Advertisement

ಕೋವಿಡ್ ಯೋಧರೇ..ನಿಮಗೊಂದು ಸೆಲ್ಯೂಟ್‌..

01:51 PM May 03, 2021 | Team Udayavani |

ಜಾಗತಿಕ ಮಹಾಮಾರಿ ಕೊರೊನಾ ವೈರಸ್‌ ತನ್ನ ಎರಡನೇ ಅಲೆಯನ್ನು ಎಬ್ಬಿಸಿದೆ. ಸುನಾಮಿ ರೀತಿ ಇದು ನಗರದಲ್ಲಿ ದಾಳಿ ನಡೆಸುತ್ತಿದೆ. ನಿತ್ಯ ನೂರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಮತ್ತೂಂದೆಡೆ ಈ ವೈರಸ್‌ನ ವಿರುದ್ಧ ಜೀವ ಪಣಕ್ಕಿಟ್ಟು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾವಿರಾರು ಜನ ಹೋರಾಟ ನಡೆಸುತ್ತಿದ್ದಾರೆ. ಪೊಲೀಸ್‌, ಆರೋಗ್ಯ ಸೇರಿದಂತೆ ವಿವಿಧ ವಿಭಾಗಗಳಿಂದ ಶ್ರಮಿಸುತ್ತಿರುವ ಆ ವಾರಿಯರ್‌ಗಳು ಮತ್ತವರ ಸೇವೆಗಳನ್ನು ಓದುಗರಿಗೆ ಪರಿಚಯಿಸುವ ಹಾಗೂ ಸ್ಮರಿಸುವ ಪ್ರಯತ್ನ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…

Advertisement

 ಹೋಂ ಐಸೋಲೇಷನ್‌ ತ್ಯಾಜ್ಯ ಸುಳಿಯಲಿ ಪೌರ ಕಾರ್ಮಿಕರು

ಕೊರೊನಾ ಮಹಾಮಾರಿ ರಾಜಧಾನಿಯ ಕೊರಳು ಬಿಗಿಯುತ್ತಿದೆ. ಈ ನಡುವೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ, ಸೋಂಕು ಹತೋಟಿಯ ಪ್ರಮುಖ ಅಸ್ತ್ರವಾದ ಸ್ವತ್ಛತಾ ಕಾರ್ಯದಲ್ಲಿ 18,500 ಬಿಬಿಎಂಪಿ ಪೌರ ಕಾರ್ಮಿಕರು ವಾರಿಯರ್ಸ್‌ ಆಗಿ ತಮ್ಮ ಕೆಲಸ ಮುಂದುವರಿಸುತ್ತಿದ್ದಾರೆ. ಕರ್ಫ್ಯೂ ಹಿನ್ನೆಲೆ ಜನ ಮನೆಯಿಂದ ಹೊರ ಬಾರದಿದ್ದರೂ, ಈ ಪೌರ ಕಾರ್ಮಿಕರು ಬೆಳಗಾಗುತ್ತಲೇ ಪೊರಕೆ ಹಿಡಿದು ನಗರದ ಸಾರ್ವಜನಿಕ ಸ್ಥಳಗಳಲ್ಲಿ ಸತ್ಛತಾ ಕಾರ್ಯದಲ್ಲಿ ತಲ್ಲೀನರಾಗುತ್ತಿದ್ದಾರೆ.

ಮನೆ ಮನೆಗೂ ತೆರಳಿ ಕಸ ಸಂಗ್ರಹಿಸುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ 198 ವಾರ್ಡ್‌ಗಳಿದ್ದು, ಒಟ್ಟು 18,500 ಕ್ಕೂ ಹೆಚ್ಚು ಪೌರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಒಟ್ಟು 587 ತ್ಯಾಜ್ಯ ಸಂಗ್ರಹ ಸ್ಥಳಗಳಿದ್ದು, 593 ಕಾಂಪೋಸ್ಟರ್‌, 4,646 ಆಟೋ ಟಿಪ್ಪರ್‌ ಕಾರ್ಯಾಚರಣೆ ನಡೆಸುತ್ತಿವೆ.

ಸದ್ಯ ನಗರದಲ್ಲಿ 10 ಮಂದಿಗೆ ಸೋಂಕು ತಗುಲಿದರೆ 9 ಸೋಂಕಿತರು ಹೋಂ ಐಸೋಲೇಷನ್‌ ಆಯ್ಕೆ ಮಾಡುತ್ತಿದ್ದಾರೆ. ಸದ್ಯ 2.3 ಲಕ್ಷ ಸೋಂಕಿತರು ಮನೆ ಆರೈಕೆಯಲ್ಲಿದ್ದಾರೆ. ನಿತ್ಯ ಮನೆಗಳಿಗೆ ತೆರಳಿ ಕಸ ಸಂಗ್ರಹಿಸುವ ಪೌರಕಾರ್ಮಿಕರಿಗೆ ಯಾವುದು ಸೋಂಕಿತರ ಮನೆ ಎಂಬುದು ತಿಳಿಯುತ್ತಿಲ್ಲ, ಸೋಂಕಿತರು ಬಳಸಿ ವಸ್ತುಗಳೂ ಕೂಡಾ ನೇರವಾಗಿ ಪೌರಕಾರ್ಮಿಕರ ಕೈಸೇರುತ್ತಿವೆ. ಇಂತಹ ಪರಿಸ್ಥಿತಿಯಲ್ಲೂ ತಮ್ಮ ಜೀವ ಪಣಕ್ಕಿಟ್ಟು ಕೊರೊನಾ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಡೆಲಿವರಿ ಬಾಯ್ಸ ಎಂಬ ಆಪತ್ಭಾಂಧವರು

ನಗರದ ರಸ್ತೆಗಳಲ್ಲಿ ಆ್ಯಂಬುಲೆನ್ಸ್‌ ಬಿಟ್ಟರೆ, ಡಿಲಿವರಿ ಬಾಯ್ಸಗಳೆ ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸುತ್ತಿದ್ದಾರೆ. ಕರ್ಫ್ಯೂ ಹಿನ್ನೆಲೆ ಜನರಿಗೆ ಆಹಾರ ಸೇರಿದಂತೆ ಅಗತ್ಯ ಸಾಮಗ್ರಿಗಾಗಿ ಆನ್‌ಲೈನ್‌ ಮೊರೆಹೋಗಿದ್ದು, ಅವುಗಳನ್ನು ಮನೆಗೆ ಪೂರೈಸುವ ಕಾರ್ಯದಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ನಿರತರಾಗಿದ್ದಾರೆ. ಈ ಮೂಲಕ ಸಂಕಷ್ಟದ ಸಂದರ್ಭದಲ್ಲಿ

ಆಪತ್ಬಾಂಧವರು ಎನಿಸಿಕೊಂಡಿದ್ದಾರೆ. ಈ ಪೈಕಿ ಪುಡ್‌ ಡೆಲಿವರಿಯೆ ಹೆಚ್ಚಿದ್ದು, ಸಾಮಾನ್ಯ ದಿನಗಳಿಗಿಂತ ದುಪ್ಪಟ್ಟು ಆರ್ಡ್‌ರ್‌ಗಳು ಬರುತ್ತಿವೆ. ಟ್ರಾಫಿಕ್‌ ಇಲ್ಲದಿರುವುದು ಓಡಾಟಕ್ಕೆ ಅನುಕೂಲವಾಗಿದೆ. ಆದರೆ, ಹೋಂ ಐಸೋಲೇಷನ್‌ ಇರುವವರ ಸಂಖ್ಯೆ ಹೆಚ್ಚಿದ್ದು, ನಮಗೂ ಸೋಂಕಿನ ಭಯವಿದೆ ಎನ್ನುತ್ತಾರೆ ಸ್ವಿಗೀ ಸಿಬ್ಬಂದಿ ರಮೇಶ್‌.

ಸಾರಿಗೆ ನೌಕರರೆಂಬ ಸಂಪರ್ಕ ಸೇತುವೆ

ಸಾರಿಗೆ ನೌಕರರು ನೇರವಾಗಿ ಕೊರೊನಾ ವಾರಿಯರ್ ಆಗಿ ಕಾರ್ಯನಿರ್ವ ಹಿಸದಿರಬಹುದು; ಆದರೆ, ಆ ವಾರಿಯರ್ ಕಾರ್ಯನಿರ್ವಹಣೆಗೆ ಅಗತ್ಯ ಸಂಪರ್ಕ ಸೇತುವೆ ಆಗಿದ್ದಾರೆ. ಸುಮಾರು ಸಾವಿರಕ್ಕೂ ಅಧಿಕ ಸಾರಿಗೆ ನೌಕರರು ಪರೋಕ್ಷವಾಗಿ ವಾರಿಯರ್ ಆಗಿ ಕೆಲಸ ಮಾಡುತ್ತಿ ದ್ದಾರೆ. 156 ಬಸ್‌ ಗಳನ್ನು ಇದಕ್ಕಾಗಿ ನಿಯೋಜಿಸ ಲಾಗಿದೆ.

ನಿತ್ಯ 8-10 ತಾಸು ಈ ಸಿಬ್ಬಂದಿ ದುಡಿಯುತ್ತಿ ದ್ದಾರೆ. ಇದರಲ್ಲಿ ಶೇ. 40ರಿಂದ 50ರಷ್ಟು ನೌಕರರು ಕಳೆದ ವರ್ಷ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದವರಾಗಿದ್ದಾರೆ. ಈ ಬಾರಿ ಗರ್ಭಿಣಿಯರು, ಅನಾರೋಗ್ಯದಿಂದ ಬಳಲುತ್ತಿ¨ವ ‌ª ರನ್ನು ಯಾವುದೇ ಕಾರಣಕ್ಕೂ ಬಳಸಿಕೊಳ್ಳುತ್ತಿಲ್ಲ. ಸ್ವಯಂಪ್ರೇರಿತವಾಗಿ ಕೆಲವರು ಮುಂದೆಬಂದರೂ ರಿಸ್ಕ್ ಬೇಡ ಎಂದು ಸಾಧ್ಯವಾದಷ್ಟು ನಿರಾಕರಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದರು. ಆರೋಗ್ಯ ಮತ್ತು ಆಶಾ ಕಾರ್ಯಕರ್ತರು, ಪೊಲೀಸರು, ಪೌರಕಾರ್ಮಿಕರು ಸೇರಿದಂತೆ ನಗರದಲ್ಲಿ ಮಹಾಮಾರಿ ನಿಯಂತ್ರಣಕ್ಕೆ ಸಾವಿರಾರು ಜನ ನಿರತರಾಗಿದ್ದಾರೆ. ಅವರೆಲ್ಲರೂ ಸಕಾಲದಲ್ಲಿ ಸ್ಥಳಕ್ಕೆ ತಲುಪಿಸುವ ಕೆಲಸವನ್ನು ಚಾಲನಾ ಸಿಬ್ಬಂದಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಜೀವದ ಹಂಗುತೊರೆದು ರೋಗಿಗಳನ್ನೂ ಆಸ್ಪತ್ರೆಗಳಿಗೆ ತಲುಪಿಸುತ್ತಿದ್ದಾರೆ. ಜತೆಗೆ ಮಾರ್ಗ ತಪಾಸಣೆ ಮಾಡುವ (ಲೈನ್‌ ಚೆಕಿಂಗ್‌) ನಿರೀಕ್ಷಕರುಗಳನ್ನು ಬಿಬಿಎಂಪಿ ಕಂಟ್ರೋಲ್‌ರೂಂನಲ್ಲಿ ಆ್ಯಂಬುಲೆನ್ಸ್‌ ಟ್ರಾÂಕಿಂಗ್‌ ಮತ್ತು ಹಂಚಿಕೆ, ಸೋಂಕಿತ ಸಂಪರ್ಕಿತರನ್ನು ಪತ್ತೆಹಚ್ಚಿ ಹೋಂ ಕ್ವಾರಂಟೈನ್‌, ಐಸೋಲೇಷನ್‌ ಮಾಡುವಲ್ಲೂ ನೂರಾರು ಸಾರಿಗೆ ನೌಕರರು ನಿರತರಾಗಿದ್ದಾರೆ.

75 ಸಾವಿರ ಪೊಲೀಸರಿಂದ ಸೇವೆ

ಕೋವಿಡ್ ಎರಡನೇ ಅಲೆ ಮೊದಲ ಅಲೆಗಿಂತ ಭೀಕರವಾ ಗಿದ್ದು, ಈ ವಿಷಮ ಪರಿಸ್ಥಿತಿಯಲ್ಲೂ ಪೊಲೀಸರು ಜನತಾ ಕರ್ಫ್ಯೂ ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿರುವ ಎಡಿಜಿಪಿ ದರ್ಜೆಯ ಅಧಿಕಾರಿಗಳಿಂದ ಕಾನ್ಸ್ ಸ್ಟೆಬಲ್ ವರೆಗೂ ಎಲ್ಲ ಅಧಿಕಾರಿ-ಸಿಬ್ಬಂದಿ ಸೇರಿ ಒಟ್ಟು 75 ಸಾವಿರಕ್ಕೂ ಅಧಿಕ ಮಂದಿ ಕೊರೊನಾ ವಾರಿಯರ್ಸ್‌ಗಳಾಗಿ ಮುಖ್ಯವಾಹಿನಿಯಲ್ಲಿ ದ್ದಾರೆ. ಮಹಿಳಾ ಸಿಬ್ಬಂದಿ ಸೇರಿ ಎಲ್ಲ ಹಂತದವರು ಮೂರು ಪಾಳಿಯಲ್ಲಿ ಎಂಟು ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಮಧ್ಯೆ 50 ವರ್ಷ ಮೇಲ್ಪಟ್ಟ ಅಧಿಕಾರಿ-ಸಿಬ್ಬಂದಿಯನ್ನು ಠಾಣೆಯಲ್ಲಿ ಕೆಲಸ ಮಾಡಲು ಮೌಖೀಕವಾಗಿ ಸೂಚಿಸಲಾಗಿದೆ.

ಮತ್ತೂಂದೆಡೆ ಪೊಲೀಸ್‌ ಇಲಾಖೆ ತಮ್ಮ ಅಧಿಕಾರಿ- ಸಿಬ್ಬಂದಿಯ ಸುರ ಕ್ಷತೆಗಾಗಿ ಅಲ್ಲಲ್ಲಿ ಪೊಲೀಸರಿಗಾ ಗಿಯೇ ಕೊರೊನಾ ಕೇರ್‌ ಸೆಂಟರ್‌ ಗಳು, ವಾರ್‌ ರೂಮ್‌ ನಿರ್ಮಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಬೆಡ್‌ಗಳು, ಆಕ್ಸಿಜನ್‌ ಕೊರತೆ ಉಂಟಾಗದಂತೆ ಕ್ರಮಕೈಗೊಂಡಿದೆ. ನಿರ್ಬಂಧ ಜಾರಿ ಮಾಡಿದ ಬಳಿಕ ಪ್ರತಿ ಕ್ಷಣ ಸಾರ್ವಜನಿಕರ ಜತೆ ಸಂಪರ್ಕದಲ್ಲಿರಬೇಕು. ಯಾವ ಸಂದರ್ಭದಲ್ಲಿ ಹೇಗೆ ಸೋಂಕು ತಗುಲುತ್ತದೆ ಎಂಬುದು ತಿಳಿಯುವುದಿಲ್ಲ. ಹೀಗಾಗಿ ಸಾರ್ವಜನಿಕರು ಕೂಡ ತಮಗೆ ಸಹಕಾರ ನೀಡಬೇಕು. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜತೆಗೆ ಅನಗತ್ಯವಾಗಿ ಹೊರಗಡೆ ಓಡಾಡದೆ ಸಹಕಾರ ನೀಡಬೇಕು ಎಂದು ಇಲಾಖೆ ಮನವಿ ಮಾಡಿದೆ.

ಜೀವ ಉಳಿಸುವ- ಮುಕ್ತಿನೀಡುವ ಆ್ಯಂಬುಲೆನ್ಸ್‌ ಸಿಬ್ಬಂದಿ

ಆ್ಯಂಬುಲೆನ್ಸ್‌ಗಳು ಸೋಂಕಿತರನ್ನು ಸೂಕ್ತ ಸಂದರ್ಭದಲ್ಲಿ ಆಸ್ಪತ್ರೆ ಕರೆದುಕೊಂಡು ಹೋಗಿ ಜೀವ ಉಳಿಸುವ ಮತ್ತು ಮೃತ ಸೋಂಕಿತರನ್ನು ಚಿತಾಗಾರ ತಲುಪಿಸಿ ಮುಕ್ತ ನೀಡುವ ಎರಡೂ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಕೆಲವರು ಮಾತ್ರ ದುಬಾರಿ ಹಣಕ್ಕೆ ಬೇಡಿಕೆ ಇಟ್ಟರೆ, ಬಹುತೇಕರು ಸೇವಾ ಮನಸ್ಥಿತಿ ಹೊಂದಿದ್ದಾರೆ. ಸದ್ಯ ನಗರದಲ್ಲಿ ಒಂದು ಸಾವಿರಕ್ಕೂ ಅಧಿಕ ಆ್ಯಂಬುಲೆನ್ಸ್‌ ಕಾರ್ಯನಿರ್ವಹಿಸುತ್ತಿವೆ.

ಸಾವಿನ ಅಲೆ ವಿರುದ್ಧ ಈಜುತ್ತಿರುವಚಿತಾಗಾರ ಸಿಬ್ಬಂದಿ

ರಾಜಧಾನಿಯ ಬಹುತೇಕ ಚಿತಾಗಾರದಲ್ಲಿ ಕೊರೊನಾ ಸೋಂಕಿನಲ್ಲಿ ಮೃತ ಪಟ್ಟವರ ಮೃತದೇಹಗಳ ಶವ ಸಂಸ್ಕಾರ ಮಾಡುತ್ತಿರುವ ಸಿಬ್ಬಂದಿ (ಕೊರೊನಾ ವಾರಿಯರ್ಸ್‌) ನಿತ್ಯ ಸಾವಿನ ಅಲೆಯ ವಿರುದ್ಧವಾಗಿ ಈಜುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 12 ಚಿತಾಗಾರಗಳಿವೆ. ಒಂದು ಚಿತಾಗಾರದಲ್ಲಿ ತಲಾ 10ರಿಂದ 15 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿತ್ಯ ವಿದ್ಯುತ್‌ ಚಿತಾಗಾರ ಒಂದರಲ್ಲಿ ತಲಾ 25ಕ್ಕೂ ಹೆಚ್ಚು ಕೊರೊನಾ ಸೋಂಕಿತ ಮೃತದೇಹಗಳ ಅಂತ್ಯಕ್ರಿಯೆ ನಡೆಯುತ್ತಿದೆ. ಚಿತಾಗಾರದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 350ಕ್ಕೂ ಹೆಚ್ಚು ಸಿಬ್ಬಂದಿ ಜತೆಗೆ, 60ಕ್ಕೂ ಹೆಚ್ಚು ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ಕಳೆದ ಬಾರಿ ಕೆಲಸ ಮಾಡಿದ್ದವರೇ ಈಗಲೂ ಮುಂದುವರಿದಿದ್ದಾರೆ.

ಮುಕ್ತಿ ಕೊಡುವುದೇ ಪುಣ್ಯ ಕೆಲಸ: ನಗರದಲ್ಲಿ ಕೊರೊನಾ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ನಿತ್ಯ ಹೆಚ್ಚಳವಾಗುತ್ತಿದೆ. ಬೆಳಗ್ಗೆ 8ಗಂಟೆಗೆ ಬಂದು ಚಿತಾಗಾರದ ಬಾಗಿಲು ತೆರೆದು ಸ್ವಚ್ಚಗೊಳಿಸುವಷ್ಟರಲ್ಲಿ ಐದಾರು ಆಂಬುಲೆನ್ಸ್‌ ಗಳು ಮೃತದೇಹ ತಂದು ಸಾಲು ನಿಲ್ಲುತ್ತವೆ. ಸಂಜೆಯೊಳಗೆ ಸುಮಾರು 25ಕ್ಕೂ ಹೆಚ್ಚು ಮೃತದೇಹ ಬರುತ್ತವೆ. ಒಮ್ಮೆ ಎರಡು ಶವಗಳನ್ನು ಮಾತ್ರ ಬರ್ನ್ ಮಾಡಲು ಸಾಧ್ಯ. ಒಂದು ಶವ ಸುಡಲು ಒಂದರಿಂದ ಎರಡು ಗಂಟೆ ಸಮಯ ಬೇಕು. ನಿತ್ಯ ಬೆಂಕಿಯ ಮುಂದೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ನಮ್ಮನ್ನು ಬಿಟ್ಟರೆ ಬೇರೆ ಯಾರೂ ಈ ಕೆಲಸ ನಿರ್ವಹಿಸಲು ಮುಂದೆ ಬರಲ್ಲ. ಸಂಬಂಧಿಕರಿಗೆ ತಮ್ಮವರು ಸಾವನ್ನಪ್ಪಿದಾಗ ಮುಕ್ತಿ ಕೊಡುವ ಆಗುತ್ತಿಲ್ಲ. ಆ ಪುಣ್ಯ ಕೆಲಸ ನಮಗೆ ಸಿಕ್ಕಿದೆ ಎಂದು ಭಾವಿಸಿ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಪೀಣ್ಯ ಚಿತಾಗಾರದ ಸಿಬ್ಬಂದಿ ರುದ್ರೇಶ್‌ ತಿಳಿಸಿದ್ದಾರೆ.

ನಮ್ಮ ಕಷ್ಟ ಅವರಿಗೂ ಅರ್ಥ ಆಗಿದೆ: ನಿತ್ಯ ಮಾಧ್ಯಮಗಳಲ್ಲಿ ಸಾರ್ವಜನಿಕರು ನಮ್ಮ ಕಷ್ಟ ನೋಡುತ್ತಿದ್ದಾರೆ. ಇಲ್ಲಿಗೆ ಬರುವ ಬಹುತೇಕರು ನಮ್ಮ ಬಳಿ ಸೌಜನ್ಯದಿಂದಲೇ ವರ್ತಿಸುತ್ತಿದ್ದಾರೆ. ಆದರೆ, ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ನೀಡದೆ ನಮ್ಮವರನ್ನು ಸಾಯಿಸುತ್ತಿದ್ದಾರೆ ಎಂದು ಕಣ್ಣೀರಿಡುತ್ತಿದ್ದಾರೆ. ಕೆಲವರು ಬೇಗ ಅಂತ್ಯಕ್ರಿಯೆ ಮಾಡಿ ಎನ್ನುತ್ತಾರೆ. ಬೆಂಕಿ ಬಳಿ ಹೆಚ್ಚು ಕಾಲ ನಿಲ್ಲಲು ಆಗುವುದಿಲ್ಲ ಎಂದು ವಾಸ್ತವ ಸ್ಥಿತಿ ತಿಳಿಸಿದಾಗ ನಮ್ಮ ಕಷ್ಟಕ್ಕೂ ಮಿಡಿಯುತ್ತಾರೆ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next