Advertisement

ಮಂಗಳೂರಿನ ಕ್ರಿಕೆಟ್‌ ಸ್ಪಂದನೆ: ಇಂದಿಗೆ 50 ವರ್ಷ

07:30 AM Apr 05, 2018 | Team Udayavani |

ಮಂಗಳೂರು: ಮಾನವೀಯ ಮೌಲ್ಯಗಳಿಗೆ ಕ್ರಿಕೆಟ್‌ ಆಟ ಸ್ಪಂದಿಸಿದ ಅಪೂರ್ವ ಘಟನೆ ಮಂಗಳೂರಿನಲ್ಲಿ ಕೂಡ ನಡೆದಿತ್ತು, ಅದು ಘಟಿಸಿ ಈ ಎಪ್ರಿಲ್‌ 5ಕ್ಕೆ 50 ವರ್ಷ! ಆ ಕಾಲಘಟ್ಟದ ಭಾರತದ ಪ್ರಸಿದ್ಧ ಮತ್ತು ಉದಯೋನ್ಮುಖ ಕ್ರಿಕೆಟಿಗರು ಈ ಸಹಾಯಾರ್ಥ ಪ್ರದರ್ಶನ ಪಂದ್ಯದಲ್ಲಿ ಭಾಗವಹಿಸಿದ್ದರು ಅನ್ನುವುದು ಇನ್ನೊಂದು ವಿಶೇಷ. ಈ ಪಂದ್ಯ ನಡೆದದ್ದು 1968ರ ಎಪ್ರಿಲ್‌ 5- 6 ಮತ್ತು 7ರಂದು.

Advertisement

ಮಹಾರಾಷ್ಟ್ರದ ಕೊಯ್ನಾದಲ್ಲಿ (ಇದು ಕರ್ನಾಟಕದ ಗಡಿ ಪ್ರದೇಶವೂ ಆಗಿದೆ) 1967ರ ಡಿಸೆಂಬರ್‌ 11ರಂದು ಇತಿಹಾಸದ ಅತ್ಯಂತ ಭೀಕರ ಭೂಕಂಪವೊಂದು ಸಂಭವಿಸಿತು. 177 ಜೀವ ಹಾನಿ, ಅಪಾರ ಆಸ್ತಿಹಾನಿ ಉಂಟಾಯಿತು. 2,200 ಮಂದಿ ಗಾಯಗೊಂಡರು. ಸಹಸ್ರಾರು ಮಂದಿ ನಿರ್ಗತಿಕರಾದರು. ಆ ಬಳಿಕ ಪರಿಹಾರ ಕ್ರಮಗಳ ಅಂಗವಾಗಿ ಧನ ಸಂಗ್ರಹದ ಕಾರ್ಯವೂ ನಡೆಯಿತು.

ಈ ಕಾರ್ಯದ ಅಂಗವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕ (ಆಗ ಮೈಸೂರು ರಾಜ್ಯ) ಸರಕಾರಗಳು 10 ಪಂದ್ಯಗಳ ಸಹಾಯಾರ್ಥ ಕ್ರಿಕೆಟ್‌ ಸರಣಿಯನ್ನು ವಿವಿಧೆಡೆ ಆಯೋಜಿಸಿದ್ದವು. ಆ ಪೈಕಿ ಒಂದು ಪಂದ್ಯ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಿತು. ಆಗ ಟಿ.ಜೆ. ರಾಮಕೃಷ್ಣನ್‌ ಜಿಲ್ಲಾಧಿಕಾರಿಯಾಗಿದ್ದರು.

ಈ ಸಂದರ್ಭದ ಅಪೂರ್ವ ಛಾಯಾಚಿತ್ರವನ್ನು ಮಾಜಿ ಕ್ರಿಕೆಟಿಗ, ದ. ಕನ್ನಡ ಕ್ರಿಕೆಟ್‌ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕಸ್ತೂರಿ ಬಾಲಕೃಷ್ಣ ಪೈ ಅವರು “ಉದಯವಾಣಿ’ಗೆ ನೀಡಿದ್ದಾರೆ. ಸಂಘಟಕರ ನೆರವಿನಿಂದ ದೊರೆತ ಚಿತ್ರ ಇದು, ತನ್ನ ಕ್ರಿಕೆಟ್‌ ಜೀವನದ ಅಮೂಲ್ಯ ಸಂಗ್ರಹಗಳಲ್ಲೊಂದು ಎಂದು ಅಖೀಲ ಭಾರತ ಶಾಲಾ ಬಾಲಕರ ಕ್ರಿಕೆಟ್‌ನಲ್ಲಿ ಮೈಸೂರು ರಾಜ್ಯವನ್ನು ಮತ್ತು ವಿ.ವಿ. ಮಟ್ಟದಲ್ಲಿ ಮೈಸೂರು ವಿ.ವಿ.ಯನ್ನು ಪ್ರತಿನಿಧಿಸಿದ್ದ ಬಾಲಕೃಷ್ಣ ಪೈ ಹೇಳುತ್ತಾರೆ.

ಜನತೆಯ ಸ್ಪಂದನ
ಈ ಪಂದ್ಯಕ್ಕೆ ನೆಹರೂ ಮೈದಾನವನ್ನು ವಿಶೇಷ ವಾಗಿ ಸಜ್ಜುಗೊಳಿಸಲಾಗಿತ್ತು. ಆ ಸಂದರ್ಭಕ್ಕೆ ಮ್ಯಾಟಿಂಗ್‌ ವಿಕೆಟ್‌. ವಿಸ್ತಾರವಾದ ಪೆಂಡಾಲ್‌ ವ್ಯವಸ್ಥೆಯಾಗಿತ್ತು. 5 ಸಾವಿರ ಮಂದಿ ವೀಕ್ಷಿಸಿದ್ದು ಇನ್ನೊಂದು ದಾಖಲೆ. ಮುಂಬಯಿ ಸಹಿತ ಮಹಾರಾಷ್ಟ್ರದಲ್ಲಿ ಸಂಭವಿಸಿದ ಕೆಲವು ಅನಪೇಕ್ಷಿತ ಘಟನೆಗಳ ಪರಿಣಾಮವಾಗಿ ಮಂಗಳೂರಿನ ಪಂದ್ಯದ ಮೂರನೆಯ ದಿನ ಫಲಿತಾಂಶರಹಿತವಾಗಿ ಪಂದ್ಯವನ್ನು ಮುಕ್ತಾಯಗೊಳಿಸಲಾಗಿತ್ತು. ಪ್ರದರ್ಶನದ ಪಂದ್ಯವಾದ್ದರಿಂದ ಅಂಕಪಟ್ಟಿ ದಾಖಲುಗೊಂಡಿಲ್ಲ.

Advertisement

ಮಂಗಳೂರು ಸ್ಪೋರ್ಟ್ಸ್ ಕ್ಲಬ್‌ ಹಾಗೂ ದ. ಕನ್ನಡ ಕ್ರಿಕೆಟ್‌ ಸಂಸ್ಥೆಯ ಕಾರ್ಯದರ್ಶಿ ಮನೋಹರ ನಿವಾಸ್‌, ಇಲ್ಲಿನ ಎಲ್ಲ ಕ್ರಿಕೆಟ್‌ ಸಂಸ್ಥೆಗಳ ಸಂಘಟನೆಯ ಈ ಪಂದ್ಯದಲ್ಲಿ 16 ಮಂದಿ ರಾಷ್ಟ್ರ ಮಟ್ಟದ ಆಟಗಾರರ ಜತೆ ಮಂಗಳೂರು, ಉಡುಪಿಯ ಕ್ರಿಕೆಟಿಗರೂ ಭಾಗವಹಿಸಿದ್ದರು. “ಕೊಯ್ನಾ ಅರ್ತ್‌ ಕ್ವೇಕ್‌ ರಿಲೀಫ್‌ ಫಂಡ್‌ ಕ್ರಿಕೆಟ್‌ ಮ್ಯಾಚ್‌’ ಎಂಬುದು ಪಂದ್ಯದ ಶೀರ್ಷಿಕೆ ಯಾಗಿತ್ತು. 

ಒಂದು ಲಕ್ಷ ರೂ. ಅರ್ಪಣೆ
ಮಂಗಳೂರಿನ ಕ್ರಿಕೆಟ್‌ ಪಂದ್ಯದ ಸಂಘಟಕರು ಕೊಯ್ನಾ ಭೂಕಂಪ ಪರಿಹಾರ ನಿಧಿಗೆ 1 ಲಕ್ಷ ರೂ. ಮೊತ್ತ ನೀಡಿದರು. 1968ರ ಸಂದರ್ಭಕ್ಕಿದು ಗಣನೀಯ ಮೊತ್ತ. ಎರಡೂ ತಂಡಗಳ ಆಟಗಾರರು ಆಗಿನ ಆಡಳಿತದ ಹೊಟೇಲ್‌ ಮೋತಿಮಹಲ್‌ನ ಎರಡು ಅಂತಸ್ತುಗಳ ಕೊಠಡಿಯಲ್ಲಿ ತಂಗಿದ್ದರು. ಒಟ್ಟು ಬಿಲ್‌ 30 ಸಾವಿರ ರೂ. ಆಗಿತ್ತು. ಆದರೆ ಹೊಟೇಲ್‌ ಆಡಳಿತದವರು ಅದರಲ್ಲಿ 15 ಸಾವಿರ ರೂ.ಗಳನ್ನು ತಮ್ಮ ಕೊಡುಗೆಯಾಗಿ ರಿಯಾಯಿತಿ ನೀಡಿದರು.

ಅತಿರಥ ಸಂಗಮ
ಪಂದ್ಯದಲ್ಲಿ ಭಾಗವಹಿಸಿದ್ದ ಅತಿರಥರಿವರು: ಇ.ಎ.ಎಸ್‌., ಪ್ರಸ‌ನ್ನ, ಎಂ. ಚಿನ್ನಸ್ವಾಮಿ, ಮಾಧವ ಮಂತ್ರಿ, ವಿ. ಸುಬ್ರಹ್ಮಣ್ಯ, ಬಾಪು ನಾಡಕರ್ಣಿ, ಚಂದು ಬೋರ್ಡೆ, ಸುನಿಲ್‌ ಗಾವಸ್ಕರ್‌, ಜಿ. ಆರ್‌. ವಿಶ್ವನಾಥ್‌, ಅಜಿತ್‌ ವಾಡೇಕರ್‌, ರಮಾಕಾಂತ್‌ ದೇಸಾೖ, ಪದ್ಮಾಕರ್‌ ಶಿವಾಲ್ಕರ್‌, ಹೇಮಂತ್‌ ಕಾನಿಟ್ಕರ್‌, ವಿಜಯಕೃಷ್ಣ, ವಿಜಯ ಮಂಜ್ರೆàಕರ್‌, ನರೇಂದ್ರ ತಮಾನೆ.

ಸ್ಥಳೀಯರ ಪ್ರಾತಿನಿಧ್ಯ
ಮನೋಹರ್‌ ನಿವಾಸ್‌, ಜೇಮ್ಸ್‌ ವಿಲ್ಸನ್‌ ಅಮ್ಮಣ್ಣ, ಕಮಲಾಕ್ಷ ಪೈ, ಸುರೇಂದ್ರ ಕಾಮತ್‌, ಪಿ.ಎನ್‌. ಭಂಡಾರಿ, ಗೋಪಾಲ್‌ ಪೈ ಎಸ್‌., ಕೆ. ರಾಮಚಂದ್ರ, ಕೇಪುಳ ದಿನೇಶ್‌ ನಾಯಕ್‌, ಮೋಹನ್‌ ಭಂಡಾರಿ, ವೆಂಕಪ್ಪ ರೈ, ಸಂಜೀವ ಶೆಣೈ, ಬಸ್ತಿ ವಾಮನ ಶೆಣೈ, ರಮೇಶ್‌ ಮಲ್ಯ, ಕೆ.ಟಿ. ಕಾಮತ್‌, ರಾಜಗೋಪಾಲ್‌, ರಾಜಾರಾಮ್‌ ಪಂದ್ಯದಲ್ಲಿ ಭಾಗವಹಿಸಿದ್ದ ಸ್ಥಳೀಯರು. 

ಮನೋಹರ ಪ್ರಸಾದ್‌

ಚಿತ್ರ ಸಂಗ್ರಹ: ಕಸ್ತೂರಿ ಬಾಲಕೃಷ್ಣ ಪೈ. 
 

Advertisement

Udayavani is now on Telegram. Click here to join our channel and stay updated with the latest news.

Next