Advertisement

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

09:06 PM Jan 16, 2022 | Team Udayavani |

ಕಾಪು: ಉಡುಪಿ ಪರ್ಯಾಯ ಮಹೋತ್ಸವಕ್ಕೂ ಕಾಪು ಕ್ಷೇತ್ರಕ್ಕೂ ಅವಿನಾಭಾವವಾದ ಸಂಬಂಧವಿದೆ.
ಪರ್ಯಾಯ ಪೀಠಾರೋಹಣಗೈಯ್ಯಲಿ ರುವ ಶ್ರೀ ಕೃಷ್ಣ ಮಠದ ಸ್ವಾಮೀಜಿಗಳು ಕಾಪು ದಂಡತೀರ್ಥ ಮಠಕ್ಕೆ ಬಂದು, ಆಚಾರ್ಯ ಮಧ್ವರು ದಂಡದಿಂದ ಸೃಷ್ಟಿಸಿದ ದಂಡತೀರ್ಥ ಕೆರೆಯಲ್ಲಿ ಸ್ನಾನ ಮಾಡಿ, ಪೂಜೆ ಸಲ್ಲಿಸಿ ಬಳಿಕ ಜೋಡುಕಟ್ಟೆಗೆ ತೆರಳಿ ಪರ್ಯಾಯ ಮೆರವಣಿಗೆ ನಡೆಸುವುದು ವಾಡಿಕೆಯಾಗಿದ್ದು, ದಂಡತೀರ್ಥ ಮಠವು ಕೃಷ್ಣಾಪುರ ಮಠದ ಆಡಳಿತದಲ್ಲಿರುವುದರಿಂದ ಈ ಬಾರಿಯ ಪರ್ಯಾಯಕ್ಕೆ ವಿಶೇಷ ಮಹತ್ವ ಲಭಿಸಿದೆ.
ಸಂಪ್ರದಾಯದಂತೆ ಜ.17 ರಂದು ಮಧ್ಯರಾತ್ರಿ ಕಳೆದು ಮುಂಜಾನೆಯ ವೇಳೆಗೆ ಉಳಿಯಾರಗೋಳಿ ದಂಡತೀರ್ಥ ಮಠಕ್ಕೆ ಆಗಮಿಸಿ, ತೀರ್ಥಸ್ನಾನ ಮಾಡಲಿದ್ದಾರೆ. ಶ್ರೀ ಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲು
ದಂಡತೀರ್ಥ ಮಠದಲ್ಲಿ ಸಿದ್ಧತೆ ನಡೆಸಲಾಗಿದೆ.

Advertisement

ಧಾರ್ಮಿಕ ಕಾರ್ಯಗಳು: ಶ್ರೀಗಳು ಆಪ್ತ ಶಿಷ್ಯರೊಡಗೂಡಿ ತೀರ್ಥಸ್ನಾನ ಪೂರೈಸಿದ ಬಳಿಕ ತಮ್ಮ ಕೆರೆಯ ತೀರ್ಥ ಕುಂಡದಿಂದ ತೀರ್ಥವನ್ನು ತುಂಬಿಸಿಕೊಂಡು ತಮ್ಮ ಪಟ್ಟದ ದೇವರ ಸಹಿತವಾಗಿ ದಂಡತೀರ್ಥ ಮಠದ ಕುಂಜಿ ಗೋಪಾಲ ಕೃಷ್ಣ ದೇವರು, ಪರಿವಾರ ಸಹಿತ ರಾಮ ಕೃಷ್ಣ ದೇವರಿಗೆ ಅರ್ಚನೆ, ಪೂಜೆ ನೆರವೇರಿಸುವರು. ಬಳಿಕ ತಮ್ಮ ದ್ವೈವಾರ್ಷಿಕ ಪರ್ಯಾಯದ ಶೋಭಾಯಾತ್ರೆಗಾಗಿ ಉಡುಪಿ ಜೋಡುಕಟ್ಟೆಗೆ ನಿರ್ಗಮಿಸುತ್ತಾರೆ.
ಇಲ್ಲಿ ತೀರ್ಥಸ್ನಾನ ನಡೆಸಿದ ಬಳಿಕ ಉಡುಪಿಗೆ ತೆರಳಿ, ಜೋಡು ರಸ್ತೆಯಲ್ಲಿ ಪೂಜೆ ನೆರವೇರಿಸಿ ಭವ್ಯ ಶೋಭಾಯಾತ್ರೆಯ ಮೂಲಕ ರಥಬೀದಿಗೆ ತೆರಳಿ, ಕನಕ ಕಿಂಡಿಯ ಮೂಲಕ ಪೊಡವಿಗೊಡೆಯ ಕೃಷ್ಣನನ್ನು ಸಂದರ್ಶಿಸಿ, ಅನಂತೇಶ್ವರ, ಚಂದ್ರಮೌಳೀಶ್ವರ ದೇವರ ದರ್ಶನ ಮಾಡಿ, ಬಳಿಕ ಸರ್ವಜ್ಞ ಪೀಠಾರೋಹಣಗೈದು ಶ್ರೀ ಕೃಷ್ಣ ಪೂಜಾ ಕೈಂಕರ್ಯದ ದೀಕ್ಷೆಯನ್ನು ಸ್ವೀಕರಿಸುತ್ತಾರೆ.

ಮಧ್ವಾಚಾರ್ಯರು ದಂಡದಿಂದ ಸೃಷ್ಟಿಸಿದ ದಂಡತೀರ್ಥ: ಆಚಾರ್ಯ ಮಧ್ವರು ಪ್ರೌಢಾವಸ್ಥೆಯಲ್ಲಿರುವಾಗಿ ಉಳಿಯಾರಗೋಳಿ ತೋಟಂತಿಲ್ಲಾ ಯ ಮನೆತನದ ಗುರುಗಳಲ್ಲಿ ವಿದ್ಯಾಭ್ಯಾಸ ಪಡೆದಿದ್ದರು. ಶಿಕ್ಷಣ ಪಡೆದ ಬಳಿಕ ಗುರುದಕ್ಷಿಣೆಯಾಗಿ ಉಳಿಯಾರಗೋಳಿ ಗ್ರಾಮದ ಜನತೆ ನೀರಿನ ಸಂಕಷ್ಟದ ಪರಿಹಾರಕ್ಕಾಗಿ ತಮ್ಮ ದಂಡ (ಒಣಕೋಲು) ದಿಂದ ಭೂಮಿಯನ್ನು ಗೀರಿ ಕೆರೆಯನ್ನು ಸೃಷ್ಟಿಸಿದರೆಂಬ ಪ್ರತೀತಿಯಿದೆ. ಅದರ ಜತೆಗೆ ತೋಟಂತಿಲ್ಲಾಯ ಮನೆತನದವರಿಗೆ ಗುರುದಕ್ಷಿಣೆ ರೂಪದಲ್ಲಿ ಕುಂಜಿ ಗೋಪಾಲ ಕೃಷ್ಣ ದೇವರ ಮೂರ್ತಿಯನ್ನು ನೀಡಿದ್ದರು. ಮಧ್ವಾಚಾರ್ಯರು ತನ್ನ ಕೈಯ್ಯಲ್ಲಿದ್ದ ದಂಡದಿಂದ ಸೃಷ್ಟಿಸಿದ ಕೆರೆ ದಂಡತೀರ್ಥ ಕೆರೆಯಾಗಿ, ಗ್ರಾಮವು ದಂಡತೀರ್ಥ ಎಂಬ ಹೆಸರು ಪಡೆಯಿತು. ವರ್ಷಪೂರ್ತಿ ಹೇರಳ ನೀರು ತುಂಬಿಕೊಂಡಿರುವ ಇಲ್ಲಿನ ಕೆರೆಯು ಕೆಲವು ವರ್ಷಗಳ ಹಿಂದೆ ಸಂಪೂರ್ಣ ಜೀರ್ಣೋದ್ಧಾರಗೊಂಡಿದೆ.

ಆಚಾರ್ಯ ಮಧ್ವರ ವಿಗ್ರಹ ಪ್ರತಿಷ್ಠೆ
ದಂಡತೀರ್ಥ ಮಠವು ಶ್ರೀ ಕೃಷ್ಣಾಪುರ ಮಠದ ಅಧೀನದಲ್ಲಿದ್ದು ಆ ಕಾರಣದಿಂದ ಈ ಬಾರಿಯ ಪರ್ಯಾಯ ಮಹೋತ್ಸವಕ್ಕೆ ವಿಶೇಷ ಬಂದಿದೆ. ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಭಾವೀ ಪರ್ಯಾಯ ಪೀಠಾಧಿಪತಿ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ದಂಡತೀರ್ಥ ಮಠ ಪ್ರತಿಷ್ಠಾನದ ಅಧ್ಯಕ್ಷ ಸೀತಾರಾಮ ಭಟ್‌ ಅವರ ನೇತೃತ್ವದಲ್ಲಿ ದಂಡತೀರ್ಥ ಮಠದಲ್ಲಿ ಆಚಾರ್ಯ ಏಕ ಶಿಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಅದರೊಂದಿಗೆ ಆಚಾರ್ಯ ಮಧ್ವರ ಜೀವನ ಪಾಠದ ಅಧ್ಯಯನಕ್ಕಾಗಿ ಮಧ್ವ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಆ ಮೂಲಕ ಶ್ರೀ ಕೃಷ್ಣ ಮಠಕ್ಕೆ ಬರುವ ಭಕ್ತರು ಆಚಾರ್ಯ ಮಧ್ವರು ಪೂರ್ವಾಶ್ರಮದಲ್ಲಿ ಶಿಕ್ಷಣವನ್ನು ಪಡೆದಿರುವ ದಂಡತೀರ್ಥ ಮಠದತ್ತಲೂ ಸೆಳೆಯುವ ಪ್ರಯತ್ನ ದಂಡತೀರ್ಥ ಮಠ ಪ್ರತಿಷ್ಠಾನದಿಂದ ನಡೆಯುತ್ತಿದೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next