. ಅಯೋಧ್ಯಾ ನಗರಿಯು ಇಂದ್ರನ  ಅಮರಾವತಿಯನ್ನು ನಾಚಿಸುವಂತಿತ್ತು. ಈ ರಾಷ್ಟ್ರದಲ್ಲಿ ಸೈನಿಕರು ಬಾಣಪ್ರಯೋಗದಲ್ಲಿ ನಿಪುಣರೂ, ಶಸ್ತ್ರಾಸ್ತ್ರ ವಿಶಾರದರೂ ಇದ್ದರು.  ಇಂತಹ ಅಯೋಧ್ಯಾ ನಗರವನ್ನು ದಶರಥ ಮಹಾರಾಜನು ಆಳುತ್ತಿದ್ದನು.

          ದಶರಥನು ವೇದಗಳನ್ನು ಸಾಂಗವಾಗಿ ತಿಳಿದಿದ್ದನು. ಅನೇಕ ಯಜ್ಞಗಳನ್ನೂ ಮಾಡಿದ್ದನು. ಧರ್ಮಪರಾಯಣನೂ, ಅತಿರಥ ವೀರನು ಆಗಿದ್ದನು. ಆ ಉತ್ತಮ ನಗರದಲ್ಲಿ ವಾಸಿಸುವ ಪ್ರಜೆಗಳೆಲ್ಲರೂ ಸಂತೋಷವಾಗಿದ್ದು, ಧರ್ಮಾತ್ಮರೂ, ನಿರ್ಲೋಭಿಗಳೂ, ಸತ್ಯವಾದಿಗಳೂ, ತಮ್ಮ ಧನದಲ್ಲೇ ಸಂತುಷ್ಟರಾಗಿದ್ದರು.

Advertisement

          ಅಯೋಧ್ಯೆಯಲ್ಲಿ ಯಾರೂ ಕಾಮುಕ, ಲೋಭಿ, ಕ್ರೂರ, ಮೂರ್ಖ, ನಾಸ್ತಿಕ ಮನುಷ್ಯರು ಎಲ್ಲಿಯೂ ನೋಡಲು ಸಿಗುತ್ತಿರಲಿಲ್ಲ. ದಶರಥನಿಗೆ ಮಂತ್ರಾಲೋಚನೆಯಲ್ಲಿ ಸಮರ್ಥರಾದ ಕಾರ್ಯ ವಿಚಾರ ಪರರಾದ, ಪರೇಂಗಿತಜ್ಞರಾದ ಎಂಟು ಜನ ಮಂತ್ರಿಗಳಿದ್ದರು. ಅವರು ಸದಾಕಾಲ ರಾಜನ ಹಿತರಕ್ಷಣೆಯಲ್ಲೇ ನಿರತರಾಗಿದ್ದರು. ಋಷಿಗಳಲ್ಲಿ ಶ್ರೇಷ್ಠರಾದ ವಸಿಷ್ಠ ಮತ್ತು ವಾಮದೇವರು ಕುಲಪುರೋಹಿತರಾಗಿದ್ದರು.

           ಧರ್ಮಜ್ಞಾನದ ದಶರಥ ರಾಜನು ಹೀಗೆ ಪ್ರಭಾವಶಾಲಿಯಾಗಿದ್ದರೂ ಪುತ್ರಸಂತಾನವಿಲ್ಲದೆ  ಚಿಂತಿತನಾಗಿದ್ದನು. ಅವನು ತನ್ನ ವಂಶವನ್ನು ಮುಂದುವರಿಸಲು ಪುತ್ರನಿಲ್ಲವೆಂದು ದುಃಖಿತನಾಗಿದ್ದನು. ಹೀಗೆ ಚಿಂತಿಸುತ್ತಿರಲು ಒಂದು ದಿನ ಮಹಾರಾಜನ ಮನಸಿನಲ್ಲಿ “ನಾನು ಪುತ್ರಪ್ರಾಪ್ತಿ ಹಾಗೂ ಮುಕ್ತಿದಾಯಕವಾದ  ಅಶ್ವಮೇಧಯಜ್ಞವನ್ನು ಏಕೆ ಮಾಡಬಾರದು? ” ಎಂದು ಯೋಚಿಸಿದನು.

          ತನ್ನ ಬುದ್ಧಿವಂತ ಮಂತ್ರಿಗಳೊಂದಿಗೆ ಚರ್ಚಿಸಿ ಜ್ಞಾನವಂತನೂ, ಧರ್ಮಾತ್ಮನೂ ಆದ ರಾಜನು ಸುಮಂತ್ರನಲ್ಲಿ ” ಮಂತ್ರಿವರ್ಯನೇ ! ನೀನು ನಮ್ಮ ಎಲ್ಲ ಗುರುಗಳನ್ನು ಮತ್ತು ಪುರೋಹಿತರನ್ನು ಇಲ್ಲಿಗೆ ಬೇಗನೆ ಕರೆದುಕೊಂಡು ಬಾ” ಎಂದು ಹೇಳಿದನು. ಆಗ ಸುಮಂತ್ರನು ಒಡನೆಯೇ ಹೋಗಿ ವೇದವೇದಾಂಗ ಪಾರಂಗತರಾದ ಮುನಿಗಳನ್ನೂ, ವಸಿಷ್ಠರ ಸಮೇತ ಎಲ್ಲ ಶ್ರೇಷ್ಠ ಬ್ರಾಹ್ಮಣರನ್ನೂ, ಅರಮನೆಗೆ ಕರೆದುಕೊಂಡು ಬಂದನು.

            ದಶರಥನು “ಮಹರ್ಷಿಗಳೇ ! ನಾನು ಸದಾ ಪುತ್ರಸಂತಾನಕ್ಕಾಗಿ ಹಾತೊರೆಯುತ್ತಿದ್ದು , ಪುತ್ರನಿಲ್ಲದೆ ಈ ರಾಜ್ಯಾದಿಗಳಿಂದ ನನಗೆ ಸುಖವು ಸಿಗುವುದಿಲ್ಲ. ಆದ್ದರಿಂದ ಪುತ್ರಪ್ರಾಪ್ತಿಗಾಗಿ ನಾನು ಅಶ್ವಮೇಧ ಯಾಗವನ್ನು ಮಾಡಬೇಕೆಂದು ತೀರ್ಮಾನಿಸಿದ್ದೇನೆ. ರಾಜನ ಈ ಮಾತನ್ನು ಕೇಳಿ ವಸಿಷ್ಠಾದಿ ಎಲ್ಲ ಬ್ರಾಹ್ಮಣರು ಸಾಧುವಾಗಿದೆ, ಬಹಳ ಒಳ್ಳೆಯದು ಎಂದು ಅನುಮೋದಿಸಿದರು. ಮುನಿ ಶ್ರೇಷ್ಠರ ಅಪ್ಪಣೆಯನ್ನು ಪಡೆದ ದಶರಥನು ತನ್ನ ಪ್ರಿಯ ರಾಣಿಯರಲ್ಲಿ ಅಶ್ವಮೇಧ ಯಜ್ಞವನ್ನು ಮಾಡುವುದಾಗಿ ತಿಳಿಸಿ ಅದಕ್ಕೋಸ್ಕರ ಎಲ್ಲಾ ರಾಣಿಯರೂ ದೀಕ್ಷೆಯನ್ನು ಕೈಗೊಳ್ಳಲು ಸೂಚಿಸಿದನು. ಇದರಿಂದ ರಾಣಿಯರಿಗೆ ಬಹಳ ಸಂತಸವಾಯಿತು.

          ಸರಯೂ ನದಿಯ ಉತ್ತರದ ತೀರದಲ್ಲಿ ಯಜ್ಞಭೂಮಿಯನ್ನು ನಿರ್ಮಾಣಮಾಡಿ, ಯಜ್ಞ ಸಂಬಂಧಿ ಅಶ್ವವನ್ನು ವೀರರೊಂದಿಗೆ ದೇಶಾಟನೆಗೆ [ತಿರುಗಾಟಕ್ಕೆ ] ಕಳುಹಿಸಿದನು . ಒಂದು ವರ್ಷಪೂರ್ತಿ ಅದು ತಿರುಗಾಡಿ ಹಿಂತಿರುಗಿತು. ದಶರಥನು ಈ ಯಜ್ಞಕ್ಕೆ ಎಲ್ಲವರ್ಣದವರನ್ನು  ಹಾಗೂ ಬಂಧು ಮಿತ್ರರೆಲ್ಲರನ್ನು ಆಮಂತ್ರಿಸಿದ್ದನು, ಹಾಗೆ ಅವರೆಲ್ಲರೂ ಯಜ್ಞಕ್ಕಾಗಿ ಹೆಚ್ಚೆಚ್ಚು ದ್ರವ್ಯಗಳನ್ನು ತಂದು ನೀಡುತ್ತಿದ್ದರು. ದಶರಥನಾದರೂ ಎಲ್ಲ ರೀತಿಯ ದಾನಗಳನ್ನೂ ಕೊಟ್ಟು ಬ್ರಾಹ್ಮಣಾದಿ ಎಲ್ಲರನ್ನು ಉಪಚರಿಸಿದನು. ಹೀಗೆ ಬೊಕ್ಕಸವೆಲ್ಲ ಖಾಲಿಯಾದಾಗ, ಒಬ್ಬ ಬಡ ಬ್ರಾಹ್ಮಣನು ಬಂದು ರಾಜನಲ್ಲಿ ಬೇಡಲು ಆಗ ದಶರಥನು ತನ್ನ ಕೈಯಲ್ಲಿದ್ದ ಕಂಕಣವನ್ನೇ ತೆಗೆದುಕೊಟ್ಟನು. ಈ ರೀತಿ ಸಾಂಗವಾಗಿ ಅಶ್ವಮೇಧಯಜ್ಞವನ್ನು ಪೂರ್ಣಗೊಳಿಸಿದನು.  ಅದನ್ನು ನೋಡಿ ಎಲ್ಲರೂ  ಬಹಳ ಸಂತುಷ್ಟರಾಗಿ ದಶರಥನಿಗೆ ಪುತ್ರಸಂತಾನವಾಗುವಂತೆ ಆಶೀರ್ವದಿಸಿದರು.

           ಋಷ್ಯಶೃಂಗರು ದಶರಥನಿಗೆ ನಾಲ್ಕು ಜನ ಪುತ್ರರಾಗುವರು ಎಂದು ಹಾರೈಸಿದರು, ಆಗ ದಶರಥನು ಪುತ್ರಪ್ರಾಪ್ತಿಯಾಗುವಂತಹ ಕರ್ಮಾನುಷ್ಠಾನದ ಬಗ್ಗೆ ವಿಚಾರಿಸಲು ಮೇಧಾವಿಗಳೂ ಮತ್ತು ವೇದಗಳನ್ನು ಬಲ್ಲವರೂ  ಆದ ಋಷ್ಯಶೃಂಗರು ಸ್ವಲ್ಪ ಯೋಚಿಸಿ “ರಾಜ ನಿನಗೆ ಪುತ್ರ ಪ್ರಾಪ್ತಿಯಾಗುವಂತಹ ಅಥರ್ವವೇದದ ಮಂತ್ರಗಳಿಂದ ನಾನು ಪುತ್ರೇಷ್ಟಿ ಎಂಬ ಯಜ್ಞವನ್ನು ಮಾಡುವೆನು . ವೇದೋಕ್ತ ಅನುಷ್ಠಾನ ಮಾಡಿದಾಗ ಆ ಯಜ್ಞವು ಖಂಡಿತವಾಗಿ ಸಫಲವಾಗುವುದು ಎಂದು ಹೇಳಿ ಆ ತೇಜಸ್ವಿ ಋಷಿಯು ಪುತ್ರಪ್ರಾಪ್ತಿಯ ಉದ್ದೇಶದಿಂದ ಪುತ್ರಕಾಮೇಷ್ಟಿ ಎಂಬ ಯಜ್ಞವನ್ನು ಪ್ರಾರಂಭಿಸಿ ಯಥಾವಿಧಿ ಅಗ್ನಿಯಲ್ಲಿ ಆಹುತಿಗಳನ್ನು ಅರ್ಪಿಸಿದರು.

             ಇತ್ತ ಜಯ ವಿಜಯರು ರಾವಣ ಕುಂಭಕರ್ಣರಾಗಿ ಜನಿಸಿ ದೇವತೆಗಳಿಗೂ ಮನುಷ್ಯರಿಗೂ ನೀಡುತ್ತಿರುವ ಉಪಟಳವನ್ನು  ಸಹಿಸಲಾರದೆ ದೇವತೆಗಳು ಶ್ರೀಹರಿಯಲ್ಲಿ ಮೊರೆಯಿಟ್ಟರು. ಆಗ ಶ್ರೀಮನ್ನಾರಾಯಣನು ತನ್ನ ಭಕ್ತನಾದ ದಶರಥನ ಸಂತಾನಾಪೇಕ್ಷೆ  ಹಾಗೂ ರಾವಣನ ಸಂಹಾರಾರ್ಥವಾಗಿ ಭೂಮಿಯಲ್ಲಿ ದಶರಥನ ಮಗನಾಗಿ ಮಾನವಜನ್ಮವೆತ್ತಲು ತೀರ್ಮಾನಿಸಿ ದೇವತೆಗಳಿಗೆ ದುಷ್ಟಸಂಹಾರದ ಆಶ್ವಾಸನೆಯನ್ನಿತ್ತನು.

             ಅಯೋಧ್ಯೆಯಲ್ಲಿ ಪುತ್ರಕಾಮೇಷ್ಟಿಯಾಗವು ಸಂಪನ್ನಗೊಳ್ಳಲು ಅಗ್ನಿಕುಂಡದಿಂದ ಪ್ರಜಾಪತ್ಯ ಪುರುಷನು ಪ್ರಕಟನಾಗಿ ದೇವನಿರ್ಮಿತವಾದ ದಿವ್ಯಪಾಯಸವನ್ನು ದಶರಥನಿಗೆ ನೀಡಿ ” ಸಂತಾನ ಪ್ರದವಾದ ಈ ಪಾಯಸವನ್ನು ನಿನ್ನ ಪತ್ನಿಯರು ಪ್ರಾಶನ ಮಾಡಿದರೆ ಅವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗುವುದು ಎಂದು ಅನುಗ್ರಹಿಸಿದನು.

              ರಾಜನು ಆ ಪಾಯಸದ ಅರ್ಧಭಾಗವನ್ನು ಮಹಾರಾಣಿ ಕೌಸಲ್ಯೆಗೂ ಉಳಿದರ್ಧಭಾಗವನ್ನು ಎರಡು ಪಾಲು ಮಾಡಿ ಒಂದನ್ನು ಸುಮಿತ್ರೆಗೂ ಉಳಿದ ಪಾಯಸವನ್ನು ಸಮಪಾಲು ಮಾಡಿ ಒಂದನ್ನು ಕೈಕೇಯಿಗೂ ಕೊನೆಯಭಾಗವನ್ನು ಪುನಃ ಸುಮಿತ್ರೆಗೂ ಪ್ರಾಶನಮಾಡಿಸಿದನು.

                 ಪುತ್ರಕಾಮೇಷ್ಟಿಯಾಗದ ಪಾಯಸವನ್ನು ಸ್ವೀಕರಿಸಿದ ಫಲವಾಗಿ ರಾಣಿಯರೆಲ್ಲರೂ ಗರ್ಭವತಿಯರಾದರು. ಕೌಸಲ್ಯೆಗೆ ನವಮಾಸಗಳು ತುಂಬಿ ಚೈತ್ರಮಾಸದ ಶುಕ್ಲಪಕ್ಷದ ನವಮಿಯಂದು ಪುನರ್ವಸು ನಕ್ಷತ್ರ ಕರ್ಕಾಟಕ ಲಗ್ನದಲ್ಲಿ ಪಂಚಗ್ರಹರು ಉಚ್ಚಸ್ಥಾನದಲ್ಲಿರಲು ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಜನನವಾಯಿತು. ಇದಾದ ಸ್ವಲ್ಪ ಸಮಯದ ನಂತರ ಕೈಕೇಯಿಯು ಪುಷ್ಯ ನಕ್ಷತ್ರ ಮೀನಲಗ್ನದಲ್ಲಿ ಭರತನಿಗೆ ಜನ್ಮವನಿತ್ತಳು. ಮರುದಿನ ಸುಮಿತ್ರೆಯು ಆಶ್ಲೇಷಾನಕ್ಷತ್ರ ಕರ್ಕಾಟ ಲಗ್ನದಲ್ಲಿ ಸೂರ್ಯನು ಉಚ್ಛಸ್ಥಾನದಲ್ಲಿರಲು ಲಕ್ಷ್ಮಣ ಶತ್ರುಘ್ನರೆಂಬ ಪುತ್ರರತ್ನ ಗಳಿಗೆ ಜನ್ಮವನ್ನಿತ್ತಳು.

              ದಶರಥನ ಈ ಮಹಾತ್ಮರಾದ ನಾಲ್ವರು ಪುತ್ರರು ಪ್ರತ್ಯೇಕ ಪ್ರತ್ಯೇಕ ಗುಣಗಳಿಂದ ಸಂಪನ್ನರೂ, ಸುಂದರರೂ ಆಗಿದ್ದರು. ಈ ನಾಲ್ವರು ರಾಜಕುಮಾರರ ಜನನದಿಂದ ಅಯೋಧ್ಯೆಯಲ್ಲಿ ಉತ್ಸವ ಸದೃಶ ವಾತಾವರಣ ಉಂಟಾಗಿ ರಾಜ ಬೀದಿಗಳಲ್ಲಿ ನಟ ನರ್ತಕರೆಲ್ಲರೂ ತಮ್ಮತಮ್ಮ ಕಲೆಗಳನ್ನು ಪ್ರದರ್ಶಿಸುತ್ತ ಜನನೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಿದರು. ದಶರಥನು ಹನ್ನೊಂದನೆಯ ದಿನ ತನ್ನ ಪುತ್ರರತ್ನಗಳಿಗೆ ನಾಮಕರಣಾದಿ ಸಂಸ್ಕಾರವನ್ನು ಯಥಾವಿಧಿ ಮಾಡಿದನು. ಈ ರೀತಿಯಾಗಿ ಬಹುಪುತ್ರರನ್ನು ಪಡೆದ ದಶರಥನು ಬಹುಕಾಲ ಯೋಗ್ಯರೀತಿಯಲ್ಲಿ ರಾಜ್ಯಭಾರವನ್ನು ಮಾಡಿದನು.

ಪಲ್ಲವಿ

Advertisement

Udayavani is now on Telegram. Click here to join our channel and stay updated with the latest news.

Next