Advertisement

ಸ್ಮಶಾನಕ್ಕಾಗಿ ದಲಿತ ಸಮುದಾಯದ ಬೇಡಿಕೆ

02:39 PM Nov 12, 2021 | Team Udayavani |

ಕನಕಪುರ: ಬುಧವಾರ ಅಂಬೇಡ್ಕರ್‌ ಭವನದಲ್ಲಿ ನಡೆದ ಪರಿಶಿಷ್ಟ ಜಾತಿ ವರ್ಗದ ಹಿತ ರಕ್ಷಣಾ ಸಮಿತಿ ಸಭೆಯಲ್ಲಿ ದಲಿತ ಸಮುದಾಯಗಳಿಗೆ ಪ್ರತಿ ಗ್ರಾಮದಲ್ಲೂ ಪ್ರತ್ಯೇಕ ಸ್ಮಶಾನದ ನಿರ್ಮಾಣದ ಕೂಗು ಹೆಚ್ಚು ಪ್ರತಿಧ್ವನಿಸಿತ್ತು.

Advertisement

ಸಭೆಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಶಿವಮುತ್ತು ಹಾಗೂ ತುಂಗಣಿ ಉಮೇಶ್‌ ಮಾತನಾಡಿ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ದಲಿತ ಸಮುದಾಯದವರಿಗೆ ಶವಸಂಸ್ಕಾರ ಮಾಡಲು ಸ್ಮಶಾನ ಗಳಿಲ್ಲದೆ ಒಡ್ಡು, ಗುಡ್ಡಗಳಲ್ಲಿ ಸಂಸ್ಕಾರ ಮಾಡುವ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ:- ಪೊಲೀಸ್, ಕೋರ್ಟ್ ಅಗತ್ಯವಿಲ್ಲವೇ? PM ಏಕಪಕ್ಷೀಯ ತೀರ್ಮಾನವೇ ಅಂತಿಮವೇ? ಸಿದ್ದರಾಮಯ್ಯ ಪ್ರಶ್ನೆ

ಕೋಡಿಹಳ್ಳಿ, ಉಯ್ಯಂಬಳ್ಳಿ, ಕಸಬಾ, ಹಾಗೂ ಹಾರೋಹಳ್ಳಿ ಮರಳವಾಡಿ ಹೋಬಳಿಗಳ ವ್ಯಾಪ್ತಿಯಲ್ಲಿ ದಲಿತ ಸಮುದಾಯಗಳು ವಾಸಿಸುವ ಗ್ರಾಮಗಳಲ್ಲಿ ಪ್ರತ್ಯೇಕವಾಗಿ ಸ್ಮಶಾನ ಮಂಜೂರು ಮಾಡಬೇಕು. ಸ್ಮಶಾನ ಅಭಿವೃದ್ಧಿಗೆ ಗ್ರಾಪಂನಲ್ಲಿ ಅವಕಾಶವಿದೆ.ಆದರೆ, ಕೆಲವು ಗ್ರಾಮಗಳಲ್ಲಿರುವ ಸೂಕ್ತ ದಾಖಲೆಗಳಿಲ್ಲದೆ ಸ್ಮಶಾನ ಅಭಿವೃದ್ಧಿಗೆ ಗ್ರಾಪಂ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಸ್ಮಶಾನ ಜಾಗ ಮಂಜೂರು ಹಾಗೂ ಸ್ಮಶಾನ ಅಭಿವೃದ್ಧಿಗೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ದಲಿತ ಮುಖಂಡರು ಒತ್ತಾಯಿಸಿದರು.

 ನಿವೇಷನ ಹಂಚಿಕೆ ಮಾಡಿ: ಟಿ. ಹೊಸಹಳ್ಳಿ ಗ್ರಾಮದಲ್ಲಿ ದಲಿತರಿಗೆ ನಿವೇಶನ ಹಂಚಿಕೆ ಮಾಡಲು ಮೀಸಲಿರುವ 6 ಎಕರೆ ಸರಕಾರಿ ಗೋಮಾಳ ಆರ್‌ ಟಿಸಿಯಲ್ಲಿ ನೋಂದಣಿ ಮಾಡಲಾಗಿದೆ.ಆದರೆ, ಸ್ಥಳೀಯರು ಅಲ್ಲಿ ದೇವಾಲಯ ನಿರ್ಮಾಣ ಮಾಡಲು ಹುನ್ನಾರ ನಡೆಸುತ್ತಿದ್ದಾರೆ. ಇದರಲ್ಲಿ ಪಿಡಿಒ ರಾಮಯ್ಯ ಕೈವಾಡವಿದೆ. ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಪಿಡಿಒಗಳಿಂದ ದಲಿತರಿಗೆ ಬಹಳಷ್ಟು ಅನ್ಯಾಯವಾಗುತ್ತಿದೆ.

Advertisement

ಸೂಕ್ತ ಕ್ರಮವಹಿಸಿ ದಲಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರು ಆಗ್ರಹ ಮಾಡಿದರು. ವಿಧವೆ ಮಹಿಳೆಗಿಲ್ಲ ರಕ್ಷಣೆ: ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟಾಚಲ ಮಾತನಾಡಿ, ಮರಳೇ ಬೇಕುಪ್ಪೆ ಗ್ರಾಮದ ಸರ್ಕಾರಿ ಜಾಗದಲ್ಲಿ ಕಳೆದ 8 ದಶಕಗಳಿಂದ ಗುಡಿಸಲಿನಲ್ಲಿ ಮೂಲ ಸೌಕರ್ಯಗಳಿಲ್ಲದೆ ಜೀವನ ಮಾಡುತ್ತಿರುವ ದಲಿತ ಮಹಿಳೆ ಅಕ್ರಮಸಕ್ರಮದಲ್ಲಿ ಹಕ್ಕುಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ.

ಆದರೆ, ಈವರೆಗೂ ಹಕ್ಕುಪತ್ರ ಕೊಟ್ಟಿಲ್ಲ. ದಲಿತ ಮಹಿಳೆ ಎಂಬ ಕಾರಣಕ್ಕೆ ಸ್ಥಳೀಯ ಕೆಲ ಪ್ರಭಾವಿಗಳು ಹತ್ತು ವರ್ಷಗಳಿಂದ ಮಹಿಳೆಯನ್ನು ಒಕ್ಕಲೆಬ್ಬಿಸಲು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಗುಂಪುಕಟ್ಟಿಕೊಂಡು ಮಹಿಳೆ ಮೇಲೆ ಹಲ್ಲೆ ಮಾಡುವ ಯತ್ನ ನಡೆದಿದೆ.ಆದರೆ, ಈ ಸಂಬಂಧ ದೂರು ನೀಡಿದರೂ ಸಾತನೂರು ಪೊಲೀಸರು ಯಾವುದೇ ಪ್ರಕರಣ ದಾಖಲು ಮಾಡಿಲ್ಲ. ವಿಧವೆ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ.

ಮನೆಗೆ ವಿದ್ಯುತ್‌ ಸಂಪರ್ಕ ಮತ್ತು ನೀರಿನ ವ್ಯವಸ್ಥೆ ಇಲ್ಲ. ಆದರೆ, ಸ್ಥಳೀಯ ಅಧಿಕಾರಿಗಳು ಯಾವುದೇ ಮೂಲ ಸೌಲಭ್ಯ ಕಲ್ಪಿಸಿದೆ ಪ್ರಭಾವಿಗಳ ಕೈಗೊಂಬೆಗಳಾಗಿದ್ದಾರೆ. ತಹಶೀಲ್ದಾರ್‌ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಗೆ ಪರಿಹಾರ ಸೂಚಿಸಬೇಕು ಎಂದು ಮನವಿ ಮಾಡಿದರು. 1 ಎಕರೆ ಮಂಜೂರಿಗೆ ಆಗ್ರಹ: ಜಿÇÉಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಕೋಟೆಕುಮಾರ್‌ ಮಾತನಾಡಿ, ಪ್ರತಿಯೊಂದು ಠಾಣೆಗಳಲ್ಲೂ ಅಟ್ರಾಸಿಟಿ ಪ್ರಕರಣಗಳ ಬಗ್ಗೆ ನಾಮಫ‌ಲಕದಲ್ಲಿ ಮಾಹಿತಿ ಹಾಕಬೇಕು.

ಯಾವ ಸೆಕ್ಷನ್‌ನಲ್ಲಿ ಪ್ರಕರಣ ದಾಖ ಲಾಗುತ್ತದೆ, ಅದರ ಶಿಕ್ಷೆ ಅವಧಿ ಇತ್ಯಾದಿ ಸಂಪೂರ್ಣ ಮಾಹಿತಿ ನಾಮಫ‌ಲಕದಲ್ಲಿ ಅಳವಡಿಸಬೇಕು. ಟಿ. ಹೊಸಹಳ್ಳಿ ಗ್ರಾಮದಲ್ಲಿ ಆಶ್ರಯ ಯೋಜನೆಗೆ ಮೀಸಲಿರುವ 6 ಎಕರೆ ಜಾಗದಲ್ಲಿ ಒಂದು ಎಕರೆ ಜಾಗ ವೆಂಕಟೇಶ್‌ ಎಂಬುವವರು ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಅನುಭವದಲ್ಲಿದ್ದಾರೆ. ಆ ಒಂದು ಎಕರೆ ಜಾಗ ಒಳಗೊಂಡಂತೆ ಆಶ್ರಯ ಯೋಜನೆಗೆ ಮೀಸಲಿರಿಸಿದ್ದಾರೆ. ಹಾಗಾಗಿ, ಅವರಿಗೆ ಒಂದು ಎಕರೆ ಭೂಮಿ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸ್ಮಶಾನ ಜಾಗ ಚರ್ಚಿಸಿ ನಿರ್ಧಾರ: ತಹಶೀಲ್ದಾರ್‌ ವಿಶ್ವನಾಥ್‌ ಮಾತನಾಡಿ, ಕಳೆದ 6-7 ವರ್ಷದಿಂದ ಪರಿಶಿಷ್ಟ ಜಾತಿ ಪಂಗಡಗಳ ಸಮುದಾಯದ ಕುಂದುಕೊರತೆ ಸಭೆಗಳು ನಡೆದಿಲ್ಲ. ನಾನು ತಾಲೂಕಿನಲ್ಲಿ ಕಾರ್ಯನಿರ್ವಹಿಸುವವರೆಗೂ ಪ್ರತಿ 4ತಿಂಗಳಿಗೊಮ್ಮೆ ಕುಂದುಕೊರತೆ ಸಭೆಗಳನ್ನು ಕರೆದು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ತಾಲೂಕಿನಲ್ಲಿ ಸ್ಮಶಾನ ಜಾಗ ಮೀಸಲಿರಿಸಲು ಮೇಲಾಧಿಕಾರಿಗಳಿಗೆ ಪ್ರೊಪೋಸಲ್‌ ಕಳುಹಿಸಿಲಾಗುವುದು. ಸರ್ಕಾರಿ ಭೂಮಿ ಇಲ್ಲದಿದ್ದರೆ, ಖಾಸಗಿ ಭೂಮಿ ಖರೀದಿಗೆ ಅವಕಾಶವಿದೆ.

ಟಿ.ಹೊಸಹಳ್ಳಿ ಗ್ರಾಮದಲ್ಲಿ ಆಶ್ರಯ ಯೋಜನೆಯಲ್ಲಿ ಮೀಸಲಾಗಿರುವ 6ಎಕರೆ ಜಾಗ ರಕ್ಷಣೆ ಮಾಡಿ ನಿವೇಶನ ಹಂಚಿಕೆ ಮಾಡಲು ಸೂಕ್ತ ಕ್ರಮವಹಿಸುತ್ತೇವೆ ಎಂದು ಭರವಸೆ ನೀಡಿದರು.

ಯೋಜನೆಗಳ ಬಗ್ಗೆ ಬುಕ್ಲೆಟ್‌: ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಯಪ್ರಕಾಶ್‌ ಮಾತನಾಡಿ, ಯಾವ ಯಾವ ಇಲಾಖೆಗಳಲ್ಲಿ ಎಸ್‌ ಇಪಿ ಮತ್ತು ಟಿಎಸ್‌ಪಿ ಅನುದಾನದಡಿಯಲ್ಲಿ ಕಾರ್ಯಕ್ರಮಗಳಿವೆ ಎಂಬ ಮಾಹಿತಿಯನ್ನು ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಲಭ್ಯವಾಗುವಂತೆ ಬುಕ್ಲೆಟ್‌ ರೂಪದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

ಈ ಸಭೆಯಲ್ಲಿ ಇಒ ಮಧು, ವೃತ್ತನರೀಕ್ಷಕ ಟಿ.ಟಿ.ಕೃಷ್ಣ, ನಗರ ಠಾಣೆಯ ಪಿಎಸ್‌ಐ ಉಷಾನಂದಿನಿ, ಗ್ರಾಮಾಂತರ ಠಾಣೆಯ ಹೇಮಂತ್‌ಕುಮಾರ್‌, ನಗರಸಭೆ ಪೌರಾಯುಕ್ತ ಶುಭ, ವಿವಿಧ ಇಲಾಖೆ ಅಧಿಕಾರಿಗಳು, ದಲಿತ ಮುಖಂಡ ಶಿವಲಿಂಗಯ್ಯ, ನೀಲಿರಮೇಶ್‌, ಗೋಪಿ, ಕೃಷ್ಣಪ್ಪ, ತಾ.ಮ. ಮಲ್ಲೇಶ್‌, ಬಹುಜನ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೊನಮಾನಹಳ್ಳಿ ಪುಟ್ಟಸ್ವಾಮಿ ಸೇರಿದಂತೆ ದಲಿತ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next