Advertisement

ಧಾರ್ಮಿಕ, ಯಾತ್ರಾ ಸ್ಥಳ ಅಭಿವೃದ್ಧಿಪಡಿಸಿದರೆ ಉದ್ಯೋಗ ಸೃಷ್ಟಿ

12:13 PM Sep 12, 2017 | Team Udayavani |

ಭೇರ್ಯ: ರಾಜ್ಯದ ಪ್ರಸಿದ್ಧ ಧಾರ್ಮಿಕ ಮತ್ತು ಯಾತ್ರಾ ಸ್ಥಳಗಳನ್ನು ಗುರುತಿಸಿ, ಅಭಿವೃದ್ಧಿಪಡಿಸಬೇಕು. ಅದರಿಂದ ರಾಜ್ಯದ ಸಂಸ್ಕೃತಿಯನ್ನು ದೇಶಕ್ಕೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ‌ರಿಚಯಿಸುವುದರ ಜೊತೆಗೆ ಉದ್ಯೋಗವನ್ನು ಸೃಷ್ಟಿಸಬಹುದೆಂದು ಖ್ಯಾತ ಚಿತ್ರನಟ ಯಶ್‌ ಹೇಳಿದರು.

Advertisement

ಕೆ.ಆರ್‌.ನಗರ ತಾಲೂಕಿನ ಚುಂಚನಕಟ್ಟೆಯಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಜಲಪಾತೋತ್ಸವ ಸಮಾರೋಪದಲ್ಲಿ ಮಾತನಾಡಿದರು. ನಾಡಿನ ಸಂಸ್ಕೃತಿ ಉಳಿದು ಭಾಷೆ ಬೆಳೆಯ ಬೇಕಾದರೆ ಪ್ರತಿಯೊಬ್ಬರೂ ನಾಡಿನ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಚುಂಚನಕಟ್ಟೆಯಲ್ಲಿ ಕಳೆದ ವರ್ಷದಿಂದ ರಾಜ್ಯ ಸರ್ಕಾರ ಜಲಪಾತೋತ್ಸವ ನಡೆಸುತ್ತಿದೆ. ಇದರಿಂದ ಈ ಸ್ಥಳ ರಾಜ್ಯ ಮಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಯಲಿ. ಇದಕ್ಕೆ ನಮ್ಮ ಸಹಕಾರ ಇದೆ ಎಂದು ಘೋಷಿಸಿದರು.

ನಟಿ ರಾಧಿಕಾ ಪಂಡಿತ್‌ ಮಾತನಾಡಿ, ಹಲವಾರು ಚಿತ್ರಗಳ ಚಿತ್ರೀಕರಣ ಇಲ್ಲಿಯೇ ನಡೆದಿದೆ. ಇದನ್ನು ನನಗೆ ಬರುವಾಗ ಯಶ್‌ ತಿಳಿಸಿದರು. ಕತ್ತಲೆಯಿಂದ ನೋಡಲು ಸಾದ್ಯವಾಗಿಲ್ಲ. ಆದ್ದರಿಂದ ಮತ್ತೂಮ್ಮೆ ಈ ಕ್ಷೇತ್ರಕ್ಕೆ ಬಂದು ಇಲ್ಲಿನ ಸೊಬಗನ್ನು ಕಣ್ತುಂಬಿಕೊಳ್ಳುವೆ. ನಿಮ್ಮಗಳ ಪ್ರೀತಿ, ವಿಶ್ವಾಸ, ಮನೆಯೂಟವನ್ನು ಯಶ್‌ ಯಾವಾಗಲೂ ಹೊಗಳುತ್ತಿರುತ್ತಾರೆ. ನನಗೆ ಸಮಯ ಸಿಕ್ಕಾಗ ಯಶ್‌ ಜತೆಯಲ್ಲಿ ಬಂದು ನಿಮ್ಮ ಮನೆಯೂಟ ಸವಿವುದಾಗಿ ಹೇಳಿದರು.

ದಂಪತಿಗೆ ಸನ್ಮಾನ: ಯಶ್‌ ಮತು ರಾಧಿಕಾ ಪಂಡಿತ್‌ ದಂಪತಿಯನ್ನು ಜಿಲ್ಲಾಡಳಿದ ವತಿಯಿಂದ ಸನ್ಮಾನಿಸಲಾಯಿತು.  ನಂತರ ಮಿಸ್ಟರ್‌/ ಮಿಸ್‌ ರಾಮಾಚಾರಿ ಚಿತ್ರದ ಸಂಭಾಷಣೆ ಹೇಳಿ ರಂಜಿಸಿದರು. ಎರಡು ದಿನಗಳ ಕಾವೇರಿ ಜಲಪಾತೋತ್ಸವಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು. ಅಲ್ಲದೇ, ಮುಂದಿನ ವರ್ಷದಿಂದ ಜಲಪಾತೋತ್ಸವವನ್ನು ಅದ್ದೂರಿಯಾಗಿ ನಡೆಸುವುದಾಗಿ ಶಾಸಕ ಸಾ.ರಾ.ಮಹೇಶ್‌ ಪ್ರಕಟಿಸಿದರು.

Advertisement

ನಂತರ ಸಾಧುಕೋಕಿಲ ಮತ್ತು ತಂಡದ ಉಷಾ ಕೋಕಿಲ, ಚೈತ್ರಾ, ಇಂದುನಾಗರಾಜು, ಶಶಾಂಕ್‌, ಮನು, ಸಂತೋಷ್‌, ಪ್ರಕಾಶ್‌, ಮಿಮಿಕ್ರಿ ಶ್ಯಾಂ ಅವರಿಂದ ಏರ್ಪಡಿಸಿದ್ದ ಮ್ಯೂಸಿಕಲ್‌ ನೈಟ್‌ ಕಾರ್ಯಕ್ರಮ ಜನರ ಮನಸೂರೆಗೊಂಡಿತು. ಸಂಸದ ಸಿ.ಎಸ್‌.ಪುಟ್ಟರಾಜು, ಶಾಸಕ ಸಾ.ರಾ.ಮಹೇಶ್‌, ಮೇಯರ್‌ ರವಿಕುಮಾರ್‌, ಜಿ.ಪಂ. ವಿಪಕ್ಷ ನಾಯಕ ಡಿ.ರವಿಶಂಕರ್‌, ಸದಸ್ಯರಾದ ಅಮಿತ್‌ ವಿ.ದೇವರಹಟ್ಟಿ, ಕುಪ್ಪೆ ಗ್ರಾಪಂ ಅಧ್ಯಕ್ಷೆ ಪ್ರೇಮಾಕುಮಾರ್‌, ಉಪಾಧ್ಯಕ್ಷ ಕೆ.ವಿ.ನವೀನ್‌ಕುಮಾರ್‌, ಉಪ ವಿಭಾಗಾಧಿಕಾರಿ ಡಾ.ಸೌಜನ್ಯಾ, ತಹಶೀಲ್ದಾರ್‌ ಮಹೇಶ್‌ಚಂದ್ರ, ಇಒ ಚಂದ್ರು, ಅಪರ್ಣಾ ನಿರೂಪಿಸಿದರು.

ಜಲಪಾತೋತ್ಸವ ಸಂಭ್ರಮ… 
ಸಾವಿರಾರು ಜನರು ಕಾವೇರಿ ಜಲಪಾತೋತ್ಸವವನ್ನು ಕಣ್ತುಂಬಿಕೊಂಡರು. ಜಗಮಗಿಸಿದ ಚುಂಚನಕಟ್ಟೆ, ಆನಂದದ ಅಲೆಯಲ್ಲಿ ತೇಲಿದ ಜನ ಸಾಗರ, ಯುವ ಜನತೆ ನರ್ತಿಸಿದರು. ಚಿತ್ರನಟರನ್ನು ನೋಡಿ ಜೈಕಾರ ಹಾಕಿದ ಸಂಭ್ರಮಿಸಿದ ಪ್ರೇಕ್ಷಕರು ಇದು ಚುಂಚನಕಟ್ಟೆಯಲ್ಲಿ ಭಾನುವಾರ ರಾತ್ರಿ ನಡೆದ ಎರಡನೇ ವರ್ಷದ ಜಲಪಾತೋತ್ಸವದಲ್ಲಿ ಕಂಡು ಬಂದ ದೃಶ್ಯಗಳು.

ಜಲಪಾತೋತ್ಸವದ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋಧ್ಯಮ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಚುಂಚನಕಟ್ಟೆ ಬಸವನ ವೃತ್ತ ಹಾಗೂ ಶ್ರೀರಾಮ ದೇವಾಲಯದ ಸುತ್ತಮುತ್ತ ಮಾಡಿದ್ದ ದೀಪಾಲಂಕಾರ ಕಣ್ಣು ಕೋರೈಸಿತು. ಇಡೀ ಪ್ರದೇಶ ಜಗ ಮಗಿಸುವಂತೆ ಮಾಡಿತು. ನಟರಾದ ಸಾಧುಕೋಕಿಲ ಮತ್ತು ತಂಡದವರ ಹಾಡಿನ ಮೋಡಿಗೆ ಜನ ಮರುಳಾದರು.  

ಅವರ ಸಹೋದರ ಲಯಕೋಕಿಲ ಅವರ ಹಾಸ್ಯದ ಝಲಕ್‌ ಜನರನ್ನು ನಕ್ಕು ನಗಿಸಿತು. ಜಲಪಾತೋತ್ಸವ ವೀಕ್ಷಣೆಗೆ ಜಿಲ್ಲೆಯ ವಿವಿಧೆಡೆಗಳಿಂದ 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಇದರಿಂದ ಚುಂಚನಕಟ್ಟೆಯಾದ್ಯಂತ ಎಲ್ಲಿ ನೋಡಿದರೂ ಜನ ಮತ್ತು ವಾಹನಗಳು ಕಂಡು ಬಂದವು. ಅಲ್ಲದೇ, ಡಿವೈಎಸ್‌ಪಿ ರುದ್ರಮುನಿ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next