Advertisement

“ಕವಚ’ಎದುರು “ದಶರಥ’

06:04 AM Mar 13, 2019 | |

ಸುಮಾರು ಹದಿನೆಳು ವರ್ಷಗಳ ಹಿಂದೆ (2002ರಲ್ಲಿ) ಕ್ರೇಜಿಸ್ಟಾರ್‌ ರವಿಚಂದ್ರನ್‌ ಮತ್ತು ಹ್ಯಾಟ್ರಿಕ್‌ ಹೀರೋ ಶಿವರಾಜ ಕುಮಾರ್‌ ಅಭಿನಯದ “ಕೋದಂಡ ರಾಮ’ ಚಿತ್ರದ ಮೂಲಕ ಒಟ್ಟಾಗಿ ಏಕಕಾಲಕ್ಕೆ ತೆರೆಮೇಲೆ ಬಂದಿದ್ದು ನಿಮಗೆ ನೆನಪಿರಬಹುದು. ಆದರೆ ಅದಾದ ಬಳಿಕ ರವಿಚಂದ್ರನ್‌ ಮತ್ತು ಶಿವಣ್ಣ ಅವರು ಮತ್ತೆ ಒಟ್ಟಾಗಿ ಅಭಿನಯಿಸಿರಲಿಲ್ಲ, ಇಬ್ಬರನ್ನೂ ಒಂದೇ ದಿನ ಥಿಯೇಟರ್‌ನಲ್ಲಿ ನೋಡೋದಕ್ಕೂ ಅಭಿಮಾನಿಗಳಿಗೆ ಆಗಿರಲಿಲ್ಲ.

Advertisement

ಆದ್ರೆ ಮುಂಬರುವ ಏಪ್ರಿಲ್‌ 5ರಂದು ಇಬ್ಬರನ್ನೂ ಒಂದೇ ದಿನ ಥಿಯೇಟರ್‌ನಲ್ಲಿ ನೋಡುವ ಅಪರೂಪದ ಅವಕಾಶ ಇಬ್ಬರ ಅಭಿಮಾನಿಗಳಿಗೂ ಒದಗಿ ಬಂದಿದೆ. ಹಾಗಂತ ಒಂದೇ ಚಿತ್ರದಲ್ಲಿ ಅಲ್ಲ, ಬೇರೆ ಬೇರೆ ಚಿತ್ರಗಳಲ್ಲಿ! ಹೌದು, ಏಪ್ರಿಲ್‌ 5ರಂದು ಶಿವರಾಜಕುಮಾರ್‌ ಅಭಿನಯದ “ಕವಚ’ ಮತ್ತು ರವಿಚಂದ್ರನ್‌ ಅಭಿನಯದ “ದಶರಥ’ ಚಿತ್ರಗಳು ಒಂದೇ ದಿನ ತೆರೆ ಕಾಣುತ್ತಿವೆ.

ಇನ್ನು “ಕವಚ’ ಚಿತ್ರದಲ್ಲಿ ಶಿವಣ್ಣ ಅಂಧನಾಗಿ ಕಾಣಿಸಿಕೊಂಡರೆ, “ದಶರಥ’ ಚಿತ್ರದಲ್ಲಿ ರವಿಚಂದ್ರನ್‌ ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಕವಚ’ ಸಸ್ಪೆನ್ಸ್‌, ಥ್ರಿಲ್ಲರ್‌ ಶೈಲಿಯ ಚಿತ್ರವಾದರೆ, “ದಶರಥ’ ಪಕ್ಕಾ ಫ್ಯಾಮಿಲಿ ಸಬ್ಜೆಕ್ಟ್ ಚಿತ್ರ. ಶಿವಣ್ಣ ಅಭಿನಯದ “ಕವಚ’ ಚಿತ್ರಕ್ಕೆ ಜಿವಿಆರ್‌ ವಾಸು ನಿರ್ದೇಶನವಿದ್ದು, ಕೃತಿಕಾ ಜಯಕುಮಾರ್‌, ಇಶಾ ಕೊಪ್ಪಿಕರ್‌, ಬೇಬಿ ಮೀನಾಕ್ಷಿ, ವಸಿಷ್ಠ ಸಿಂಹ ಮೊದಲಾದ ಕಲಾವಿದರ ತಾರಾಗಣವಿದೆ.

“ದಶರಥ’ ಚಿತ್ರಕ್ಕೆ ಎಂ.ಎಸ್‌ ರಮೇಶ್‌ ನಿರ್ದೇಶನವಿದ್ದು, ಸೋನಿಯಾ ಅಗರ್ವಾಲ್, ಮೇಘಶ್ರೀ, ರಂಗಾಯಣ, ಪ್ರಿಯಾಮಣಿ ಮೊದಲಾದ ಕಲಾವಿದರ ತಾರಾಗಣವಿದೆ. ಇನ್ನೊಂದು ವಿಶೇಷವೆಂದರೆ, ಈ ಎರಡೂ ಚಿತ್ರಗಳು ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಸೆಟ್ಟೇರಿದ್ದವು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೋತ್ತಿಗಾಗಲೇ ಈ ಎರಡೂ ಚಿತ್ರಗಳು ತೆರೆ ಕಾಣಬೇಕಿತ್ತು.

ಆದರೆ ಬೇರೆ ಬೇರೆ ಕಾರಣಾಂತರಗಳಿಂದ ಎರಡೂ ಚಿತ್ರಗಳು ತೆರೆಗೆ ಬರೋದಕ್ಕೆ ತಡವಾಗಿದೆ. ಒಟ್ಟಾರೆ ಈಗ ಎರಡೂ ಚಿತ್ರಗಳಿಗೂ ತೆರೆಗೆ ಬರೋದಕ್ಕೆ ಮುಹೂರ್ತ ಫಿಕ್ಸ್‌ ಆಗಿದ್ದು, ಯಾವ ಚಿತ್ರ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಚಿತ್ರಗಳು ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next